ಚಾಮರಾಜನಗರ: ಅಗಲಿದ ಚಿತ್ರನಟ ಪುನೀತ್ ರಾಜ್ ಕುಮಾರ್ ಗೌರವಾರ್ಥ ತವರು ಜಿಲ್ಲೆಯ ಅಭಿಮಾನಿ ಗಳು ಮನವಿ ಮಾಡಿದ್ದ ಸ್ವಯಂ ಪ್ರೇರಿತ ಚಾಮರಾಜನಗರ ಬಂದ್ ಸಂಪೂರ್ಣ ಯಶಸ್ವಿಯಾಯಿತು. ತವರು ಜಿಲ್ಲೆಯ ಜನತೆ ಬಂದ್ ನಡೆಸಿ ತಮ್ಮೂರಿನ ಕಲಾವಿದನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಚೆಲುವ ಚಾಮರಾಜನಗರ ಯೋಜನೆಯ ಪ್ರಚಾರ ರಾಯಭಾರಿಯೂ ಆಗಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಜನತೆ, ವಿವಿಧೆಡೆ ಶ್ರದ್ಧಾಂಜಲಿ ಸಭೆ ನಡೆಸಿದರು.
ನಗರದ ಪ್ರಮುಖ ವಾಣಿಜ್ಯ ವಹಿವಾಟು ಸ್ಥಳವಾದ ದೊಡ್ಡ ಅಂಗಡಿ, ಚಿಕ್ಕಂಗಡಿ ಬೀದಿಯಲ್ಲಿ ಎಲ್ಲ ರೀತಿಯ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಹೋಟೆಲ್ ಗಳು ತೆರೆದಿರಲಿಲ್ಲ. ಚಿತ್ರಮಂದಿರಗಳು ಶುಕ್ರವಾರ ಮಧ್ಯಾಹ್ನದಿಂದಲೇ ಪ್ರದರ್ಶನ ರದ್ದುಗೊಳಿಸಿದ್ದವು. ಬ್ಯಾಂಕ್ಗಳು ಕಾರ್ಯನಿರ್ವಹಿಸಲಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು.
ಇದನ್ನೂ ಓದಿ;- ಪುನೀತ್ ರಾಜ್ ಕುಮಾರ್ ಅಗಲಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟ : ವಿನಯಕುಮಾರ್ ಸೊರಕೆ
ಕೆಲವು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇನ್ನು ಕೆಲವು ಶಾಲಾ ಕಾಲೇಜುಗಳು ತೆರೆದಿದ್ದವು.ಕೆಎಸ್ಆರ್ಟಿಸಿ ಬಸ್ ಗಳು ಸಂಚರಿಸಿದವು. ಅಗತ್ಯ ಸೇವೆಗಳನ್ನು ಹೊರತು ಪಡಿಸಿ, ಉಳಿದೆಲ್ಲ ವಹಿವಾಟುಗಳು ಬಂದ್ ಆಗಿದ್ದವು.
ಮೆರವಣಿಗೆ: ಅಜಾದ್ ಹಿಂದೂ ಸೇನೆ, ಶಿವಸೈನ್ಯ, ಅಪ್ಪು ಬ್ರಿಗೇಡ್, ರಾಜರತ್ನ ಸಮಿತಿ ಹಾಗೂ ಡಾ.ರಾಜ್ ಕುಮಾರ್ ಅಭಿಮಾನಿಗಳು ಪುನೀತ್ ಭಾವಚಿತ್ರ ಹೊತ್ತು ಬೈಕ್ ರ್ಯಾಲಿ ನಡೆಸಿದರು. ಆಜಾದ್ ಹಿಂದೂ ಸೇನೆಯ ಅಧ್ಯಕ್ಷ ಎಂ.ಎಸ್.ಫೃಥ್ವಿರಾಜ್ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಸುಪುತ್ರ ಹಾಗೂ ರಾಯ ಭಾರಿ ಪುನೀತ್ ರಾಜ್ ಕುಮಾರ್ ಅವರು ಮತ್ತೆ ಜಿಲ್ಲೆಯಲ್ಲಿ ಹುಟ್ಟಿ ಬರಲಿ, ಪ್ರಾರ್ಥಿಸಿದರು.
ಮೆರವಣಿಗೆಯಲ್ಲಿ ಆಜಾದ್ ಹಿಂದು ಸೇನೆಯ ಜಿಲ್ಲಾ ಅಧ್ಯಕ್ಷ ಶಿವು ವಿರಾಟ್, ಮಹೇಶ್ ಮಾರ್ಕೆಟ್, ವೆಂಕಿ, ಬಾಂಡ್ ರವಿ, ಮಹೇಶ, ಎಲ್. ಫೃಥ್ವಿ, ನಾಗೇಂದ್ರ, ರಘು, ಟೌನ್ ಅಧ್ಯಕ್ಷ ಟಗರು ಶಿವು, ರಾಚಪ್ಪ, ಮಹೇಶ, ಮಾದು, ಬುಲೆಟ್ ಚಂದ್ರು, ಹರೀಶ, ಕಿರಣ, ನಾಗೇಶ, ಪ್ರಸನ್ನ, ಆಟೋ ಸುಬ್ಬು, ಆಟೋಮಣಿ, ಆನಂದ, ಸಂತು, ಬಾನು, ದರ್ಶನ್, ಅರುಣ, ಮೇಗಲಹುಂಡಿ ಮಂಜು, ಮಹೇಶ ಮೊದಲಾದ ಅಭಿಮಾನಿಗಳು ಭಾಗವಹಿಸಿದ್ದರು.
ಕೊಳೇಗಾಲ: 2 ದಿನ ಅಂಗಡಿಗಳು ಬಂದ್
ಕೊಳ್ಳೇಗಾಲ: ತಾಲೂಕಿನಾದ್ಯಂತ ವಿವಿಧ ಪ್ರಗತಿಪರ ಸಂಘಟನೆಗಳಿಂದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನ ಹಿನ್ನೆಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶುಕ್ರವಾರ ಮತ್ತು ಶನಿವಾರ ಎರಡು ದಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಪುನೀತ್ ಅಭಿಮಾನಿಗಳು ಕರೆಕೊಟ್ಟಿದ್ದ ಹಿನ್ನೆಲೆಯಲ್ಲಿ ಶನಿವಾರ ಕೂಡ ಎಲ್ಲಾ ಅಂಗಡಿಗಳನ್ನು ಮುಚ್ಚಿ ಮೃತರಿಗೆ ಗೌರವ ಸಲ್ಲಿಸಿದರು. ಪಟ್ಟಣದ ಸರ್ವಧರ್ಮ ಕಾರು ಚಾಲಕರ ಸಂಘದ ವತಿಯಿಂದ ಶನಿವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಸರ್ವಧರ್ಮ ಕಾರು ಚಾಲಕರ ಸಂಘದ ಅಧ್ಯಕ್ಷ ಕಲೀಲ್ ಪಾಷ, ಉಪಾಧ್ಯಕ್ಷ ಶಿವರಾಜು, ಕಾರ್ಯದರ್ಶಿ ಪ್ರಸನ್ನ, ಖಜಾಂಚಿ ಸಿದ್ದರಾಜು, ಸದಸ್ಯರಾದ ಜೋಗಿ, ಶಾಂತರಾಜು, ಸೋಮಣ್ಣ, ಮನು, ಚೇತನ್, ಪುನೀತ್, ಕೌಸೀರ್, ಸಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.