Advertisement

15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕದ್ದ ಮನೆಗೆಲಸದಾಕೆ

02:41 PM May 11, 2022 | Team Udayavani |

ಬೆಂಗಳೂರು: ಹೆಣ್ಣೂರಿನಲ್ಲಿ ಉದ್ಯಮಿ ಮನೆಯಲ್ಲಿದ್ದ ಚಿನ್ನ, ಪ್ಲಾಟಿನಂ ಆಭರಣ, ವಿದೇಶಿ ಕರೆನ್ಸಿ ಸೇರಿ 15 ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ಮನೆ ಕೆಲಸದಾಕೆಯೇ ಕಳ್ಳತನ ಮಾಡಿ ಪರಾರಿ ಯಾಗಿರುವ ಘಟನೆ ನಡೆದಿದೆ.

Advertisement

ಹೊರಮಾವು ನಿವಾಸಿ ಉದ್ಯಮಿ ಅರವಿಂದ್‌ ಮನೆಯಲ್ಲಿ ಕಳ್ಳತನವಾಗಿದೆ. ಉದ್ಯಮಿ ಅರವಿಂದ್‌ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕೆಲ ವರ್ಷಗಳಿಂದ ಹೊರಮಾವಿನಲ್ಲಿ ನೆಲೆಸಿದ್ದಾರೆ. ಮೇ 3ರಂದು ಸುಬ್ಬಲಕ್ಷ್ಮೀ ಎಂಬಾಕೆ ಮನೆಗೆಲಸಕ್ಕೆ ಸೇರಿದ್ದಳು.

ಮೇ 6ರಂದು ಸಂಜೆ 4.30ಕ್ಕೆ ಅರವಿಂದ್‌ ದಂಪತಿ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಮನೆಯಿಂದ ಹೊರಗೆ ಹೋಗಿದ್ದರು. ಸಂಜೆ 5.20ಕ್ಕೆ ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾವನ್ನು ಮೊಬೈಲ್‌ನಲ್ಲಿ ಗಮನಿಸಿದಾಗ, ಸುಬ್ಬಲಕ್ಷ್ಮೀ ಎಲ್ಲೂ ಕಾಣಿಸಲಿಲ್ಲ. ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಯಶೋಧಾಗೆ ಕರೆ ಮಾಡಿ ವಿಚಾರಿಸಿದಾಗ, ಮೆಡಿಕಲ್‌ ಶಾಪ್‌ಗೆ ಹೋಗಿ ಬರುವುದಾಗಿ ಸುಬ್ಬಲಕ್ಷ್ಮೀ ಹೊರಗೆ ಹೋಗಿದ್ದಾಳೆ ಎಂದು ಹೇಳಿದ್ದಳು. ಅರವಿಂದ್‌ ಹಲವು ಬಾರಿ ಸುಬ್ಬಲಕ್ಷ್ಮೀ ಮೊಬೈಲ್‌ಗೆ ಕರೆ ಮಾಡಿದ್ದರೂ ಆಕೆಯ ಮೊಬೈಲ್‌ ಸ್ವಿಚ್ಡ್ ಆಫ್ ಆಗಿತ್ತು. ಆತಂಕಗೊಂಡ ಅರವಿಂದ್‌ ದಂಪತಿ ಸಂಜೆ 5.45ಕ್ಕೆ ಮನೆಗೆ ವಾಪಸ್ಸಾಗಿ ಬೆಡ್‌ ರೂಮ್‌ನಲ್ಲಿದ್ದ ಕಬೋರ್ಡ್‌, ಡ್ರಾಯರ್‌ ಪರಿಶೀಲಿಸಿದಾಗ 250 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ, 200 ಯುಎಸ್‌ ಡಾಲರ್‌, 200 ಕೆನಡಾ ಡಾಲರ್‌, ನಗದು ಸೇರಿ 15 ಲಕ್ಷ ರೂ. ಮೌಲ್ಯದ ವಸ್ತುಗಳು ಕಳುವಾಗಿರುವುದು ಗೊತ್ತಾಗಿತ್ತು. ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next