Advertisement

ಹೆಚ್ಚಿನ ಧರ್ಮ-ಜಾತಿ ರಚನೆ ಅವಶ್ಯವಿಲ್ಲ

10:34 AM Jan 28, 2018 | |

ಕಲಬುರಗಿ: ಎಲ್ಲ ಧರ್ಮಗಳ ಸಾರ ಒಂದೇ ಆಗಿರುವುದರಿಂದ ಹೆಚ್ಚಿನ ಧರ್ಮ ಸ್ಥಾಪನೆ ಹಾಗೂ ಜಾತಿಗಳ ರಚನೆ ಜತೆಗೆ ಉಪಪಂಗಡಗಳ ಅಸ್ತಿತ್ವದ ಅವಶ್ಯಕತೆಯಿಲ್ಲ ಎಂದು ಲೋಕಸಭೆ ಮಾಜಿ ಸ್ಪೀಕರ್‌, ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಶನಿವಾರ ಆಳಂದ ಪಟ್ಟಣದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ಟ್ರಸ್ಟ್‌ ಅಡಿಯಲ್ಲಿನ ಆಶ್ವಾರೂಢ ಬಸವೇಶ್ವರ ಮೂರ್ತಿ ಅನಾವರಣಗೊಳಿಸಿ ಹಾಗೂ ತದನಂತರ ನಂತರ ಬೃಹತ್‌ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ದೇಶದಲ್ಲಿ ಹಿಂದು, ಮುಸಲ್ಮಾನ, ಜೈನ, ಕ್ರಿಶ್ಚಿಯನ್‌, ಬೌದ್ಧ ಸೇರಿದಂತೆ ಇತರ ಧರ್ಮಗಳಿವೆ. ಧರ್ಮಗಳಲ್ಲಿನ ಒಳ್ಳೆಯ ಸಂದೇಶಗಳನ್ನು ಆಲಿಸುತ್ತಾ ಮುನ್ನಡೆಯುವುದು ಅಗತ್ಯವಾಗಿದೆಯಲ್ಲದೇ ಸಮಾಜ ಹಾಗೂ ದೇಶ ಒಡೆಯುವ ಕೆಲಸ ಮಾಡಬಾರದು ಎಂದರು.

ಬಸವಾದಿ ಶರಣರು ನೀಡಿರುವ ಸಂದೇಶಗಳೇ ಸಂವಿಧಾನದಲ್ಲಿವೆ. ಬಸವಣ್ಣವರು ಹೇಳಿದ ಕಾಯಕವೇ ಕೈಲಾಸದಲ್ಲಿ ಎಲ್ಲವೂ ಅಡಕವಾಗಿದೆ. ಪ್ರತಿಯೊಂದರಲ್ಲಿಯೂ ದೈವತ್ವ ಅಡಗಿದೆ. ಮೂರ್ತಿ ಪೂಜೆ ಹಾಗೂ ಸ್ಥಾಪನೆಯು ನಮ್ಮಲ್ಲಿ ಅವರ ತತ್ವ ಕಾರ್ಯರೂಪಕ್ಕೆ ಬರುವುದಾಗಿದೆ ಎಂದು ಹೇಳಿದರು.

