Advertisement

ಕುಶಲವೇ ಕ್ಷೇಮವೇ: ಪಿ.ಜಿ.ಯಲ್ಲಿ ಉಳಿದ ಮಗಳೂ, ಊರಲ್ಲಿ ಇರುವ ಅಮ್ಮನೂ…

02:47 PM Apr 22, 2020 | mahesh |

“ಇನ್ನೊಂದಿನ ಮುಂಚೆ ರಜೆ ಸಿಕ್ಕಿದ್ರೆ ನೀನೂ ಮನೆಗೆ ಬಂದು ಬಿದ್ದಾದಿತ್ತು. ಇದೆಲ್ಲ ಮುಗಿಯೋಕೆ ಇನ್ನೂ ಎಷ್ಟು ಸಮಯ ಬೇಕೋ ಏನೋ…’ ದಿನಾ ರಾತ್ರಿ, ಅಮ್ಮ ಈ ಮಾತು ಹೇಳದೆ ಫೋನ್‌ ಇಡುವುದೇ ಇಲ್ಲ. ಲಾಕ್‌ಡೌನ್‌ ಘೋಷಣೆ ಆಗುವ ಹಿಂದಿನ ದಿನದ ತನಕ, ಆಫಿಸ್‌ ಇದ್ದ ಕಾರಣದಿಂದ ನನಗೆ ಎಲ್ಲರಂತೆ ಊರು ಸೇರಲಾಗಲಿಲ್ಲ. ನಾಳೆ ಇಂದ ವರ್ಕ್‌ ಫ್ರಮ್‌ ಹೋಂ ಮಾಡಿ ಅಂತ ಆಫಿಸ್‌ನವರು ಹೇಳುವುದಕ್ಕೂ, ನಾಳೆಯಿಂದ ಮನೆಯಿಂದ ಹೊರಗೆ ಬರಲೇಬೇಡಿ ಅಂತ ಮೋದಿ ಹೇಳುವುದಕ್ಕೂ ಸರೀ ಆಯ್ತು.  ಹಾಗಾಗಿ, ನಾನು ಬೆಂಗಳೂರಿನಲ್ಲಿಯೇ, ಅದೂ ಪಿಜಿಯಲ್ಲಿಯೇ ಉಳಿಯುವಂತಾಯ್ತು.

Advertisement

ಲಾಕ್‌ಡೌನ್‌ಗೂ ಒಂದು ವಾರದ ಮುಂಚೆಯೇ ಐಟಿ ಕಂಪನಿಯಲ್ಲಿದ್ದ ಗೆಳತಿಯರೆಲ್ಲಾ ವರ್ಕ್‌ ಫ್ರಮ್‌ ಹೋಂ ತಗೊಂಡು ಊರಿಗೆ ಹೋಗಿಬಿಟ್ಟಿದ್ದರು. ಹೊರಡುವ ಮುನ್ನ, “ನೀನೂ ರಜೆ ಕೇಳಿ ಹೊರಟು ಬಿಡು. ಮನೆಯಿಂದಲೇ ಕೆಲಸ ಮಾಡು. ಹೊರಗೆಲ್ಲಾ ಓಡಾಡೋದು ಸೇಫ್ ಅಲ್ಲ…’ ಅಂತ  ಹೇಳಿ ಹೋಗಿದ್ದರು. ಪರಿಸ್ಥಿತಿ ಇಷ್ಟೊಂದು ಸೀರಿಯಸ್‌ ಆಗಿದೆಅಂತ ನನಗಾಗ ಅರಿವಿಗೆ ಬಂದಿರಲಿಲ್ಲ. ಈಗ ನೋಡಿದರೆ, ಹೊರಗೆ ಹೋಗೋದು ಸೇಫ್ ಅಷ್ಟೇ ಅಲ್ಲ, ಲೀಗಲ್‌ ಕೂಡ  ಅಲ್ಲ!

