Advertisement

ರಾಜಕೀಯ ಭವಿಷ್ಯಕ್ಕಾಗಿ ಸೋಲಿಗರ ಬಳಕೆ: ಆಕ್ರೋಶ

09:40 PM Jan 08, 2020 | Lakshmi GovindaRaj |

ಹನೂರು: ಕೆಲವು ರಾಜಕೀಯ ವ್ಯಕ್ತಿಗಳು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಆದಿವಾಸಿ ಸೋಲಿಗರನ್ನು ಬಳಕೆ ಮಾಡಿಕೊಂಡು ಸೋಲಿಗರ ಸಂಸ್ಕೃತಿ ಸಂಪ್ರದಾಯ ಹಾಳುಮಾಡುತ್ತಿರುವುದರ ಜೊತೆಗೆ ಅರಣ್ಯ ಕಾಯ್ದೆಗಳನ್ನು ಉಲ್ಲಂಸಿದ್ದಾರೆ ಎಂದು ಸೋಲಿಗ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸಭೆ ಸೇರಿದ ಸೋಲಿಗ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಹೊಸ ವರ್ಷ ಆಚರಣೆಯ ಹೆಸರಿನಲ್ಲಿ ಕೆಲ ರಾಜಕೀಯ ವ್ಯಕ್ತಿಗಳು ಆದಿವಾಸಿ ಸೋಲಿಗರು ವಾಸಿಸುವ ಹೊಸಪೋಡು ಗ್ರಾಮದಲ್ಲಿ ಡಿ.31ರ ರಾತ್ರಿ ಬಾಡೂಟ, ಮದ್ಯಪಾನ, ಧ್ವನಿವರ್ಧಕಗಳ ಬಳಕೆ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳ ಮುಖಂಡರನ್ನೆಲ್ಲಾ ಸೇರಿಸಿ ಭರ್ಜರಿ ಪಾರ್ಟಿ ನಡೆಸಲಾಗಿದೆ ಎಂದು ಆರೋಪಿಸಿದರು.

ಸೋಲಿಗರ ಸಂಪ್ರದಾಯಕ್ಕೆ ಧಕ್ಕೆ: ಇದೆಲ್ಲಾ ನಮ್ಮ ಸೋಲಿಗ ಸಂಸ್ಕೃತಿ ಸಂಪ್ರದಾಯಗಳಿಗೆ ವಿರುದ್ಧವಾಗಿದ್ದು ಹೊಸ ವರ್ಷ ಆಚರಣೆ, ವಿವಾಹ ವಾರ್ಷಿಕೋತ್ಸವ ಆಚರಣೆ ಸೋಲಿಗರ ಸಂಪ್ರದಾಯದಲ್ಲಿ ಇಲ್ಲ. ಸೋಲಿಗರು ಸನಾತನ ಕಾಲಂದಿಂದಲೂ ಸರಳವಾದ ಮತ್ತು ಪರಿಸರಕ್ಕೆ ಪೂರಕವಾದ ಆಚರಣೆಗಳನ್ನಷ್ಟೇ ಮಾಡಿಕೊಂಡು ಬರುತ್ತಿದ್ದು ಸೋಲಿಗರ ಸಂಸ್ಕೃತಿ ಸಂಪ್ರದಾಯ ಇತರರಿಗೆ ಮಾದರಿಯಾಗಿದೆ ಎಂದರು.

ಅರಣ್ಯದಲ್ಲೇ ಪಾರ್ಟಿ: ಕೆಲ ರಾಜಕೀಯ ಪುಡಾರಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಪೋಡುಗಳಿಗೆ ನುಗ್ಗಿ ಅಲ್ಲಿನ ಯುವಕರು ಮತ್ತು ಗ್ರಾಮಸ್ಥರಿಗೆ ಇಲ್ಲದ ಆಮಿಷವೊಡ್ಡಿ ಬಾಡೂಟ ಏರ್ಪಡಿಸಿ ಅವರನ್ನು ಮದ್ಯಪಾನಕ್ಕೆ ದಾಸರನ್ನಾಗಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ: ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಡುವ ಪಿ.ಜಿ.ಪಾಳ್ಯ ಮತ್ತು ಹುತ್ತೂರು ಗ್ರಾಪಂ ವ್ಯಾಪ್ತಿಯ ಸೋಲಿಗರ ಪೋಡುಗಳಲ್ಲಿ ಯಾವುದೇ ಕಾರ್ಯಕ್ರಮ ನಡೆಸಬೇಕಾದರೆ ಅರಣ್ಯ ಇಲಾಖೆ ಅನುಮತಿ, ಪೊಲೀಸ್‌ ಇಲಾಖೆ ಅನುಮತಿ ಮತ್ತು ಸಂಬಂಧಪಟ್ಟ ಗ್ರಾಮದ ಅರಣ್ಯ ಹಕ್ಕು ಸಮಿತಿ ಅನುಮತಿ ಪಡೆಯಬೇಕು.

