Advertisement

ಹುಟ್ಟು ಹೋರಾಟಗಾರಗೆ ಮೂರನೇ ಬಾರಿ ಸಿಎಂ ಪಟ್ಟ

04:07 PM May 18, 2018 | |

ಶಿವಮೊಗ್ಗ: ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಕೊನೆಗೂ ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಶಿಕಾರಿಪುರದಲ್ಲಿ ಆರಂಭಗೊಂಡ ಹೋರಾಟದ ಬದುಕು ಇವರನ್ನು ವಿಧಾನಸೌಧದ
ಮೂರನೇ ಮಹಡಿಗೆ ತಂದು ಕೂರಿಸಿದೆ. ಸುಮಾರು 41 ವರ್ಷಗಳ ಸುದೀರ್ಘ‌ ಕಾಲದ ರಾಜಕೀಯ ಜೀವನದಲ್ಲಿ
ಹೋರಾಟವನ್ನೇ ಉಸಿರಾಗಿಸಿಕೊಂಡ ಅಪರೂಪದ ರಾಜಕಾರಣಿ.

Advertisement

ಹೋರಾಟಗಾರರೆಂದರೆ ಹೀಗೆ.. ಅದು ಯಡಿಯೂರಪ್ಪನವರ ಹಾಗೆ…ಎಂಬ ಮಾತು ವಿರೋಧಿಗಳ ಬಾಯಲ್ಲಿಯೂ
ಬರುವಂತೆ ಹೋರಾಟ ಮಾಡಿಯೇ ಎಲ್ಲವನ್ನೂ ದಕ್ಕಿಸಿಕೊಂಡವರು. ದಣಿವು ಎಂಬುದಕ್ಕೆ ಅರ್ಥವೇ ಗೊತ್ತಿಲ್ಲದಂತೆ ರಾಜ್ಯ ಸುತ್ತಿ ಪಕ್ಷ ಕಟ್ಟಿದವರು. 

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರದ ಬಾಗಿಲು ತೆರೆದುಕೊಟ್ಟವರು. ಜೀತ ಪದ್ಧತಿ ವಿರುದ್ಧದ ಹೋರಾಟ ಇವರ
ರಾಜಕೀಯ ಬದುಕಿಗೆ ದೊಡ್ಡ ತಿರುವು ನೀಡಿತು. 1981-82ರಲ್ಲಿ ಶಿಕಾರಿಪುರ ತಾಪಂ ಎದುರು ಜೀತ ವಿಮುಕ್ತರಿಗೆ ಪುನರ್‌ ವಸತಿ ಕಲ್ಪಿಸಲು ಒತ್ತಾಯಿಸಿ ಹಗಲುರಾತ್ರಿ ಧರಣಿ ನಡೆಸಿದರು. ಒಂದು ತಿಂಗಳು ಸತತವಾಗಿ ನಡೆದ ಈ ಧರಣಿ ರಾಜ್ಯದಲ್ಲಿಯೂ ಅವರಿಗೆ ಹೆಸರು ತಂದುಕೊಟ್ಟಿತು. 

ಶಿಕಾರಿಪುರದಿಂದ ಶಿವಮೊಗ್ಗದವರೆಗೆ ಎರಡು ಸಾವಿರ ಜನ ಜೀತ ವಿಮುಕ್ತರನ್ನು ಸೇರಿಸಿಕೊಂಡು ಪಾದಯಾತ್ರೆ ನಡೆಸಿದರು. ಇವರ ಹೋರಾಟಕ್ಕೆ ಜಿಲ್ಲಾಡಳಿತ, ಸರ್ಕಾರ ಮಣಿಯಿತು. ಈ ಜೀತ ವಿಮುಕ್ತರಿಗೆ ಪುನರ್‌ವಸತಿ ಕಲ್ಪಿಸಿತು.
 
