Advertisement

ಪ್ರವಾಸೋದ್ಯಮ ಅಭಿವೃದ್ಧಿಗೆ ಬಹಳಷ್ಟು ಅವಕಾಶಗಳಿದ್ದರೂ ಈಡೇರಿಲ್ಲ !

10:29 PM Oct 23, 2019 | Team Udayavani |

ಮಹಾನಗರ: ಫಲ್ಗುಣಿ ನದಿಯ ಬದಿಯಲ್ಲಿ ವ್ಯಾಪಿಸಿರುವ ಬೋಳೂರು ವಾರ್ಡ್‌ ಮೀನುಗಾರಿಕೆಯೊಂದಿಗೆ ಬೆಸೆದುಕೊಂಡ ಸುಂದರ ಪ್ರದೇಶ. ಒಂದೆಡೆ ಮೊಗವೀರ ಸಮುದಾಯ, ಇನ್ನೊಂದೆಡೆ ಪ್ರೊಟೆಸ್ಟೆಂಟ್‌ ಕ್ರಿಶ್ಚಿಯನ್‌ ಹಾಗೂ ಹಲವು ಜನಸಮುದಾಯದ ಜತೆಗೆ ಅನ್ಯೋನ್ಯತೆ ಬೆಸೆಯುವ ಮುಖೇನವೇ ಗುರುತಿಸಿಕೊಂಡಿದೆ.

Advertisement

ಐತಿಹಾಸಿಕ ಸುಲ್ತಾನ್‌ಬತ್ತೇರಿ ಕೋಟೆ ಈ ವಾರ್ಡ್‌ನ ವಿಶೇಷತೆ. ಅಮೃತಾನಂದಮಯಿ ಮಠ, ಶಾಲೆ, ಬೋಟ್‌ ಕ್ಲಬ್‌, ಜಾರಂದಾಯ ಮಹಮ್ಮಾಯಿ, ಶನೀಶ್ವರ ದೇವ ಸ್ಥಾನಗಳು, ಕೊರಗಜ್ಜ ಸ್ಥಾನ, ಕಲ್ಲುರ್ಟಿ, ಕೋರªಬ್ಬು ಸ್ಥಾನ ಸಹಿತ ಹಲವು ಧಾರ್ಮಿಕ ಪುಣ್ಯ ಕ್ಷೇತ್ರ ಗಳು ಈ ವಾರ್ಡ್‌ನಲ್ಲಿವೆ.

ಬೋಳೂರು ವೆಟ್‌ವೆಲ್‌ನಿಂದ ಜಾರಂ ದಾಯ ದೇವಸ್ಥಾ ನದವರೆಗೆ ಒಳ ಚರಂಡಿ ಸಮಸ್ಯೆ ಇದೆ. ಇದು ಈ ವ್ಯಾಪ್ತಿಯ ದೊಡ್ಡ ಸಮಸ್ಯೆಯಾಗಿದ್ದು, 80 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಶುರುಮಾಡಲಾಗಿತ್ತು. ಆದರೆ, ಸುಲ್ತಾನ್‌ಬತ್ತೇರಿ ಭಾಗದಲ್ಲಿ ಕಾಮಗಾರಿ ನಡೆಸುವ ಸಂದರ್ಭ ದೊಡ್ಡ ಬಂಡೆಯೊಂದು ಸಿಕ್ಕ ಕಾರಣದಿಂದ ಕಾಮಗಾರಿ ನಡೆಸಲು ಸಾಧ್ಯವಾಗದೆ, ಅರ್ಧದಲ್ಲಿಯೇ ಸ್ಥಗಿತಗೊಂಡಿತ್ತು. ಮುಂದೆ ಈ ಯೋಜನೆಯನ್ನು ಎಡಿಬಿ ನೆಲೆಯಲ್ಲಿ ಮುಂದುವರಿಸಲಾಗುತ್ತದೆ ಎಂಬ ಮಾಹಿತಿಯಿದೆ. ಬೋಳೂರುವಿನಲ್ಲಿ ವಿದ್ಯುತ್‌ ಚಿತಾ ಗಾರ, ಬೊಕ್ಕಪಟ್ಣದಲ್ಲಿ ಸಾರ್ವಜನಿಕ ರಂಗಮಂದಿರ, ಕೆಲವು ಒಳರಸ್ತೆಗಳು ಮೇಲ್ದರ್ಜೆಗೇರಿದ್ದು ಈ ವಾರ್ಡ್‌ನಲ್ಲಿ ಕಾಣುತ್ತದೆ. ಒಳಚರಂಡಿ ಕಾಮಗಾರಿ ನಡೆದಿದೆ ಯಾದರೂ ಆಗಬೇಕಾದ ಕಾರ್ಯ ಇನ್ನಷ್ಟು ಬಾಕಿ ಇದೆ. ನದಿ ಬದಿ ಪ್ರದೇಶ ಇದಾಗಿರುವುದರಿಂದ ಪ್ರವಾಸೋದ್ಯಮ ಇಲಾಖೆಗೆ ಈ ಭಾಗವನ್ನು ವಿಭಿನ್ನ ನೆಲೆಯಲ್ಲಿ ಅಭಿವೃದ್ಧಿಪಡಿಸಲು ಅವಕಾಶ ಇತ್ತಾದರೂ, ಆ ಕಾರ್ಯ ಪೂರ್ಣಮಟ್ಟದಲ್ಲಿ ನಡೆದಿಲ್ಲ.

