Advertisement

ಸಾಮಾನ್ಯಳಂತೆ ತಾಲೂಕು ಕಚೇರಿಗೆ ಆಗಮಿಸಿದ ಉಪವಿಭಾಗಾಧಿಕಾರಿ!

06:17 PM Nov 18, 2022 | Team Udayavani |

ಕೋಲಾರ: ತಾಲೂಕು ಕಚೇರಿಯಲ್ಲಿ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ನಿತ್ಯವೂ ಹೇಗೆಲ್ಲಾ ಅಲೆದಾಡುತ್ತಾರೆ ಎಂಬುದನ್ನು ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಮ್ಮ ಶುಕ್ರವಾರ ಮಧ್ಯಾಹ್ನ ಖುದ್ದು ಅನುಭವಿಸಿದರು.

Advertisement

ನಗರದ ಮೆಕ್ಕೆ ವೃತ್ತದಲ್ಲಿರುವ ತಾಲೂಕು ಕಚೇರಿಗೆ ಶುಕ್ರವಾರ ಮಧ್ಯಾಹ್ನ ೪ ಗಂಟೆ ಸುಮಾರಿಗೆ ತನ್ನ ಕಚೇರಿ ಸಿಬ್ಬಂದಿ ಜೊತೆ ದ್ವಿಚಕ್ರ ವಾಹನದಲ್ಲಿ ಖುದ್ದು ಸಾಮಾನ್ಯಳಂತೆ ಆಗಮಿಸಿದ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಮ್ಮರಿಗೂ ಜನರ ಕಷ್ಟ ಅರಿವಾಯಿತು. ಸಾರ್ವಜನಿಕರು ತಾಲೂಕು ಕಚೇರಿಯಿಂದ ಕೆಲಸ ಕಾರ್ಯ ಮಾಡಿಸಿಕೊಳ್ಳಲು, ಅಗತ್ಯದಾಖಲೆಗಳನ್ನು ಪಡೆದುಕೊಳ್ಳಲು ಹೇಗೆಲ್ಲಾ ಪರದಾಟ ನಡೆಸುತ್ತಾರೆ, ಏನೆಲ್ಲಾ ಪಡಿಪಾಟಲು ಬೀಳಬೇಕಾಗುತ್ತದೆಯೆಂಬುದನ್ನು ಸ್ವತಹ ತಾವೇ ಅನುಭವಿಸಿದರು.

ಸಾಮಾನ್ಯಳಂತೆ ಆಗಮಿಸಿದ ಉಪ ವಿಭಾಗಾಧಿಕಾರಿ ತಮಗೆ ಬೇಕಾದ ಮಾಹಿತಿಯನ್ನು ಕೇಳಿದಾಗ ಕಚೇರಿಯ ಮಹಿಳಾ ಸಿಬ್ಬಂದಿಯೊಬ್ಬರು ಅಲ್ಲೋಗು, ಇಲ್ಲೋಗು ಎಂಬಂತೆ ಉತ್ತರ ನೀಡಿದ್ದು ಉಪ ವಿಭಾಗಾಧಿಕಾರಿಯನ್ನು ಕೆರಳಿಸಿತು. ದಾಖಲೆ ವಿಭಾಗಕ್ಕೆ ತೆರಳಿದ ಉಪ ವಿಭಾಗಾಧಿಕಾರಿಗೆ ಅಲ್ಲಿನ ಸಿಬ್ಬಂದಿಯಿಂದಲೂ ಅದೇ ದಾಟಿಯ ಉತ್ತರ ಸಿದ್ದವಾಗಿತ್ತು. ಒಂದು ದಾಖಲೆಗಾಗಿ ಸಾರ್ವಜನಿಕರು ಏನೆಲ್ಲಾ ಅವ್ಯವಸ್ಥೆ ಬೀಳಬೇಕು ಎಂಬುದು ಖುದ್ದು ಉಪವಿಭಾಗಾಧಿಕಾರಿಯವರ ಅರಿವಿಗೆ ಬಂದಿತು.