ಅಲ್ಲಿಂದ ಮುಂದಡಿಯಿಟ್ಟು ಯಡಿಯೂರಪ್ಪ ಮತ್ತೆ ತಿರುಗಿ ನೋಡಲೇ ಇಲ್ಲ. ಶಿಕಾರಿಪುರವನ್ನು ತಮ್ಮ ಕಾರ್ಯಕ್ಷೇತ್ರದ ಭೂಮಿಕೆಯನ್ನಾಗಿಸಿ ರಾಜಕೀಯದಲ್ಲಿ ಬೆಳೆಯತೊಡಗಿದರು. ಮೂಗಿನ ತುದಿಯಲ್ಲಿಯೇ ಕೋಪ ಇರಿಸಿಕೊಂಡೇ ಜನರ
ಪ್ರೀತಿ, ವಿಶ್ವಾಸ ಗಳಿಸಿದ್ದು ಕೂಡ ಇವರ ವಿಶೇಷತೆ.  ಶಿಕಾರಿಪುರ ಪುರಸಭೆ ಸದಸ್ಯರಾಗಿದ್ದ ಅವಧಿಯಲ್ಲಿ ಜನರ ಕೆಲಸ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಗುಮಾಸ್ತನನ್ನು ತರಾಟೆಗೆ ತೆಗೆದುಕೊಂಡ ಪರಿ ಅಧಿಕಾರಿಗಳಲ್ಲಿ ಯಡಿಯೂರಪ್ಪ ಎಂದರೆ ಭಯ ಹುಟ್ಟಲು ಕಾರಣವಾಗಿತ್ತು. ನಂತರದ ದಶಕದಲ್ಲಿ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತು ಜನರ ಬಾಯಲ್ಲಿ ಹರಿದಾಡಿತ್ತು.

1977ರಲ್ಲಿ ಪುರಸಭೆ ಅಧ್ಯಕ್ಷರಾಗಿ, 1980ರಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ಇವರ ರಾಜಕೀಯ ಜೀವನಕ್ಕೆ ಇನ್ನೊಂದು ಮಹತ್ತರ ತಿರುವು ನೀಡಿದ್ದು 1983ರ ವಿಧಾನಸಭಾ ಚುನಾವಣೆ. ಚೊಚ್ಚಲ ಸ್ಪರ್ಧೆಯಲ್ಲಿಯೇ
ವಿಧಾನಸಭೆಗೆ ಆಯ್ಕೆಯಾದರು. ಆಗ ಸಚಿವರಾಗಿದ್ದ ಯಂಕಟಪ್ಪ ಅವರನ್ನು ಸೋಲಿಸಿದ್ದು ಇಡೀ ರಾಜ್ಯ ಗುರುತಿಸುವಂತೆ ಮಾಡಿತು. ಶಿಕಾರಿಪುರದ ಸಮಸ್ಯೆಯನ್ನು ವಿಧಾನಸೌಧದಲ್ಲಿ ಸಮರ್ಥವಾಗಿ ಎತ್ತುವ ಮೂಲಕ ಇತರೆ ನಾಯಕರ ಗಮನ ಸೆಳೆದರು.

Advertisement

ಬಗರ್‌ ಹುಕುಂ ಸಾಗುವಳಿದಾರರ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಲು ಮುಂದಾದಾಗ ಯಡಿಯೂರಪ್ಪ ವಿಧಾನಸಭೆಯಲ್ಲಿ ಧರಣಿ ಕುಳಿತರು. ಮಸೂದೆಯನ್ನು ಕೈಬಿಡುವಂತೆ ನಡೆಸಿದ ಇವರ ಹೋರಾಟಕ್ಕೆ ಸರ್ಕಾರ ಮಣಿದು ಮಸೂದೆ ಹಿಂತೆಗೆದುಕೊಂಡಿದ್ದು ಇತಿಹಾಸ. ನಂತರ 1985ರಲ್ಲಿ ಶಾಸಕರಾಗಿ ಪುನಾರಾಯ್ಕೆಯಾದರು.

