ಕಾರ್ಕಳ: ಕಳೆದ ಫೆ. 23ರಂದು ನಿಟ್ಟೆ ಗ್ರಾಮದ ಕೈಲಾಜೆ ಪಾದೆಮನೆ ರಾಘವೇಂದ್ರ ಭಟ್ ರವರ ಮನೆಯ ಕಪಾಟಿನ ಬಾಗಿಲು ಮುರಿದು ಆಭರಣ, ನಗದು ಕಳ್ಳತನ ನಡೆಸಿದ ಆರೋಪಿ ಹುಬ್ಬಳ್ಳಿ ಮಾರುತಿ ನಗರದ ಚಂದ್ರಗೌಡ ಪಾಟೀಲ್ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ.
ಐದೂವರೆ ಲಕ್ಷ ರೂ. ಬೆಲೆಬಾಳುವ ಚಿನ್ನದ ಆಭರಣಗಳು ಮತ್ತು ನಗದು 5500 ರೂ.ಗಳ ನ್ನು ಕಳ್ಳತನ ಮಾಡಿದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಕಾರ್ಕಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ಸಿಬಂದಿಗಳ ತಂಡವು ಆರೋಪಿಯನ್ನು ದಸ್ತಗಿರಿ ಮಾಡಿ ಕಳ್ಳತನ ಮಾಡಿದ್ದ 5.50 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಪತ್ತೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಹಾಕೆರವರ ಸೂಚನೆಯಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ, ಕಾರ್ಕಳ ಪೊಲೀಸ್ ಉಪಧೀಕ್ಷಕ ಅರವಿಂದ ಕಲಗಜ್ಜಿ ರವರ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕರಾದ ಟಿ.ಡಿ.ನಾಗರಾಜ್ ಮತ್ತು ವೃತ್ತ ಕಚೇರಿ ಸಿಬಂದಿಗಳಾದ ಗಿರೀಶ್, ಪ್ರಶಾಂತ್, ಅಶೋಕ್, ವಿಶ್ವನಾಥ್, ಗಣೇಶ್ ಮತ್ತು ರುಕ್ಮಿಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.