Advertisement

ಜೀವನದಲ್ಲಿ ನಂಬಿಕೆಯ ಬಲವೇ ನಮಗೆ ಬೆಂಬಲ

11:05 PM Sep 30, 2022 | Team Udayavani |

ಬೇರೆಯವರಿಗೆ ನೀನು ಕೊಡುವ ಅತೀದೊಡ್ಡ ಉಡುಗೊರೆ ಎಂದರೆ ಭರವಸೆ – ಹೀಗೆ ಭರವಸೆಯಿಂದ ನಂಬಿಕೆ ಮೂಡಿಸುವುದು. “Leader is a dealer in hope” ಆಸೆಗೆ ಊರು ಗೋಲು ನೀಡುವವನೇ ನಾಯಕ. ತನ್ನ ಬಗ್ಗೆ ತಾನು ಹೊಂದಿರುವ ವಿಶ್ವಾಸ ಅಥವಾ “ನಂಬಿಕೆಯೇ’ ಆತ್ಮವಿಶ್ವಾಸ ಎನಿಸಿಕೊಳ್ಳುತ್ತದೆ. ಆ ನಂಬಿಕೆಯು ಸದೃಢ  ವಾಗಿದ್ದು ನಮ್ಮ ವ್ಯಕ್ತಿತ್ವ, ಕ್ರಿಯಾ ಶೀಲತೆಗಳು ಪೂರಕವಾಗಿದ್ದಾಗ ಯಶಸ್ಸು ನಮ್ಮ ಹಿಂಬಾಲಕ, ನಾವೇ ನಾಯಕರು.ಆಸ್ತಿಕನು ದೇವರಲ್ಲಿ ಇಡುವ ನಂಬಿ ಕೆಯೇ ಭಕ್ತಿ. “ನಂಬಿ ಕೆಟ್ಟವ ರಿಲ್ಲವೋ ರಂಗಯ್ಯನ’ ಎಂದು ದಾಸರು ಹಾಡಿರುವುದು ಇದಕ್ಕೊಂದು ನಿದರ್ಶನ. ಹೀಗೆ ನಂಬಿಕೆಯ ಮುಖಗಳು ಹಲವಾರು.

Advertisement

ನೂರಾರು ಸಂಬಂಧಗಳಲ್ಲಿ, ಅದರಲ್ಲೂ ಪತಿ -ಪತ್ನಿಯರ ನಡುವೆ ಪ್ರೀತಿ ಯೊಂದಿಗೆ ನಂಬಿಕೆಯೂ ಪ್ರಧಾನವೇ. “Mother is the truth, father is the faith’ ಎಂಬ ಮಾತು ನಿತ್ಯಸತ್ಯ. ಸಾರ್ವಕಾಲಿಕ. ತಾಯಿಯು ತನ್ನನ್ನು “ಅಮ್ಮ’ ಎಂಬ ಎರಡಕ್ಷರಗಳಿಂದ ಪರಿಚಯಿಸಿಕೊಳ್ಳುತ್ತ, ಹಾಗೆಯೇ ಕರೆಸಿಕೊಳ್ಳುತ್ತ, ತಂದೆಯನ್ನು ಪರಿಚಯಿಸುತ್ತ “ಅಪ್ಪ’ ಎಂದು ಸಂಬೋಧಿಸಲು ಕಲಿಸಿಕೊಡುತ್ತಾಳೆ. ಮಗುವಿಗೆ ಅಮ್ಮನೇ ಮೊದಲ ಗುರು, ಅವಳ ಪಾಠದ ಪರಿಯೇ ಅನುಪಮ. ಮುಂದೆ ಮಗುವು ಬದುಕನ್ನು ಕಟ್ಟಿಕೊಳ್ಳಲು ದಾರಿದೀಪವಾಗುವ ಹತ್ತು ಹಲವು ನಂಬಿಕೆಗಳಿಗೆಲ್ಲ ಈ ಪ್ರಾರಂಭಿಕ ಸಂಬಂಧ ತಿಳಿಸಿಕೊಡುವ “ಅಮ್ಮ – ಅಪ್ಪ’ – ಎಂಬೀ ಪದಗಳೇ ಅಡಿಗಲ್ಲು. ಹೀಗೆ ನಂಬಿಕೆಯ ತಳಹದಿಯ ಮೇಲೆ ಪ್ರೀತಿ ಸೌಧ ನಿರ್ಮಿಸಿ ಮಗುವನ್ನು ಬೆಳೆಸುತ್ತಾರೆ ಹೆತ್ತವರು. ಮುಂದೆ ಬದುಕಿನಲ್ಲಿ ಎದುರಾಗುವ ಹತ್ತಾರು ಸಮಸ್ಯೆಗಳ ನಿವಾರಣೆಗೂ ವ್ಯವಹಾರಗಳಿಗೂ ನಂಬಿಕೆಯೇ ಪ್ರಧಾನ ಪಂಚಾಂಗವಾಗಿ ಒದಗಿ ಬರುತ್ತದೆ.

