Advertisement

ಪಂಜಾಬ್‌-ಕೆಕೆಆರ್‌ ಪಂದ್ಯಕ್ಕೆ ಮಳೆ ಭೀತಿ : ಇತ್ತಂಡಗಳಿಗೂ ಗಾಯಾಳುಗಳದ್ದೇ ಚಿಂತೆ

11:28 PM Mar 31, 2023 | Team Udayavani |

ಮೊಹಾಲಿ: ಗಾಯದ ಹೊಡೆತಕ್ಕೆ ಸಿಲುಕಿರುವ ಹಾಗೂ ಪ್ರಮುಖ ವಿದೇಶಿ ಆಟ ಗಾರರ ಅನುಪಸ್ಥಿತಿಯಿಂದ ಚಿಂತೆಗೀಡಾಗಿರುವ ಪಂಜಾಬ್‌ ಕಿಂಗ್ಸ್‌ ಮತ್ತು ಕೋಲ್ಕತಾ ನೈಟ್‌ರೈಡರ್ ತಂಡಗಳು ಶನಿವಾರ 16ನೇ ಐಪಿಎಲ್‌ ಅಭಿಯಾನ ಆರಂಭಿಸಲಿವೆ. ಪಂಜಾಬ್‌ನ “ಹೋಮ್‌ ಗ್ರೌಂಡ್‌” ಆಗಿರುವ ಮೊಹಾಲಿ ಈ ಪಂದ್ಯದ ತಾಣ. ಆದರೆ ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ.

Advertisement

ಕಳೆದ ಕೆಲವು ವರ್ಷಗಳಿಂದ ಇತ್ತಂಡಗಳೂ ತಂಡದ ಆಯ್ಕೆ ಹಾಗೂ ಇನ್ನಿತರ ಕಾರಣಗಳಿಂದಾಗಿ ಅಸ್ಥಿರ ಪ್ರದರ್ಶನ ನೀಡುತ್ತ ಬಂದಿವೆ. ಎಲ್ಲಿಯೂ ನೆಚ್ಚಿನ ತಂಡಗಳೆಂದು ಗುರುತಿಸಲ್ಪಡಲೇ ಇಲ್ಲ. 2022ರ ಋತುವಿನಲ್ಲಿ ಪಂಜಾಬ್‌ 6ಕ್ಕೆ ಹಾಗೂ 2 ಬಾರಿಯ ಚಾಂಪಿಯನ್‌ ಕೆಕೆಆರ್‌ 7ನೇ ಸ್ಥಾನಕ್ಕೆ ಕುಸಿದಿತ್ತು.

ನೂತನ ನಾಯಕರು
ಎರಡೂ ತಂಡಗಳು ನೂತನ ನಾಯಕರನ್ನು ಹೊಂದಿರುವುದು ವಿಶೇಷ. ಪಂಜಾಬ್‌ ತಂಡವನ್ನು ಶಿಖರ್‌ ಧವನ್‌ ಹಾಗೂ ಕೆಕೆಆರ್‌ ತಂಡವನ್ನು ನಿತೀಶ್‌ ರಾಣಾ ಮುನ್ನಡೆಸಲಿದ್ದಾರೆ. ಕಳೆದ ಸೀಸನ್‌ನಲ್ಲಿ ಕ್ರಮವಾಗಿ ಮಾಯಾಂಕ್‌ ಅಗರ್ವಾಲ್‌ ಹಾಗೂ ಶ್ರೇಯಸ್‌ ಅಯ್ಯರ್‌ ಈ ತಂಡಗಳ ಕಪ್ತಾನರಾಗಿದ್ದರು. ಟ್ರೆವರ್‌ ಬೇಲಿಸ್‌ ಮತ್ತು ಚಂದ್ರಕಾಂತ್‌ ಪಂಡಿತ್‌ ಈ ಬಾರಿಯ ಕೋಚ್‌ ಆಗಿದ್ದಾರೆ.

ಕಾಗದದಲ್ಲಿ ಕೆಕೆಆರ್‌ಗಿಂತ ಪಂಜಾಬ್‌ ತಂಡ ತುಸು ಬಲಿಷ್ಠವಾಗಿ ಗೋಚರಿಸುತ್ತಿದೆ. ಆದರೆ ಇಂಗ್ಲೆಂಡ್‌ನ‌ ಪ್ರಮುಖ ಆಟಗಾರ ಜಾನಿ ಬೇರ್‌ಸ್ಟೊ ಈ ಋತುವಿನಿಂದಲೇ ಬೇರ್ಪಟ್ಟಿದ್ದು ಪಂಜಾಬ್‌ ಪಾಲಿಗೊಂದು ಹಿನ್ನಡೆ. ಇವರ ಸ್ಥಾನವನ್ನು ಆಸ್ಟ್ರೇಲಿಯದ ಮ್ಯಾಥ್ಯೂ ಶಾರ್ಟ್‌ ತುಂಬಲಿದ್ದಾರೆ. ಇವರು ಧವನ್‌ ಜತೆ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ.

