Advertisement

ಮಕ್ಕಳ ಕಳ್ಳರೆಂದು ಭಾವಿಸಿಮೂವರಿಗೆ ಥಳಿತ; ವ್ಯಕ್ತಿ ಸಾವು

10:48 AM Jul 14, 2018 | |

ಔರಾದ: ಹಂದಿಕೇರಾ ಗ್ರಾಮದಲ್ಲಿ ನಂಬರ್‌ ಪ್ಲೇಟ್‌ ಇಲ್ಲದ ಕಾರಿನಲ್ಲಿ ಶಾಲೆಯ ಬಳಿ ತಿರುಗುತ್ತಿದ್ದ ಮೂವರನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಮುರ್ಕಿ ಗ್ರಾಮಸ್ಥರು ಥಳಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಥಳಿತಕ್ಕೊಳಗಾದ ಒಬ್ಬ ವ್ಯಕ್ತಿ ಔರಾದ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

Advertisement

ಹಂದಿಕೇರಾ ಗ್ರಾಮದಲ್ಲಿ ಮೂವರು ವ್ಯಕ್ತಿಗಳು ನಂಬರ್‌ ಪ್ಲೇಟ್‌ ಇಲ್ಲದ ಕಾರಿನಲ್ಲಿ ತಿರುಗಾಡುತ್ತಿದ್ದರು. ಶಾಲೆಯ ಪಕ್ಕದಲ್ಲೇ ನಿಂತಿದ್ದರಿಂದ ಅಲ್ಲೇ ಇದ್ದ ಮಕ್ಕಳಿಗೆ ಚಾಕೋಲೇಟ್‌ ಕೊಡಲು ಯತ್ನಿಸಿದ್ದಾರೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು “ಮಕ್ಕಳ ಕಳ್ಳರೆಂದು’ ಪ್ರಶ್ನಿಸಿದ್ದಾರೆ. 

ಅಪಾಯದ ಮುನ್ಸೂಚನೆ ಅರಿತ ಮೂವರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಇದರಿಂದ ಕ್ರುದ್ಧಗೊಂಡ ಹಂದಿಕೇರಾ
ಗ್ರಾಮಸ್ಥರು ಮುರ್ಕಿ ಗ್ರಾಮಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮೊದಲೇ ಮಾಹಿತಿ ಅರಿತಿದ್ದ ಮುರ್ಕಿ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಕಲ್ಲು ಹಾಕಿ ಕಾಯುತ್ತ ಕುಳಿತಿದ್ದಾರೆ.

ನೂರಾರು ಜನ ಸೇರಿದ್ದಲ್ಲದೇ, ರಸ್ತೆಗೆ ಕಲ್ಲು ಅಡ್ಡ ಹಾಕಿದ್ದರಿಂದ ಹೆದರಿ ಕಾರನ್ನು ಕಲ್ಲಿನ ಮೇಲೆಯೇ ಹತ್ತಿಸಿ
ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಕಲ್ಲಿನ ಮೇಲೆ ಹತ್ತಿಸುವ ವೇಳೆ ಕಾರು ಉರುಳಿ ಬಿದ್ದಿದೆ. ಆಗ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕಮಲನಗರ ಸಿಪಿಐ ದಯಾಸಾಗರ ನೇತೃತ್ವದಲ್ಲಿ ಪೊಲೀಸರು, ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಗಾಯಗೊಂಡಿದ್ದ ಮೂವರಿಗೂ ಮುರ್ಕಿ ಗ್ರಾಮದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಗಂಭೀರ ಗಾಯಗೊಂಡಿದ್ದ
ಒಬ್ಬನನ್ನು ಹೆಚ್ಚಿನ ಚಿಕಿತ್ಸೆಗೆ ಔರಾದ ತಾಲೂಕು ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.

Advertisement

ಹಂದಿಕೇರಾ ಗ್ರಾಮಕ್ಕೆ ಬಂದವರು ಮಕ್ಕಳ ಕಳ್ಳರು ಅಲ್ಲ. ಹೈದಾರಾಬಾದ್‌ ಮೂಲದವರಾಗಿದ್ದು, ಕಾರಿನಲ್ಲಿ ಲಾಂಗ್‌
ಡ್ರೈವ್‌ಗೆ ಬಂದಿದ್ದರು.
ಡಿ. ದೇವರಾಜ, ಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next