Advertisement

ಒಳಚರಂಡಿಯೇ ಇಲ್ಲ,ಇರುವಲ್ಲಿ ನಿರ್ವಹಣೆ ಕೊರತೆ 

06:00 AM May 25, 2018 | |

ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಹೆಚ್ಚಿನ ಕಡೆಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ. ಇನ್ನು  ಇರುವಲ್ಲಿ ನಿರ್ವಹಣೆಗೆ ಆಸಕ್ತಿ ತೋರುತ್ತಿಲ್ಲ! 

Advertisement

ಯೋಜಿತ ಕಾಮಗಾರಿ ಇಲ್ಲ
ಇಲ್ಲಿನ ಕಾರಂತ ಬೀದಿ, ಕಾರ್ಕಡ, ಪಾರಂಪಳ್ಳಿ, ಗುಂಡ್ಮಿ, ಚಿತ್ರಪಾಡಿ ಮುಂತಾದ ಕಡೆಗಳಲ್ಲಿ ಹಲವಾರು ಮೀಟರ್‌ಗಳಷ್ಟು ಒಳಚರಂಡಿ ವ್ಯವಸ್ಥೆ ಇದೆ. ಇದನ್ನು ಮೂರು-ನಾಲ್ಕು ವರ್ಷಗಳಿಗೊಮ್ಮೆ  ಸಮಸ್ಯೆ ಎದುರಾದಗ ಹೂಳೆತ್ತಲಾಗುತ್ತದೆ. ಪ್ರತಿ ವರ್ಷ ಪೌರಕಾರ್ಮಿಕರ ಮೂಲಕ ಎಲ್ಲಾ ಕಡೆಯ ಪೊದೆಗಳನ್ನು ಸ್ವಚ್ಚಗೊಳಿಸಲಾಗುತ್ತದೆ. ಇದನ್ನು ಹೊರತು  ಪಡಿಸಿ ದೊಡ್ಡ ಮಟ್ಟದ ಅನುದಾನ ಬಳಸಿಕೊಂಡು ಯಾವುದೇ ಕಾಮಗಾರಿಗಳನ್ನು ನಡೆಸಲಾಗುವುದಿಲ್ಲ.


ಚರಂಡಿ ನಿರ್ಮಿಸಲು ಜಾಗವಿಲ್ಲ 
ಇಲ್ಲಿನ ಹೆಚ್ಚಿನ ಕಡೆಗಳಲ್ಲಿ  ರಸ್ತೆಯಿಂದ ಕೆಳಗೆ  ಒಂದು ಫೀಟ್‌ ಜಾಗವಿಲ್ಲದಂತೆ ಆಕ್ರಮಿಸಿಕೊಂಡು ಮನೆಯ ಕಾಂಪೌಂಡ್‌ಗಳು ನಿರ್ಮಾಣಗೊಂಡಿದೆ. ಹೀಗಾಗಿ ಒಳಚರಂಡಿ ನಿರ್ಮಾಣಕ್ಕೆ ಅವಕಾಶ ವಿಲ್ಲವಾಗಿದೆ. ಎಲ್ಲರೂ ತಮ್ಮ-ತಮ್ಮ ಮನೆಗಳಿಗೆ ನೀರು ನುಗ್ಗದಂತೆ ಜಾಗೃತೆ  ಮಾಡಿಕೊಳ್ಳುತ್ತಿದ್ದು  ಕೊನೆಗೆ ನೀರು ರಸ್ತೆಯ ಮೇಲೆ ನಿಲ್ಲುವ ಪರಿಸ್ಥಿತಿ ಇದೆ.  

ಹೆದ್ದಾರಿಯಲ್ಲಿ ದೊಡ್ಡ ಸಮಸ್ಯೆ  
ರಾಷ್ಟ್ರೀಯ ಹೆದ್ದಾರಿಯಲ್ಲೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸಾಲಿಗ್ರಾಮ ಪೇಟೆ, ಸಾಸ್ತಾನ, ಗುಂಡ್ಮಿ, ಕೋಟ ಮುಂತಾದ ಕಡೆಗಳಲ್ಲಿ  ಮುಖ್ಯ ರಸ್ತೆಯಿಂದ ಕೆಳಗಿಳಿದರೆ ಕೊಳಚೆ ನೀರಿನ ಅಭಿಷೇಕವಾಗುತ್ತದೆ. ಕಳೆದ ಬಾರಿ ಕೃಷಿ ಭೂಮಿ, ವಾಣಿಜ್ಯ ಕಟ್ಟಡ, ಮನೆಗಳಿಗೆ ನೀರು ನುಗ್ಗಿದ ಪ್ರಕರಣಗಳು ನಡೆದಿವೆ. 


ಸೂಕ್ತ ಚರಂಡಿ ವ್ಯವಸ್ಥೆ  ಬೇಕು
ಪ.ಪಂ. ವ್ಯಾಪ್ತಿಯ ಕಾರ್ಕಡ ಮುಂತಾದ ಕಡೆಗಳಲ್ಲಿ ಹಾಗೂ ರಾ.ಹೆ.ಯಲ್ಲಿ ಸರಿಯಾದ  ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ನೀರು ನಿಲ್ಲುವ  ಪರಿಸ್ಥಿತಿ ಇದೆ. ಇದರಿಂದ ಪಾದಚಾರಿಗಳು, ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಅಗತ್ಯ ಕಡೆಗಳಲ್ಲಿ ಒಳಚರಂಡಿ ನಿರ್ಮಾಣ ಹಾಗೂ ನಿರ್ವಹಣೆ ಕುರಿತು ಸಂಬಂಧಪಟ್ಟವರು  ಗಮನಹರಿಸಬೇಕಿದೆ.
– ಮಂಜುನಾಥ ನಾೖರಿ ಕಾರ್ಕಡ, ಸ್ಥಳೀಯ ನಿವಾಸಿ

ದೊಡ್ಡ ಸಮಸ್ಯೆ ಇಲ್ಲ
ಸಾಲಿಗ್ರಾಮದಲ್ಲಿ  ಹೆಚ್ಚೇನು ಒಳಚರಂಡಿ ವ್ಯವಸ್ಥೆ ಇಲ್ಲ. ಇದುವರೆಗೆ ಮಳೆಗಾಲದಲ್ಲಿ ದೊಡ್ಡ ಸಮಸ್ಯೆ ಕೂಡ ಕಾಣಿಸಿಕೊಂಡಿಲ್ಲ. ಅಗತ್ಯವಿದ್ದಾಗ ಚರಂಡಿ ಹೂಳೆತ್ತುವ ಕುರಿತು ಕ್ರಮಕೈಗೊಳ್ಳಲಾಗುತ್ತದೆ. ಪ್ರತಿ ವರ್ಷ  ಪೌರಕಾರ್ಮಿಕರನ್ನು ಬಳಸಿಕೊಂಡು ಪೊದೆಗಳನ್ನು ಸ್ವಚ್ಚಗೊಳಿಸಲಾಗುತ್ತದೆ. ಈ ಬಾರಿ ಕೂಡ ಚಾಲನೆ ನೀಡಲಾಗಿದೆ.
– ಶ್ರೀಪಾದ್‌ ಪುರೋಹಿತ್‌,ಮುಖ್ಯಾಧಿಕಾರಿಗಳು ಪ.ಪಂ.

– ಆರ್‌ಜೆ

Advertisement
Advertisement

Udayavani is now on Telegram. Click here to join our channel and stay updated with the latest news.

Next