Advertisement
ಹೈದರಾಬಾದ್ನ ರೈಲು ನಿಲ್ದಾಣದಿಂದ ಕೆಳಗಿಳಿದಾಗ ರವಿ ಚನ್ನಣ್ಣನವರ ಬಳಿ ಇದ್ದಿದ್ದು, ಜೀವನಪೂರ್ತಿ ಸಂಪಾದಿಸಿದ ಒಂದು ಕ್ವಿಂಟಾಲ್ನಷ್ಟು ಪುಸ್ತಕವಷ್ಟೇ. ಅತ್ಯಲ್ಪ ಹಣವಿಟ್ಟುಕೊಂಡಿದ್ದ ಅವನಿಗೆ ಅವನೇ ಕೂಲಿ. ಆ ಎಲ್ಲಾ ಪುಸ್ತಕಗಳನ್ನೆತ್ತಿಕೊಂಡು ಸಾಧಿಸುವ ಹಠದೊಂದಿಗೆ ಹೊಟ್ಟೆಗೆ ಏನನ್ನೂ ತಿನ್ನದೇ ಹೈದರಾಬಾದಿನ ಬೀದಿಗಳಲ್ಲಿ ಸುತ್ತುತ್ತಿದ್ದ. ಇದ್ದ ಹಣವನ್ನು ಖರ್ಚು ಮಾಡಿದರೆ ನಾಳಿನ ಪರಿಸ್ಥಿತಿಯನ್ನು ನೆನೆದು ಸುಸ್ತಾಗಿ, ಒಂದು ತಳ್ಳುವ ಗಾಡಿಯ ಚಿಕ್ಕ ಹೋಟೆಲ್ನ ಮುಂದೆ ಕುಳಿತ. ಅದರ ಮಾಲೀಕ “ಯಾಕಪ್ಪಾ! ತುಂಬಾ ಹಸಿದವನಂತೆ ಕಾಣುತ್ತೀಯಾ, ಸ್ವಲ್ಪ ತಿಂಡಿ ಕೊಡ್ತೀನಿ, ತಿಂತೀಯಾ?’ ಎಂದು ಕೇಳಿದಾಗ, “ನೀವು ನನಗೇನಾದರೂ ಕೆಲಸ ಕೊಡಬೇಕು, ಹಾಗಾದರೆ ಮಾತ್ರ ನಿಮ್ಮ ತಿಂಡಿಯನ್ನು ಸ್ವೀಕರಿಸುತ್ತೇನೆ’ ಎಂದಿದ್ದರು ರವಿ. ಕೊಟ್ಟರೆ ಹಿಂದು ಮುಂದು ನೋಡದೆ ತಿಂದು ಹೋಗುವ ಆದೆಷ್ಟೋ ಜನರನ್ನು ನೋಡಿದ್ದ ಮಾಲೀಕನಿಗೆ ಅಚ್ಚರಿಯೋ ಅಚ್ಚರಿ. “ಆಯ್ತಪ್ಪಾ, ನನ್ನ ಕೆಲಸದಲ್ಲಿ ನೀನು ಸಹಾಯ ಮಾಡುವಂತೆ ಈಗ ಊಟಮಾಡು’ ಎಂದರಂತೆ ಅವರು. ಊಟ ಮುಗಿಸಿ, ಆ ಅಂಗಡಿಯವನ ಕೆಲಸವನ್ನೂ ಮುಗಿಸಿ, “ನನ್ನ ಜೀತದ ಆಸ್ತಿಯಂತಿರುವ ಈ ನನ್ನ ಪುಸ್ತಕಗಳನ್ನು ನೋಡಿಕೊಳ್ಳಿ, ನನಗೆ ಸ್ವಲ್ಪ ಕೆಲಸವಿದೆ’ ಎಂದು ಹೇಳಿ ಹೈದರಾಬಾದ್ನ ಎಲ್ಲಾ ತರಬೇತಿ ಕೇಂದ್ರಗಳನ್ನೂ ರವಿ ಸುತ್ತಿದ್ದ.
Related Articles
Advertisement
ಹಸಿದ ಹೊಟ್ಟೆಗೆ ನೀರೇ ಆಹಾರ!ಇಂದು ದೆಹಲಿ, ಹೈದರಾಬಾದ್ಗಳಲ್ಲಿ ಅದೆಷ್ಟೋ ಕೋಟ್ಯಾಧೀಶರು ತಮ್ಮ ಮಕ್ಕಳಿಗೆ ಲಕ್ಷಾಂತರ ರೂ.ಗಳನ್ನು ಕೊಟ್ಟು, ಬ್ಯಾಂಕ್ನಲ್ಲಿ ಡೆಪಾಸಿಟ್ ಮಾಡಿಸಿ ಓದಲು ಕಳಿಸುತ್ತಾರೆ. ಆದರೆ, ಕೆಲವರು ಓದುವುದನ್ನು ಬಿಟ್ಟು ಇನ್ನುಳಿದಿದ್ದನ್ನೆಲ್ಲಾ ಮಾಡುತ್ತಾರೆ. ರವಿ ಮುಂಜಾನೆ ಎದ್ದು ಕಸಗುಡಿಸಿ, ಪೀಠೊಪಕರಣಗಳನ್ನು ಸಿದ್ಧಪಡಿಸಿ ಬರುವ ಎಲ್ಲಾ ಅಭ್ಯರ್ಥಿಗಳ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದ. ಅವನ ಹಸಿದ ಹೊಟ್ಟೆಗೆ ಅದೆಷ್ಟೋ ಬಾರಿ ನೀರೇ ಆಹಾರವಾಗಿತ್ತು. ಎಲ್ಲರೂ ಕುಳಿತು ಪಾಠ ಕೇಳುತ್ತಿದ್ದಾಗ, ಈತ ನಿಂತೇ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ. ಅಲ್ಲಿನ ಅದೆಷ್ಟೋ ವಿದ್ಯಾರ್ಥಿಗಳು ಓದುವ ರೀತಿಯನ್ನು ಬರೆದಿರುವ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ, ಅತ್ಯುತ್ತಮ ಇರುವುದನ್ನು ಅಳವಡಿಸಿಕೊಳ್ಳುತ್ತಿದ್ದ. “ಒಂದು ವರ್ಷದೊಳಗೆ ನಾನಂದುಕೊಂಡಿದ್ದನ್ನು ಮುಗಿಸಬೇಕು. ಕಾರಣ, ನನ್ನಲ್ಲಿ ಸಮಯವೇ ಇಲ್ಲ’ ಎಂದು ಹೇಳುತ್ತಿದ್ದ.