Advertisement

ಅಲ್ಲದೆ ಅರಣ್ಯ ಇಲಾಖಾ ಅಧಿಕಾರಿಗಳು ಸಂಜೆಯಾಗುತ್ತಲೇ ಅರಣ್ಯ ಪ್ರವೇಶಿಸಬೇಕಾದರೆ ಸ್ಥಳೀಯರಿಗೆ ಮಾತ್ರ ಅವಕಾಶ ನೀಡಿ, ಬೇರೆಯವರಿಗೆ ಪ್ರವೇಶ ನಿರ್ಬಂಧಿಸುತ್ತಾರೆ. ಆದರೆ ಡಿ.31ರ ದಿನ ಮಾತ್ರ ವಿವಿಧ ಗ್ರಾಮಗಳ ಮುಖಂಡರ ವಾಹನಗಳು, ಅವರಿಗೆ ಅಗತ್ಯವಾದ ಮದ್ಯಪಾನ ಪೂರೈಕೆಯಂಥ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದ್ದಾದರೂ ಹೇಗೆ ಎಂದು ಕಿಡಿಕಾರಿದ್ದಾರೆ.

ಸಂಘದಿಂದ ಪ್ರತಿಭಟನೆ ಎಚ್ಚರಿಕೆ: ಪಿ.ಜಿ.ಪಾಳ್ಯ ಮತ್ತು ಹುತ್ತೂರು ಗ್ರಾಪಂ ವ್ಯಾಪ್ತಿಯ ಸೋಲಿಗರ ಪೋಡಿನಲ್ಲಿ ಆಗಿಂದಾಗ್ಗೆ ಈ ರೀತಿಯ ಘಟನೆಗಳು ಮರುಕಳಿಸುತ್ತಿದ್ದು ಘಟನೆಯಿಂದಾಗಿ ಸೋಲಿಗ ಮಹಿಳೆಯರು ಭಯಭೀತರಾಗಿದ್ದಾರೆ. ಇವರಿಗೆ ಮೋಜು ಮಸ್ತಿಗೆ ಬೇರೆ ಸ್ಥಳಾವಕಾಶಗಳು ಸಿಗುತ್ತಿಲ್ಲವೆ. ಇವರ ದುಶ್ಚಟ, ದುರಾಭ್ಯಾಸಗಳಿಗೆ ಸೋಲಿಗರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ದೂರಿದರು.

ಡಿ.31ರ ರಾತ್ರಿ ಜರುಗಿದ ಪಾರ್ಟಿಯಿಂದಾಗಿ ಪೋಡಿನಲ್ಲಿ ಗ್ರಾಮಸ್ಥರು ಸಮರ್ಪಕವಾಗಿ ನಿದ್ರಿಸಲು ಸಾಧ್ಯವಾಗಿಲ್ಲ, ಅತಿ ಹೆಚ್ಚು ಶಬ್ದ ಹೊರಸೂಸುವ ಧ್ವನಿವರ್ಧಕ ಹಾಕಿದ್ದರಿಂದ ವನ್ಯಜೀವಿಗಳಿಗೂ ತೊಂದರೆಯಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮತ್ತು ಅರಣ್ಯ ಇಲಾಖಾ ಅಧಿಕಾರಿಗಳು ಘಟನೆ ಬಗ್ಗೆ ಪರಿಶೀಲನೆ ನಡೆಸಿ ಎಸ್‌ಸಿ,

ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಘಟನೆಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮವಹಿಸಬೇಕು ಮತ್ತು ಘಟನೆಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಗ್ರಾಪಂ ಮುಂಭಾಗ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ದೊಡ್ಡಯ್ಯ ಎಚ್ಚರಿಕೆ ನೀಡಿದ್ದಾರೆ.

ಸೋಲಿಗ ಅಭಿವೃದ್ಧಿ ಸಂಘದ ಉಪಾಧ್ಯಕ್ಷೆ ಮುನಿಮಾದಮ್ಮ, ಸಂಘಟನಾ ಕಾರ್ಯದರ್ಶಿ ರಂಗೇಗೌಡ, ಕಾರ್ಯದರ್ಶಿ ಮುತ್ತಯ್ಯ ಹಾಗೂ ಬಸವರಾಜು, ಸುರೇಶ, ಗಿರೀಶ, ಭದ್ರಪ್ಪ, ಕೇತೆಗೌಡ, ಪೆರಿಸ್ವಾಮಿ ಸೇರಿದಂತೆ ಹೆಚ್ಚಿನ ಸಂಖ್ಯೆಯ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next