ತಲಾಖ್‌ ನಿಷೇಧಕ್ಕೆ ಸಹಮತ: ತ್ರಿವಳಿ ತಲಾಖ್‌ ನಿಷೇಧಿಸುವುದು ಒಳ್ಳೆಯದು. ಆದರೆ ತಲಾಖ್‌ ನೀಡಿದ ವ್ಯಕ್ತಿಗೆ ಮೂರು ವರ್ಷ ಜೈಲಿಗೆ ಕಳುಹಿಸಿದರೆ ತಲಾಖ್‌ನಿಂದ ಸಂತ್ರಸ್ತವಾದ ಮಹಿಳೆ ಮತ್ತು ಮಕ್ಕಳ ಗತಿ ಏನಾಗಬೇಡ? ಹೀಗಾಗಿ ಇದನ್ನು ಅತ್ಯಂತ ಸೂಕ್ಷ್ಮವಾಗಿ ಕೇಂದ್ರ ಸರ್ಕಾರ ಪರಿಶೀಲಿಸುವುದು ಅಗತ್ಯ. ತಲಾಖ್‌ ಸಿವಿಲ… ವಿಷಯವಾಗಿದೆ. ಆದರೆ, ಇದನ್ನು ಅನಗತ್ಯವಾಗಿ ಕ್ರಿಮಿನಲ… ಪ್ರಕರಣದ ವ್ಯಾಪ್ತಿಗೆ ತರಲು ಹೊರಟಿರುವುದು ತಪ್ಪು. ಇಷ್ಟಕ್ಕೂ ಇದನ್ನು ಪರಿಶೀಲನಾ ಸಮಿತಿ ಎದುರು ಚರ್ಚೆಗೆ ಒಳಪಡಿಸಲು ಕೇಂದ್ರ ಹಿಂದೇಟು ಹಾಕುತ್ತಿರುವುದು
ಸರಿಯಲ್ಲ. ಕಾಂಗ್ರೆಸ್‌ ಎಲ್ಲವನ್ನು ಕೊಟ್ಟಿದೆ. 1964ರಿಂದ 2015ರವರೆಗೂ ನಿರಂತರವಾಗಿ ಅಧಿಕಾರ ನೀಡಿದೆ.

Advertisement

ಲೋಕಸಭೆ ಚುನಾವಣೆಯಲ್ಲಿ ಸೋತರೂ ಕೇಂದ್ರದ ಗೃಹ ಸಚಿವರನ್ನಾಗಿ ಮಾಡಲಾಗಿತ್ತು. ತಮ್ಮನ್ನು ಪಕ್ಷದಲ್ಲಿ ಸೈಡ್‌ಲೈನ್‌ ಮಾಡಿಲ್ಲ. ಸೂಕ್ತವಾಗಿರುವ ಎಲ್ಲ ಗೌರವಗಳು ದೊರಕುತ್ತಿದೆ 16 ಕೋಟಿ ರೂ. ವೆಚ್ಚದ ಲಿಂಗಾಯತ ಭವನಕ್ಕೆ ಅಡಿಗಲ್ಲು ನೆರವೇರಿಸಿದ ಅಖೀಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ಮಾದರಿ ಎನ್ನುವಂತೆ ಲಿಂಗಾಯತ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯವಾಗಿದೆ. 

ಶಾಸಕ ಬಿ.ಆರ್‌. ಪಾಟೀಲ ಹಾಗೂ ಸಮಾಜದ ಮುಖಂಡರು ವೀರಶೈವ ಹಾಗೂ ಲಿಂಗಾಯತ ಎಂದು ಎರಡನ್ನು ಬಳಸುವುದರ ಮುಖಾಂತರ ಜಾಣ ನಡೆ ನಿರೂಪಿಸಿದ್ದಾರೆ ಎಂದರಲ್ಲದೆ, ಲಿಂಗಾಯತ ಭವನಕ್ಕೆ ಆರ್ಥಿಕ ಸಹಾಯ ಕಲ್ಪಿಸಲಾಗುವುದು ಎಂದು ಪ್ರಕಟಿಸಿದರು.

ಅಖೀಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಎನ್‌. ತಿಪ್ಪಣ್ಣ ಮಾತನಾಡಿ, ವೀರಶೈವರಿಗೂ ಬಸವಣ್ಣನೇ ತಂದೆ-ತಾಯಿ ಹಾಗೂ ದೈವ ಆಗಿದ್ದು, ಬಸವಣ್ಣ ಬಿಟ್ಟರೇ ನಮಗೆ ಯಾರೂ ಇಲ್ಲ. ಸಮಾಜ ಸಂಘಟನೆಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲಿ ಕೂಡಿದರೂ-ಸಭೆ ಕರೆದರೂ ಜಗಳವೇ ನಡೆಯುವಂತಾಗಿದೆ. ಹಾನಗಲ್‌ ಕುಮಾರಸ್ವಾಮಿ ಅವರು ಮಹಾಸಭಾ ಸ್ಥಾಪಿತಾವಧಿ ನಿರ್ಮಾಣವಾದ ಪರಿಸ್ಥಿತಿ ಈಗ ನಿರ್ಮಾಣ ಆದಂತಾಗಿದೆ ಎಂದು ಹೇಳಿದರು.

