Advertisement

ದೊಡ್ಡ ಕನಸು ಸಾಧಿಸಿದ ಹೆಮ್ಮೆಯಿದೆ: ರಾಹುಲ್‌

05:16 PM May 28, 2018 | Team Udayavani |

ಬೀದರ: ಐಎಎಸ್‌ನಲ್ಲಿ ಒಳ್ಳೆಯ ರ್‍ಯಾಂಕಿಂಗ್‌ನ ನಿರೀಕ್ಷೆಯಲ್ಲಿದ್ದೆ. ಆದರೆ, ರಾಜ್ಯಕ್ಕೆ ಪ್ರಥಮನಾಗುತ್ತೇನೆ ಎಂದುಕೊಂಡಿರಲಿಲ್ಲ. ಸಾಧನೆ ಮಾಡಬೇಕೆಂದು ಶಕ್ತಿ ಮೀರಿ ಪ್ರಯತ್ನಿಸಿದ್ದಕ್ಕೆ ನನಗೆ ಫಲ ಸಿಕ್ಕಿದ್ದು, ದೊಡ್ಡ ಕನಸೊಂದನ್ನು ಸಾಧಿಸಿದ ಬಗ್ಗೆ ಹೆಮ್ಮೆಯಾಗುತ್ತಿದೆ. ನಾಗರಿಕ ಸೇವೆ ಹುದ್ದೆಗಾಗಿ ಲಕ್ಷಾಂತರ ರೂಪಾಯಿ ಸಂಬಳದ ಎಂಜಿನಿಯರ್‌ ಹುದ್ದೆ ತ್ಯಜಿಸಿದ್ದೇನೆ.

Advertisement

ಇದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 95ನೇ ರ್‍ಯಾಂಕ್‌ ಪಡೆಯುವ ಮೂಲಕ ಕರ್ನಾಟಕದ ಟಾಪರ್‌ ಆಗಿ ಹೊರಹೊಮ್ಮಿರುವ ಬೀದರನ ರಾಹುಲ್‌ ಶಿಂಧೆ ಮನದಾಳದ ಮಾತು. ‘ಉದಯವಾಣಿ’ ಜತೆ ತಮ್ಮ ಸಾಧನೆ ಹಾದಿಯಲ್ಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅದರ ಅಕ್ಷರ ಮಾಲಿಕೆ ಇಲ್ಲಿದೆ.

ಐಎಎಸ್‌ ಕನಸು ಹೇಗೆ ಆರಂಭಗೊಂಡಿತ್ತು?
ಬೀದರನ ಗುರುನಾನಕ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಹೈದ್ರಾಬಾದ್‌ನ μಡಿj ಕಾಲೇಜಿನಲ್ಲಿ ಪಿಯುಸಿ ಓದಿದ ಬಳಿಕ ಮುಂಬೈ ಐಐಟಿಯಲ್ಲಿ (ಎಲೆಕ್ಟ್ರಾನಿಕ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರ್‌) ರ್‍ಯಾಂಕ್‌ ಪಡೆದೆ. ಪಿಯುಸಿವರೆಗೆ ನನಗೆ ಐಎಎಸ್‌ ಬಗ್ಗೆ ಯಾವುದೇ ಆಸಕ್ತಿ ಇರಲಿಲ್ಲ. ಆದರೆ, ಐಐಟಿಯಲ್ಲಿ ಉನ್ನತ ಶಿಕ್ಷಣ ಪಡೆಯುವಾಗ ಕನಸು ಚಿಗುರೊಡೆದಿತ್ತು. ಅಲ್ಲಿನ ಶಿಕ್ಷಣ, ವಿಭಿನ್ನ ಭಾಗದ ಜನತೆಯ ಜತೆಗೆ ಬೆರೆಯುವ ವೇಳೆ ಸಿವಿಲ್‌ ಸರ್ವಿಸ್‌ನಿಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬಹುದೆಂಬ ಆಲೋಚನೆ ಗಟ್ಟಿಯಾಯಿತು. ಇದು ನನ್ನ ತಂದೆ ನಿವೃತ್ತ ಸಾಕ್ಷರತಾ ಅಧಿ ಕಾರಿ ಶಂಕರರಾವ್‌ ಕನಸು ಕೂಡ ಆಗಿತ್ತು. ಇದಕ್ಕೆ ಹರ್ಷ ಗುಪ್ತ ಅವರಂಥ ಹಿರಿಯ ಐಎಎಸ್‌ ಅ ಧಿಕಾರಿಗಳು ಪ್ರೇರಣೆಯಾದರು. ಸೌದಿಯಲ್ಲಿ ಲಕ್ಷಾಂತರ ರೂ.ಗಳ ವೇತನದ ಉದ್ಯೋಗ ಸಿಕ್ಕಿತು. ಆದರೆ, ಮನಸ್ಸು ಐಎಎಸ್‌ನತ್ತ ಮಿಡಿಯುತ್ತಿದ್ದರಿಂದ ಅದನ್ನು ಬಿಟ್ಟು ನನ್ನ ಗುರಿ ಸಾಧಿಸಿದೆ.

