Advertisement

ವಿದ್ಯಾಗಮ ಯೋಜನೆ ಪರಿಪೂರ್ಣ ಮತ್ತು ಸುರಕ್ಷಿತ: ಸುರೇಶ್ ಕುಮಾರ್

06:28 PM Oct 09, 2020 | Mithun PG |

ಬೆಂಗಳೂರು: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದೆ ಎಂಬ ಕುರಿತಾದ ವರದಿಯೊಂದಿಗೆ ಶಾಲಾ ಮಕ್ಕಳಿಗೆ ಸುರಕ್ಷಿತ ಕ್ರಮಗಳೊಂದಿಗೆ ಕಲಿಕೆಯನ್ನು ಮುಂದುವರೆಸುವ ‘ವಿದ್ಯಾಗಮ’ಯೋಜನೆಯ ವೈಫಲ್ಯವೆಂಬಂತೆ ಬಿಂಬಿಸಿರುವುದು ವಿಷಾದನೀಯ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

Advertisement

ಶಾಲೆ ಮುಚ್ಚಿರುವ ಸಮಯದಲ್ಲಿಯೂ ಮಕ್ಕಳ ನಿರಂತರ ಕಲಿಕೆ, ಪ್ರತಿ ಮಗುವೂ ಕಲಿಕಾ ವ್ಯಾಪ್ತಿಯಲ್ಲಿ ಬರುವಂತೆ ಯೋಜನೆ ಶಿಕ್ಷಕರು-ಮಕ್ಕಳ ನಿರಂತರ ಸಂಪರ್ಕ, ಮಕ್ಕಳಲ್ಲಿ ಮಾರ್ಗದರ್ಶಿತ ಸ್ವಯಂ ಕಲಿಕೆ, ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೈರ್ಯದ ವೃದ್ಧಿ, ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಖಾತ್ರಿ, ಶಿಕ್ಷಕರು, ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯವರು, ಸ್ವಯಂ ಸೇವಕರು, ಪೋಷಕರು ಹಾಗೂ ಸಮುದಾಯದ ಎಲ್ಲಾ ಭಾಗೀದಾರ ಸಕ್ರಿಯ ತೊಡಗಿಸುವಿಕೆಯಂತಹ ಸದುದ್ದೇಶಗಳೊಂದಿಗೆ ಆರಂಭವಾಗಿರುವ ವಿದ್ಯಾಗಮ ಕಾರ್ಯಕ್ರಮವನ್ನು ನಿರ್ವಹಿಸುವ ಎಲ್ಲ ಶಿಕ್ಷಕರು ಮಕ್ಕಳನ್ನು ಕಲಿಕಾ ಚಟುವಟಿಕೆಗಳಲ್ಲಿ ಯಾವ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಮಾಹಿತಿ, ತರಬೇತಿಯನ್ನು ಪಡೆದು ಅವರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ವಿವಿಧ ತರಗತಿಗಳ ಒಟ್ಟು 49.34 ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳು ‘ವಿದ್ಯಾಗಮ’ದ ಪ್ರಯೋಜನವನ್ನು ಪಡೆಯುತ್ತಿದ್ದು, 2 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಎಲ್ಲಿಯೂ ವಿದ್ಯಾರ್ಥಿಗಳಿಗೆ ವಿದ್ಯಾಗಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಕಾರಣಕ್ಕಾಗಿ ಕೋವಿಡ್ ಸೋಂಕು ತಗುಲಿರುವುದು ವರದಿಯಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಶೀಘ್ರವೇ ಶಾಲಾರಂಭ ಇಲ್ಲ, ಮಕ್ಕಳ ಆರೋಗ್ಯವೇ ಮುಖ್ಯ: ಸುರೇಶ್ ಕುಮಾರ್

ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಿಗೆ ಒಂದು ತಿಂಗಳ ಹಿಂದೆ ಕೋವಿಡ್ ಸೋಂಕು ತಗುಲಿದ್ದು, ಅವರು ಈಗ ಸೋಂಕಿನಿಂದ ಪೂರ್ಣ ಗುಣಮುಖರಾಗಿ ಆರೋಗ್ಯದಿಂದಿದ್ದಾರೆ. ಈ ಅವಧಿಯಲ್ಲಿ ಶಾಲೆಯ ಯಾವುದೇ ಶಿಕ್ಷಕರಿಗೆ ಯಾವುದೇ ರೀತಿಯ ಸೋಂಕು ತಗುಲಿರುವುದಿಲ್ಲ. ಸೆ. 22ರಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರ್ಯಾಂಡಮ್ ಆಗಿ ಸುಮಾರು 203 ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಿದಾಗ 4 ವಿದ್ಯಾರ್ಥಿಗಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ವಿದ್ಯಾರ್ಥಿಗಳು ಶಾಲಾವರಣದಲ್ಲಿ ಈ ಸೋಂಕು ತಗುಲಿಸಿಕೊಂಡಿರುವುದು ಸಾಧ್ಯವಿಲ್ಲ ಎಂಬ ಅಂಶಗಳನ್ನು ಸ್ಥಳೀಯ ಜಿಲ್ಲಾ ಉಪನಿರ್ದೇಶಕರು ದೃಢಪಡಿಸಿದ್ದಾರೆ. ಹಾಗಾಗಿ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

