Advertisement
ಮಳೆಗಾಲ ಸಮೀಪಿಸುವಾಗ ಅತಿವೃಷ್ಟಿ-ಅನಾವೃಷ್ಟಿಗಳ ವರದಿಗಳು ಸಹಜ. ಎಂದಿನಂತೆಯೇ ಕಳೆದ ವರ್ಷದ ಆರಂಭದಲ್ಲಿ ನೀರಿಲ್ಲದೆ ರೈತನ ಹಾಹಾಕಾರ ಎಂಬ ವರದಿಗಳು ಬಂದವು. ಮಳೆಯ ಒಂದು ಹನಿ ಬಿದ್ದಾಕ್ಷಣ ಭೂಮಿ ತಂಪು, ರೈತನ ಮುಖದಲ್ಲಿ ನಗು ಎಂಬಂಥ ವರದಿಗಳು ಪ್ರಕಟವಾದವು. ಅನಂತರ ಮಳೆಯ ಪ್ರಕೋಪಕ್ಕೆ ಪ್ರವಾಹ, ಪ್ರವಾಹದ ಪರಿಣಾಮವಾಗಿ ಕುಸಿದ ನೆಲ-ಮನೆ, ನಾಶವಾದ ಆಸ್ತಿ-ಪಾಸ್ತಿ, ಕಳೆದು ಹೋದ ಜೀವಗಳು, ಉಳಿದ ನೊಂದವರ, ಸಂತ್ರಸ್ತರ ಗೋಳು, ಪರಿಹಾರಕ್ಕಾಗಿ ಬೇಡಿಕೆ-ನೀಡಿಕೆ ಇವುಗಳ ಸಚಿತ್ರ ವರದಿಗಳು ನಾಡಿನೆಲ್ಲೆಡೆ-ದೇಶದೆಲ್ಲೆಡೆ ಪ್ರಸಾರವಾಗಿ ಕೊಡಗು ತನ್ನದಲ್ಲದ ಕಾರಣಗಳಿಗಾಗಿ ಪ್ರಸಿದ್ಧಿಯನ್ನು ಪಡೆಯಿತು. ಸರಕಾರ ಏನು ಮಾಡುತ್ತಿದೆ? ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗಳು; ಪರಿಹಾರ ನೀಡುವ ಸ್ವಯಂಸೇವಾ ಮತ್ತು ಸ್ವಯಂಘೋಷಿತ ವ್ಯಕ್ತಿ ಮತ್ತು ಸಂಸ್ಥೆಗಳು ಮಾಡುವ/ನೀಡುವ ಸೇವೆಯ ಅಬ್ಬರದ ಪ್ರಚಾರಗಳು; ಅಸಹಾಯಕ ಮತ್ತು ಬೇಡುವ ಕೈಗಳನ್ನು ರಾರಾಜಿಸುವ ಫೋಟೋಗಳು; ಭೇಟಿ ನೀಡುವ ಜನನಾಯಕರು ಮತ್ತು ಅಧಿಕಾರಿಗಳು ಶೂನ್ಯದಿಂದಲೇ ಎಲ್ಲವನ್ನೂ ಸೃಷ್ಟಿಸುವ ಹಮ್ಮಿನ ಭರವಸೆಗಳು; ನೆರೆ ಹಾವಳಿಯ ಕುರಿತೂ ಕವಿತೆ ಬರೆದು ಓದಿ ಚಪ್ಪಾಳೆ ಗಿಟ್ಟಿಸುವ ಕವಿಗಳು (!); ಕೆಲವು ದಿನ-ವಾರಗಳಲ್ಲಿ ಇವೆಲ್ಲವನ್ನೂ ಮರೆತು ತಮ್ಮ ತಮ್ಮ ಪಾಡಿಗೆ ಪ್ರವಾಸಿಗರನ್ನು ಆಕರ್ಷಿಸುವ ವಿವರಣೆಗಳು; ಏನೂ ಆಗಲ್ಲ ಬಿಡಿ, ಮಾಧ್ಯಮಗಳಷ್ಟೇ ಈ ದುರಂತವನ್ನು ಹಿಗ್ಗಿಸಿವೆ ಎಂಬ ಹೋಂಸ್ಟೇ ಮತ್ತು ಹೊಟೇಲುಗಳ ಹೇಳಿಕೆಗಳು ಕಳೆದ ಒಂದು ವರ್ಷಗಳಲ್ಲಿ ಬಸಿರೊಳಗೆ ಸಮಸ್ಯೆಯ ಬ್ರಹ್ಮಾಂಡವನ್ನು ತುಂಬಿಕೊಂಡ ಕೊಡಗಿನ ಬದುಕು.