ಸಚಿವರಾದ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಬಸವಾದಿ ಶರಣರ ತತ್ವಗಳು ಪ್ರಚಾರಕ್ಕೆ ಸಿಮೀತವಾಗಬಾರದು. ನಮ್ಮ ಮಕ್ಕಳಲ್ಲಿ ಪಾಲನೆಯಾಗುವುದರ ಜತೆಗೆ ಮುಂದಿನ ಪೀಳಿಗೆಗೆ ಕೊಂಡೊಯ್ಯುವಂತೆ ಆಗಬೇಕು ಎಂದರು.

ಸಚಿವ ಈಶ್ವರ ಖಂಡ್ರೆ ಮಾತನಾಡಿ, ಬಸವ ತತ್ವ ಹೇಳಲಿಕ್ಕೆ ಸುಲಭವಾಗಿದೆ. ಆದರೆ ಅವುಗಳನ್ನು ಜೀವನದಲ್ಲಿ ಚಾಚು ತಪ್ಪದೇ ಪಾಲನೆ ಮಾಡುವುದರ ಮೂಲಕ ಸಾರ್ಥಕಗೊಳಿಸುವಂತೆ ಆಗಬೇಕು ಎಂದರು.

ಅಕ್ಕಲಕೋಟ ಶಾಸಕ ಸಿದ್ಧರಾಮ ಮೇತ್ರೆ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಆಶೀರ್ವಚನ ನೀಡಿ, ಸಮಾಜ ಸಂಘಟನೆ ನಮ್ಮೆಲ್ಲರ ಕೆಲಸವಾಗಿದೆ. ಲಿಂಗಾಯತ ಭವನವನ್ನು ಆದಾಯ ಬರುವಂತೆ ನಿರ್ಮಿಸಬೇಕು. ಅದಕ್ಕಾಗಿ ಭವನ ನಿರ್ಮಾಣಕ್ಕೆ ಶರಣಬಸವೇಶ್ವರ ಸಂಸ್ಥಾನದಿಂದ ಒಂದು ಲಕ್ಷ ರೂ. ಸಹಾಯ ಮಾಡಲಾಗುವುದು ಎಂದು ಘೋಷಿಸಿದರು.

ಅಖೀಲ ಭಾರತ ವೀರಶೈವ ಮಹಾಸಭಾ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಶಾಸಕ ಬಿ.ಆರ್‌. ಪಾಟೀಲ ಮಾತನಾಡಿ, ಸಮಾಜದ ಋಣ ತೀರಿಸಲು ಮೂರ್ತಿ ಅನಾವರಣ ಹಾಗೂ ಲಿಂಗಾಯತ ಭವನ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ತಮಗೆ ಇಂತಹ ಅವಕಾಶ ಸಿಕ್ಕಿರೋದು ಸುದೈವ ಎಂದರು.

ಬಡದಾಳದ ಚೆನ್ನಮಲ್ಲ ಶಿವಾಚಾರ್ಯರು, ಚಿಣಮಗೇರಾದ ಸಿದ್ಧರಾಮ ಶಿವಾಚಾರ್ಯರು, ಮೈಂದರಗಿಯ ಮಹಾಂತ ಸ್ವಾಮೀಜಿ, ಅಭಿನವ ಶಿವಲಿಂಗ ಮಹಾ ಸ್ವಾಮೀಜಿ, ಮಹಾರಾಷ್ಟ್ರದ ಔಸಾ ಕ್ಷೇತ್ರದ ಶಾಸಕ ಬಸವರಾಜ ಪಾಟೀಲ ಮುರುಮ್‌, ದುಧನಿ ನಗರಸಭೆ ಸಭಾಪತಿ ಸಾತಲಿಂಗಪ್ಪ ಮೇತ್ರೆ, ಮಹಾಪೌರ ಶರಣಕುಮಾರ ಮೋದಿ, ಶಾಸಕರಾದ ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಮುಖಂಡರಾದ ಸಿದ್ರಾಮಪ್ಪ ಪಾಟೀಲ ಧಂಗಾಪುರ,ವಿಠ್ಠಲರಾವ ಪಾಟೀಲ, ಎಪಿಎಂಸಿ ಅಧ್ಯಕ್ಷ ಶರಣು ಭೂಸನೂರ, ಟ್ರಸ್ಟ್‌ನ ಪದಾಧಿಕಾರಿಗಳಾದ ಹಣಮಂತರಾವ ಭೂಸನೂರ, ಶಂಕರರಾವ ಹತ್ತಿ, ಬಾಬುರಾವ್‌ ಮಡ್ಡೆ, ಡಾ| ಶಿವಾನಂದ ಬೇಡಗೆ, ಗುರುಶರಣ
ಪಾಟೀಲ, ಮಲ್ಲಪ್ಪ ಹತ್ತರಕಿ, ಸಿದ್ಧರಾಮ ಪ್ಯಾಟಿ, ಶರಣಗೌಡ ಪಾಟೀಲ, ಗಣೇಶ ಪಾಟೀಲ ಮುಂತಾದವರಿದ್ದರೆ