ತಾನು ನಂಬಿಕೊಂಡದ್ದನ್ನು ಕ್ರಿಯಾರೂಪಕ್ಕೆ ಇಳಿಸಿ ದೃಢಚಿತ್ತದಿಂದ ಪೂರ್ಣವಾಗಿ ತನ್ನನ್ನು ತೊಡಗಿಸಿಕೊಳ್ಳುವವನೇ ಕರ್ಮಯೋಗಿ. ಇಂಥವರಿಗೆ ಜೀವನವೇ ಪ್ರಯೋಗ ಶಾಲೆ.

ಕೆಲವೊಮ್ಮೆ ನಂಬಿಕೆ, ಅಪನಂಬಿಕೆಗಳಿಗೆ ತಾಕಲಾಟ ಆಗುವುದಿದೆ. ವಿಜ್ಞಾನಿ ಯೊಬ್ಬ ನಿಗೆ ದೇವರ ಅಸ್ತಿತ್ವದ ಬಗ್ಗೆ ಒಂದಿಷ್ಟೂ ನಂಬಿಕೆ ಇರಲಿಲ್ಲ. ಆ ಬಗ್ಗೆ ಅವನಿಂದ ಸದಾ ಅಪನಂಬಿಕೆಯ ಅಪಸ್ವರಗಳೇ. “ದೇವರಿದ್ದರೆ ಕಣ್ಣಿಗೇಕೆ ಕಾಣಿಸುತ್ತಿಲ್ಲ ?’ ಎಂಬುದೇ ಅವನ ಸಂಶಯ. ಗೆಳೆಯರು ಆಗ “ನಿನಗೆ ಮೆದುಳು ಇದೆಯಲ್ಲ? ಅದು ನಿನಗೆ ಕಾಣುತ್ತಿದೆಯೇ, ಅದು ನಿನ್ನ ಸಕಲ ಕಾರ್ಯಗಳನ್ನೂ ನಿಯಂತ್ರಿಸುತ್ತಿದೆಯಲ್ಲ? ಹಾಗೆಯೇ ಅಗೋ ಚರನಾದರೂ ದೇವನೂ ಸಕಲ ಕಾರ್ಯ ಕಾರಣನು…’ ಎಂದು ತಿಳಿ ಹೇಳು ತ್ತಿದ್ದರು. ಆದರೂ ಅವನದು ನಕಾರಾತ್ಮಕ ಧೋರಣೆಯೇ. ಅಂಥವನು ಒಮ್ಮೆ ತೀವ್ರ ರೋಗಗ್ರಸ್ತನಾದಾಗ ಭಯಗೊಂಡು “ಓ ದೇವರೇ ನನ್ನನ್ನು ಕಾಪಾಡು… ನೀನು ಇದ್ದರೆ’ ಎಂದು ಆಗಾಗ ಮೌನ ಪ್ರಾರ್ಥನೆ ಸಲ್ಲಿಸುತ್ತಿದ್ದನಂತೆ!