1985ರಲ್ಲಿ ಶಿಕಾರಿಪುರ ತಾಲೂಕಿನಲ್ಲಿ ಭೀಕರ ಬರ ಎದುರಾದಾಗ ಎಲ್ಲ ಊರುಗಳಿಗೆ ಸೈಕಲ್‌ನಲ್ಲಿಯೇ ಸುತ್ತಿದರು. ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಬಸವನಬಾಗೇವಾಡಿಯಿಂದ ಬಸವಕಲ್ಯಾಣದವರೆಗೆ, ಬಳಿಕ ಬನವಾಸಿಯಿಂದ ಬೆಂಗಳೂರಿನವರೆಗೆ ರಥಯಾತ್ರೆ ನಡೆಸಿ ಸರ್ಕಾರದ ಗಮನ ಸೆಳೆದರು.

1998ರಲ್ಲಿ ಕಾವೇರಿ ಸಮಸ್ಯೆ ಉದ್ಭವವಾದಾಗ ಹೋರಾಟ, 2002ರಲ್ಲಿ ಬಗರ್‌ ಹುಕುಂ ಸಾಗುವಳಿ ಮಾಡುತ್ತಿದ್ದ ರೈತರನ್ನು ಸರ್ಕಾರ ಒಕ್ಕಲೆಬ್ಬಿಸಲು ಸರ್ಕಾರ ಮುಂದಾದಾಗ ಬಗರ್‌ ಹುಕುಂ ಸಾಗುವಳಿ ರೈತರ ಪರವಾಗಿ ಶಿಕಾರಿಪುರದಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ನಡೆಸಿ ಶಿವಮೊಗ್ಗದಲ್ಲಿ ಹಗಲುರಾತ್ರಿ ಧರಣಿ ನಡೆಸಿದರು. ರೈತರಿಗೆ ನಿರಂತರ ವಿದ್ಯುತ್‌ ಪೂರೈಕೆಗಾಗಿ ಬೆಂಗಳೂರಿನಲ್ಲಿ ಒಂಭತ್ತು ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದರು. ಸಿಇಟಿ ಗೊಂದಲ ನಿರ್ಮಾಣದ ವಿರುದ್ಧ ಹೋರಾಟ ನಡೆಸಿ ಯಶಸ್ವಿಯಾದರು. ಬಳಿಕ ಇಡೀ ದೇಶವನ್ನು ಬೆಚ್ಚಿಬೀಳಿಸಿದ ನಕಲಿ ಛಾಪಾ ಕಾಗದದ ಪ್ರಕರಣವನ್ನು ಎಳೆ ಎಳೆಯಾಗಿ ಹೊರ ತಂದವರು ಯಡಿಯೂರಪ್ಪನವರು. ಇವರ ಹೋರಾಟದ ವೈಖರಿಗೆ ಆಡಳಿತ ಪಕ್ಷ ಬೆಚ್ಚಿ ಬಿದ್ದಿತ್ತು. ಕೊನೆಗೆ ರಾಷ್ಟ್ರೀಯ ಸುದ್ದಿಯಾಯಿತು. ಕೂಲಿಗಾಗಿ ಕಾಳು ಯೋಜನೆಯ ಭ್ರಷ್ಟಾಚಾರ ಪ್ರಕರಣವನ್ನು ಹೊರ ಎಳೆದದ್ದು ಕೂಡ ಇದೇ ಯಡಿಯೂರಪ್ಪ. 

ಪಕ್ಷ ಸಂಘಟನೆಯಲ್ಲಿಯೂ ಎತ್ತಿದ ಕೈ: ಜನಸಂಘ ಭಾರತೀಯ ಜನತಾಪಾರ್ಟಿಯಾಗಿ ರೂಪಾಂತರಗೊಂಡಿದ್ದು, ಮೇಲ್ಮಟ್ಟದಲ್ಲಿ ಮಾತ್ರ ಇದ್ದ ಪಕ್ಷವನ್ನು ತಳಮಟ್ಟದವರೆಗೂ ಬೆಳೆಸಿದ್ದು ಎಲ್ಲವೂ ಈಗ ಇತಿಹಾಸ. ಈ ಇತಿಹಾಸದ ಪುಟಗಳಲ್ಲಿ ಯಡಿಯೂರಪ್ಪನವರ ಹೆಸರು ಢಾಳಾಗಿ ಕಾಣುತ್ತದೆ. ಕಳೆದ ಒಂದೂವರೆ ದಶಕದಿಂದ ಕರ್ನಾಟಕದ
ಮಟ್ಟಿಗೆ ಬಿಜೆಪಿ ಎಂದರೆ ಅದು ಯಡಿಯೂರಪ್ಪ.

