Advertisement

ಆಗ ಕಿರಾಣಿ ಅಂಗಡಿಯ ಹುಡುಗ; ಈಗ ಸಚಿವ

04:13 PM Aug 21, 2019 | sudhir |

ಕೋಟ: ಅತಿ ಹಿಂದುಳಿದ ವರ್ಗದ ಮತ್ತು ರಾಜಕೀಯ ಹಿನ್ನೆಲೆಯೇ ಇಲ್ಲದ ಕುಟುಂಬದಲ್ಲಿ ಜನಿಸಿ, ಬಡತನದ ಕಾರಣಕ್ಕೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕು ಗೊಳಿಸಿ ಕಿರಾಣಿ ಅಂಗಡಿ ಕಾರ್ಮಿಕನಾಗಿ ಬೆಳೆದ ಕೋಟ ಶ್ರೀನಿವಾಸ ಪೂಜಾರಿ ಈಗ 2ನೇ ಅವಧಿಗೆ ರಾಜ್ಯ ಕ್ಯಾಬಿನೆಟ್‌ ದರ್ಜೆ ಸಚಿವರಾಗಿದ್ದಾರೆ. ಕಿರಾಣಿ ಅಂಗಡಿಯಲ್ಲಿ ಸಾಮಗ್ರಿ ಕಟ್ಟಿಕೊಡುವಲ್ಲಿಂದ ವಿಧಾನ ಸೌಧದ ಮೆಟ್ಟಿಲೇರುವ ತನಕದ ಪೂಜಾರಿ ಯವರ ಯಾನ ಗಮನಿಸುವಂಥದ್ದು.

Advertisement

1960ರ ಜ. 1ರಂದು ಕೋಟತಟ್ಟುವಿ ನಲ್ಲಿ ಆಣ್ಣಪ್ಪ ಪೂಜಾರಿ ಮತ್ತು ಲಚ್ಚಿ ಪೂಜಾರಿ ಅವರ ಪುತ್ರನಾಗಿ ಜನಿಸಿದ ಶ್ರೀನಿವಾಸ ಕೋಟ ಶಾಂಭವೀ ಶಾಲೆಯಲ್ಲಿ 7ನೇ ತರಗತಿ ಶಾಲಾ ವಿದ್ಯಾಭ್ಯಾಸಕ್ಕೆ ಮಂಗಳ ಹಾಡಿದ್ದರು.

ಕಿರಾಣಿ ಅಂಗಡಿ ಹುಡುಗ
1974ರಲ್ಲಿ 14ನೇ ವಯಸ್ಸಿಗೆ ಕೋಟದ ವಾಸುದೇವ ನಾಯಕ್‌ ಅವರ ಕಿರಾಣಿ
ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಬಿಡುವಿನ ವೇಳೆಯಲ್ಲಿ ಕೃಷಿ ಕೂಲಿಯಾಗಿಯೂ ದುಡಿಯುತ್ತಿದ್ದರು. 15 ವರ್ಷಗಳ ಅನಂತರ ಛಾಯಚಿತ್ರಗ್ರಾಹಕನಾದರು. ಕ್ರಮೇಣ ಕೋಟದಲ್ಲಿ ಸ್ವಾತಿ ಸ್ಟುಡಿಯೋ ತೆರೆದರು. ಈ ವೃತ್ತಿ 2008ರಲ್ಲಿ ವಿಧಾನ ಪರಿಷತ್‌ ಸದಸ್ಯನಾಗಿ ಆಯ್ಕೆಯಾಗುವ ತನಕ ಮುಂದುವರಿಯಿತು. ಇವೆಲ್ಲ ಏಳುಬೀಳುಗಳ ನಡುವೆ ಶಾಂತಾ ಅವರ ಬಾಳಸಂಗಾತಿಯಾದರು; ಸ್ವಾತಿ, ಶಶಿಧರ, ಶ್ರುತಿ ಮಕ್ಕಳಾಗಿ ಮನೆ ಬೆಳಗಿದರು.