ಐತಿಹಾಸಿಕ ಕೋಟೆಗೆ ನಿರ್ವಹಣೆ ಕೊರತೆ!
ಗುರುಪುರ ನದಿಗೆ ಯುದ್ಧ ನೌಕೆಗಳು ಬರುವುದನ್ನು ತಡೆಯಲು ಟಿಪ್ಪು ಸುಲ್ತಾನ್‌ ಸೂಚನೆಯಂತೆ ಕಾವಲು ಕೋಟೆಯಾಗಿ “ಸುಲ್ತಾನ್‌ಬತ್ತೇರಿ’ ನಿರ್ಮಿಸಲಾಗಿತ್ತು. ಇದು ಒಂದು ಕಾವಲು ಗೋಪುರವಾದರೂ ಸಹ ಹೊರ ನೋಟಕ್ಕೆ ಕೋಟೆಯಂತೆ ಕಾಣುತ್ತಿದೆ. 1784ರಲ್ಲಿ ನಿರ್ಮಾ ಣ ಗೊಂಡ ಸುಲ್ತಾನ್‌ಬತ್ತೇರಿ ಕೋಟೆಯು ಇದೀಗ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧೀನಕ್ಕೊಳಪಟ್ಟಿವೆ. ಅಂದರೆ ಪ್ರಾಚೀನ ಸ್ಮಾರಕ, ಪುರಾತತ್ವ ಸ್ಥಳ ಹಾಗೂ ಅವಶೇಷಗಳ ಅಧಿನಿಯಮ 1985ರ ಪ್ರಕಾರ “ಸಂರಕ್ಷಿತ ಸ್ಮಾರಕ’ ಅಂದರೆ “ರಾಷ್ಟ್ರೀಯ ಮಹತ್ವದ ಸ್ಮಾರಕ’ ಎಂದು ಘೋಷಿಸಲಾಗಿದೆ. ಹೀಗಾಗಿ ಪಾಲಿಕೆ/ಜಿಲ್ಲಾಡಳಿತ ವತಿಯಿಂದ ಇಲ್ಲಿ ಯಾವುದೇ ಕಾಮಗಾರಿ ಹಾಗೂ ನಿರ್ವಹಣೆ ಮಾಡುವಂತಿಲ್ಲ. ಪುರಾತತ್ವ ಇಲಾ ಖೆಯ ಅಧಿಕಾರಿಗಳಿಂದ ಕೋಟೆಯ ನಿರ್ವ ಹಣೆಯೇ ಸಮರ್ಪಕವಾಗಿ ನಡೆಯುತ್ತಿಲ್ಲ.

