ಬೆಂಗಳೂರು: ಬರೋಬ್ಬರಿ 60 ಬಾರಿ ಕಳ್ಳತನ ಮಾಡಿದ್ದ ಕುಖ್ಯಾತ ಮನೆಗಳ್ಳರನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.
ಫಯಾಜ್ ಅಹಮ್ಮದ್ ಹಾಗೂ ಪ್ರಸಾದ್ ಬಂಧಿತ ಆರೋಪಿಗಳು. ಒಟ್ಟು 6 ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಂದ 695 ಗ್ರಾಂ ಚಿನ್ನಾಭರಣ ಮತ್ತು ಒಂದು ಕಾರು ವಶಕ್ಕೆ ಪಡೆದಿದ್ದಾರೆ.
ಬಂಧಿತರು ಕಳ್ಳತನ ಮಾಡಿದ ಬಳಿಕ ಕಾರಿನಲ್ಲಿ ತಿರುಗಾಡುತ್ತಿದ್ದರು. ತಮ್ಮ ಸುಳಿವು ಸಿಗಬಾರದು ಎಂಬಉದ್ದೇಶದಿಂದ ಎಲ್ಲಿಯೂ ನಿಲ್ಲದೇಒಂದೊಂದು ಊರು ಅಲೆದಾಡುತ್ತಿದ್ದರು. ಊರುಗಳಲ್ಲಿ ಕದ್ದ ಚಿನ್ನವನ್ನು ಅಡವಿಟ್ಟು ಬಂದ ಹಣದಲ್ಲಿ ದುಂದು ವೆಚ್ಚ ಮಾಡುತ್ತಿದ್ದರು. ಪ್ರಕರಣವೊಂದರಲ್ಲಿ ಪೀಣ್ಯ ಪೊಲೀಸರಿಂದ ಬಂಧಿತನಾಗಿದ್ದ ಫಯಾಜ್ ಅಹ್ಮದ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ.
ಕೋಲಾರದ ಗಲ್ ಪೇಟ್ ಠಾಣಾ ವ್ಯಾಪ್ತಿಯಲ್ಲಿ ನ್ಯಾಯಾಧೀಶರೊಬ್ಬರ ನಿವಾಸದಲ್ಲಿ ಬೀಗ ಒಡೆದು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಬೆಂಗಳೂರಿನ ಹೆಣ್ಣೂರು, ರಾಮಮೂರ್ತಿ ನಗರದ ವಿವಿಧೆಡೆ ಮನೆಗಳ್ಳತನ, ಶಿವಮೊಗ್ಗದಲ್ಲಿ ಎಟಿಎಂ ದೋಚಲು ವಿಫಲಯತ್ನ ಮಾಡಿದ್ದರು.