Advertisement

ಮೋದಿ ಸರ್ಕಾರದ ಅಸ್ತಿತ್ವಕ್ಕೆ ಆಸ್ತಿ ಮಾರಾಟ; ಚರ್ಚೆಗೆ ಬಾರದ ಮೋದಿ; ಖರ್ಗೆ

06:02 PM Oct 04, 2021 | Team Udayavani |

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಸಾರ್ವಜನಿಕ ವಲಯದ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೊರಟಿದೆ ಎಂದು ರಾಜ್ಯಸಭೆ ಪ್ರತಿಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

Advertisement

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಆಡಳಿತದ ಸಂದರ್ಭದಲ್ಲಿ ದೇಶದ ಏಳ್ಗೆಗಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಉದ್ಯಮಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಇದೇ ಆಸ್ತಿಗಳನ್ನು ಕಾರ್ಪೊರೇಟ್‌ ಕಂಪನಿಗಳಿಗೆ ಮಾರಾಟ ಮಾಡಿ ಮೋದಿ ಸರ್ಕಾರ ಈಗ ಆರು ಲಕ್ಷ ಕೋಟಿ ರೂ. ವರಮಾನ ಗಳಿಸಲು ಮುಂದಾಗಿದೆ. ಇಷ್ಟು ಕೋಟಿ ಮೌಲ್ಯಗಳನ್ನು ಮೋದಿ ತಮ್ಮ ಏಳು ವರ್ಷದಲ್ಲಿ ಅಧಿಕಾರದಲ್ಲಿ ಗಳಿಕೆ ಮಾಡಿದ್ದಾ ಅಥವಾ ಬೇರೆ
ದೇಶದಿಂದ ಈ ಆಸ್ತಿಗಳು ಬಂದ್ವಾ ಎಂದು ಪ್ರಶ್ನಿಸಿದರು.

ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಮೋದಿ ಮೂರು ಲಕ್ಷ ಕೋಟಿ ರೂ. ಮೌಲ್ಯದ ಸರ್ಕಾರಿ ಆಸ್ತಿಗಳನ್ನು ಕಾರ್ಪೊರೇಟ್‌ ಕಂಪನಿಗಳ ಕೈಗೆ ಇಟ್ಟಿದೆ. ಇದರಲ್ಲಿ ಕೆಲವನ್ನು ಮಾರಾಟ ಮಾಡಿದರೆ, ಮತ್ತೆ ಕೆಲವನ್ನು 99 ವರ್ಷಗಳ ಅವಧಿವರೆಗೂ ಲೀಜ್‌ಗೆ ಕೊಟ್ಟಿದ್ದಾರೆ. ಇದೀಗ ಮತ್ತೆ ಸಾರ್ವಜನಿಕ ವಲಯದ ಆಸ್ತಿಗಳನ್ನು ಮಾರಲು ಯೋಜನೆ ರೂಪಿಸುವುದರ ಮೂಲಕ ಆರು ಲಕ್ಷ ಕೋಟಿ ರೂ. ವರಮಾನ ಮಾಡಲು ಹೊರಟಿದೆ. ಕಾಂಗ್ರೆಸ್‌ ಮಾಡಿಟ್ಟಿದ್ದ ಆಸ್ತಿಗಳನ್ನೇ ಮಾರಲು ಮುಂದಾಗಿ ಮತ್ತೆ ಕಾಂಗ್ರೆಸ್‌ ದೇಶಕ್ಕೆ ಏನು ಮಾಡಿದೆ ಎಂದು ಬಿಜೆಪಿಯವರು ಪ್ರಶ್ನಿಸುತ್ತಾರೆ. ಆದರೆ, ಕಾಂಗ್ರೆಸ್‌ ಮಾಡಿದ್ದ ಆಸ್ತಿಗಳನ್ನೇ ಮೋದಿ ಮಾರಾಟ ಮಾಡುತ್ತಿದ್ದಾರೆ ಎಂಬುವುದನ್ನು ಜನತೆ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಮಾರಾಟ ಮಾಡಿದರೆ ಏನು ಸಿಗುತ್ತೆ?: ದೇಶದಲ್ಲಿ ಒಟ್ಟಾರೆ 366 ಸರ್ಕಾರಿ ಸ್ವಾಮ್ಯದ ಉದ್ಯಮಗಳು ಇವೆ. ಇವುಗಳಿಂದ ಪ್ರತಿ ವರ್ಷವೂ 1.50 ಲಕ್ಷ ಕೋಟಿ ರೂ. ಆದಾಯ ಸರ್ಕಾರಕ್ಕೆ ಬರುತ್ತದೆ. ಇವುಗಳಲ್ಲಿ 172 ಸಣ್ಣ-ಪುಟ್ಟ ವಲಯಗಳು ಇದ್ದು, ಲಾಭ-ನಷ್ಟ ಲೆಕ್ಕಾಚಾರ ಹಾಕಿದರೂ 45 ಸಾವಿರ ಕೋಟಿ ರೂ. ನಷ್ಟ ಉಂಟಾಗುತ್ತದೆ. ಆದರೂ, ಕನಿಷ್ಟ ಒಂದು ಲಕ್ಷ ಕೋಟಿ ರೂ. ಸರ್ಕಾರಕ್ಕೆ ಈ ಉದ್ಯಮಗಳ ಮೂಲಕ ಆದಾಯ ಬಂದೇ ಬರುತ್ತದೆ.

