Advertisement

ಎರಡನೇ ಪತ್ನಿಯ ಮಗನಿಗೆ ಅನುಕಂಪದ ಉದ್ಯೋಗವಿಲ್ಲ

11:29 AM Sep 26, 2017 | |

ಬೆಂಗಳೂರು: ಸವತಿ ಮಗನ “ಉದ್ಯೋಗ ಕಾಳಜಿ’ಗೆ ಬ್ರೇಕ್‌ ಹಾಕಿರುವ ಹೈಕೋರ್ಟ್‌, ಎರಡನೇ ಪತ್ನಿಯ ಮಗನಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಕೊಡಿಸುವಂತೆ ಕೋರಿ ಮೃತ ಸರ್ಕಾರಿ ನೌಕರನ ಮೊದಲ ಪತ್ನಿ ಸಲ್ಲಿಸಿದ್ದ ಮನವಿಯನ್ನು ಸಾರಾಸಗಟಾಗಿ ತಳ್ಳಿಹಾಕಿದೆ.

Advertisement

2009ರಲ್ಲಿ ಸೇವಾ ಅವಧಿ ಇರುವಾಗಲೇ ಮೃತಪಟ್ಟಿದ್ದ ಗಂಡನ ಉದ್ಯೋಗವನ್ನು ತನ್ನ ಸಹೋದರಿ (ಮೃತ ಸರ್ಕಾರಿ ನೌಕರನ ಎರಡನೇ ಪತ್ನಿ)ಯ ಮಗನಿಗೆ ಕೊಡಿಸಲು ಮೊದಲನೇ ಪತ್ನಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದ ಕೆಎಸ್‌ಆರ್‌ಟಿಸಿಯ ನಿರ್ಧಾರ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಏಕಸದಸ್ಯ ಪೀಠ,  ಕೆಎಸ್‌ಆರ್‌ಟಿಸಿ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾಗೊಳಿಸಿದೆ.

ಅನುಕಂಪದ ಆಧಾರದ ಮೇಲೆ ಎರಡನೇ ಪತ್ನಿಯ ಮಗನಿಗೆ ನೌಕರಿ ಕೊಡಲು ನಿರ್ದೇಶಿಸುವಂತೆ ಕೋರಿರುವುದು ಮೃತ ನೌಕರನ ಮೊದಲ ಪತ್ನಿ. ಜತೆಗೆ ಅರ್ಜಿದಾರ ಮಹಿಳೆಯ ಒಬ್ಬ ಮಗ ಈಗಾಗಲೇ ಸರ್ಕಾರಿ ನೌಕರಿಯಲ್ಲಿದ್ದರೂ, ಮತ್ತೂಬ್ಬ (ಎರಡನೇ ಪತ್ನಿ) ಮಗನನ್ನೂ ಸರ್ಕಾರಿ ನೌಕರಿಗೆ ಸೇರಿಸುವ ಪ್ರಯತ್ನಸರಿಯಲ್ಲ. ಸರ್ಕಾರಿ ಸೇವಾ ನಿಯಮಾವಳಿಗಳ ಅನ್ವಯ ಎರಡನೇ ಪತ್ನಿ ಹೊಂದುವುದು, ನಿಯಮಬಾಹಿರವಾಗಿರುವುದರಿಂದ ರಡನೇ ಪತ್ನಿ ಮಕ್ಕಳಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ದೊರೆಯುವುದಿಲ್ಲ ಎಂದು ತೀರ್ಪು ನೀಡಿದೆ.

