Advertisement

ಉಪಸಮಿತಿಗಳ ದಾಖಲೆ; ದತ್ತ ಪೀಠ ಕುರಿತ ಹೈಕೋರ್ಟ್‌ ಆದೇಶ ಅಧ್ಯಯನಕ್ಕೆ ಸಂಪುಟ ನಿರ್ಧಾರ

02:38 AM Oct 06, 2021 | Team Udayavani |

ಬೆಂಗಳೂರು: ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿ ದತ್ತಾತ್ರೇಯ ಪೀಠದ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶ ಪಾಲನೆಯ ಅಧ್ಯಯನ, ರಾಜ್ಯದ ನೀರಾವರಿ ಯೋಜನೆಗಳ ಸಮಸ್ಯೆ ಬಗೆಹರಿಸುವುದು ಸೇರಿದಂತೆ ವಿವಿಧ ವಿಷಯಗಳ ಅಧ್ಯಯನಕ್ಕಾಗಿ 18 ಸಂಪುಟ ಉಪಸಮಿತಿಗಳನ್ನು ರಚನೆ ಮಾಡಲಾಗಿದೆ.

Advertisement

ನೀರಾವರಿ ಯೋಜನೆಗಳ ಕುರಿತ ಉಪಸಮಿತಿಗಳಿಗೆ ಸ್ವಯಂ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಅಧ್ಯಕ್ಷರಾಗಿರುವುದು ವಿಶೇಷ. ಉಳಿದ ಸಮಿತಿಗಳಿಗೂ ಆಯಾ ಇಲಾಖೆಗಳ ಸಚಿವರು ಮತ್ತು ಹಿರಿಯ ಸಚಿವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಈ ಬಗ್ಗೆ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ದತ್ತಪೀಠ ಸಂಬಂಧಿ ಸಮಿತಿಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷರಾಗಿದ್ದು , ಸಚಿವರಾದ ಅಶೋಕ್‌, ಸುನಿಲ್‌ಕುಮಾರ್‌, ಶಶಿಕಲಾ ಜೊಲ್ಲೆ ಸದಸ್ಯರಾಗಿದ್ದಾರೆ.

ಇತ್ತೀಚೆಗಷ್ಟೇ ಚಿಕ್ಕಮಗಳೂರಿನ ದತ್ತಪೀಠದ ಪೂಜಾ ಕೈಂಕರ್ಯಕ್ಕೆ ಸಂಬಂಧಿಸಿದಂತೆ ಮುಜಾವರ್‌ ನೇಮಕ ಮಾಡಿದ್ದ ಹಿಂದಿನ ಸರಕಾರದ ಆದೇಶ ರದ್ದು ಮಾಡಿದ್ದ ರಾಜ್ಯ ಹೈಕೋರ್ಟ್‌, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿ ಎಂದಿತ್ತು. ಹಿಂದೂ ಮತ್ತು ಮುಸ್ಲಿಮರು ಪೂಜೆ ಸಲ್ಲಿಸುವ ಸ್ಥಳದಲ್ಲಿ ಮುಜಾವರ್‌ ಮಾತ್ರ ನೇಮಕ ಸರಿಯಲ್ಲ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತ್ತು.

ಹೀಗಾಗಿ ಸರಕಾರ ಈ ಆದೇಶ ಪಾಲನೆಯ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ನಡೆಸಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಿದೆ. ಹಿಂದೂ ಅರ್ಚಕರ ನೇಮಕ, ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಕೆ ಸಹಿತ ಮುಂದಿನ ಕ್ರಮಗಳ ಬಗ್ಗೆ ಈ ಸಮಿತಿ ವರದಿ ಸಲ್ಲಿಸಿದ ಅನಂತರ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

Advertisement

ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಮುಜಾವರ್‌ ನೇಮಕ ಮಾಡಲಾಗಿತ್ತು. ಇದು ಸುಪ್ರೀಂ ಕೋರ್ಟ್‌ ಆದೇಶಕ್ಕೆ ವಿರುದ್ಧ. ದತ್ತಾತ್ರೇಯ ಪೀಠದಲ್ಲಿ ಹಿಂದೂ ಗಳಿಗೆ ದತ್ತ ಪಾದುಕೆಗಳ ಪೂಜೆ ಮಾಡಿ ಪ್ರಸಾದ ನೀಡಲು ಅರ್ಚಕರ ನೇಮಕ ಮಾಡಬೇಕು ಎಂದು ಶ್ರೀ ಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನ ಸಮಿತಿ ನ್ಯಾಯಾಲಯದ ಮೊರೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ತೀರ್ಪು ನೀಡಿತ್ತು.