ಅಲ್ಲದೇ, ಜನರಿಗೆ ಸರ್ಕಾರಿ ನೌಕರಿಗಳು ಸಿಗುತ್ತವೆ. ಪಿಂಚಣಿ, ಇಎಸ್‌ಐ, ಪಿಎಫ್‌ ಹೀಗೆ ಪ್ರತ್ಯಕ್ಷ-ಪರೋಕ್ಷವಾಗಿ ನೌಕರರಿಗೆ ಲಾಭಗಳು ಇರುತ್ತಿದ್ದವು. ಆದರೆ, ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಶ್ರೀಮಂತರಿಗೆ ಮಾರಾಟ ಮಾಡಿದರೆ ಜನಸಮಾನ್ಯರಿಗೆ ಏನು ಸಿಗುತ್ತದೆ ಎಂದು ಪ್ರಶ್ನೆ ಮಾಡಿದರು.

Advertisement

ಹೊರೆ ಯಾರ ಮೇಲೆ ಬೀಳುತ್ತೆ?: ಮೋದಿ ಸರ್ಕಾರ ರಸ್ತೆಗಳು, ರೈಲ್ವೆ ಹಳಿಗಳು, ರೈಲುಗಳು, ವಿಮಾನ ನಿಲ್ದಾಣಗಳು, ವಿದ್ಯುತ್‌ ಸಂಪರ್ಕ ತಂತಿಗಳನ್ನು ಕಾರ್ಪೊರೇಟ್‌ ಕಂಪನಿಗಳಿಗೆ ಲೀಸ್‌ಗೆ ಕೊಡಲು ಹೊರಟಿದೆ. ಲಕ್ಷಾಂತರ ಕೋಟಿ ರೂ. ಲೀಸ್‌ ಪಡೆದ ಕಾರ್ಪೊರೇಟ್‌ ಕಂಪನಿಯವರು ತಮಗೆ ಲಾಭವಾಗುವು ದನ್ನು ನೋಡಬೇಕೆಲ್ಲವೇ? ಆಗ ಹೆದ್ದಾರಿಗಳ ಟೋಲ್‌ ದರ, ರೈಲ್ವೆಗಳ ಪ್ರಯಾಣ ದರದಿಂದಲೇ ಕಾರ್ಪೊರೇಟ್‌ ಕಂಪನಿಯವರು ಹಣ ಮಾಡಬೇಕೆಲ್ಲವೇ? ಟೋಲ್‌ ದರ ಅಥವಾ ರೈಲ್ವೆ ಪ್ರಯಾಣ ಏರಿಕೆ ಮಾಡಿದರೆ ಅದರ ಹೊರೆ ಯಾರ ಮೇಲೆ ಬೀಳುತ್ತದೆ ಎಂಬುವುದನ್ನು ದೇಶದ ಜನತೆ ಮತ್ತು ಯುವಕರು ಆರ್ಥ
ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.

