Advertisement

ವಿಧಿಯಾಟಕ್ಕೆ ಕಂಪದಕೈ ಗ್ರಾಮದಲ್ಲೀಗ ಶೋಕಸಾಗರ

04:39 PM Nov 14, 2022 | Kavyashree |

ಹೊಸನಗರ: ಮೂರೇ ವರ್ಷದಲ್ಲಿ ಪತಿ ಹಾಗೂ ಇಬ್ಬರು ಮಕ್ಕಳನ್ನು ಕಳೆದುಕೊಂಡ ನತದೃಷ್ಟ ತಾಯಿ.. ಮತ್ತೂಂದೆಡೆ ಮೂರೇ ದಿನದಲ್ಲಿ ಅಪ್ಪ- ಅಮ್ಮನನ್ನು ಕಳೆದುಕೊಂಡ ಮುಗ್ಧ ಮಕ್ಕಳ ಆಕ್ರಂದನ.. ದೇವರೇ ನಿನಗೆ ಕಿಂಚಿತ್ತು ದಯೆ ಎನ್ನುವುದೇ ಇಲ್ಲವೇ ಎಂದು ಪ್ರಶ್ನಿಸಬೇಕಾದ ಸ್ಥಿತಿ.. ಒಟ್ಟಾರೆ ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.

Advertisement

ಹೌದು, ಇಂತಹ ಹೃದಯ ವಿದ್ರಾವಕ ಸ್ಥಿತಿ ಉಂಟಾಗಿರುವುದು ಕಂಪದಕೈ ಗ್ರಾಮದಲ್ಲಿ. ಕಳೆದ ಮೂರು ದಿನಗಳ ಹಿಂದೆ ನಡೆದ ಹುಲಿಕಲ್‌ ರಸ್ತೆ ಅಪಘಾತದ ಭೀಕರ ಘಟನೆ ಖೈರಗುಂದ ಗ್ರಾಪಂ ವ್ಯಾಪ್ತಿಯ ಕಂಪದಕೈ ಗ್ರಾಮವನ್ನು ಅಕ್ಷರಶಃ ಕಂಪಿಸುವಂತೆ ಮಾಡಿದೆ. ಹುಲಿಕಲ್‌ ಅಪಘಾತದಲ್ಲಿ ಚಿಕ್ಕಪ್ಪ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟರೆ, ಚಿಕ್ಕಮ್ಮ ಎರಡು ಕಾಲುಗಳನ್ನು ಕಳೆದುಕೊಂಡು ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಡಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಯಾರೂ ಇಲ್ಲದ ಮಹಾತಾಯಿ: ಈಕೆ ಇಂದಿರಾ. ಬಡಕುಟುಂಬವಾದರೂ ಗಂಡ, ಮನೆ, ಮಕ್ಕಳ ನಡುವೆ ನೆಮ್ಮದಿಯ ಜೀವನ. ಖಾತೆ ಹೊಂದಿರದ ಮುಳುಗಡೆ ಜಮೀನಿನಲ್ಲಿ ಕೃಷಿ ಮಾಡಿ, ಜೊತೆಗೆ ಕೂಲಿಗೂ ಹೋಗಿ ಜೀವನವಂತೂ ನಡೆಯುತ್ತಿತ್ತು. ಆದರೆ ಮೂರು ವರ್ಷದ ಹಿಂದೆ ವಿಧಿ ಇವರ ಸಂಸಾರದಲ್ಲಿ ಅಟಕಾಯಿಸಿಕೊಂಡಿದೆ. ಪತಿ ಶಂಕರಪ್ಪ ಕ್ಯಾನ್ಸರ್‌ ರೋಗಕ್ಕೆ ಬಲಿಯಾಗಿ ಮೃತಪಟ್ಟಿದ್ದಾರೆ. ಇದರಿಂದ ಪಾತಾಳಕ್ಕೆ ಕುಸಿದ ಇಂದಿರಾ ಕೊನೆಗೆ ಮಕ್ಕಳಿಗಾಗಿ ಎಲ್ಲವನ್ನೂ ಮರೆತು ಬದುಕು ಮುಂದುವರಿಸಿದಳು. ಕೂಲಿ- ನಾಲಿ ಮಾಡಿಕೊಂಡು ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಳ್ಳುವ ಜೊತೆಗೆ ಬದುಕನ್ನು ಕಟ್ಟಲು ಆರಂಭಿಸಿದಳು.