ಮಂಡ್ಯದಲ್ಲಿ ಜನಿಸಿ, ವಿದ್ಯಾಭ್ಯಾಸ ಪೂರೈಸಿ ಸರ್ಕಾರಿ ಗುಮಾಸ್ತರಾಗಿ ಸೇವೆಗೆ ಸೇರಿದ್ದ ಅವರು ಬಳಿಕ ಸಂಘ ಪರಿವಾರದ ಕೆಲಸಕ್ಕಾಗಿ 1965ರಲ್ಲಿ ಶಿಕಾರಿಪುರಕ್ಕೆ ಬಂದರು. ವೀರಭದ್ರ ಶಾಸ್ತ್ರೀಗಳ ಅಕ್ಕಿ ಗಿರಣಿಯಲ್ಲಿ ಗುಮಾಸ್ತರಾಗಿ ಸೇರಿದರು. ಬಳಿಕ ಶಾಸ್ತ್ರೀಗಳ ಪುತ್ರಿ ಮೈತ್ರಾದೇವಿಯವರನ್ನು ವಿವಾಹವಾದರು. ನಿಧಾನವಾಗಿ ರಾಜಕಾರಣ ಆರಂಭಿಸಿದ ಅವರು 1975ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಶಿಕಾರಿಪುರ ಸಭೆಯ ಸದಸ್ಯರಾದರು.

1988ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. 1994ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾದರು. 2000ರಲ್ಲಿ ಮತ್ತೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ. 2006ರಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾದರು. ಜೆಡಿಎಸ್‌ ಜೊತೆಗೂಡಿ ಸರ್ಕಾರ ರಚಿಸಿ ಅದರಲ್ಲಿ ಉಪ ಮುಖ್ಯಮಂತ್ರಿಯಾದರು. 2008ರಲ್ಲಿ ಬಿಜೆಪಿ ಪ್ರಥಮ ಬಾರಿಗೆ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಕಾರಣವಾದರು. ಆಡಿದ್ದನ್ನು ಮಾಡುವ, ಮಾಡಿದ್ದನ್ನು ದಕ್ಕಿಸಿಕೊಳ್ಳುವ ಜಾಯಮಾನದವರು. ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ವಂತ ಜಿಲ್ಲೆ ಶಿವಮೊಗ್ಗವನ್ನು ಅಭಿವೃದ್ಧಿಪಡಿಸಿದ ರೀತಿಗೆ ಇಡೀ ರಾಜ್ಯ ಬೆರಗಾಗಿ ನಿಂತಿತ್ತು. 

ಆದರೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಲು ಸಾಲು ಹಗರಣಗಳು ಇವರನ್ನು ಆವರಿಸಿಕೊಂಡಿತು. ಒಂದರ ಮೇಲೊಂದರಂತೆ ಇವರ ವಿರುದ್ಧ ಪ್ರಕರಣಗಳು ದಾಖಲಾದವು. ಗಣಿ ಹಗರಣದಲ್ಲಿ ಲೋಕಾಯುಕ್ತ ವರದಿಯಲ್ಲಿ
ಇವರ ಹೆಸರು ಕಾಣಿಸಿಕೊಂಡ ಪರಿಣಾಮ ಮುಖ್ಯಮಂತ್ರಿಯಾಗಿದ್ದಾಗಲೇ ಜೈಲು ಸೇರುವ ಅನಿವಾರ್ಯ ಸ್ಥಿತಿ ಎದುರಾಗಿತ್ತು. ಇದೇ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಬೇಕಾಯಿತು

 ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next