ಒಂದೇ ವೇದಿಕೆಯಲ್ಲಿ ವೀರಶೈವ-ಲಿಂಗಾಯತರು
ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ-ರಾಜ್ಯಾಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷರು ಹಾಗೂ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರೆಲ್ಲರೂ ಒಂದೇ ವೇದಿಕೆಯಲ್ಲಿ ಸಮಾಗಮವಾಗಲು ಬಸವಣ್ಣವರ ಮೂರ್ತಿ ಅನಾವರಣ ಹಾಗೂ ಲಿಂಗಾಯತ ಭವನ ಅಡಿಗಲ್ಲು ನೆರವೇರಿಸುವ ಸಮಾರಂಭ ಸಾಕ್ಷಿಯಾಯಿತು.

ಅಖೀಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ರಾಜ್ಯಾಧ್ಯಕ್ಷ ಎನ್‌. ತಿಪ್ಪಣ್ಣ, ಪ್ರಧಾನ ಕಾರ್ಯದರ್ಶಿ ಸಚಿವ ಈಶ್ವರ ಖಂಡ್ರೆ, ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಡಾ| ಶರಣಪ್ರಕಾಶ ಪಾಟೀಲ, ಲಿಂಗಾಯತ್‌ ಧರ್ಮದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತ ಬರುತ್ತಿರುವ ಶಾಸಕ ಬಿ.ಆರ್‌. ಪಾಟೀಲ ಸೇರಿದಂತೆ ಇತರರು ಭಿನ್ನತೆ ಮರೆತು ಒಂದಾಗಿದ್ದರು. ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಡಾ|  ಶರಣಪ್ರಕಾಶ ಪಾಟೀಲ್‌ ಮಾತಿನ ಕೊನೆಯಲ್ಲಿ ಜೈ ಬಸವ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿವಿಧ ಮಠಾಧೀಶರು ಮುಂದಿನ ಸಾಲಿನಲ್ಲಿರದೇ ಹಿಂದಿನ ಸಾಲಿನಲ್ಲಿ ಆಸೀನರಾಗಿದ್ದರು.