“ಎರಡನೇ ಪತ್ನಿಯ ಮಗನಿಗೆ ಉದ್ಯೋಗ ಕೊಡಿ ಎಂದು ಮೃತ ನೌಕರನ ಮೊದಲ ಪತ್ನಿಯೇ ಕೋರಿರುವುದು, ಅವರ ಇಡೀ ಕುಟುಂಬ ಅನ್ನೋನ್ಯವಾಗಿದೆ ಎಂಬುದಕ್ಕೆ ಸಾಕ್ಷಿ. ಅಲ್ಲದೆ ತಮ್ಮ ಮನವಿಯನ್ನು ಕೆಎಸ್‌ಆರ್‌ಟಿಸಿ ತಳ್ಳಿಹಾಕಿದ 3 ವರ್ಷಗಳ ನಂತರ ಅರ್ಜಿ ಸಲ್ಲಿಸಿದೆ. ಹೀಗಾಗಿ ಕುಟುಂಬಕ್ಕೆ ಯಾವುದೇ ಆರ್ಥಿಕ ಅಭದ್ರತೆ ಕಾಡುತ್ತಿದೆ ಎಂದು ಅನಿಸುತ್ತಿಲ್ಲ,’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಹಾಗೇ, ಯಾವ ಅಂಶಗಳ ಆಧಾರದ ಮೇಲೆ ಎರಡನೇ ಪತ್ನಿ ಮಗನಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂಬುದನ್ನು ಪ್ರಕರಣದ ಪ್ರತಿವಾದಿಯಾದ ಕೆಎಸ್‌ಆರ್‌ಟಿಸಿ, ಅರ್ಜಿದಾರರಿಗೆ ಮನದಟ್ಟು ಮಾಡಿಕೊಡಬೇಕು ಎಂದು ಸೂಚಿಸಿದೆ.

ಪ್ರಕರಣ ಏನು?: ಕೆಎಸ್‌ಆರ್‌ಟಿಸಿ ಚಾಲಕರಾಗಿದ್ದ ಹಾಸನ ಮೂಲದ ರಮೇಶ್‌ಗೆ (ಹೆಸರು ಬದಲಿಸಲಾಗಿದೆ) ಇಬ್ಬರು ಪತ್ನಿಯರಿದ್ದು, ಇಬ್ಬರು ಪತ್ನಿಯರು ಹಾಗೂ ಮಕ್ಕಳು ಒಂದೇ ಮನೆಯಲ್ಲಿ ವಾಸವಿದ್ದರು. ರಮೇಶ್‌ರ ಮೊದಲ ಪತ್ನಿಯ ಮಗ ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕ ಹುದ್ದೆಯಲ್ಲಿದ್ದಾರೆ. ಈ ನಡುವೆ 2009ರಲ್ಲಿ ರಮೇಶ್‌ ಮೃತಪಟ್ಟಾಗ, ಎರಡನೇ ಪತ್ನಿ ಮಗನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ರಮೇಶ್‌ರ ಮೊದಲ ಪತ್ನಿ, ಕೆಎಸ್‌ಆರ್‌ಟಿಸಿಯನ್ನು ಕೋರಿದ್ದರು.

Advertisement

ರಮೇಶ್‌ ಎರಡನೇ ವಿವಾಹ ಆಗಿರುವುದು ನಿಯಮಬಾಹಿರವಾಗಿದೆ. ಜತೆಗೆ ಎರಡನೇ ಪತ್ನಿಯ ಮಗನಿಗೆ ಅನುಕಂಪದ ಆಧಾರದ ಮೇಲೆ  ಕೆಲಸ ಕೊಡಲು ಸಾಧ್ಯವಿಲ್ಲ ಎಂದು ಕೆಎಸ್ಸಾರ್ಟಿಸಿ ಸ್ಪಷ್ಟಪಡಿಸಿತ್ತು. ಇದನ್ನು ಪ್ರಶ್ನಿಸಿ ಮೊದಲ ಪತ್ನಿ ಸಲ್ಲಿಸಿದ್ದ ಎರಡನೇ ಮನವಿಯನ್ನು ಕೆಎಸ್‌ಆರ್‌ಟಿಸಿ 2011ರಲ್ಲಿ ವಜಾಗೊಳಿಸಿತ್ತು. ಈ ನಿಟ್ಟಿನಲ್ಲಿ ರಮೇಶ್‌ರ ಮೊದಲ ಪತ್ನಿ 2014ರಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದರು.

* ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next