ರಾಜಕೀಯ ಜೀವನ
1993ರಲ್ಲಿ ಕೋಟತಟ್ಟು ಗ್ರಾ.ಪಂ. ಸದಸ್ಯನಾದರು. ಬಿಜೆಪಿ ಜತೆ ಗುರುತಿಸಿ ಕೊಂಡು ಉಪಾಧ್ಯಕ್ಷರಾದರು. ಗ್ರಾ.ಪಂ. ಸದಸ್ಯನಾಗಿರುವಾಗಲೇ 1996ರ ಉಡುಪಿ ತಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದರು. ಅನಂತರ 1999 ಮತ್ತು 2004ರಲ್ಲಿ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬ್ರಹ್ಮಾವರ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೆ. ಜಯಪ್ರಕಾಶ್‌ ಹೆಗ್ಡೆ ವಿರುದ್ಧ ಪರಾಭವಗೊಂಡರು. 2006ರಲ್ಲಿ ಪಂ. ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದು ಸದಸ್ಯರಾಗಿದರು. 2008ರಲ್ಲಿ ಸ್ಥಳೀಯಾ ಡಳಿತದ ಸ್ಥಾನದಿಂದ ಉಡುಪಿ-ದ.ಕ. ಅವಳಿ ಜಿಲ್ಲೆಗಳ ಪ್ರತಿನಿಧಿಯಾಗಿ ವಿಧಾನ ಪರಿಷತ್‌ಗೆ ಮೊದಲ ಬಾರಿಗೆ ಆಯ್ಕೆಯಾದರು. ಮತ್ತೆ 2010ರಲ್ಲಿ ಅವಿರೋಧವಾಗಿ ಆಯ್ಕೆಯಾದರು. 2012ರಲ್ಲಿ ರಾಜ್ಯ ಬಂದರು, ಒಳನಾಡು ಜಲಸಾರಿಗೆ ಮತ್ತು ಮುಜರಾಯಿ ಸಚಿವ ಸ್ಥಾನವನ್ನು ಉತ್ತಮ ವಾಗಿ ನಿಭಾಯಿಸಿದರು. 2015ರಲ್ಲಿ ಮತ್ತೂಮ್ಮೆ ವಿಧಾನಪರಿಷತ್‌ ಸದಸ್ಯನಾಗಿ ಆಯ್ಕೆಗೊಂಡು 2018ರಲ್ಲಿ ವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯಕರಾದರು.

ಬಸ್‌ ಟಿಕೆಟ್‌ ಹೋರಾಟ
ಅದೊಂದು ದಿನ ಬೆಂಗಳೂರಿಗೆ ತೆರಳಿ ವಾಪಸಾಗುವಾಗ ಬಸ್‌ನಲ್ಲಿ ಶ್ರೀನಿವಾಸ ಪೂಜಾರಿಯವರಿಗೆ ಮೀಸಲಾಗಿದ್ದ ಆಸನ ಬಿಟ್ಟು ಬೇರೆ ಸೀಟ್‌ನಲ್ಲಿ
ಕುಳ್ಳಿರಿಸ ಲಾಯಿತು. ಇದನ್ನು ಪ್ರತಿಭಟಿಸಿ ಅವರು ಬಳಕೆದಾರರ ವೇದಿಕೆಯ ಮೂಲಕ ಹೋರಾಟ ಆರಂಭಿಸಿದರು. ಅನಂತರ ಇವರ ಪರ ತೀರ್ಪು
ಬಂದು ಬಸ್‌ನವರಿಗೆ ದಂಡ ವಿಧಿಸಲಾಯಿತು.

Advertisement

ಈ ಘಟನೆ ಅವರಲ್ಲಿ ಹೋರಾಟದ ಕಿಚ್ಚು ಹೆಚ್ಚುವಂತೆ ಮಾಡಿತು. 1989ರಲ್ಲಿ ಶೇಂದಿ ನಿಷೇಧ ಕಾಯ್ದಿ ಜಾರಿಗೆ ಬಂದಾಗ ಮುಂಚೂಣಿಯಲ್ಲಿ ನಿಂತು ಹೋರಾಟ ಸಂಘಟಿಸಿದ್ದರ ಫಲವಾಗಿ ಅಂದಿನ ಸರಕಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಂದಿ ನಿಷೇಧ ಕೈಬಿಟ್ಟಿತ್ತು. ಬಂಗಾರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭ ಮೂರ್ತೆದಾರರ ಪರ ದೊಡ್ಡ
ಹೋರಾಟ ಸಂಘಟಿಸಿದ್ದರು.

ಹೋರಾಟ ಮತ್ತು ಕಾರ್ಯವೈಖರಿಯನ್ನು ಗುರುತಿಸಿ ಪಕ್ಷ ನನಗೆ ಈ ಜವಾಬ್ದಾರಿ ನೀಡಿದೆ. ಇದನ್ನು ಪ್ರಾಮಾಣಿಕವಾಗಿ ನಿರ್ವಹಿಸಲಿದ್ದೇನೆ.
– ಕೋಟ ಶ್ರೀನಿವಾಸ ಪೂಜಾರಿ

ಹೋರಾಟ- ವಾಕ್‌ ಚಾತುರ್ಯ
ಹೋರಾಟದ ಮನೋಭಾವ ಮತ್ತು ಪ್ರಕರ ವಾಕ್‌ ಚಾತುರ್ಯ ಪೂಜಾರಿಯವರಿಗೆ ವರದಾನ. ಕತೆ – ಉಪಕತೆಗಳನ್ನು ಹೇಳುತ್ತ ಮಂತ್ರಮುಗ್ಧಗೊಳಿಸುವಂತೆ ಮಾತನಾಡುವ ಶಕ್ತಿ, ಅಧ್ಯಯನಶೀಲತೆ, ಪೂರ್ವ ತಯಾರಿಯೊಂದಿಗೆ ವಿಷಯ ಮಂಡನೆ ಇವರ ವಿಶೇಷತೆ.

Advertisement

Udayavani is now on Telegram. Click here to join our channel and stay updated with the latest news.

Next