ಯಮಪಾಶವಾದ ಜೋಕಾಲಿ: ಅಪ್ಪನನ್ನು ಕಳೆದುಕೊಂಡರೂ ಅಮ್ಮನ ಆರೈಕೆಯಲ್ಲಿ ಬೆಳೆಯುತ್ತಿದ್ದ ಮನೆ ಮಗಳು. ಆದರೆ ವರ್ಷದ ಹಿಂದೆ ಜೋಕಾಲಿ ಆಡುತ್ತಿದ್ದ ವೇಳೆ ಆಯತಪ್ಪಿ ಜೋಕಾಲಿ ಹಗ್ಗ ಕುತ್ತಿಗೆಗೆ ಸಿಕ್ಕಿ ಅಲ್ಲೇ ಪ್ರಾಣ ಬಿಟ್ಟಿದ್ದಾಳೆ. ಅದೇನು ಇಷ್ಟು ಹೊತ್ತಾಯ್ತು ಮಗಳ ಸದ್ದೇ ಇಲ್ಲ ಎಂದು ಅಮ್ಮ ಹೊರಬಂದು ನೋಡುವಷ್ಟರಲ್ಲಿ ಜೋಕಾಲಿಯಲ್ಲಿ ಮಗಳ ಶವ ನೇತಾಡುತ್ತಿತ್ತು. ಪತಿಯ ಅಗಲಿಕೆ ಮರೆಯಬೇಕು ಎನ್ನುವಾಗಲೇ ವಿಧಿ ತನ್ನ ಕ್ರೂರತೆಯನ್ನು ಮತ್ತೆ ಮೆರೆದಿತ್ತು.

ಮನೆ ಮಗನ ಸರದಿ: ಪತಿ ಆಯ್ತು.. ಮಗಳು ಆಯ್ತು.. ಮಗನೊಬ್ಬ ಇದ್ದಾನಲ್ಲ. ಅವನ ಭವಿಷ್ಯದಲ್ಲೇ ತನ್ನ ಬದುಕನ್ನು ನೋಡುವ ಪ್ರಯತ್ನ ಮಾಡಿದ ಇಂದಿರಾಳಿಗೆ ವರ್ಷ ಕಳೆಯುವ ಹೊತ್ತಿನಲ್ಲಿ ಮತ್ತೂಂದು ಆಘಾತ ಬರಸಿಡಿಲಿನಂತೆ ಎರಗಿದೆ. ಚಿಕ್ಕಪ್ಪನೊಂದಿಗೆ ಹುಲಿಕಲ್‌ ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲದ ದೀಪೋತ್ಸವಕ್ಕೆ ಹೋಗಿ ಬರುವಾಗ ರಸ್ತೆ ಅಘಘಾತದಲ್ಲಿ ಚಿಕ್ಕಪ್ಪನೊಂದಿಗೆ ಮಗನೂ ಧಾರುಣವಾಗಿ ಮೃತಪಟ್ಟಿದ್ದಾನೆ. ಇದನ್ನು ಕಂಡ ಇಂದಿರಾಗೆ ಕುಸಿಯಲು ಏನೂ ಉಳಿದಿಲ್ಲ. ಮದುವೆಯಾಗಿ 13 ವರ್ಷ ಕಳೆದಿರುವ ಇಂದಿರಾ ಕಳೆದ ಮೂರು ವರ್ಷದಲ್ಲಿ ಆಸರೆ ಮತ್ತು ಭವಿಷ್ಯವನ್ನು ಕಳೆದುಕೊಂಡು ಏಕಾಂಗಿಯಾಗಿದ್ದಾಳೆ.