ಜಿಲ್ಲಾಡಳಿತವು ಅನೇಕ ನಿವಾಸಿಗಳನ್ನು ಮನೆಯನ್ನು ಬಿಟ್ಟು ಬೇರೆ ಕಡೆಗೆ ವಲಸೆಹೋಗಲು ಹೇಳಿದೆ; ತಪ್ಪಿದರೆ ತಾನು ಹೊಣೆಯಲ್ಲವೆಂಬ ಹೊಣೆಗೇಡಿತನದ ಜಾರು ಹೇಳಿಕೆಯನ್ನೂ ನೀಡಿದೆ. ಮನೆ ಬಿಟ್ಟು ಹೋಗಬೇಕೆಂದವರು ಹೋಗುವುದಾದರೂ ಎಲ್ಲಿಗೆ? ಅವರಿಗೆ ತಾತ್ಕಾಲಿಕ ನಿವಾಸಗಳು ಎಲ್ಲಿವೆ? ಬಾಡಿಗೆ ಮನೆ ಹುಡುಕೋಣವೆಂದರೆ ಇರುವ ಎಲ್ಲಾ ಸ್ಥಳಾವಕಾಶಗಳು ಹೋಮ್ ಸ್ಟೇಗಳಿಂದ ತುಂಬಿಹೋಗಿ ಬಾಡಿಗೆ ಗಗನಕ್ಕೇರಿದೆ. ಒಂದು ಕೋಣೆಗೂ ರೂ. 6,000ದಿಂದ ರೂ. 10,000ದ ವರೆಗೆ ಬಾಡಿಗೆ ಪ್ರಚಲಿತವಿದೆ. ಅತಿಥಿ ಸತ್ಕಾರದ ಉದ್ಯಮದಲ್ಲಿ ಮನೆಯವರ ಕಷ್ಟ ಯಾರಿಗೂ ಅರ್ಥವಾಗುವುದಿಲ್ಲ.
Related Articles
Advertisement
ಈ ಬಾರಿ ಮಳೆ ಬಂದರೆ ಇನ್ನೆಷ್ಟು ಮನೆಗಳು, ಆಸ್ತಿ-ಪಾಸ್ತಿ, ಜೀವ ಹಾನಿಯಾಗುತ್ತದೆಯೋ ಗೊತ್ತಿಲ್ಲ. ಇನ್ನೂ ದೊಡ್ಡ ಮಳೆ ಆರಂಭವಾಗ ದಿರುವುದನ್ನು ಮಿಶ್ರ ಪ್ರತಿಕ್ರಿಯೆಯೊಂದಿಗೆ ಸ್ವೀಕರಿಸಬೇಕು. ಬಂದರೆ ಅಪಾಯ, ಬಾರದಿದ್ದರೆ ಮುಂದಿನ ವರ್ಷಕ್ಕೆ ಅನ್ನಕ್ಕೆ ಗತಿಯಿಲ್ಲ ಎಂಬಂತಿದೆ.