ಕನಸನ್ನು ಹೇಗೆ ಸಾಕಾರ ಮಾಡಿಕೊಂಡಿರಿ?
ಜೀವನದಲ್ಲಿ ಕನಸು ಕಂಡರೆ ಸಾಲದು. ಅದನ್ನು ಸಾಕಾರಗೊಳಿಸುವ ಛಲ ರೂಢಿಸಿಕೊಳ್ಳಬೇಕು. ನಾನು ಗ್ರಾಮೀಣ, ಹಿಂದುಳಿದ ಭಾಗದವನೆಂಬ ಕೀಳರಿಮೆ ಬಿಡಬೇಕು. ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಇರಬೇಕು. ಆಗಲೇ ಅಸಾಧ್ಯವಾದದ್ದನ್ನು ಸಾಧಿಸಲು ಸಾಧ್ಯ. ಮುಖ್ಯವಾಗಿ ಮನೆಯಲ್ಲಿ ಆಸಕ್ತಿಯಿಂದ ಓದಲು ಅನುಕೂಲವಾಗುವಂಥ ವಾತಾವರಣ ಸೃಷ್ಟಿಯಾಗಬೇಕು, ಅದು ನನಗೆ ಸಿಕ್ಕಿತ್ತು. ಪರೀಕ್ಷೆಗಾಗಿ ದೆಹಲಿಯಲ್ಲಿ ಅಗತ್ಯ ತರಬೇತಿಗಳನ್ನು ಪಡೆದೆ. ಯುಪಿಎಸ್‌ಸಿ ಪ್ರಥಮ ಪ್ರಯತ್ನದಲ್ಲಿ ಐಎಫ್‌ಎಸ್‌ ಹುದ್ದೆಗೆ ಆಯ್ಕೆಯಾದೆ. ಅದು ಸಹ ನನ್ನ ಇಷ್ಟವಾದ ಕ್ಷೇತ್ರವೆ. ಡೆಹರಾಡೂನ್‌ನಲ್ಲಿ ತರಬೇತಿ ಪಡೆಯುತ್ತಲೇ ಮತ್ತೊಮ್ಮೆ ಪರೀಕ್ಷೆ ತಯಾರಿ ಮಾಡಿಕೊಂಡೆ. ಎರಡನೇ ಪ್ರಯತ್ನದಲ್ಲಿ ನನ್ನ ಗುರಿ ಸಾಧಿಸಿದೆ. ನಾವು ಹಾಕುವ ಪ್ರಯತ್ನಕ್ಕೆ ಫಲ ಸಿಕ್ಕೆ ಸಿಗುತ್ತದೆ.

