ನವದೆಹಲಿ: ಭಾರತದಲ್ಲಿ ಕೋವಿಡ್ 19 ಮಹಾಮಾರಿ ಅಟ್ಟಹಾಸ ಮುಂದುವರಿದಿದ್ದು, ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 11,000 ಸಾವಿರದ ಗಡಿ ತಲುಪಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಬುಧವಾರದ ಅಂಕಿಅಂಶದ ಪ್ರಕಾರ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 11,439ಕ್ಕೆ ಏರಿದೆ. ಒಟ್ಟು 377 ಜನರು ಸಾವನ್ನಪ್ಪಿದ್ದು, ಈವರೆಗೆ 1,306 ಮಂದಿ ಗುಣಮುಖರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಕ್ಷಿಪ್ರವಾಗಿ ಹರಡುತ್ತಿದ್ದು, ದೇಶದಲ್ಲಿಯೇ ಅತೀ ಹೆಚ್ಚು ವೈರಸ್ ತಗುಲಿರುವ ಪಟ್ಟಿಯಲ್ಲಿ (3000) ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ದೆಹಲಿ (1,600) ಎರಡನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.
ದೇಶದ ಒಟ್ಟು 377 ಸಾವಿನ ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿಯೇ ಕೋವಿಡ್ 19 ವೈರಸ್ ಗೆ ಬಲಿಯಾದವರ ಸಂಖ್ಯೆ 178 ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರದ ಒಟ್ಟು 178 ಮಂದಿ ಸಾವಿನ ಪ್ರಕರಣದಲ್ಲಿ ಮುಂಬೈಯಲ್ಲಿಯೇ 112 ಸಾವಿನ ಪ್ರಕರಣ ವರದಿಯಾಗಿದೆ. ಪುಣೆಯಲ್ಲಿ 35 ಮಂದಿ ಸಾವನ್ನಪ್ಪಿದ್ದರು.
ಮಧ್ಯಪ್ರದೇಶ ಕೋವಿಡ್ 19 ವೈರಸ್ ಗೆ ಹೆಚ್ಚು ತತ್ತರಿಸಿದ್ದು, ಈ ರಾಜ್ಯದಲ್ಲಿ ಕೋವಿಡ್ 10 ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 50ಕ್ಕೆ ಏರಿದೆ. ಮಂಗಳವಾರ ರಾತ್ರಿ ರಾಜ್ಯದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, ಕೋವಿಡ್ 19 ಸೋಂಕಿಗೆ ಇಂದೋರ್ ನಲ್ಲಿಯೇ 37 ಮಂದಿ ಸಾವನ್ನಪ್ಪಿದ್ದರು.
ದೇಶದ ರಾಜಧಾನಿ ದೆಹಲಿ ಮೂರನೇ ಸ್ಥಾನದಲ್ಲಿದ್ದು, ಕೋವಿಡ್ 19 ವೈರಸ್ ಗೆ ಈವರೆಗೆ 30 ಮಂದಿ ಸಾವನ್ನಪ್ಪಿದ್ದಾರೆ. ಮುಂಬೈ(112), ಪುಣೆ (35), ದೆಹಲಿ (30) ಮತ್ತು ಇಂದೋರ್(37) ಸೇರಿದಂತೆ ದೇಶದ ಈ ನಾಲ್ಕು ನಗರಗಳ್ಲಲಿಯೇ ಶೇ.50ಕ್ಕಿಂತಲೂ ಹೆಚ್ಚು ಸಾವು ಸಂಭವಿಸಿದಂತಾಗಿದೆ. ನಾಲ್ಕು ನಗರಗಳ ಒಟ್ಟು ಸಾವಿನ ಸಂಖ್ಯೆ 214 ಎಂದು ವರದಿ ತಿಳಿಸಿದೆ.
ಕೋವಿಡ್ 19 ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಲಾಕ್ ಡೌನ್ ಅಂತ್ಯಗೊಳ್ಳುತ್ತಿದ್ದಂತೆಯೇ ಮಂಗಳವಾರ ಮತ್ತೆ ಮೇ 3ರವರೆಗೆ ಲಾಕ್ ಡೌನ್ ವಿಸ್ತರಿಸಿರುವುದಾಗಿ ಘೋಷಿಸಿದ್ದರು.