Advertisement

24 ಸಾವಿರ ಶಾಲೆಗಳಲ್ಲಿ ಆಟದ ಮೈದಾನ ಇಲ್ಲ

12:25 AM Jan 02, 2023 | Team Udayavani |

ಬೆಂಗಳೂರು: ಶಿಕ್ಷಣ ಕ್ಷೇತ್ರದ ದಿಕ್ಕು- ದೆಸೆಗಳನ್ನು ಬದಲಿಸುವ ಕೇಂದ್ರ ಸರಕಾರದ ಮಹತ್ವಕಾಂಕ್ಷೆಯ “ರಾಷ್ಟ್ರೀಯ ಶಿಕ್ಷಣ ನೀತಿ- 2020′ ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಇದರಲ್ಲಿ ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಪಠ್ಯಕ್ರಮದ ಸ್ಥಾನ ಕೊಡಲಾಗಿದೆ. ಆದರೆ ಇದಕ್ಕೆ ಕಪ್ಪುಚುಕ್ಕೆ ಎಂಬಂತೆ ರಾಜ್ಯದ 24 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ.

Advertisement

ದೈಹಿಕ ಶಿಕ್ಷಣ ಮಕ್ಕಳ ಕಲಿಕೆಗೆ ಆವಶ್ಯಕ. ಆದರೆ ಆಟದ ಮೈದಾನಗಳಿಲ್ಲದೆ ಸಾವಿರಾರು ಶಾಲೆಗಳ ಮಕ್ಕಳು ಇದರಿಂದ ವಂಚಿತರಾಗಿದ್ದಾರೆ. ಇದು ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಬಹುದೊಡ್ಡ ಅಡ್ಡಿ ಎಂದು ಶಿಕ್ಷಣ ತಜ್ಞರ ವಿಶ್ಲೇಷಣೆ. ಜಾಗವೇ ಇಲ್ಲದಿದ್ದರೆ ಆಟದ ಮೈದಾನ ಹೇಗೆ ನಿರ್ಮಿಸುವುದು ಅನ್ನುವುದು ಶಿಕ್ಷಣ ಇಲಾಖೆಯ ಅಸಹಾಯಕತೆ.

ಸರಕಾರಿ, ಅನುದಾನಿತ ಹಾಗೂ ಖಾಸಗಿ ಸೇರಿ 53,239 ಪ್ರಾಥಮಿಕ ಹಾಗೂ 16,122 ಪ್ರೌಢ ಶಾಲೆಗಳಂತೆ ಒಟ್ಟು 69,941 ಶಾಲೆ ಗಳಿವೆ. ಈ ಪೈಕಿ 24,332 ಶಾಲೆಗಳಲ್ಲಿ ಆಟದ ಮೈದಾನಗಳಿಲ್ಲ. ಶೇ. 60ಕ್ಕೂ ಹೆಚ್ಚು ನಗರ ಪ್ರದೇಶದ ಶಾಲೆಗಳು ಆಟದ ಮೈದಾನದಿಂದ ವಂಚಿತವಾಗಿವೆ.

ಆಟದ ಮೈದಾನ ನಿರ್ಮಿಸಲು ಶಾಲೆಯು ಕನಿಷ್ಠ 5 ಎಕರೆ ಜಮೀನು ಹೊಂದಿರಬೇಕು ಎಂಬ ಮಾನದಂಡ ವಿದೆ. ಈಗ ಆಟದ ಮೈದಾನ ಇರುವ ಶಾಲೆಗಳಲ್ಲೂ ಬಹುಪಾಲು ಸಮರ್ಪಕವಾಗಿಲ್ಲ. ಪರಿಣಾಮವಾಗಿ ಮಕ್ಕಳು ಒಳಾಂಗಣ ಕ್ರೀಡೆಗಳನ್ನು ನೆಚ್ಚಿಕೊಳ್ಳಬೇಕಾಗಿದೆ.