ಸಂವಿಧಾನ ಇಡಿಯಾಗಿ ಬದಲಿಸಲು ಸಾಧ್ಯವಿಲ್ಲ 
ಸಂವಿಧಾನದಲ್ಲಿ ಕೆಲ ಅಂಶಗಳನ್ನು ಚರ್ಚೆಗೆ ಒಳಪಡಿಸಿ ಈ ಹಿಂದೆಯೂ ಹಲವಾರು ಸಲ ತಿದ್ದುಪಡಿ ಮಾಡಲಾಗಿದೆ. ಕೆಲವೊಂದು ತಿದ್ದುಪಡಿ ಮಾಡಬಹುದೇ ಹೊರತು, ಸಂವಿಧಾನವನ್ನು ಇಡಿಯಾಗಿ ಬದಲಾಯಿಸಲು ಸಾಧ್ಯವಿಲ್ಲ. ಜನ ಕಲ್ಯಾಣಕ್ಕಾಗಿ ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನೂರಕ್ಕೂ ಹೆಚ್ಚು ಬಾರಿ ಸಂವಿಧಾನದ ವಿವಿಧ ಕಲಂಗಳಿಗೆ ತಿದ್ದುಪಡಿ ತರಲಾಗಿದೆ. ಈ ಸಂದರ್ಭದಲ್ಲಿ ಸಂವಿಧಾನದ
ಮೂಲ ಆಶಯಕ್ಕೆ ಧಕ್ಕೆ ತರುವ ಯತ್ನ ಮಾಡಿಲ್ಲ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಸ್ಪಷ್ಟ ನಿರ್ದೇಶನ ನೀಡಿದೆ. ಸಂವಿಧಾನ ಜಾರಿಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಒಬ್ಬರೇ ಅಲ್ಲ ರಾಜ್ಯಗಳು ಸೇರಿದಂತೆ ದೇಶವಾಸಿಗಳೆಲ್ಲರ ಕರ್ತವ್ಯವಾಗಿದೆ. ಇತ್ತೀಚೆಗೆ ಕೆಲವರು ಸಂವಿಧಾನದ ಪರಿವಿಡಿಯಲ್ಲಿ ಸೆಕ್ಯುಲರ್‌ ಪದ ಕೈಬಿಡುವಂತೆಯೂ ವಾದಿಸುತ್ತಿದ್ದರೆ. ಇದು ಅಸಾಧ್ಯದ ಮಾತು.
ಶಿವರಾಜ ಪಾಟೀಲ, ಕೇಂದ್ರದ ಮಾಜಿ ಗೃಹ ಸಚಿವ

ಎರಡು ವರ್ಷದಲ್ಲಿ ಭವನ ನಿರ್ಮಾಣ
16 ಕೋಟಿ ರೂ. ವೆಚ್ಚದ ಲಿಂಗಾಯತ ಭವನ ನಿರ್ಮಾಣ ಕಾರ್ಯ ಎರಡು ವರ್ಷದೊಳಗೆ ಪೂರ್ಣಗೊಳಿಸಲು ಶ್ರಮಿಸಲಾಗುವುದು. ಈಗಾಗಲೇ 9 ಕೋಟಿ ರೂ. ಸಾಲ ಪಡೆಯಲಾಗಿದೆ. ಒಂದು ಕೋಟಿ ರೂ. ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಒಟ್ಟಾರೆ ಇಂತಹ ಕಾರ್ಯ ನಿರ್ವಹಿಸುವಂತೆ ಅವಕಾಶ ಸಿಕ್ಕಿರುವುದು ತಮ್ಮ ಸೌಭಾಗ್ಯವಾಗಿದೆ. 
 ಬಿ.ಆರ್‌. ಪಾಟೀಲ, ಶಾಸಕರು, ಆಳಂದ

ಸಮಾಜ ಸಂಘಟನೆಗೆ ಯುವಕರು ಬರಲಿ
ವೀರಶೈವ ಲಿಂಗಾಯತ ಸಮಾಜ ಸಂಘಟನೆಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಅಗತ್ಯವಾಗಿದೆ. ಸಮಾಜದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ 88 ವರ್ಷ, ಗೌರವಾಧ್ಯಕ್ಷ ಭೀಮಣ್ಣ ಖಂಡ್ರೆ ಅವರಿಗೆ 96 ಹಾಗೂ ರಾಜ್ಯಾಧ್ಯಕ್ಷರಾಗಿರುವ ತಮಗೆ 90 ವಯಸ್ಸು. ಯುವಕರು ಮುಂದೆ ಬಂದಲ್ಲಿ ತಾವು ಈ ಸ್ಥಾನಗಳಿಂದ ಇಳಿಯಲು ಸಾಧ್ಯ. ಆದ್ದರಿಂದ ಸಮಾಜ ಸಂಘಟನೆಯಲ್ಲಿ ಸಮಾಜದ ಯುವಕರು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು. 
 ಎನ್‌. ತಿಪ್ಪಣ್ಣ, ಅಖೀಲ ಭಾರತ, ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next