Advertisement

ತ್ಯಾಗಮಯಿ “ಪದ್ಮಾವತಿ’ಮನೋರಂಜನೆ  ವಸ್ತುವಲ್ಲ

01:59 AM Nov 21, 2017 | Team Udayavani |

ಬಾಲಿವುಡ್‌ ಸಿನೆಮಾ “ಪದ್ಮಾವತಿ’ ಪರ-ವಿರೋಧದ ಅಲೆಯನ್ನು ಹುಟ್ಟುಹಾಕಿದೆ. ಇತಿಹಾಸ, ರಜಪೂತ ಸಮುದಾಯದ ಭಾವನೆಗಳು ಮತ್ತು ಕಲಾತ್ಮಕ ಸ್ವಾತಂತ್ರ್ಯದ ಸುತ್ತಲೂ ಹರಡಿಕೊಂಡಿದ್ದ ಈ ಚರ್ಚೆಗೆ ಈಗ ರಾಜಕೀಯವೂ ಸೇರಿಕೊಂಡಿದೆ.  ಪದ್ಮಾವತಿ ಸಿನೆಮಾವನ್ನು ಕರ್ಣಿ ಸೇನಾ ಅಷ್ಟೇ ಅಲ್ಲ, ಅಖೀಲ ಭಾರತ ಕ್ಷತ್ರಿಯ ಮಹಾಸಭಾ ಕೂಡ ವಿರೋಧಿಸುತ್ತಿದೆ. ಈ ನಿಟ್ಟಿನಲ್ಲಿ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ ಮತ್ತು ಕಾಂಗ್ರೆಸ್‌ ನಾಯಕ ಸಂಜಯ್‌ ಸಿನ್ಹ “ಟಿಒಐ’ಗೆ ನೀಡಿದ ಸಂದರ್ಶನದಲ್ಲಿ ತಾವು ಏಕೆ ಈ ಸಿನೆಮಾವನ್ನು ವಿರೋಧಿಸುತ್ತಿದ್ದೇವೆ ಎನ್ನುವುದಕ್ಕೆ ಕಾರಣ ನೀಡಿದ್ದಾರೆ.

Advertisement

ಸಂಜಯ್‌ ಲೀಲಾ ಭನ್ಸಾಲಿ ಅವರ ಪದ್ಮಾವತಿ ಸಿನೆಮಾದ ವಿರುದ್ಧ ರಜಪೂತ ಸಮುದಾಯದ ಪ್ರಮುಖ ತಕರಾರೇನು?
ಎಲ್ಲಕ್ಕಿಂತ ಆಘಾತಕಾರಿ ಸಂಗತಿಯೆಂದರೆ ಮಹಾರಾಣಿ ಪದ್ಮಾವತಿ ರಾಣಾ ಉದಯಪುರದ ಕುಟುಂಬಕ್ಕೆ ಸೇರಿದವರು. ಸಿನೆಮಾ ತಂಡ ಕಡೇಪಕ್ಷ ಉದಯಪುರದ ಕುಟುಂಬವನ್ನಾದರೂ ಸಂಪರ್ಕಿಸಿ ಸತ್ಯಾಂಶವನ್ನು ಖಾತ್ರಿಪಡಿಸಿಕೊಳ್ಳಬಹುದಿತ್ತಲ್ಲವೇ? ಆದರೆ ಹಾಗೆ ಮಾಡಲಿಲ್ಲ. ಎರಡನೆಯದಾಗಿ ಇವರು ಇದನ್ನು ಸೋಕಾಲ್ಡ್‌ “ಐತಿಹಾಸಿಕ ಸಿನೆಮಾ’ ಎನ್ನುತ್ತಿದ್ದಾರೆ. ಆದರೆ ವಾಸ್ತವದಲ್ಲಿ ನಿರ್ದೇಶಕರು ಇತಿಹಾಸವನ್ನು ತಿರುಚಿದ್ದಾರೆ. ಈಗಿನ ದೃಷ್ಟಿಕೋನದಲ್ಲಿ ಆ ಕಾಲವನ್ನು ಅವರು ಕಲ್ಪಿಸಿಕೊಂಡಿದ್ದಾರೆೆ. ಇದು ಸರಿಯಲ್ಲ. ಇತಿಹಾಸವೆಂದರೆ ಇತಿಹಾಸವೇ. ಅದು ಸತ್ಯದ ಮೇಲೆ ನೆಲೆನಿಂತಿರಬೇಕು. ಸಮಯ ಮತ್ತು ತಲೆಮಾರುಗಳಿಗೆ ತಕ್ಕಂತೆ ಅದು ಬದಲಾಗುತ್ತಾ ಹೋಗುವಂಥದ್ದಲ್ಲ. ಮಹಾರಾಣಿ ಪದ್ಮಾವತಿ ಖ್ಯಾತಳಾದದ್ದು ತನ್ನ ಜೀವತ್ಯಾಗದಿಂದ. ಆದರೆ ಈ ತ್ಯಾಗವನ್ನು ಆಕೆಯೊಬ್ಬಳೇ ಮಾಡಲಿಲ್ಲ, ಆಕೆಯ ಜತೆಗೆ 13,000 ರಜಪೂತ ಮಹಿಳೆಯರೂ ಇದ್ದರು.