ಕೊಡಗಿನ ಮುಖಾಂತರ ಹಾದುಹೋಗುವ ಮುಖ್ಯ ರಾಷ್ಟ್ರೀಯ-ರಾಜ್ಯ ಹೆದ್ದಾರಿಗಳು, ಗ್ರಾಮೀಣ ರಸ್ತೆಗಳು ಕುಸಿದುಹೋಗಿ (ಇನ್ನು ಕೆಲವೆಡೆ ಕೊಚ್ಚಿಹೋಗಿ) ಕೊಡಗಿಗೆ ಹೊರ ಜಿಲ್ಲೆಗಳೊಂದಿಗೆ ತಿಂಗಳಾನುಗಟ್ಟಲೆ ಸಂಪರ್ಕ ಕಡಿದೇ ಹೋಗಿತ್ತು. ಇದನ್ನು ನಿಭಾಯಿಸಲು ಆಡಳಿತವು ತೇಪೆಹಚ್ಚುವ ಕೆಲಸ ಮಾಡಿದೆಯೇ ಹೊರತು ಭರವಸೆಯ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈ ಬಾರಿ ಎನ್ಎಚ್ 275 (ಮಡಿಕೇರಿ-ಸಂಪಾಜೆ ಭಾಗ) ರಸ್ತೆ ಕುಸಿದರೆ ಕೊಡಗಿನ ವ್ಯವಹಾರ ಸಮಾಧಿಯಾದಂತೆಯೇ. ಎಮ್ಸ್ಯಾಂಡ್ ತುಂಬಿದ ಚೀಲಗಳು ಮಳೆಯನ್ನು ತಾಳಿಕೊಂಡರೆ ಸರಿ; ಇಲ್ಲವಾದರೆ ಅಧೋಗತಿ. ಮಡಿಕೇರಿ-ಸೋಮವಾರಪೇಟೆ ರಸ್ತೆ ಕಳೆದ ಬಾರಿಯಂತೆ ಕುಸಿದರೆ ಏನಾಗಬಹುದೆಂದು ಊಹಿಸಲೂ ಸಾಧ್ಯವಿಲ್ಲ.
ಕೊಡಗಿನಲ್ಲಿ ಆದ ಮತ್ತು ಆಗಬಹುದಾದ ನಷ್ಟಗಳು ಕೇವಲ ಸಂತ್ರಸ್ತರದ್ದಷ್ಟೇ ಅಲ್ಲ; ಅವರ ವ್ಯಾವಹಾರಿಕ ಬದುಕಿನಲ್ಲಿ ಪಾಲುದಾರರಾದ ಎಲ್ಲ ವ್ಯಾಪಾರಸ್ಥರ, ವೃತ್ತಿಪರರ ನಷ್ಟವೂ ಹೌದು. ಆಸ್ತಿ ಸಂಬಂಧ ಮೇಲ್ಮನವಿಯೊಂದನ್ನು ಸಲ್ಲಿಸಲು ಸೂಚಿಸಿ “ನಾಡಿದ್ದು ಸೋಮವಾರ ಬರುತ್ತೇನೆ’ ಎಂದವನೊಬ್ಬ ಭೂಸಮಾಧಿಯಾಗಿ ಅನೇಕ ದಿನಗಳ ಅನಂತರ ಅವನ ಶವ ಸಿಕ್ಕಿತು. ಇಂತಹ ಹಲವಾರು ಉದಾಹರಣೆಗಳಿವೆ.