ಇದನ್ನೂ ಓದಿ:ನಕಾರಾತ್ಮಕತೆಯಿಂದ ಸ್ಥಿರತೆಯತ್ತ!

ಪೊಲೀಸ್‌ ಇಲಾಖೆ: ಭಡ್ತಿ ನಿಯಮ ಸಡಿಲಿಕೆ
ಪೊಲೀಸ್‌ ಇಲಾಖೆಯಲ್ಲಿ ಪೇದೆಯಿಂದ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗೆ ಭಡ್ತಿ ನೀಡುವ ನಿಟ್ಟಿನಲ್ಲಿ ನಿಯಮ ಸಡಿಲಿಕೆ ಮಾಡುವ “ಕರ್ನಾಟಕ ರಾಜ್ಯ ಪೊಲೀಸ್‌ ಲಿಪಿಕ ಸೇವೆಗಳನ್ನು ಒಳಗೊಂಡಂತೆ ನೇಮಕಾತಿ ಮತ್ತು ತಿದ್ದುಪಡಿ ನಿಯಮ-2021’ಕ್ಕೆ ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಭಡ್ತಿ ಪಡೆಯಲು ಕನಿಷ್ಠ ಎಂಟು ವರ್ಷ ಸೇವಾವಧಿ ಪೂರೈಸಿರಬೇಕು ಎಂಬ ನಿಯಮವಿದೆ. ಅರ್ಹರು ಇಲ್ಲದೆ ಇದ್ದಾಗ ನಿಯಮ ಸಡಿಲಿಸಿ ಐದು ವರ್ಷ ಸೇವಾವಧಿ ಪೂರೈಸಿದವರಿಗೂ ಭಡ್ತಿ ನೀಡಬಹುದು ಎಂದು ನಿಯಮ ರೂಪಿಸಲಾಗಿತ್ತು. ಈಗ ಅದಕ್ಕೆ ತಿದ್ದುಪಡಿ ತಂದು ನಾಲ್ಕು ವರ್ಷಗಳಿಗೆ ಇಳಿಸಲಾಗಿದೆ.

ಈ ತಿದ್ದುಪಡಿಯಿಂದ ಪೊಲೀಸ್‌ ಇಲಾಖೆಯಲ್ಲಿ ಮುಖ್ಯಪೇದೆಯಿಂದ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಯ ಖಾಲಿ ಸ್ಥಾನಗಳು ಭರ್ತಿಯಾಗಲಿವೆ ಎಂದು ಮಾಧುಸ್ವಾಮಿ ತಿಳಿಸಿದರು.

ಪೊಲೀಸ್‌ ಆಧುನೀಕರಣ ಯೋಜನೆಯಡಿ ಬೆಂಗಳೂರಿಗೆ ಡಿಜಿಟಲ್‌ ಯುಎಚ್‌ಎಫ್ ರೇಡಿಯೋ ಸಂಪರ್ಕ ವ್ಯವಸ್ಥೆಯ ವಿನ್ಯಾಸ, ಸರಬರಾಜು, ಅಳವಡಿಕೆ ಮತ್ತು ನಿರ್ವಹಣೆಯನ್ನು  14.65 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸಂಪುಟ ಅನುಮೋದನೆ ನೀಡಿದೆ ಎಂದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ವಸತಿ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ “ಶುಚಿ ಸಂಭ್ರಮ’ ಕಿಟ್‌ನ್ನು ಕರ್ನಾಟಕ ಸೋಪ್ಸ್‌ ಆ್ಯಂಡ್‌ ಡಿಟರ್ಜೆಂಟ್‌ ಸಂಸ್ಥೆಯಿಂದ ಖರೀದಿಸಿ ಒದಗಿಸಲು ಸಂಪುಟ ತೀರ್ಮಾನಿಸಿದೆ. 24.85 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಕಿಟ್‌  ಸಾಬೂನು, ಪೌಡರ್‌ ಮತ್ತು ಹೇರ್‌ ಆಯಿಲ್‌ ಒಳಗೊಂಡಿರುತ್ತದೆ.