ನಮಗೆ ನಮ್ಮಲ್ಲೇ ಗಟ್ಟಿ ನಂಬಿಕೆ ಇರಬೇಕು. ಆಗ ಅದೇ ನಮಗೆ ಸ್ಫೂರ್ತಿಯಾಗುತ್ತದೆ. ರಾಮಾಯಣ ದಲ್ಲಿನ ಮಹಾ ಬಲಶಾಲಿ ಹನುಮಂತನಿಗೆ ತನ್ನ ಆಗಾಧ ದೈಹಿಕ ಶಕ್ತಿಯ ಅರಿವಿರಲಿಲ್ಲ. ಜಾಂಬವಂತನು ಅದನ್ನು ತಿಳಿ ಹೇಳಿ ಅವ ನನ್ನು ಪ್ರೋತ್ಸಾಹಿಸಿದಾಗ, ಹನುಮಂತನು ಅಗಾಧ ವಾದ ಸಾಗರೋಲ್ಲಂಘನಕ್ಕೆ ಸಿದ್ಧನಾದ. ಅಲ್ಲದೆ ಜಯಶಾಲಿಯೂ ಆದದ್ದು ರೋಚಕ ಕಥೆ. ಆದರೆ ಸ್ವನಂಬಿಕೆಯೂ ಅತಿ ಯಾದರೆ ಜಂಭವಾಗಿ ಹಾನಿ, ಕಡಿಮೆ ಇದ್ದರೆ ಕೀಳರಿಮೆ, ಅದರಿಂದ ಅವನತಿಗೂ ಒಳಗಾಗಬಹುದು. ಇಲ್ಲಿ ವಿವೇಕ, ಮುಂದಾಲೋಚನೆಗಳು ಕೆಲಸ ಮಾಡಬೇಕು. ಏಕಲವ್ಯನು ದೃಢ ನಂಬಿಕೆ ಯಿಂದ ತಾನಾಗಿ ಬಿಲ್ವಿದ್ಯೆ ಕಲಿತರೂ ಗುರು ದ್ರೋಣಾಚಾರ್ಯರಿಗೆ ಗೌರವದಿಂದ ಗುರುದಕ್ಷಿಣೆಯಾಗಿ ತನ್ನ ಹೆಬ್ಬೆರಳನ್ನೇ ನೀಡಿ ಧೀಮಂತ ಶಿಷ್ಯನೆಂದು ಪುರಾಣ ಪ್ರಸಿದ್ಧನಾದ.
ನಮ್ಮ ಸ್ವಾತಂತ್ರ್ಯ ಶಿಲ್ಪಿ ಮಹಾತ್ಮಾ ಗಾಂಧೀಜಿಯವರು ಅಹಿಂಸಾ ಪಥದಲ್ಲಿ ಅಚಲ ನಂಬಿಕೆಯಿರಿಸಿ, ಒಂದಿಷ್ಟೂ ವಿಚಲಿತರಾಗದೆ ಕಾರ್ಯಶೀಲರಾಗಿ ಜಯ ಗಳಿಸಿದ್ದು, ವಿದೇಶಗಳಲ್ಲೂ ಪ್ರಚಲಿತ ವಿರುವ ಸುರಮ್ಯ ಕಥೆ.
ಬಾಲ್ಯದಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡಿಗೆ ಕಲಿಯುವ ಮಗುವಿನಿಂದ ಹಿಡಿದು ಹೆಜ್ಜೆಗಳೇ ಒಜ್ಜೆಯಾಗುವ ವೃದ್ಧಾಪ್ಯದ ವರೆಗಿನ ಪ್ರತೀ ಹಂತದಲ್ಲೂ ನಂಬಿಕೆಯ ಬಲವೇ ನಮಗೆ ಬೆಂಬಲವಾಗಿರಲಿ.

Advertisement

- ಸುಶೀಲಾ ಆರ್‌. ರಾವ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next