ರಾಜಕೀಯ ಹಿನ್ನೋಟ
ವಾರ್ಡ್‌ ನಂ.27 ಬೋಳೂರು ವಾರ್ಡ್‌ನಲ್ಲಿ 2013ರಲ್ಲಿ ಕಾಂಗ್ರೆಸ್‌ನಿಂದ ಲತಾ ಸಾಲ್ಯಾನ್‌ ಅವರು ಮೊದಲ ಸ್ಪರ್ಧೆಯಲ್ಲಿ ಜಯಗಳಿಸಿದ್ದರು. ಬಿಜೆಪಿಗಿಂತ ಕಾಂಗ್ರೆಸ್‌ ಕೇವಲ 56 ಮತಗಳ ಅಂತರದಲ್ಲಿ ಜಯ ದಾಖಲಿಸಿರುವುದು ಉಲ್ಲೇಖನೀಯ. 2013ಕ್ಕೂ ಮುನ್ನ ಈ ವಾರ್ಡ್‌ನಲ್ಲಿ ಬಿಜೆಪಿ ಜಯಗಳಿಸಿದ್ದರೆ, ಅದಕ್ಕೂ ಮುನ್ನ ಕಾಂಗ್ರೆಸ್‌ ಜಯಭೇರಿ ದಾಖಲಿಸಿತ್ತು. ಕಳೆದ ಬಾರಿ ಈ ವಾರ್ಡ್‌ “ಸಾಮಾನ್ಯ (ಮಹಿಳೆ)’ ಮೀಸಲಾಗಿತ್ತು. ಆದರೆ ಈ ಬಾರಿ ಇಲ್ಲಿ “ಸಾಮಾನ್ಯ’ ಮೀಸಲಾತಿ ಬಂದಿದೆ. ಶೇ.50ರಷ್ಟು ಈ ಬಾರಿ ಮಹಿಳಾ ಮೀಸಲಾತಿ ಇರುವ ಕಾರಣದಿಂದ ಸಾಮಾನ್ಯ ಮೀಸಲಾತಿ ಬಂದಿರುವ ವಾರ್ಡ್‌ನಲ್ಲಿ ಈ ಬಾರಿ ಮಹಿಳೆಯರಿಗೆ ಸ್ಪರ್ಧೆಗೆ ಅವಕಾಶ ಇಲ್ಲ ಎಂದು ಕಾಂಗ್ರೆಸ್‌ ತಿಳಿಸಿರುವ ಕಾರಣದಿಂದ ನಿಕಟಪೂರ್ವ ಕಾರ್ಪೊರೇಟರ್‌ ಲತಾ ಸಾಲ್ಯಾನ್‌ ಅವರಿಗೆ ಸ್ಪರ್ಧಿಸುವ ಅವಕಾಶ ಕಡಿಮೆ ಎನ್ನಲಾಗಿದೆ.

Advertisement

ಬೋಳೂರು ವಾರ್ಡ್‌
ಭೌಗೋಳಿಕ ವ್ಯಾಪ್ತಿ: ಸುಲ್ತಾನ್‌ಬತ್ತೇರಿಯಿಂದ ಬೊಕ್ಕಪಟ್ಣ, ಮಠದಕಣಿಯ ಎಡಭಾಗದ ರಸ್ತೆ ಹಾಗೂ ಕೊರಗಜ್ಜ ದೈವಸ್ಥಾನದವರೆಗಿನ ಪ್ರದೇಶಗಳನ್ನು ಬೋಳೂರು ವಾರ್ಡ್‌ ಒಳಗೊಂಡಿದೆ. ಫಲ್ಗುಣಿ ನದಿ ತೀರ ಪ್ರದೇಶ ಈ ವಾರ್ಡ್‌ನ ಮುಖ್ಯ ಅಂಶ.

ಒಟ್ಟು ಮತದಾರರು 8000
ನಿಕಟಪೂರ್ವ ಕಾರ್ಪೊರೇಟರ್‌-ಲತಾ ಸಾಲ್ಯಾನ್‌ (ಕಾಂಗ್ರೆಸ್‌)

2013ರ ಚುನಾವಣೆ ಮತ ವಿವರ
ಲತಾ ಸಾಲ್ಯಾನ್‌ (ಕಾಂಗ್ರೆಸ್‌): 1411
ಸರೋಜಿನಿ (ಬಿಜೆಪಿ): 1355
ರೇಣುಕಾ ಕುಂದರ್‌ (ಪಕ್ಷೇತರ): 249
ಶರ್ಮಿಳಾ ಬಂಗೇರ (ಜೆಡಿಎಸ್‌): 66
ಪ್ರಭಾವತಿ (ಸಿಪಿಐಎಂ): 53

-  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next