ಪ್ರಕೃತಿ ಮುನಿದರೆ ಯಾವ ದೇವರೂ ರಕ್ಷಿಸಲಾರ !ಎಂಬುದನ್ನು ಕಳೆದ ವರ್ಷ ಕೊಡಗು ಸಾಬೀತುಮಾಡಿದೆ. ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ನೀರಿಲ್ಲ. ನೀರಿಲ್ಲದೇ ಇರುವುದರಿಂದ “ಇಲ್ಲಿಗೆ ಬರಬೇಡಿ’ ಎಂಬ ನೋಟೀಸು ಕೆಲವು ದೇವಸ್ಥಾನಗಳಿಂದ ಪ್ರಕಟವಾಗಿತ್ತು. ಎಲ್ಲ ದೇವಾಲಯಗಳ ಗತಿಯೂ ಇದೇ ಆಗಿದೆ. ಕೊಡಗಿನಲ್ಲೂ ನೀರಿಗೆ ಪಡುವ ಪಡಿಪಾಟಲು ಎಷ್ಟು ಮುಚ್ಚಿಟ್ಟರೂ ಹೊರಬರುತ್ತಿದೆ. ಕೊಡಗಿನ ಸಮಸ್ಯೆಗಳ ಪರಿಹಾರಕ್ಕೆ ಅರಣ್ಯ ಹನನ ಕಾರಣವೆಂಬ ಪ್ರಮೇಯವಿದೆ. ಕಾಡುಪ್ರಾಣಿಗಳು ಕಾಡಿನೊಳಗೇ ನಾಶವಾಗುವ ಪರಿಸ್ಥಿತಿಯಿದೆ. ಕೆಲವಾದರೂ ನಾಡಿಗೆ ಬಂದು ಮನುಷ್ಯನೊಂದಿಗೆ ಕದನಕ್ಕೆ ನಿಂತಿವೆ. ಯಾರು ಉಳಿಯಬೇಕು, ಯಾರು ಅಳಿಯಬೇಕು ಎಂಬುದು ನಿರ್ಧಾರವಾಗಲಿದೆ. ಬೆಟ್ಟಗುಡ್ಡಗಳ ಕೊಡಗಿನಲ್ಲಿ ನೆಲವನ್ನು ಸಪಾಟುಮಾಡುವ ಯಂತ್ರಗಳಿಗೆ ಸುಗ್ಗಿ. ಎಲ್ಲೆಂದರಲ್ಲಿ ಬೆಳೆದು ಬಂದ ಆಕರ್ಷಕ ಮನೆಗಳು ಪ್ರವಾಸಿಗರಿಗೆ ಖುಷಿಕೊಡಬಹುದು. ಇವೆಲ್ಲ ಅರಗಿನರಮನೆಯೋ ಮಯನಿರ್ಮಿತವೋ ಎಂಬುದು ಯಾರಿಗೂ ಗೊತ್ತಿಲ್ಲ. “ಕಡ್ಡಿ ಗೀರುವ ತನಕ ಚಿಂತೆಯಿಲ್ಲ’ ಎಂಬುದನ್ನು “ಮಳೆ ಬರುವವರೆಗೆ ಚಿಂತೆಯಿಲ್ಲ’ ಎಂದು ತಿದ್ದಿಕೊಂಡು ಹಾಡೋಣ. ಎಲ್ಲರೂ ಯಾವುದನ್ನು ಬೇಕಾದರೂ ಮಾತನಾಡಬಹುದು ಎಂಬ ವಾತಾವರಣದಲ್ಲಿ ವಾಸ್ತವ ಮತ್ತು ಸತ್ಯ ಸತ್ತುಹೋಗುತ್ತವೆ. ಪರಿಣತರೂ ಗಾಳಿ ಬಂದೆಡೆ ತೂರಿ ಹೋಗುವ ಕ್ರಮವನ್ನು ನಮ್ಮ ಪರಿಸರತಜ್ಞರ ಮಾತುಗಳು ಸಾರಿ ಹೇಳುತ್ತವೆ. ಪರಸ್ಪರ ವಿರೋಧವುಳ್ಳ ಅಭಿಪ್ರಾಯಗಳಲ್ಲಿ ಕೊನೆಗೂ ಗೆಲ್ಲುವುದು ಯಾರು? ಯಾವುದನ್ನು/ಯಾರನ್ನು ನಂಬಬೇಕು? ಸ್ವಾರ್ಥಪರ, ಪ್ರಚಾರಪ್ರಿಯ ಆತ್ಮಘಾತುಕರ ನಡೆನುಡಿಯ ನಡುವೆ “ರಾತ್ರಿ ಅಕ್ಕಿ ನೆನೆ ಹಾಕೋಣ. ನಾಳೆ ಬದುಕಿದರೆ ದೋಸೆಗಾಯಿತು; ಬದುಕದಿದ್ದರೆ ಅಪರಕರ್ಮದ ವಡೆಗಾಯಿತು’ ಎಂಬಂತೆ ಎದುರಾಗುತ್ತಿದೆಯೇ ಬದುಕು?
ಶ್ಮಶಾನ ಕುರುಕ್ಷೇತ್ರದ ದಿನಗಳಿವು. ಬಾಲಸುಬ್ರಹ್ಮಣ್ಯ ಕಂಜರ್ಪಣೆ