ಶಹಾಬಾದ: ನಗರದ ವಾರ್ಡ್ ನಂ. 16ರ ಅಶೋಕ ನಗರದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯ ಜಾಲಿ ಕಂಟಿ ಗಿಡಗಳು ಬೆಳೆದು ಶೌಚಾಲಯ ಕಾಣದಂತಾಗಿದೆ. ಇದರಿಂದ ಇಲ್ಲಿನ ಜನರ ಉಪಯೋಗಕ್ಕೆ ಬಾರದಂತಾಗಿದೆ.
ನಗರಸಭೆಯ ಎಸ್ಎಫ್ಸಿ ಅನುದಾನ (ಮುಕ್ತನಿಧಿ) 2007-08ರಲ್ಲಿ ನಿರ್ಮಾಣ ಮಾಡಿದ ಸಾರ್ವಜನಿಕ ಶೌಚಾಲಯದ ಸುತ್ತಲೂ ಕಟ್ಟಡದೆತ್ತರಕ್ಕೆ ಜಾಲಿಗಿಡಗಳು ಬೆಳೆದಿದೆ. ಇದರಿಂದ ಶೌಚಾಲಯದ ಒಳಗಡೆ ಹೋಗಲಾರದ ಪರಿಸ್ಥಿತಿ ಮೂಡಿದೆ. ಶೌಚಾಲಯದ ಗೋಡೆಗಳು ಬಿರುಕು ಬಿಟ್ಟಿವೆ. ಹಲವು ವರ್ಷಗಳಿಂದ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೆ ಎನ್ನುತ್ತಿಲ್ಲ ಎಂಬುವುದು ಸ್ಥಳೀಯ ಜನರಗೋಳಾಗಿದೆ.
ಶೌಚಾಲಯ ಸಂಪೂರ್ಣ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ಹಂದಿಗಳ ವಾಸಸ್ಥಾನವಾಗಿದೆ. ಈಗಾಗಲೇ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಇಲ್ಲಿನ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವಿಲ್ಲಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಅಲ್ಲದೇ ಸಾರ್ವಜನಿಕ ಶೌಚಾಲಯ ನಿರ್ಮಿಸಿ ನೀರಿನ ವ್ಯವಸ್ಥೆಯನ್ನು ಮಾಡಿಲ್ಲ. ಕೂಡಲೇ ಅಧಿಕಾರಿಗಳು ಶೌಚಾಲಯ ಸ್ವಚ್ಚಗೊಳಿಸಬೇಕು. ನೀರಿನ ವ್ಯವಸ್ಥೆ ಮಾಡಬೇಕು. ಬಿರುಕು ಬಿಟ್ಟಿರುವ ಗೋಡೆಗಳನ್ನು ಸರಿಪಡಿಸಬೇಕು. ಅಲ್ಲದೇ ಸಂಪೂರ್ಣ ನವೀಕರಣಗೊಳಿಸಿ ಇಲ್ಲಿನ ಜನರಿಗೆ ಉಪಯೋಗವಾಗುವಂತೆ ಅನುಕೂಲ ಮಾಡಿಕೊಡಬೇಕೆಂದು ನಗರಸಭೆ ಸದಸ್ಯ ಅವಿನಾಶ ಕಂಬಾನೂರ ಆಗ್ರಹಿಸಿದ್ದಾರೆ.