 ಜಿಲ್ಲೆಯ ಶೈಕ್ಷಣಿಕ ಹಿನ್ನಡೆಗೆ ಏನಂತಿರಿ?
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಬೀದರ ಜಿಲ್ಲೆ ಕೊನೆ ಸ್ಥಾನಕ್ಕೆ ಅಂಟಿಕೊಂಡಿರುವುದು ಬೇಸರದ ಸಂಗತಿ. ಆದರೆ, ಜಿಲ್ಲೆಯಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತಿದೆ. ಇನ್ನಷ್ಟು ಪ್ರಯತ್ನಗಳು ಆಗಬೇಕಿದೆ. ಶೈಕ್ಷಣಿಕವಾಗಿ ಕೆಳ ಹಂತದಲ್ಲಿ ಸುಧಾರಣೆ ತಂದಲ್ಲಿ ಇಲ್ಲಿಯೂ ಶೈಕ್ಷಣಿಕ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿದೆ. ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಸಾಕಷ್ಟು ಜನರು ಸಾಧನೆ ಮಾಡಿದ್ದಾರೆ. ಆಸಕ್ತಿ ಇರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಮುಕ್ತ ಅವಕಾಶ ಸಿಗಬೇಕು. ಅವಕಾಶಗಳ ಜತೆಗೆ ಮನೆಯವರು ಮತ್ತು ಸಮಾಜದ ಪ್ರೋತ್ಸಾಹ ದೊರೆಯಬೇಕು. 

Advertisement

 ನಿಮ್ಮ ಮುಂದಿನ ಗುರಿ?
ಕರ್ನಾಟಕ ಕೇಡರ್‌ನಲ್ಲಿಯೇ ಹುದ್ದೆ ಸಿಗುವ ಸಾಧ್ಯತೆ ಇದ್ದು, ಆಗಸ್ಟ್‌ನಲ್ಲಿ ತರಬೇತಿ ಶುರುವಾಗಲಿದೆ. ಸೇವೆಯ ಉದ್ದೇಶದಿಂದ ಸಿವಿಲ್‌ ಸರ್ವಿಸ್‌ಗೆ ಬಂದಿದ್ದೇನೆ. ಪೋಸ್ಟಿಂಗ್‌ ಎಲ್ಲೇ ಆಗಲಿ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡುವುದು ನನ್ನ ಗುರಿ. ಇದಕ್ಕಾಗಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆಯುತ್ತೇನೆ.

ಯುಪಿಎಸ್‌ಸಿ ಪರೀಕ್ಷೆಗೆ ನಿಮ್ಮ ಮಾರ್ಗದರ್ಶನ? 
ದೇಶದ ಅತ್ಯುನ್ನತ ಯುಪಿಎಸ್‌ಸಿ ಪರೀಕ್ಷೆ ಸುಲಭವೇನಲ್ಲ. ಕಠಿಣ ಪರೀಕ್ಷೆಯನ್ನು ಭಾರತದಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು ಬರೆಯುತ್ತಾರೆ. ಆದರೆ, ಆಯ್ಕೆಯಾಗುವುದು ಬೆರಳಣಿಕೆಯಷ್ಟು ಜನರು ಮಾತ್ರ. ನನ್ನಿಂದ ಇದು ಅಸಾಧ್ಯ ಎಂದು ಕೈಚಲ್ಲಿ ಕೂಡದೇ ಧನಾತ್ಮಕ ಚಿಂತನೆ, ತಾಳ್ಮೆಯೊಂದಿಗೆ ಪ್ರಯತ್ನ ಮಾಡಬೇಕು. ಸೇವಾ ಮನೋಭಾವದ ಪರಿಕಲ್ಪನೆ ಇಲ್ಲಿ ಮುಖ್ಯ. ಮೊದಲು ಪರೀಕ್ಷೆ ಹೇಗಿರುತ್ತದೆ, ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು, ಯಾವ ಪುಸ್ತಕಗಳನ್ನು ಓದಬೇಕು ಎಂಬುದರ ಸೂಕ್ತ ಮಾರ್ಗದರ್ಶನ ಪಡೆಯಬೇಕು. ಮಾಹಿತಿ ಸಂಗ್ರಹಕ್ಕೆ ಅಂತರ್ಜಾಲ ಹೆಚ್ಚು ಪೂರಕವಾಗಿದ್ದು, ಅದನ್ನು ಬಳಸಿಕೊಳ್ಳಬೇಕು.

ಶಶಿಕಾಂತ ಬಂಬುಳಗ

Advertisement

Udayavani is now on Telegram. Click here to join our channel and stay updated with the latest news.

Next