Advertisement

ಬೀದಿಗೆ ಬಂತು ಯುವ ಕಾಂಗ್ರೆಸ್‌ ಭಿನ್ನಮತ

06:42 PM Feb 07, 2018 | Team Udayavani |

ಚಿತ್ರದುರ್ಗ: ನಿರುದ್ಯೋಗಿಗಳಾಗಿರುವುದಕ್ಕಿಂತ ಪಕೋಡಾ ಮಾರುವುದು ಒಳ್ಳೆಯದು ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಪಕೋಡಾ ಯಾತ್ರೆಗೆ ಸ್ವಪಕ್ಷೀಯರೇ ಅಡ್ಡಿಪಡಿಸಿ ಕೈಕೈ ಮಿಲಾಯಿಸಿದ ಘಟನೆ ಮಂಗಳವಾರ ನಡೆಯಿತು.

Advertisement

ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಧು ಪಾಲೇಗೌಡ ನೇತೃತ್ವದಲ್ಲಿ ಕಾಂಗ್ರೆಸ್‌ ಕಚೇರಿ ಎದುರೇ ಇರುವ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ಶಾಮಿಯಾನಾ ಹಾಕಿ ಪಕೋಡ ಕರಿಯಲು ಹಸಿಮೆಣಸಿಕಾಯಿ, ಕಡಲೆಹಿಟ್ಟು, ಬಾಣಲಿ, ಸ್ಟೌವ್‌ ಸಿದ್ಧಪಡಿಸಿಕೊಳ್ಳಲಾಗಿತ್ತು. ಕಾಂಗ್ರೆಸ್‌ ಕಚೇರಿ ಮುಂದೆ ನಿಂತು ಇದನ್ನು ಗಮನಿಸಿದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ. ಹಸನ್‌ ತಾಹೀರ್‌, ಶೌಕತ್‌, ರಫಿ, ರೆಹಮಾನ್‌ ಅವರು ಏಕಾಏಕಿ ಮಧು ಪಾಲೇಗೌಡ ವಿರುದ್ಧ ತಿರುಗಿ ಬಿದ್ದರು.

ನಮ್ಮ ಗಮನಕ್ಕೆ ತಾರದೆ ಏಕೆ ಪಕೋಡ ಯಾತ್ರೆ ಮಾಡುತ್ತಿದ್ದೀರಿ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು. ಎರಡು ಗುಂಪುಗಳ ಮಧ್ಯೆ ಮಾತಿನ
ಜಟಾಪಟಿ ನಡೆಯಿತು. ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಯಿತು. ಕೆಲವರು ಪಕೋಡಕ್ಕೆ ತಂದಿದ್ದ ಹಸಿಮೆಣಸಿನಕಾಯಿಯನ್ನು ತೂರಾಡಿದರು. ಸದ್ಯ ಬಾಣಲಿಯಲ್ಲಿ ಎಣ್ಣೆ ಕಾದಿರಲಿಲ್ಲ. ಹಾಗಾಗಿ ದೊಡ್ಡ ಅನಾಹುತ ತಪ್ಪಿತು. ಯುವ ಕಾಂಗ್ರೆಸ್‌ ಕಾರ್ಯಕರ್ತರು ಗಲಾಟೆ ನಡೆಸುತ್ತಿರುವುದನ್ನು ನೋಡಿದ ಕೆಲವರು ಉಭಯ ಗುಂಪಿನವರನ್ನು ಸಮಾಧಾನಪಡಿಸಲು ಯತ್ನಿಸಿದರು. ನಗರ ಠಾಣೆ ಇನ್ಸ್‌ಪೆಕ್ಟರ್‌ ಒಡೆಯರ್‌ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ. ಹಸನ್‌ ತಾಹೀರ್‌, ಎಲ್ಲ ಕಾರ್ಯಕ್ರಮಗಳಲ್ಲೂ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಏನೇ ಪ್ರತಿಭಟನೆ ಮಾಡಿದರೂ ಎಲ್ಲರೂ ಸೇರಿ ಮಾಡೋಣ ಎಂದು ನಾಲ್ಕೈದು ಬಾರಿ ಹೇಳಿದ್ದರೂ ಮಧು ಪಾಲೇಗೌಡ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅಮಿತ್‌ ಶಾ ಮತ್ತು ಮೋದಿ  ವಿರುದ್ಧ ಹಮ್ಮಿಕೊಂಡಿರುವ ಪಕೋಡಾ ಪ್ರತಿಭಟನೆ ನಮಗೆ ಗೊತ್ತೇ ಇಲ್ಲ. ಈ ವಿಚಾರವನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಅಧ್ಯಕ್ಷ ಬಸವನಗೌಡ ಬಾದರ್ಲಿ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಯುವ ಕಾಂಗ್ರೆಸ್‌ ಕಾರ್ಯಕರ್ತರು ಬೆಳಿಗ್ಗೆ ಕಿತ್ತಾಡಿಕೊಂಡಿದ್ದರಿಂದ ಪಕೋಡಾ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಸಂಜೆ ವೇಳೆಗೆ
ಉಭಯ ಬಣದವರು ಸೇರಿಕೊಂಡು ಪ್ರತಿಭಟನೆ ನಡೆಸಿದ್ದು ಅಚ್ಚರಿ ಮೂಡಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next