Advertisement

ಮನೆಗೆ ನುಗ್ಗಿದ ಕಳ್ಳರು 1. 65 ಲ.ರೂ. ಮೌಲ್ಯದ ಚಿನ್ನಾಭರಣ ನಗದು ಕಳವು

11:35 AM Jan 17, 2018 | Team Udayavani |

ಬಂಟ್ವಾಳ: ಸಜೀಪಮೂಡ ಗ್ರಾಮ ಪಣೋಲಿಬೈಲು ನಿವಾಸಿ ಮಧುಕೃಷ್ಣ  ಸೋಮಯಾಜಿ ಮನೆಗೆ ಸೋಮವಾರ ತಡರಾತ್ರಿ ನುಗ್ಗಿದ ಕಳ್ಳರು 1.30 ಲಕ್ಷ ರೂ. ಮೌಲ್ಯದ 56 ಗ್ರಾಂ. ಚಿನ್ನಾಭರಣ,  35,000 ರೂ. ನಗದು ಕಳವು ಮಾಡಿದ್ದಾರೆ. ಕಳವಿನ ಒಟ್ಟು ಮೌಲ್ಯ 1. 65 ,000ರೂ. ಎಂದು ಅಂದಾಜಿಸಿದ್ದಾರೆ.

Advertisement

ತಡರಾತ್ರಿ ಮನೆಮಂದಿ ಮಲಗಿದ ಅನಂತರ ಹಿಂಬದಿ ಬಾಗಿಲ ಚಿಲಕವನ್ನು ಮುರಿದು ಒಳನುಗ್ಗಿದ್ದ ಕಳ್ಳರು ಕೋಣೆಯೊಳಗೆ ಕಪಾಟಿನ ಬಾಗಿಲನ್ನು ತೆರೆದು  ಚಿನ್ನಾಭರಣ ಸಹಿತ ನಗದನ್ನು ಅಪಹರಿಸಿದ್ದರು. ಬಾಗಿಲನ್ನು ಮುರಿದಾಗ, ಕಪಾಟನ್ನು ತೆರೆದಾಗ ಯಾವುದೇ ಶಬ್ದವು ಮನೆಮಂದಿಯ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಕಪಾಟಿನ ಕೀಯನ್ನು ಅದರಲ್ಲಿಯೇ ಇಟ್ಟಿದ್ದು ಕಳವು  ಕಪಾಟು ತೆರೆಯುವುದಕ್ಕೆ ಸುಲಭವಾಗಿತ್ತು ಎಂದು ಶಂಕಿಸಲಾಗಿದೆ.

ಮುಂಜಾನೆ 3. 30ರ ಸುಮಾರಿಗೆ ಮನೆಯ ಮಹಿಳೆ ಎದ್ದು ಶೌಚಾಲಯಕ್ಕೆ ಹೋಗುವ ಸಂದರ್ಭ ಎರಡು ಕಪಾಟುಗಳನ್ನು ತೆರೆದಿರುವುದನ್ನು ಕಂಡು ಸೋಮಯಾಜಿ ಅವರನ್ನು ಎಚ್ಚರಿಸಿ ವಿಷಯ ಹೇಳಿದಾಗ ಕಳವು ನಡೆದಿರುವುದು ಗಮನಕ್ಕೆ ಬಂದಿದೆ. ಅನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು  ಸ್ಥಳಕ್ಕೆ ಬಂದಿದ್ದ ಅಪರಾಧ ಪತ್ತೆ ವಿಭಾಗ ಪೊಲೀಸರು ಬೆರಚ್ಚು ತಜ್ಞರನ್ನು, ಮಂಗಳೂರಿಂದ ಶ್ವಾನ ದಳವನ್ನು ಕರೆಸಿ ತನಿಖೆಯನ್ನು ಮಾಡಿದ್ದರು. ಶ್ವಾನವು ತೋಟದಲ್ಲಿ ಸ್ವಲ್ಪ ದೂರದ ತನಕ ಹೋಗಿದ್ದು ಹಿಂದೆ ಬರುವ ಮೂಲಕ ಕಳ್ಳರು ತೋಟದ ಮೂಲಕ ಬಂದಿದ್ದನ್ನು ಗುರುತಿಸಿತ್ತು. ಪ್ರಕರಣದ ತನಿಖೆಯನ್ನು ಡಿಸಿಐಬಿ ಪೊಲೀಸರ ಸಹಿತ ಅಪರಾಧ ಪತ್ತೆ ವಿಭಾಗದ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಬಂಟ್ವಾಳ ನಗರ ಠಾಣಾಧಿಕಾರಿ ಚಂದ್ರಶೇಖರ  ಅಪರಾಧ ವಿಭಾಗದ ಎಸ್‌ಐ ಹರೀಶ್‌,  ಎಎಸ್‌ಐ ಸಂಜೀವ ನಾಯ್ಕ,  ಸಿಬಂದಿ  ಸುರೇಶ್‌ ಪಡಾರ್‌, ಬೆರಚ್ಚು ತಜ್ಞರು, ಶ್ವಾನ ದಳ ಸಿಬಂದಿ ಸ್ಥಳಕ್ಕೆ ಬಂದಿದ್ದರು. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next