ಜನರಿಂದ ಹಣ ಸುಲಿಗೆ: ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 130 ಯುಎಸ್‌ ಡಾಲರ್‌ ಇತ್ತು. ಆದರೂ, ನಾವು ದೇಶದ ಜನತೆಗೆ ಅದರ ಹೊರೆ ಹೊರಿಸದೆ 65 ರೂ.ಗೂ ಹೆಚ್ಚಾಗದಂತೆ ಪೆಟ್ರೋಲ್‌ ಮಾರಾಟ ಮಾಡಿದ್ದೆವು. ಆದರೆ, ಈಗ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 50 ಡಾಲರ್‌ ಕ್ಕಿಂತ ಕಡಿಮೆ ಇದೆ. ಆದರೂ, ಬಿಜೆಪಿ ಸರ್ಕಾರ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು 100 ರೂ.ಗೆ ಮಾರಾಟ ಮಾಡುತ್ತಿದೆ. ಕಚ್ಚಾ ತೈಲದ ಬೆಲೆ ಹೆಚ್ಚಾಗಿದ್ದರೂ ಜನರ ಮೇಲೆ ಹೆಚ್ಚು ಹೊರೆಯಾಗದಂತೆ ಕಾಂಗ್ರೆಸ್‌ ಸಬ್ಸಿಡಿ ನೀಡಿತ್ತು. ಮೋದಿ ಸರ್ಕಾರದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ, ಸಬ್ಸಿಡಿಯನ್ನು
ನೀಡದೆ ಜನರಿಂದ ಹಣ ಸುಲಿಗೆ ಮಾಡುವ ಕೆಲಸದಲ್ಲಿ ತೊಡಗಿದೆ ಎಂದರು.

ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಶಾಸಕಿ ಖನೀಜ್‌ ಫಾತಿಮಾ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಶಾಸಕ ಬಿ.ಆರ್‌.ಪಾಟೀಲ, ಮಾಜಿ ಎಂಎಲ್‌ಸಿಗಳಾದ ಅಲ್ಲಮಪ್ರಭು ಪಾಟೀಲ, ತಿಪ್ಪಣಪ್ಪ ಕಮಕನೂರ, ಮಾಜಿ ಮೇಯರ್‌ ಶರಣಕುಮಾರ
ಮೋದಿ ಇದ್ದರು.

ಬಿಜೆಪಿ ದೇಣಿಗೆ ಶೇ.200 ಹೆಚ್ಚಳ
ದೇಶದ ಸಾರ್ವಜನಿಕ ವಲಯದ ಆಸ್ತಿಗಳನ್ನು ಮಾರಾಟ ಮಾಡಿ ಶ್ರೀಮಂತರಿಗೆ ಮೋದಿ ಸರ್ಕಾರ ಅನುಕೂಲ ಮಾಡಿಕೊಡುತ್ತಿದೆ. ಇದರ ಪರಿಣಾಮವೇ ಬಿಜೆಪಿಗೆ ಬರುತ್ತಿದ್ದ ಹಣದ ದೇಣಿಗೆ ಶೇ.200ರಷ್ಟು ಹೆಚ್ಚಳವಾಗಿದೆ. 26,700 ಕಿಮೀ ರಸ್ತೆಯನ್ನು 1.6 ಲಕ್ಷ ಕೋಟಿ ರೂ.ಗೆ, ರೈಲೈ ವಲಯದ 400 ನಿಲ್ದಾಣಗಳ ನಿರ್ವಹಣೆ ಹಾಗೂ 150 ಖಾಸಗಿ ರೈಲುಗಳು ಸಂಚಾರಕ್ಕೆ 1.50 ಲಕ್ಷ ಕೋಟಿ ರೂ.ಗೆ ಮೋದಿ ಸರ್ಕಾರ ಸುದೀರ್ಘ‌ ಅವಧಿಗೆ ನಿರ್ವಹಿಸಲು ಗುತ್ತಿಗೆ ನೀಡಲು ಹೊರಟಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಕೊಟ್ಟರೆ ಅವರೇ ಭರವಸೆ ನೀಡಿದ್ದ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಹೇಗೆ ಮಾಡುತ್ತಾರೆ? ಮೋದಿ ಅವರಿಗೆ ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೆ ಎಂದು ಖರ್ಗೆ ಪ್ರಶ್ನಿಸಿದರು.