ರಚನೆಯಾದ ಸಂಪುಟ ಉಪಸಮಿತಿಗಳು

  1. ನೀರಾವರಿ ಯೋಜನೆಗಳ ಅನುಷ್ಠಾನ/ ನ್ಯಾಯಾಧಿಕರಣಗಳ ತೀರ್ಪು ಅನುಷ್ಠಾನ.
  1. ಕಾವೇರಿ ನೀರಾವರಿ ಯೋಜನೆಗಳು/ನ್ಯಾಯಾಧಿಕರಣ ತೀರ್ಪುಗಳ ಅನುಷ್ಠಾನ.
  1. ಬೃಹತ್‌ ಬಂಡವಾಳ ಹೂಡಿಕೆ ಪ್ರಸ್ತಾವನೆ ಪರಿಶೀಲಿಸಿ ವಿಶೇಷ ರಿಯಾಯಿತಿ, ಉತ್ತೇಜನ.
  2. ರಾಜ್ಯದ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶ ಪರಿಸರ ಸೂಕ್ಷ್ಮ ವಲಯ ಕುರಿತ ಶಿಫಾರಸು, ಡಾ| ಕಸ್ತೂರಿರಂಗನ್‌ ವರದಿ ಮತ್ತು ಇತರ ಸಂಬಂಧಿತ ವಿಷಯಗಳು.
  3. ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತು ಇತರ ನೈಸರ್ಗಿಕ ವಿಪತ್ತುಗಳಿಂದ ಸಂಭವಿಸಬಹುದಾದ ಪರಿಸ್ಥಿತಿ ಪರಾಮರ್ಶೆ.
  4. ಕೃಷಿ, ತೋಟಗಾರಿಕೆ ಬೆಲೆ ಕುಸಿದಾಗ ಬೆಲೆ ಸ್ಥಿರೀಕರಣಕ್ಕಾಗಿ ಬೆಂಬಲ ಬೆಲೆ ನಿಗದಿ.
  5. ಹೈದರಾಬಾದ್‌ ಕರ್ನಾಟಕ ಭಾಗಕ್ಕೆ ನೀಡಿ ರುವ ವಿಶೇಷ ಸ್ಥಾನಮಾನದಡಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ.
  6. ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿ ರುವ ಅಪರಾಧ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಪರಿಶೀಲನೆ.
  7. ಪ.ಜಾತಿ ಪಂಗಡಗಳ ಹಿಂಬಾಕಿ ಹುದ್ದೆ ಭರ್ತಿ.
  8. ವಿವಿಧ ಇಲಾಖೆ ಕಚೇರಿಗಳ ವಿಲೀನ, ರದ್ದುಗೊಳಿಸುವಿಕೆ, ವೈಜ್ಞಾನಿಕ ಪರಿಷ್ಕರಣೆ.
  9. ನೈಸ್‌ ಯೋಜನೆಯಡಿ ಬರುವ ಜಮೀನುಗಳ ಬಗ್ಗೆ ಇರುವ ವಾಜ್ಯ ಕುರಿತು ಪರಿಶೀಲನೆ.
    12 ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಗ್ರೂಪ್‌ ಎ ವೃಂದದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸುವುದು ಹಾಗೂ ದಂಡನೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರ ಶಿಫಾರಸು ಪರಾಮರ್ಶೆ.
  1. ಗಣಿ ಪ್ರಭಾವಿತ ಪರಿಸರ ಸಂರಕ್ಷಣೆ ನಿಗಮ ಯೋಜನೆ ಬಗ್ಗೆ ಸುಪ್ರೀಂ ಕೋರ್ಟ್‌ ಪ್ರಕರಣದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಿ ಮೇಲ್ವಿಚಾರಣೆ.
  2. ಜಲನೀತಿ ಕುರಿತು ಪರಾಮರ್ಶೆ.
  3. ಗ್ರಾಮೀಣ ಪ್ರದೇಶಗಳಲ್ಲಿ ಇ ಸ್ವತ್ತು ಮತ್ತು ನಗರ ಪ್ರದೇಶಗಳಲ್ಲಿ ಇ ಖಾತೆ.
  4. ಆನೇಕಲ್‌ ತಾಲೂಕಿನ ಸೂರ್ಯನಗರ ಮತ್ತು ಜನವಸತಿಗೆ ಜಲಜೀವನ್‌ ಮಿಷನ್‌ನಡಿ ನೀರು ಒದಗಿಸುವಿಕೆ..
  5. ಮಂಡ್ಯ ಮೈಶುಗರ್‌ ಸಕ್ಕರೆ ಕಾರ್ಖಾನೆ ಯನ್ನು ಸರಕಾರವೇ ನಿರ್ವಹಿಸಬೇಕೇ ಅಥವಾ ಖಾಸಗಿಯವರಿಗೆ ವಹಿಸಬೇಕೇ, ಯಾವ ಆಧಾರದಲ್ಲಿ ಖಾಸಗಿಯವರಿಗೆ ನೀಡಬೇಕು?