ಛೇ, ಅನಾಯಾಸವಾಗಿ ಸಿಕ್ಕಿದ ರಜೆಯಲ್ಲಿ ಮನೆಗೆ ಹೋಗಲು ಆಗುತ್ತಿಲ್ಲವಲ್ಲ ಅಂತ ಬೇಸರ. ಎಂಟನೇ ತರಗತಿಗೆ ಹಾಸ್ಟೆಲ್‌ ಸೇರಿದವಳಿಗೆ, ತಿಂಗಳುಗಟ್ಟಲೆ ರಜೆ ಅಂತ ಸಿಕ್ಕೇ ಇರಲಿಲ್ಲ. ಎಸ್ಸೆಸ್ಸೆಲ್ಸಿ ಟ್ಯೂಷನ್‌, ಪಿಯುಸಿ ಕ್ಲಾಸ್‌, ಕಾಂಪಿಟಿಟಿವ್‌ ಎಕ್ಸಾಮ್, ಡಿಗ್ರಿ, ಕೆಲಸ ಅಂತೆಲ್ಲಾ ಜೀವನ ಓಡುತ್ತಲೇ ಇತ್ತು. ಕುರಿ ಮಂದೆಯಲ್ಲಿ ಕುರಿಯಾಗಿ ನಾನೂ ಓಡುತ್ತಲೇ ಇದ್ದೆ. ಆರಾಮಾಗಿ ಹದಿನೈದಿಪ್ಪತ್ತು ದಿನ ಮನೆಯಲ್ಲಿ ಇದ್ದ ನೆನಪೇ ಇಲ್ಲ. ಈಗ ರಜೆ ಸಿಕ್ಕರೂ ಕೋಣೆಯೊಳಗೆ ಬಂಧಿಯಾಗಿ ಇರಬೇಕಾಯ್ತಲ್ಲ ಅನ್ನೋ ಸಂಕಟ ನನ್ನದಾದರೆ, ಊಟ- ತಿಂಡಿಗೆ ಮಗಳು ಏನು ಮಾಡ್ತಾಳ್ಳೋ ಅನ್ನೋ ಸಂಕಟ ಅಮ್ಮನಿಗೆ. “ಸೊಪ್ಪು, ತರಕಾರಿ ಎಲ್ಲ ಸರಿಯಾಗಿ ಸಿಕ್ಕುತ್ತಿಲ್ಲ. ಬೆಳಗ್ಗೆ ಏನು ತಿಂಡಿ ಮಾಡುತ್ತೇವೋ ಅದನ್ನೇ ಮಧ್ಯಾಹ್ನದ ಊಟಕ್ಕೂ ಎತ್ತಿಟ್ಟುಕೊಳ್ಳಿ. ಇಂಥ ಸಮಯದಲ್ಲಿ ನಿಮಗೆಲ್ಲ ಉಳಿಯೋಕೆ ಜಾಗ ಕೊಟ್ಟಿರುವುದೇ ಹೆಚ್ಚು. ಊಟ, ತಿಂಡಿ ಬಗ್ಗೆ ನಮ್ಮಿಂದ ಹೆಚ್ಚೇನೂ ಕೇಳಬೇಡಿ’ ಅಂತ ಪಿಜಿ ಮಾಲೀಕರು ಹೇಳಿಬಿಟ್ಟಿದ್ದಾರೆ. ಮೊದಲಾಗಿದ್ದರೆ, “ನಾನು ಹೋಟೆಲ್‌ ಅಲ್ಲೇ ತಿಂದ್ಕೋತೀನಿ ಬಿಡ್ರೀ’ ಅಂತ ಮುಖ ತಿರುಗಿಸಿ ಬರುತ್ತಿದ್ದೆನೇನೋ. ಆದರೀಗ ಹೋಟೆಲ್‌ಗ‌ಳೇ ಇಲ್ಲವಲ್ಲ. ಸ್ವಿಗ್ಗಿ, ಝೊಮ್ಯಾಟೋ ಸರ್ವಿಸ್‌ ಇದ್ದರೂ, ವೈರಸ್‌ನಿಂದಾಗಿ ಅವರ ಸಹಾಯ ಪಡೆಯಲೂ ಭಯ. ಪರೀಕ್ಷಿತ ರಾಜನನ್ನು ಕೊಲ್ಲಲು ಬಂದ ಹಾವು, ಹಣ್ಣಿನೊಳಗೆ ಅಡಗಿಕೊಂಡ ಕತೆ ಗೊತ್ತಲ್ಲ? ಹಾಗೆಯೇ, ಪಾರ್ಸೆಲ್‌ ಫ‌ುಡ್‌ನ‌ ನೆಪದಲ್ಲಿ ಕಾಣದ ವೈರಸ್‌ ದೇಹ ಹೊಕ್ಕುಬಿಟ್ಟರೆ? ಒಟ್ಟಿನಲ್ಲಿ, ಅರ್ಧಂಬರ್ಧ ಹಸಿವಿನಲ್ಲಿ ಬದುಕುವ ಪರಿಸ್ಥಿತಿ. ಬೆಳಗ್ಗೆ ಕೊಟ್ಟದ್ದನ್ನೇ ಮಧ್ಯಾಹ್ನವೂ ತಿನ್ನುತ್ತಾ, ಸಂಜೆಯಾಗು ತ್ತಿದ್ದಂತೆ ಪಾನಿಪುರಿ, ಮಸಾಲಾಪುರಿ, ಬೋಂಡಾ, ಗೋಬಿ ಅಂತೆಲ್ಲ ನೆನಪಿಸಿಕೊಳ್ಳುತ್ತಾ, ಮನೆಗೆ ಹೋಗಿದ್ದರೆ ಅಮ್ಮನ ಕೈಯಲ್ಲಿ ಏನೇನೆಲ್ಲ ಮಾಡಿಸಿಕೊಂಡು ತಿನ್ನಬಹುದಿತ್ತು
ಅಂತ ಕನಸು ಕಾಣುತ್ತಾ, ಕಾಲ ದೂಡುತ್ತಿದ್ದೇನೆ.  ಇದನ್ನೆಲ್ಲಾ ಅಮ್ಮನ ಹತ್ತಿರ ಹೇಳಿಕೊಳ್ಳಲಾದೀತೇ? ದಿನಾ ಫೋನಿನಲ್ಲಿ, ರೋಗ ನಿರೋಧಕ ಶಕ್ತಿ ಹೆಚ್ಚಿಸೋಕೆ ಏನೇನು ತಿನ್ನಬೇಕು ಅಂತ ಹೇಳುತ್ತಾ, ಅರಿಶಿನ, ಶುಂಠಿ ಇದೆಯಾ? ಪಿಜಿ ಅಲ್ಲಿ ಹಾಲು ಕೊಡ್ತಾರೆ ತಾನೇ…?- ಅಂತೆಲ್ಲಾ ಕಾಳಜಿ ಮಾಡುವ ಅಮ್ಮನಿಗೆ, ಇಲ್ಲಿ ಊಟವೇ ಸರಿಯಾಗಿ ಸಿಗ್ತಿಲ್ಲ ಅಂತ ಹೇಳ್ಳೋಕೆ ಮನಸ್ಸಾಗುವುದಿಲ್ಲ.