ಆದರೆ ಇತಿಹಾಸದಲ್ಲಿ ಪದ್ಮಾವತಿ ಎನ್ನುವ ರಾಣಿಯೇ ಇರಲಿಲ್ಲ. ಆಕೆ ಮಲಿಕ್‌ ಮುಹಮ್ಮದ್‌ ಜಯಸಿಯ ಕಲ್ಪನೆಯ ಪಾತ್ರವಷ್ಟೆ ಎಂದು ಬಹುತೇಕ ಇತಿಹಾಸಕಾರರು ಹೇಳುತ್ತಾರಲ್ಲ?
ಇಂಥ ಇತಿಹಾಸಕಾರರಿಗೆ ಇತಿಹಾಸವೇ ಗೊತ್ತಿಲ್ಲ. ಈಗಲೂ ಅಷ್ಟೆ, ಪ್ರತಿ ವರ್ಷ ರಜಪೂತ ಸಮುದಾಯವು ಮಹಾರಾಣಿ ಪದ್ಮಾವತಿ ಜೌಹರ್‌(ಅಗ್ನಿಪ್ರವೇಶ) ಮಾಡಿಕೊಂಡ ದಿನವನ್ನು ಆಚರಿಸುತ್ತದೆ. ಖೀಲ್ಜಿ, ಕೊನೆಗೆ ಒಮ್ಮೆಯಾದರೂ ಪದ್ಮಾವತಿಯ ಚಹರೆಯನ್ನು ನೋಡಬೇಕು ಎಂದು ಬಯಸಿದ್ದ. ತನ್ನ ಮುಖವನ್ನೊಮ್ಮೆ ಕನ್ನಡಿಯಲ್ಲಿ ತೋರಿಸಿದರೆ ಇದರಿಂದ ಉದಯಪುರ ಮತ್ತು ಅಲ್ಲಿ ನಡೆಯಬಹುದಾಗಿದ್ದು ಹತ್ಯಾಕಾಂಡ ನಿಲ್ಲಬಹುದು ಎಂಬ ಕಾರಣಕ್ಕೆ ಪದ್ಮಾವತಿ ಇದಕ್ಕೆ ಒಪ್ಪಿಕೊಂಡಳು. ಆದರೆ ಆಕೆ ಪಲ್ಲಕ್ಕಿಗಳಲ್ಲಿ ತನ್ನ ಪರಿವಾರದ ಬದಲಾಗಿ 13,000 ರಜಪೂತ ಯೋಧರನ್ನು ಕಳುಹಿಸಿಕೊಟ್ಟಳು! ಈ ಧೀರ ಯೋಧರು ಖೀಲ್ಜಿ ಸೇನೆಯ ವಿರುದ್ಧ ಹೋರಾಡುತ್ತಾ ವೀರಮರಣವಪ್ಪಿದರು. ಆ ಸಮಯದಲ್ಲೇ ಮಹಾರಾಣಿ ಪದ್ಮಾವತಿ ಇತರ ರಜಪೂತ ಮಹಿಳೆಯರ ಜತೆ ಸೇರಿ ಅಗ್ನಿಪ್ರವೇಶ ಮಾಡಿದಳು. ಮಹಾರಾಣಿಗೆ ಇನ್ನೊಬ್ಬರೆದುರು ಕಾಣಿಸಿಕೊಳ್ಳುವುದಕ್ಕೂ ಇಷ್ಟವಿರಲಿಲ್ಲ. ಹೀಗಿರುವಾಗ ಸಿನೆಮಾ ನಿರ್ದೇಶಕರು ಅದ್ಹೇಗೆ ತಾನೆ ಪದ್ಮಾವತಿ ಆಧುನಿಕ ಉಡುಗೆ ಧರಿಸಿ ಡ್ಯಾನ್ಸ್‌ ಮಾಡುವುದನ್ನು ತೋರಿಸುತ್ತಾರೆ? ಖೀಲ್ಜಿ ಪದ್ಮಾವತಿಯ ಬಗ್ಗೆ ಏನು ಕನಸು ಕಾಣುತ್ತಿದ್ದ ಎನ್ನುವುದನ್ನು ಈ ಸಿನೆಮಾದಲ್ಲಿ ತೋರಿಸಲು ಪ್ರಯತ್ನಿಸಿದ್ದಾರಂತೆೆ. ಅದೇಕೆ ಮಹಾರಾಣಿ ಪದ್ಮಾವತಿ ಈಗಿನ ಮನೋರಂಜನೆಗೆ ವಸ್ತುವಾಗಬೇಕು? ಅತಿದೊಡ್ಡ ತ್ಯಾಗ ಮಾಡಿದ ಮಹಾರಾಣಿಯ ಗೌರವವಕ್ಕೆ ಧಕ್ಕೆ ತಂದಂತಾಗುವುದಿಲ್ಲವೇ? ಈ ಸಿನೆಮಾ ರಜಪೂತಾನಾ ಸಂಸ್ಕೃತಿ, ನಮ್ಮ ಪರಂಪರೆ, ಭಾವನೆಗಳಿಗೆ ವಿರುದ್ಧವಾಗಿದೆ. ಎಲ್ಲ ಪ್ರಮುಖ ರಜಪೂತ ಕುಟುಂಬಗಳು ಮತ್ತು ರಾಜಪರಿವಾರವು ಈ ಸಿನೆಮಾ ಬಿಡುಗಡೆಯನ್ನು ತಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇಳಿಕೊಂಡಿವೆ.

ಇನ್ನೂ ಸಿನೆಮಾ ಬಿಡುಗಡೆ ಆಗಿಲ್ಲ, ಹೀಗಿದ್ದಾಗ ಇದು ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದೆ ಅಂತ ಅಷ್ಟೊಂದು ಖಾತ್ರಿಯಿಂದ ಹೇಗೆ ಹೇಳಬಲ್ಲಿರಿ?
ನಮಗೆ ಈ ಬಗ್ಗೆ ನಂಬಲರ್ಹ ಮಾಹಿತಿ ಸಿಕ್ಕಿದೆ. ಇದಷ್ಟೇ ಅಲ್ಲದೆ ಸಿನೆಮಾದ ಟ್ರೇಲರ್‌ ಮತ್ತು ಮಾಧ್ಯಮಗಳ ವರದಿಗಳು “ಇತಿಹಾಸವನ್ನು ತಿರುಚಲಾಗಿದೆ’ ಎನ್ನುವುದನ್ನು ಸೂಚಿಸುತ್ತಿವೆ. ನಾನೊಂದು ಸರಳ ಪ್ರಶ್ನೆ ಕೇಳುತ್ತೇನೆ-ಒಂದು ಪರಿವಾರದ ಮೇಲೆ ನೀವು ಸಿನೆಮಾ ನಿರ್ದೇಶಿಸುತ್ತೀರಿ ಎಂದಾದಾಗ ಆ ಪರಿವಾರದವರಿಂದ “ನೋ ಆಬೆjಕ್ಷನ್‌ ಸರ್ಟಿಫಿಕೆಟ್‌'(ಎನ್‌ಒಸಿ) ಪಡೆಯುವ ಅಗತ್ಯವಿರುತ್ತದೆ. ಮುಂದೆ ವಿವಾದಗಳು ಎದುರಾಗಬಾರದು ಎಂದು ಎನ್‌ಒಸಿ ಪಡೆಯಲಾಗುತ್ತದೆ. ಈ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ಅದೇಕೆ ಸಿನೆಮಾ ನಿರ್ದೇಶಕರು ಉದಯಪುರದ ಮಹಾರಾಣ ಅವರನ್ನು ಸಂಪರ್ಕಿಸಲಿಲ್ಲ? ಸತ್ಯವನ್ನು ವಿಕೃತಗೊಳಿಸುವುದರಿಂದ ಸಾವಿರಾರು ವರ್ಷಗಳ ರಜಪೂತ ಇತಿಹಾಸ‌ಕ್ಕೆ ಅಪಚಾರ ಎಸಗಿದಂತಾಗುತ್ತದೆ. 

ಆದರೆ ಈ ರೀತಿಯ ಬೆದರಿಕೆಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾದುದಲ್ಲವೇ? 
ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಯಾವುದೋ ಒಂದು ಪರಿವಾರದ ಇತಿಹಾಸವನ್ನು ತಪ್ಪುತಪ್ಪಾಗಿ ತೋರಿಸುವುದು ಎಂದಲ್ಲ. ನೀವು ಸತ್ಯವನ್ನು ತೋರಿಸುತ್ತೀರಿ ಎಂದರೆ ಅದಕ್ಕೆ ಯಾವ ತಕರಾರೂ ಇಲ್ಲ. ಈ ಫಿಲಂಮೇಕರ್‌ಗಳು ಮಹಾರಾಣಾರನ್ನು ಭೇಟಿಯಾಗಬೇಕು. ಪೂರ್ತಿ ಕಥೆ ಏನಿದೆಯೋ ಹೇಳಬೇಕು. ಒಂದು ವೇಳೆ ಮಹಾರಾಣಾ ಯಾವುದಾದರೂ ಸಂಗತಿಗೆ ಅಸಮ್ಮತಿ ವ್ಯಕ್ತಪಡಿಸಿದರೆಂದರೆ ಅದನ್ನು ಸಿನೆಮಾದಿಂದ ತೆಗೆದುಹಾಕಬೇಕು.