ಮೈಶುಗರ್‌ ಭವಿಷ್ಯ ಸಂಪುಟ ಉಪ ಸಮಿತಿ ಕೈಯಲ್ಲಿ
ಮಂಡ್ಯ ಮೈಶುಗರ್‌ ಸಕ್ಕರೆ ಕಾರ್ಖಾನೆ ಭವಿಷ್ಯವನ್ನು ಕೂಡ ಸಂಪುಟದ ಉಪ ಸಮಿತಿ ನಿರ್ಧರಿಸಲಿದೆ. ಸರಕಾರವೇ ಕಾರ್ಖಾನೆಯನ್ನು ನಿರ್ವಹಿಸಬೇಕೇ ಅಥವಾ ಖಾಸಗಿಯವರಿಗೆ ವಹಿಸಬೇಕೇ, ಯಾವ ಆಧಾರದಲ್ಲಿ ಖಾಸಗಿಯವರಿಗೆ ನೀಡಬೇಕು ಎನ್ನುವ ಬಗ್ಗೆ ಸಮಿತಿ ವರದಿ ನೀಡಲಿದ್ದು, ಅದರ ಆಧಾರದಲ್ಲಿ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಲು ಸಮ್ಮತಿ ನೀಡಲಾಯಿತು. ಸಚಿವರಾದ ಗೋವಿಂದ ಕಾರಜೋಳ, ನಾರಾಯಣ ಗೌಡ, ಅಶೋಕ್‌ ಅವರನ್ನು ಒಳಗೊಂಡ ಸಂಪುಟ ಉಪಸಮಿತಿ ಈ ಬಗ್ಗೆ ಅಧ್ಯಯನ ನಡೆಸಲಿದೆ.

ಹಿರಿಯ ನಾಗರಿಕರ ಪಿಂಚಣಿ 200 ರೂ. ಹೆಚ್ಚಳ
ಸಾಮಾಜಿಕ ಭದ್ರತೆ ಯೋಜನೆಯ ಸಂಧ್ಯಾ ಸುರಕ್ಷಾದಡಿ ಹಿರಿಯ ನಾಗರಿಕರಿಗೆ ನೀಡುವ ಪಿಂಚಣಿ ಮೊತ್ತ ಹೆಚ್ಚಿಸಲು ಸಂಪುಟ ತೀರ್ಮಾನ ಕೈಗೊಂಡಿದೆ. 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿರುವ 600 ರೂ. ಮೊತ್ತವನ್ನು 800 ರೂ.ಗಳಿಗೆ, 65 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿರುವ 1 ಸಾವಿರ ರೂ. ಮೊತ್ತವನ್ನು 1,200 ರೂ.ಗಳಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದು ಸೆ. 18ರಿಂದಲೇ ಪೂರ್ವಾನ್ವಯವಾಗಿ ಜಾರಿಯಾಗಲಿದೆ. ಇದರಿಂದ 36 ಲಕ್ಷ ಜನರಿಗೆ ಅನುಕೂಲವಾಗಲಿದ್ದು, ಸರಕಾರಕ್ಕೆ 207 ಕೋಟಿ ರೂ. ವಾರ್ಷಿಕ ಹೊರೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next