Advertisement

ಅಪ್ಪನೂ ಇಲ್ಲ, ಅಮ್ಮನೂ ಇಲ್ಲ: ಇದು ಅಪಘಾತದಲ್ಲಿ ಮೃತಪಟ್ಟ ಮತ್ತೂಂದು ಕುಟುಂಬದ ಕಣ್ಣೀರಿನ ಕತೆ. ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಹುಲಿಕಲ್‌ ಅಪಘಾತದಲ್ಲಿ ತಂದೆ ರವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಯಿ ಶಾಲಿನಿ ಅಪಘಾತದಲ್ಲಿ ಕಾಲು ಕಳೆದುಕೊಂಡು ಶಿವಮೊಗ್ಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಪ್ಪನನ್ನು ಕಳೆದುಕೊಂಡ 7 ನೇ ತರಗತಿಯ ಅಶ್ವಲ್‌, 4 ನೇ ತರಗತಿಯ ಅನೂಪ್‌ ಬದುಕು ದುರಂತಮಯವಾಗಿದೆ. ಅಪ್ಪನನ್ನು ಕಳೆದುಕೊಂಡ ಮಕ್ಕಳು ಅಮ್ಮ ಹುಷಾರಾಗಿ ಬರುತ್ತಾಳೆ ಎಂದು ನಿರೀಕ್ಷೆ ಹೊತ್ತಿದ್ದರು. ಆದರೆ ಆ ಮಕ್ಕಳಿಗೆ ಮತ್ತೆ ಆಘಾತ. ಅಮ್ಮ ಶಾಲಿನಿ ಚಿಕಿತ್ಸೆ ಫಲಿಸದೇ ಶವವಾಗಿ ಬಂದಿದ್ದು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ಹೇಳಿ ಕೇಳಿ ಇವರದ್ದು ಕಡು ಬಡ ಕುಟುಂಬ. ಗುಡಿಸಲು ತರದ ಮನೆಯಲ್ಲಿ ವಾಸ. ಅಪ್ಪ- ಅಮ್ಮ ಇಬ್ಬರೂ ಇಲ್ಲದೆ ಮಕ್ಕಳು ಅನಾಥರಾಗಿದ್ದಾರೆ. ಹುಲಿಕಲ್‌ ಅಪಘಾತ ಈ ಎರಡು ಕಡು ಬಡಕುಟುಂಬಗಳನ್ನು ಅಕ್ಷರಶಃ ಬೀದಿಗೆ ತಂದಿದೆ. ಒಂದು ಕಡೆ ಬದುಕೇ ಬೇಡ ಎನಿಸಿದರೂ ಬದುಕುವುದಾರೂ ಹೇಗೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಅಪಘಾತದಿಂದ ಈ ಎರಡೂ ಕುಟುಂಬಗಳು ಬೀದಿಗೆ ಬಿದ್ದಿವೆ. ಆ ಕುಟುಂಬವನ್ನು ಮೇಲೆತ್ತುವ ಕೆಲಸ ಆಗಬೇಕು. ಮಾನಸಿಕ, ಮತ್ತು ಆರ್ಥಿಕ ಸ್ಥೈರ್ಯ ತುಂಬಬೇಕಿದೆ. ಎಲ್ಲರ ಸಹಕಾರ ಅಗತ್ಯ.  -ವಿದ್ಯಾನಂದ ರಾವ್‌, ಮಾಸ್ತಿಕಟ್ಟೆ

ಈ ಬಡ ತಾಯಿ ಇಂದಿರಾ. ಅನಾಥ ಮಕ್ಕಳ ಬದುಕಿಗೆ ಆರ್ಥಿಕ ಶಕ್ತಿ ಬೇಕು. ಸರ್ಕಾರ ಈ ಪ್ರಕರಣವನ್ನು ಮಾನವೀಯ ನೆಲೆ ವ್ಯಾಪ್ತಿಗೆ ತಂದು ಕೂಡಲೇ ಆರ್ಥಿಕ ಪರಿಹಾರ ಘೋಷಿಸಬೇಕು.  -ಎಚ್‌.ಟಿ.ಅನಿಲ್‌ ಗೌಡ, ಮಾಸ್ತಿಕಟ್ಟೆ

-ಕುಮುದಾ ನಗರ

Advertisement

Udayavani is now on Telegram. Click here to join our channel and stay updated with the latest news.

Next