ಬೆಂಗಳೂರು: ಡಯಾಗ್ನಸ್ಟಿಕ್ ಸೆಂಟರ್ಗೆ ನುಗ್ಗಿ ಲಕ್ಷಾಂತರ ರೂ. ನಗದು ದೋಚಿ ಪರಾರಿಯಾಗಿದ್ದ ಅಕ್ಕ-ತಮ್ಮನನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆನೇಕಲ್ ಮೂಲದ ಆನಂದ್(32) ಹಾಗೂ ಗಾಯತ್ರಿ (34) ಬಂಧಿತರು. ಆರೋಪಿಗಳಿಂದ 4.78 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 1ರಂದು ಡಯಾಗ್ನಸ್ಟಿಕ್ ಸೆಂಟರ್ನ ಕಿಟಕಿಯ ಎಕ್ಸಾಸ್ಟಿಂಗ್ ಫ್ಯಾನ್ ಬಿಚ್ಚಿ ಒಳ ನುಗ್ಗಿದ್ದ ಆನಂದ್, 8.20 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಬಸವೇಶ್ವರ ನಗರ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀ ಸರು, ಆನಂದ್ನನ್ನು 28 ಸಾವಿರ ರೂ. ನಗದು ವಶ ಪಡಿಸಿಕೊಂಡಿದ್ದರು. ಕದ್ದ ಹಣದಲ್ಲಿ 5 ಲಕ್ಷ ರೂ. ಅನ್ನ ತನ್ನ ಅಕ್ಕ ಗಾಯತ್ರಿಗೆ ನೀಡಿರುವುದಾಗಿ ತನಿಖೆ ವೇಳೆ ಆನಂದ್ ಬಾಯ್ಬಿಟ್ಟಿದ್ದ. ಅದರಂತೆ ಆರೋಪಿ ಗಾಯತ್ರಿ ಯನ್ನು ಬಂಧಿಸಿ, 4.50 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋವಾದಲ್ಲಿ ಮೋಜು-ಮಸ್ತಿ: ಆರೋಪಿಯು ಕಳುವು ಮಾಡಿದ ಹಣದ ಪೈಕಿ 5 ಲಕ್ಷ ರೂ. ಅನ್ನು ತನ್ನ ಸಹೋದರಿಗೆ ನೀಡಿದ್ದಾನೆ. ಬಾಕಿ ಹಣವನ್ನು ತನ್ನ ಪತ್ನಿ, ಮಕ್ಕಳನ್ನು ಗೋವಾಕ್ಕೆ ಕರೆದೊಯ್ದು ಮೋಜು-ಮಸ್ತಿ ಮಾಡಿ ವ್ಯಯಿಸಿದ್ದಾನೆ ಎಂದು ಪೊಲೀಸರು ಹೇಳಿದರು.