ಇಸಿಬಿಯಿಂದ ಇನ್ನೂ ಕ್ಲಿಯರೆನ್ಸ್‌ ಪಡೆಯದ ಲಿಯಮ್‌ ಲಿವಿಂಗ್‌ಸ್ಟೋನ್‌, ರಾಷ್ಟ್ರೀಯ ತಂಡದೊಂದಿಗೆ ಸರಣಿ ಆಡುತ್ತಿರುವ ಕಾಗಿಸೊ ರಬಾಡ ಕೂಡ ಮೊದಲ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಆದರೆ ಸವ್ಯಸಾಚಿಗಳಾದ ಸ್ಯಾಮ್‌ ಕರನ್‌ ಮತ್ತು ಸಿಕಂದರ್‌ ರಝ ಅವರ ಸೇರ್ಪಡೆಯಿಂದ ಲಾಭವಾಗುವ ಸಾಧ್ಯತೆ ಇದೆ. ಕರನ್‌ ಅವರೊಂದಿಗೆ ಅರ್ಷದೀಪ್‌ ಸಿಂಗ್‌, ರಿಷಿ ಧವನ್‌, ರಾಹುಲ್‌ ಚಹರ್‌ ಬೌಲಿಂಗ್‌ ವಿಭಾಗವನ್ನು ನೋಡಿಕೊಳ್ಳಬೇಕಿದೆ.

Advertisement

ಆರ್‌ಸಿಬಿಯಂತೆ ಪಂಜಾಬ್‌ ಕೂಡ ಇನ್ನೂ ಕಪ್‌ ಎತ್ತಿಲ್ಲ. 2014ರಲ್ಲಿ ಫೈನಲ್‌ ತಲುಪಿದ್ದೇ ಅತ್ಯುತ್ತಮ ಸಾಧನೆ.

ರಾಣಾ ಅಚ್ಚರಿಯ ನಾಯಕ
ಕೆಕೆಆರ್‌ ನಿತೀಶ್‌ ರಾಣಾ ಸಾರಥ್ಯದಲ್ಲಿ ಎಂಥ ಪ್ರದರ್ಶನ ನೀಡೀತು ಎಂಬ ಕುತೂಹಲವಿದೆ. ರಾಣಾ ಅವರನ್ನು ನಾಯಕತ್ವಕ್ಕೆ ಆರಿಸಿದ್ದೇ ಒಂದು ಅಚ್ಚರಿ ಹಾಗೂ ಅನಿರೀಕ್ಷಿತ ಬೆಳವಣಿಗೆ.

ಹಾರ್ಡ್‌ ಹಿಟ್ಟರ್ ಹಾಗೂ ಉತ್ತಮ ದರ್ಜೆಯ ಆಲ್‌ರೌಂಡರ್‌ಗಳನ್ನು ಕೆಕೆಆರ್‌ ಹೊಂದಿದೆ. ರಸೆಲ್‌, ಸುನೀಲ್‌ ನಾರಾಯಣ್‌, ವೀಸ್‌, ವೆಂಕಟೇಶ್‌ ಅಯ್ಯರ್‌, ಶಕಿಬ್‌ ಇವರಲ್ಲಿ ಪ್ರಮುಖರು. ಆದರೆ ಬಾಂಗ್ಲಾ ಕ್ರಿಕೆಟಿಗರಾದ ಶಕಿಬ್‌ ಅಲ್‌ ಹಸನ್‌ ಮತ್ತು ಲಿಟನ್‌ ದಾಸ್‌ ಆರಂಭಿಕ ಪಂದ್ಯಕ್ಕೆ ಲಭ್ಯರಿಲ್ಲ.
ತಂಡದ ಅಗ್ರ ಕ್ರಮಾಂಕಕ್ಕೆ ವೀಸ್‌, ರಿಂಕು ಸಿಂಗ್‌, ರೆಹಮಾನುಲ್ಲ ಗುರ್ಬಜ್‌; ಬೌಲಿಂಗ್‌ ವಿಭಾಗಕ್ಕೆ ಸೌಥಿ, ಉಮೇಶ್‌ ಯಾದವ್‌, ಶಾರ್ದೂಲ್‌ ಠಾಕೂರ್‌, ವರುಣ್‌ ಚಕ್ರವರ್ತಿ ಆಧಾರವಾಗಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next