ಚರ್ಚೆಗೆ ಬಾರದ ಮೋದಿ
ಸಂಸತ್ತಿನಲ್ಲಿ ಪ್ರಧಾನಿ ಮೋದಿ ಚರ್ಚೆಯಲ್ಲಿ ಪಾಲ್ಗೊಳ್ಳುವುದೇ ಇಲ್ಲ. ಪ್ರಧಾನಿಯಾದವರು ಲೋಕಸಭೆ, ರಾಜ್ಯಸಭೆ ಕಲಾಪಗಳಿಗೆ ಬರಬೇಕು. ಆದರೆ, ಮೋದಿ ತಮಗೂ ರಾಜ್ಯಸಭೆಗೂ ಸಂಬಂಧವಿಲ್ಲದಂತೆ ಇದ್ದಾರೆ. ಲೋಕಸಭೆಗೆ ಬಂದರೂ ಕೆಲವೇ ಹೊತ್ತಲ್ಲೇ ಹೊರ ಹೋಗುತ್ತಾರೆ. ರೈತ ವಿರೋಧಿ  ಕೃಷಿ ಕಾಯ್ದೆಗಳು, ಜನತೆಯ ಸ್ವಾತಂತ್ರ್ಯಹರಣ ಮಾಡುವ ಪೆಗಾಸಸ್‌ ಕುರಿತು ಚರ್ಚಿಸಲು ಮುಂದಾದರೆ ಮೋದಿ ಸದನದಲ್ಲೇ ಇರುವುದಿಲ್ಲ. ಇಂತಹ ಪೆಗಾಸಸ್‌ ಮೂಲಕ ಮಾತನಾಡುವ ಹಕ್ಕನ್ನೇ ಮೊಟಕುಗೊಳಿಸುವ ಯತ್ನ ನಡೆಯುತ್ತಿದೆ. ನಾನು ಮಾತನಾಡಬೇಕಾದರೆ ನಾಲಿಗೆ ಇರಬೇಕು. ಆದರೆ, ಆ
ನಾಲಿಗೆಯನ್ನೇ ಕತ್ತರಿಸಿದರೆ ಹೇಗೆ ಮಾತನಾಡಬೇಕು. ಯಾರಿಗಾಗಿ ಮಾತನಾಡಬೇಕು. ಆದ್ದರಿಂದಲೇ ನಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೆವು. ಆದರೆ, ಮೋದಿ ಚರ್ಚೆಗೆ ಬರಲಿಲ್ಲ. ಹೀಗಾದರೆ ಹಲವು ವಿಚಾರಗಳ ಬಗ್ಗೆ ಯಾರೊಂದಿಗೆ ಚರ್ಚೆ ನಡೆಸಬೇಕೆಂದು ಖರ್ಗೆ ವಾಗ್ಧಾಳಿ ನಡೆಸಿದರು.

ಗೃಹ ಖಾತೆ, ಸಹಕಾರ ಇಲಾಖೆಗೆ ಏನು ಸಂಬಂಧ?
ಕೃಷಿ ಇಲಾಖೆಗೆ ಸಂಬಂಧಪಟ್ಟ ಸಹಕಾರ ವಲಯವನ್ನು ಪ್ರತ್ಯೇಕವಾದ ಇಲಾಖೆ ಮಾಡಿದ್ದಾರೆ. ಆದರೆ, ಆ ಖಾತೆಯನ್ನು ಅಮಿತ್‌ ಶಾ ಗೃಹ ಖಾತೆಯೊಂದಿಗೆ ಇಟ್ಟುಕೊಂಡಿದ್ದಾರೆ. ಗೃಹ ಖಾತೆಗೂ ಸಹಕಾರ ಖಾತೆಗೂ ಏನು ಸಂಬಂಧ. ಈಗ ಸಹಕಾರ ಕ್ಷೇತ್ರದ ಮೇಲೆ  ಅಮಿತ್‌ ಶಾ ಕಣ್ಣು ಹಾಕಿದ್ದಾರೆ. ಈ ಮೂಲಕ ಸಕ್ಕರೆ ಕಾರ್ಖಾನೆಗಳು, ಸಹಕಾರಿ ಬ್ಯಾಂಕ್‌ಗಳು, ಸಹಕಾರ ಸಂಘಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡು ಹೆದರಿಸಿ, ಬೆದರಿಸಲು ಮುಂದಾಗಿದ್ದಾರೆ. ಈಗಾಗಲೇ ಸಿಬಿಐ, ಇಡಿ ಮುಂತಾದ ಸಂಸ್ಥೆಗಳನ್ನು ಅಮಿತ್‌ ಶಾ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ. ಮೋದಿ ಮತ್ತು ಅಮಿತ್‌ ಶಾ ಇಡೀ ದೇಶದ ಆಡಳಿತವನ್ನು
ತಾವಿಬ್ಬರೇ ನಡೆಸಬೇಕೆಂಬ ಹುನ್ನಾರ ನಡೆಸಿದ್ದಾರೆ ಎಂದು ಖರ್ಗೆ ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next