ಉಪ ವಿಭಾಗಾಧಿಕಾರಿಯವರನ್ನು ಅಷ್ಟರೊಳಗಾಗಲೇ ಕೆಲವರು ಗುರುತು ಹಚ್ಚಿದ್ದರು. ಕಚೇರಿಯಲ್ಲೇ ಇದ್ದ ತಹಶೀಲ್ದಾರ್ ನಾಗರಾಜ್‌ಗೂ ಮಾಹಿತಿ ಹೋಯಿತು. ಸ್ಥಳಕ್ಕೆ ದೌಡಾಯಿಸಿ ಬಂದ ಅವರನ್ನು ಉಪ ವಿಭಾಗಾಧಿಕಾರಿ ಸಾರ್ವಜನಿಕರ ಸಮ್ಮುಖದಲ್ಲೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಮಹಿಳೆಯೊಬ್ಬರು ಅಗತ್ಯ ಭೂದಾಖಲೆಗಾಗಿ ಹತ್ತಾರು ದಿನಗಳಿಂದ ಓಡಾಡುತ್ತಿದ್ದಾರೆ, ಅವರಿಗೆ ದಾಖಲೆ ಸಿಕ್ಕಿಲ್ಲ. ಆ ಮಹಿಳೆಯ ದೂರಿನ ಆಧಾರದ ಮೇಲೆ ತಾವೇ ಖುದ್ದು ಬಂದಾಗ ತಮಗೂ ಅದೇ ಅನುಭವವಾಯಿತು. ಸಾರ್ವಜನಿಕರನ್ನು ಹೇಗೆಲ್ಲಾ ಅಲೆದಾಡಿಸುತ್ತಾರೆ, ಸಮರ್ಪಕವಾದ ಮಾಹಿತಿ ನೀಡಲು ಕಷ್ಟ, ಕೇಳಿದ ಮಾಹಿತಿಗೂ ಹಾರಿಕೆಯ ಉಢಾಪೆಯ ಉತ್ತರ ನೀಡಿದರೆ ಹೇಗೆಂದು ತರಾಟೆಗೆ ತೆಗೆದುಕೊಂಡರು.

Advertisement

ತಲೆ ತಗ್ಗಿಸಿಕೊಂಡು ನಿಲ್ಲುವ ಮೂಲಕ ತಹಶೀಲ್ದಾರ್ ನಾಗರಾಜ್ ಮತ್ತವರ ಸಿಬ್ಬಂದಿ ಕಚೇರಿಯ ಅವ್ಯವಸ್ಥೆಗಳಿಗೆ ಮೌನ ಸಮ್ಮತಿಯನ್ನೊತ್ತಿದರು. ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ಲೋಪವೆಸಗಿರುವ ಅಧಿಕಾರಿ, ಸಿಬ್ಬಂದಿಗೆ ಶೋಕಾಸ್ ನೋಟೀಸ್ ನೀಡುವುದಾಗಿ ಎಚ್ಚರಿಕೆ ನೀಡಿ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಮ್ಮ ಅಲ್ಲಿಂದ ತೆರಳಿದರು.

ಕೋಲಾರ ತಾಲೂಕು ಕಚೇರಿಯ ಅವ್ಯವಸ್ಥೆಗಳ ಕುರಿತಂತೆ ಅದರಲ್ಲೂ ದಾಖಲೆ ವಿಭಾಗದಲ್ಲಿನ ಅಕ್ರಮಗಳ ಕುರಿತಂತೆ ಸಾರ್ವಜನಿಕರು ಸಾಕಷ್ಟು ಆರೋಪಗಳನ್ನು ಮಾಡುತ್ತಲೇ ಇದ್ದರು. ಆದರೂ, ಕಚೇರಿಯ ಕಾರ್ಯಕಲಾಪಗಳಲ್ಲಿ ಯಾವುದೇ ಜನಸ್ನೇಹಿ ಬದಲಾವಣೆಗಳಾಗಿರಲಿಲ್ಲ. ಇದೀಗ ಉಪ ವಿಭಾಗಾಧಿಕಾರಿ ವೆಂಕಟಕ್ಷ್ಮಮ್ಮನವರೇ ಸಾಮಾನ್ಯರಂತೆ ಬಂದು ಸಾರ್ವಜನಿಕರ ಕಷ್ಟಗಳನ್ನು ಖುದ್ದು ಅನುಭವಿಸಿ, ಸಂಬಂಧಪಟ್ಟವರನ್ನು ತರಾಟೆಗೂ ತೆಗೆದುಕೊಂಡಿದ್ದಾರೆ. ಇನ್ನಾದರೂ ಕೋಲಾರ ತಾಲೂಕು ಕಚೇರಿ ಅವ್ಯವಸ್ಥೆ ಬದಲಾದೀತೇ ಎಂದು ಸಾರ್ವಜನಿಕರು ಆಶಿಸುತ್ತಿದ್ದಾರೆ

ಕೆ.ಎಸ್.ಗಣೇಶ್

Advertisement

Udayavani is now on Telegram. Click here to join our channel and stay updated with the latest news.

Next