ತೆಕ್ಕಟ್ಟೆ :ಇಲ್ಲಿನ ತೆಕ್ಕಟ್ಟೆ ರಾ.ಹೆ.66 ಪ್ರಮುಖ ಭಾಗದಲ್ಲಿರುವ ಎಕ್ಸ್ಪ್ರೆಸ್ ಬಸ್ ತಂಗುದಾಣದ ಸಮೀಪ ಪಾದಚಾರಿಗೆ ಲಾರಿ ಢಿಕ್ಕಿಯಾಗಿ ತೀವ್ರ ಸ್ವರೂಪದ ಗಾಯಗಳಾದ ಘಟನೆ ಜ.18 ರಂದು ರಾತ್ರಿ ಗಂಟೆ 8ರ ಸುಮಾರಿಗೆ ಸಂಭವಿಸಿದೆ
ಕುಂದಾಪುರದಿಂದ ಮಂಗಳೂರಿನ ಕಡೆಗೆ ಸಾಗುತ್ತಿದ್ದ ಭಾರತ್ ಬ್ರೆಂಜ್ ಲಾರಿ ಪಾದಚಾರಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಬಲಗಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿ ರಸ್ತೆ ವಿಭಾಜಕ ಮೇಲೆ ಬಿದ್ದಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ತೆಕ್ಕಟ್ಟೆ ಫ್ರೆಂಡ್ಸ್ (ರಿ.) ತೆಕ್ಕಟ್ಟೆ ಇದರ ಆ್ಯಂಬುಲೆನ್ಸ್ ಸಹಾಯದಿಂದ ತತ್ಕ್ಷಣವೇ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಾಯಾಳು ತೀರ್ಥಹಳ್ಳಿ ಮೂಲದವರು ಎಂದು ಹೇಳಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾ.ಹೆ.66 ರಲ್ಲಿ ಕಾಡುತ್ತಿದೆ ಪ್ರಖರ ದಾರಿದೀಪದ ಸಮಸ್ಯೆ: ತೆಕ್ಕಟ್ಟೆ ರಾ.ಹೆ.66 ಪ್ರಮುಖ ಭಾಗದ ಸರ್ಕಲ್ನಲ್ಲಿ ಸಮರ್ಪಕವಾದ ಹೈಮಾಸ್ಟ್ ದಾರಿದೀಪ ಇಲ್ಲದಿರುವ ಪರಿಣಾಮ ಪರಿಸರದಲ್ಲಿ ಪ್ರಖರ ಬೆಳಕಿನ ಕೊರತೆ ಎದ್ದು ಕಾಣುತ್ತಿದ್ದು, ರಾತ್ರಿ ವೇಳೆಯಲ್ಲಿ ಪರಿಸರದ ಪಾದಚಾರಿಗಳು ರಸ್ತೆಯ ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಾಗುವಾಗ ರಾ.ಹೆ.66ರಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಗೋಚರವಾಗದೇ ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ. ಈ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ರಾ.ಹೆ. ಪ್ರಾಧಿಕಾರದವರಿಗೆ ಸಾರ್ವಜನಿಕರು ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡಾ ಇದುವರೆಗೆ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯ ಯುವ ಮುಖಂಡ ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಕ್ಕುಪತ್ರ ಹಂಚಲು ಪ್ರಧಾನಿ ಕಲಬುರ್ಗಿಗೆ ಬರುವ ಅಗತ್ಯವಿತ್ತಾ?: ಪ್ರಿಯಾಂಕ್ ಖರ್ಗೆ ವ್ಯಂಗ್ಯ