“ಇನ್ನೊಂದಿನ ಮುಂಚೆ ರಜೆ ಸಿಕ್ಕಿದ್ರೆ ನೀನೂ ಮನೆಗೆ ಬಂದು ಬಿಡ್ಬೋದಿತ್ತು….’ ಅಂತ ಆಕೆ ನಿಟ್ಟುಸಿರು ಬಿಡುವಾಗ, “ಅಮ್ಮಾ, ನಾನಿಲ್ಲಿ ಆರಾಮಾಗಿದ್ದೇನೆ. ಇನ್ನೊಂದು ವಾರ ಅಷ್ಟೇ. ಆಮೇಲೆ ಬಸ್ಸು- ಕಾರು ಎಲ್ಲ ಓಡಾಡ್ತವಂತೆ. ಆಗ ಮನೆಗೆ ಬಂದುಬಿಡ್ತೀನಿ. ನೀವ್ಯಾಕೆ ಸುಮ್ಮನೆ ಚಿಂತೆ ಮಾಡ್ತೀರಿ?’… ಅಂತ ಸಮಾಧಾನಿಸುತ್ತೇನೆ.  “ಇನ್ನೊಂದು ವಾರಕ್ಕೆ ಎಲ್ಲವೂ ಮೊದಲಿನಂತೆ
ಆಗುತ್ತಾ?’ ಎಂದು ನನ್ನೊಳಗೇ ಪ್ರಶ್ನೆ ಎದ್ದಾಗ ನಿಟ್ಟುಸಿರೇ ಉತ್ತರವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next