ಕ್ರೀಡೆ ಇಲ್ಲದಿದ್ದರೆ
ಶಿಕ್ಷಣ ಸಮಗ್ರ ಆಗದು
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಅದಕ್ಕಿಂತ ಮುಖ್ಯವಾಗಿ “ಶಿಕ್ಷಣ ಹಕ್ಕು ಕಾಯ್ದೆ’ (ಆರ್‌ಟಿಇ) ಅಡಿ ಕ್ರೀಡೆ ಮತ್ತು ದೈಹಿಕ ಶಿಕ್ಷಣ ಕಡ್ಡಾಯವಾಗಿದೆ. ಆರ್‌ಟಿಇ ಕಾಯ್ದೆಯಡಿ ಶಾಲೆಗಳು ಕಡ್ಡಾಯವಾಗಿ ಒದಗಿಸಬೇಕಾದ 8 ಭೌತಿಕ ವ್ಯವಸ್ಥೆಗಳಲ್ಲಿ ಆಟದ ಮೈದಾನವೂ ಒಂದು. ಆದರೆ ಈ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ. ಶಿಕ್ಷಣ ಸಮಗ್ರವಾಗಬೇಕಾದರೆ ಮಕ್ಕಳ ಶಾರೀರಿಕ, ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಶಿಕ್ಷಣ ಬೇಕು. ಅದಕ್ಕೆ ದೈಹಿಕ ಶಿಕ್ಷಣ ಮತ್ತು ಕ್ರೀಡೆ ಮುಖ್ಯ. ಆದ್ದರಿಂದ ಆಟದ ಮೈದಾನಗಳನ್ನು ಒದಗಿಸಲು ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕ ಆಟದ ಮೈದಾನಗಳನ್ನು ಕಡ್ಡಾಯವಾಗಿ ಶಾಲಾ ಮಕ್ಕಳ ಬಳಕೆಗೆ ಮೀಸಲಿಡಬೇಕು.
ಒತ್ತುವರಿಯಾಗಿರುವ ಶಾಲಾ ಆಟದ ಮೈದಾನಗಳನ್ನು ತೆರವುಗೊಳಿಸಬೇಕು ಎಂದು ಶಿಕ್ಷಣ ತಜ್ಞ ಡಾ| ವಿ.ಪಿ. ನಿರಂಜನಾರಾಧ್ಯ ಅಭಿಪ್ರಾಯಪಡುತ್ತಾರೆ.

Advertisement

ಒಳಾಂಗಣ ಕ್ರೀಡೆಗಳಿಗೆ ಆದ್ಯತೆ
ಆಟದ ಮೈದಾನ ಇಲ್ಲದಿರುವ ಶಾಲೆಗಳಲ್ಲಿ ಒಳಾಂಗಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಹಂತದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಹತ್ತಿರದ ತಾಲೂಕು, ಜಿಲ್ಲಾ ಕ್ರೀಡಾಂಗಣ, ನಗರಸಭೆ, ಪುರಸಭೆ ಹಾಗೂ ಪಾಲಿಕೆಗಳ ಆಟದ ಮೈದಾನಗಳನ್ನು ಬಳಸಿಕೊಳ್ಳುತ್ತಾರೆ. ಕೆಲವು ಶಾಲೆಗಳಿಗೆ ದಾನಿಗಳ ಮೂಲಕ ಜಾಗ ಪಡೆಯಲಾಗಿದೆ. ಬಹಳ ಹಿಂದೆ ಕಟ್ಟಿದ ಶಾಲೆಗಳಲ್ಲಿ ಸಮಸ್ಯೆ ಇದೆ. ಹೊಸ ಶಾಲೆಗಳ ವಿಚಾರದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಜಾಗ ಒದಗಿಸಲು ಇತರ ಇಲಾಖೆಗಳನ್ನೂ ಕೋರಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.

ಜಾಗ ಇದ್ದು ಆಟದ ಮೈದಾನ ಇಲ್ಲದ ನಿದರ್ಶನ ಇಲ್ಲ. ಜಾಗವೇ ಇಲ್ಲದಿರುವಾಗ ಆಟದ ಮೈದಾನ ಕೊಡುವುದು ಹೇಗೆ? ಬಹಳ ಹಿಂದೆ ಕಟ್ಟಿರುವ ಶಾಲೆಗಳಲ್ಲಿ ಅನೇಕ ಕಡೆ ಈ ಸಮಸ್ಯೆ ಇದೆ. ಅದನ್ನು ಸರಿ ದೂಗಿ ಸಲು ಪಕ್ಕದ ಶಾಲೆಗಳ ಆಟದ ಮೈದಾನ, ನಗರ ಸ್ಥಳೀಯ ಸಂಸ್ಥೆಗಳ ಮತ್ತು ಗ್ರಾ.ಪಂ. ಮೈದಾನ ಗಳನ್ನು ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೆ ಬಳಸಿಕೊಳ್ಳ ಲಾಗುತ್ತಿದೆ.
– ಡಾ| ಆರ್‌. ವಿಶಾಲ್‌,
ಶಿಕ್ಷಣ ಇಲಾಖೆ ಆಯುಕ್ತರು

- ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next