Advertisement

ಈ ಸಿನೆಮಾವನ್ನು ವಿರೋಧಿಸುವುದಕ್ಕಾಗಿ ಹಿಂಸೆಯ ಮಾರ್ಗವನ್ನು ಹಿಡಿದಿರುವ ರಜಪೂತ ಕರ್ಣಿ ಸೇನೆ ಮತ್ತು ಇತರೆ ಸಂಘಟನೆಗಳ ಬಗ್ಗೆ ನಿಮಗೇನನ್ನಿಸುತ್ತದೆ? 
ನಾವು ಗಾಂಧಿವಾದಿಗಳು. ನಾವು ನಮ್ಮ ಸಂವಿಧಾನವನ್ನು ಗೌರವಿಸುತ್ತೇವೆ. ಅದಕ್ಕೆ ಕುಂದುಂಟಾಗದಂತೆ ನಡೆದುಕೊಳ್ಳುತ್ತೇವೆ. ನಾನು ಬೇರೆ ಸಂಘಟನೆಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆದರೆ ಒಟ್ಟಲ್ಲಿ ಅವರ ಭಾವನೆಗಳಿಗೆ ಎಲ್ಲೋ ಧಕ್ಕೆಯಾಗಿದೆ ಎನ್ನುವುದು ಇದರಿಂದ ಅರ್ಥವಾಗುತ್ತದೆ. 

ಬಿಜೆಪಿ ಕೂಡ ಈ ಸಿನೆಮಾ ನಿಷೇಧವಾಗಬೇಕೆಂದು ಆಗ್ರಹಿಸಿದೆ. ಇದರಲ್ಲಿ ಇತಿಹಾಸಕ್ಕಿಂತ ರಾಜಕೀಯವೇ ಅಧಿಕವಾಗಿದೆಯಾ?
ಇದರಲ್ಲಿ ರಾಜಕೀಯವೇನೂ ಇಲ್ಲ. ಬಿಜೆಪಿಯಲ್ಲೂ ರಜಪೂತ ನಾಯಕರಿದ್ದಾರೆ. ಆಕ್ಷೇಪಣೆ ಎತ್ತುವ ಎಲ್ಲಾ ಹಕ್ಕೂ ಅವರಿಗಿದೆ. ಇದು ವೈಭವೋಪೇತ ರಜಪೂತ ಇತಿಹಾಸಕ್ಕೆ ಸಂಬಂಧಿಸಿದ ವಿಚಾರ. ಈ ಇತಿಹಾಸ ಗಟ್ಟಿಯಾಗಿಯೇ ಇರಬೇಕು. ಆಕ್ಷೇಪಿಸುವ ಹಕ್ಕು ಎಲ್ಲರಿಗೂ ಇದೆ. 

ಒಂದು ವೇಳೆ ಸಿಬಿಎಫ್ಸಿ ಈ ಸಿನೆಮಾಕ್ಕೆ “ಸರಿಯಾದ ಕಟ್‌’ಗಳೊಂದಿಗೆ ಅನುಮತಿ ನೀಡಿದರೆ ಏನು ಮಾಡುತ್ತೀರಿ? ಆಗ ಸಿನೆಮಾ ಬಿಡುಗಡೆಗೆ ಒಪ್ಪಿಗೆ ನೀಡುತ್ತೀರಾ?
ಸಿನೆಮಾ ಬಿಡುಗಡೇನಾ? ಇಷ್ಟೆಲ್ಲ ಆದ ನಂತರವೂ? ಸಿನೆಮಾ ರಿಲೀಸ್‌ ಆಗುತ್ತೆ ಅಂತ ಏಕೆ ಊಹಿಸಿಕೊಳ್ತೀರಿ? ಒಂದು ವೇಳೆ ಸೆನ್ಸಾರ್‌ ಬೋರ್ಡ್‌ಗೆ ಪ್ರಜ್ಞೆ ಇದೆಯೆಂದಾದರೆ, ಅದು ಖಂಡಿತ ಈ ಸಿನೆಮಾ ಬಿಡುಗಡೆಯನ್ನು ತಡೆಯುತ್ತದೆ. ಪ್ರಧಾನಿ ಮೋದಿಯವರು ಈ ದೇಶದ ಇತಿಹಾಸದ ರಕ್ಷಕರು. ಈ ಸಿನೆಮಾ ಪ್ರದರ್ಶನವನ್ನು ತಡೆಹಿಡಿಯಲು ಸಾಕಷ್ಟು ಕಾರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next