Advertisement

ನಿಗದಿತ ಕನಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ಸೂಚಿತ ಶಿಕ್ಷಕರ ಮಾಗದರ್ಶನದಡಿ ಎಲ್ಲ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಕಲಿಕೆಯಲ್ಲಿ ಮುಂದುವರೆದಿದ್ದು, ವಿದ್ಯಾಗಮದ ಕಾರಣ ಈ ಸೋಂಕು ತಗಲಿರುತ್ತದೆನ್ನುವುದು, ಶಿಕ್ಷಕರು ವಿದ್ಯಾಗಮದ ಕಾರಣವೇ ಸೋಂಕು ಹೊಂದಿರುವ ರೀತಿಯಲ್ಲಿ ಬಿಂಬಿಸುವುದು ನಾವು ವಿದ್ಯಾರ್ಥಿ ಸಮೂಹಕ್ಕೆ ಎಸಗುವ ಅನ್ಯಾಯವಾಗುತ್ತದೆ. ಈಗಾಗಲೇ ಹೆಚ್ಚುತ್ತಿರುವ ಸಾಮಾಜಿಕ ಪಿಡುಗುಗಳ ನಡುವೆ ವಿದ್ಯಾರ್ಥಿಗಳನ್ನು ಸುರಕ್ಷಿತವಾದ ವಾತಾವರಣದಲ್ಲಿ ಕಲಿಕೆಗೆ ತೊಡಗಿಸಿಕೊಳ್ಳದೇ ಹೋದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಪಚಾರವಾದಂತಾಗುತ್ತದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಸಾವಿರ ಮತಗಳ ಸೋಲು-ಗೆಲುವಿನ ಅಂತರ ಸಾಮಾನ್ಯ; 50 ಮತಗಳ ಸೋಲೂ ಬಿಹಾರ ರಾಜಕೀಯ ಇತಿಹಾಸದಲ್ಲಿದೆ!

ರಾಜ್ಯದ ಯಾವುದೇ ಶಾಲೆಯಲ್ಲಿಯೂ ವಿದ್ಯಾಗಮ ದುರುಪಯೋಗವಾಗುತ್ತಿಲ್ಲ. ಕಲಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು ತರಬೇತಿ ಹೊಂದಿದ ವೃತ್ತಿಪರರಾಗಿದ್ದಾರೆ ಹಾಗೆಯೇ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಸೂಕ್ತ ಅರ್ಹತೆ ಹೊಂದಿದವರಾಗಿದ್ದಾರೆ ಎಂದಿರುವ ಸಚಿವರು, ವಿದ್ಯಾಗಮದಂತಹ ಮಹತ್ವದ ಕಾರ್ಯಕ್ರಮದ ಬಗ್ಗೆ ಅಪಪ್ರಚಾರ ಸಲ್ಲದೆಂದು ಸಚಿವರು ಮನವಿ ಮಾಡಿದ್ದಾರೆ.

ವಿದ್ಯಾಗಮ ಶಾಲಾವರಣದಲ್ಲೇ ನಡೆಸಲು ಅವಕಾಶ ನೀಡಿ:

ರಾಜ್ಯದಲ್ಲಿ ಕೋವಿಡ್ ವೈರಸ್‌ಗೆ ನೂರಕ್ಕು  ಹೆಚ್ಚು ಶಿಕ್ಷಕರು ಬಲಿಯಾಗಿದ್ದಾರೆ. ಆದರೆ, ವಿದ್ಯಾಗಮ ಬಂದ ಮೇಲೆ ಶಿಕ್ಷಕರು ಕೋವಿಡ್ ಗೆ ಬಲಿಯಾಗಿದ್ದಾರೆ ಎನ್ನುವುದು ಸರಿಯಲ್ಲ. ಬೆಂಗಳೂರು ನಗರದಲ್ಲಿ ವಿದ್ಯಾಗಮ ಸರಿಯಾಗಿ ನಡೆಯುತ್ತಿಲ್ಲ. ಬಹುತೇಕ ಶಿಕ್ಷಕರು ಕೋವಿಡ್ ತಡೆ ಸೇವೆಯಲ್ಲಿದ್ದಾರೆ. ವಿದ್ಯಾಗಮ ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ತುಂಬ ಚೆನ್ನಾಗಿ ನಡೆಯುತ್ತಿದೆ. ಅದನ್ನು ಶಾಲಾವರಣದಲ್ಲಿ ನಡೆಸಲು ಅವಕಾಶ ನೀಡಬೇಕು. ಆಗ ಎಲ್ಲ ರೀತಿಯ ನಿಯಮ ಪಾಲನೇ ಸಾಧ್ಯವಿದೆ. ದೇವಸ್ಥಾನ, ಮಸೀದಿ, ಸಭಾಂಗಣ ಅಥವಾ ರಂಗಮಂದಿರಗಳಲ್ಲಿ ನಿಯಮ ಪ್ರಕಾರ ವಿದ್ಯಾಗಮ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಶಾಲಾವರಣಕ್ಕೆ ವಿದ್ಯಾಗಮ ತರಬೇಕು. ಕೋವಿಡ್ ದಿಂದ ಶಿಕ್ಷಕರು ಸಾವನ್ನಪ್ಪಿರುವುದಕ್ಕೆ ವಿದ್ಯಾಗಮ ಕಾರಣ ಎನ್ನುವುದು ಸರಿಯಲ್ಲ. ಶಾಲಾವರಣದಲ್ಲಿ ಇನ್ನಷ್ಟು ವ್ಯವಸ್ಥಿತ ಹಾಗೂ ಅಚ್ಚುಕಟ್ಟಾಗಿ ವಿದ್ಯಾಗಮ ನಡೆಸಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ.ನಾರಾಯಣ ಸ್ವಾಮಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಿದ್ಯಾಗಮ ಹೆಸರಿನಲ್ಲಿ ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ಲೋಕೇಶ್ ತಾಳಿಕಟ್ಟೆ

ನೂರಕ್ಕೂ ಅಧಿಕ ಶಿಕ್ಷಕರು ಕೋವಿಡ್  ಗೆ ಬಲಿ!

ಬೆಳಗಾವಿ ಜಿಲ್ಲೆಯಲ್ಲಿ  58 ಜನ ಶಿಕ್ಷಕರು ಕೋವಿಡ್ ಸೋಂಕಿಗೆ ಬಲಿ, ಗಣಿ ನಾಡು ಬಳ್ಳಾರಿಯಲ್ಲಿ 10, ಬಾಗಲಕೋಟೆಯಲ್ಲಿ 23. ಕೊಪ್ಪಳದಲ್ಲಿ 12, ಹಾವೇರಿಯಲ್ಲಿ 18, ಹಾವೇರಿ ಹಾಗೂ ಶಿವಮೊಗ್ಗದಲ್ಲಿ ತಲಾ 8 ಶಿಕ್ಷಕರು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 17 ಶಿಕ್ಷಕರು ಸಾವು ಎಂಬ ಮಾಹಿತಿ ಇದೆ. 50 ವರ್ಷ ಮೇಲ್ಪಟ್ಟ ಅಥವಾ ತೀವ್ರ ಅನಾರೋಗ್ಯದಿಂದ ಇರುವ ಯಾವ ಶಿಕ್ಷಕರು ಕೋವಿಡ್ ತಡೆ ಸೇವೆಯಲ್ಲಿಲ್ಲ. ವಿದ್ಯಾಗಮಕ್ಕೂ ಇಂತಹ ಅನೇಕ ಶಿಕ್ಷಕರನ್ನು ಬಳಸದೇ ಆಡಳಿತಾತ್ಮಕ ಕಾರ್ಯಕ್ಕೆ ಶಾಲೆಯಲ್ಲೇ ಹೆಚ್ಚು ಇವರ ಸೇವೆ ಪಡೆಯಲಾಗುತ್ತಿದೆ ಎಂದರು.

ಇದನ್ನೂ ಓದಿ: ಜ್ಯುವೆಲ್ಲರಿ ಅಂಗಡಿ ಮುಂಭಾಗ 20 ಗಂಟೆ ಲೇಖಕಿ ಪ್ರತಿಭಟನೆ: ಕೊನೆಗೂ ಕ್ಷಮೆ ಕೇಳಿದ ಮಾಲೀಕ!

 

Advertisement

Udayavani is now on Telegram. Click here to join our channel and stay updated with the latest news.

Next