Advertisement

ಹಳೆ ಜಯದ ಪುನರಾವರ್ತನೆ; ಸಿದ್ದರಾಮಯ್ಯ ನಿಶ್ಚಿಂತೆ,ಯಡಿಯೂರಪ್ಪಗೆ ಚಿಂತೆ

10:31 AM Apr 14, 2017 | |

ಹಲವಾರು ರಗಳೆಗಳಲ್ಲಿ ಸಿಲುಕಿದ್ದ ಸಿದ್ದರಾಮಯ್ಯ ಸರಕಾರ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ತೀರಾ ಅಗತ್ಯವಾಗಿದ್ದ ನೈತಿಕ ಸ್ಥೈರ್ಯವನ್ನು ಈ ಫ‌ಲಿತಾಂಶ ನೀಡಲಿದೆ. ಇದೇವೇಳೆ ಬಿಜೆಪಿಯೊಳಗೆ ಯಡಿಯೂರಪ್ಪ ಬಗೆಗಿನ ಅತೃಪ್ತಿ ಉಲ್ಬಣಿಸುವ ಸಾಧ್ಯತೆಯೂ ಇದೆ.

Advertisement

ಎಂಟು ರಾಜ್ಯಗಳ 10 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫ‌ಲಿತಾಂಶ ದೇಶದಲ್ಲಿ ಬಿಜೆಪಿಯೇ ಬಲಿಷ್ಠ ಪಕ್ಷ ಎನ್ನುವುದನ್ನು ಮತ್ತೂಮ್ಮೆ ಸಾಬೀತುಪಡಿಸಿದೆ. 10 ಕ್ಷೇತ್ರಗಳ ಪೈಕಿ ಐದನ್ನು ಗೆಲ್ಲುವ ಮೂಲಕ ಅರ್ಧಕ್ಕರ್ಧ ಸ್ಥಾನಗಳನ್ನು ಬಿಜೆಪಿ ಬುಟ್ಟಿಗೆ ಹಾಕಿಕೊಂಡಿದೆ. ಎಂಟು ರಾಜ್ಯಗಳಲ್ಲಿ ಎರಡೂ ಪಕ್ಷಗಳ ಪಾಲಿಗೆ ಅತಿ ಮಹತ್ವದ್ದಾಗಿದ್ದ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ವಿಜಯದ ನಗೆಬೀರಿ ಅಷ್ಟರಮಟ್ಟಿಗೆ ಬಿಜೆಪಿಯ ಗೆಲುವಿನ ಓಟವನ್ನು ತಡೆಯುವಲ್ಲಿ ಸಫ‌ಲವಾಗಿದೆ. 

ಈ ಎರಡು ಕ್ಷೇತ್ರಗಳ ಉಪಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಹೇಗೆ ವೈಯಕ್ತಿಕವಾಗಿ ಪ್ರತಿಷ್ಠೆಯ ಪಣವಾಗಿತ್ತೋ ಅದೇ ರೀತಿ ಅವರ ಪಕ್ಷಗಳಿಗೂ ಮುಂದಿನ ರಾಜಕೀಯ ರಣತಂತ್ರ ರೂಪಿಸಲು ದಿಕ್ಸೂಚಿಯೂ ಆಗಿತ್ತು. ಎರಡೂ ಕ್ಷೇತ್ರಗಳಲ್ಲಿ ಜಯ ಗಳಿಸಿರುವುದರಿಂದ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ ಎಂದು ಕಾಂಗ್ರೆಸ್‌ ನಿಶ್ಚಿಂತವಾಗಿರಬಹುದು. ಅಂತೆಯೇ ಬಿಜೆಪಿ ಮೋದಿ ಅಲೆಯನ್ನು ಮಾತ್ರ ನಂಬುವ ಬದಲು ಹೊಸ ರಣತಂತ್ರ ರೂಪಿಸುವ ಅಗತ್ಯವಿದೆ. 

ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ಸೆಮಿಫೈನಲ್‌ ಎಂದು ಪರಿಗಣಿತವಾಗಿದ್ದ ಈ ಉಪ ಚುನಾವಣೆಯನ್ನು ಗೆಲ್ಲಬೇಕಾದ ಒತ್ತಡ ಎರಡೂ ಪಕ್ಷಗಳಿಗಿತ್ತು. ಇದಕ್ಕಾಗಿ ಉಭಯ ಪಕ್ಷಗಳು ನಾನಾ ಕಸರತ್ತುಗಳನ್ನು ಮಾಡಿದ್ದವು. ಬಿಜೆಪಿ ಜಾತಿ ಲೆಕ್ಕಾಚಾರ ಹಾಕಿ ಎಸ್‌.ಎಂ. ಕೃಷ್ಣ ಅವರನ್ನು ಕರೆತಂದು ಹೊಸ ದಾಳ ಉರುಳಿಸಿತ್ತು. ಆದರೆ ನಿರ್ದಿಷ್ಟವಾಗಿ ಹಳೆ ಮೈಸೂರು ಭಾಗದಲ್ಲಿ ಕೃಷ್ಣ ಹಿಂದಿನ ಪ್ರಭಾವ ಉಳಿಸಿಕೊಂಡಿಲ್ಲ ಎನ್ನುವುದು ಈ ಫ‌ಲಿತಾಂಶದಿಂದ ಸ್ಪಷ್ಟವಾಗಿದೆ. ಅದೇ ರೀತಿ ಲಿಂಗಾಯತರೂ ಯಡಿಯೂರಪ್ಪನವರನ್ನು ಪೂರ್ತಿಯಾಗಿ ತಮ್ಮ ನಾಯಕರೆಂದು ಒಪ್ಪಿಕೊಂಡಿಲ್ಲ ಎನ್ನುವುದು ಅರಿ ವಾಗುತ್ತದೆ. ಹಲವಾರು ರಗಳೆಗಳಲ್ಲಿ ಸಿಲುಕಿ ಹೆಸರು ಕೆಡಿಸಿಕೊಂಡಿದ್ದ ಸಿದ್ದರಾಮಯ್ಯ ಸರಕಾರ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ತೀರಾ ಅಗತ್ಯವಾಗಿದ್ದ ನೈತಿಕ ಸ್ಥೈರ್ಯವನ್ನು ಈ ಫ‌ಲಿತಾಂಶ ನೀಡಲಿದೆ. ದೇಶದೆಲ್ಲೆಡೆ ಸೋಲುತ್ತಿರುವ ಪಕ್ಷಕ್ಕೆ ಈಗ ಭದ್ರ ನೆಲೆ ಕರ್ನಾಟಕದಲ್ಲಿ ಮಾತ್ರ. ಉಪ ಚುನಾವಣೆಯಲ್ಲಿ ಸೋತಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್‌ ಭವಿಷ್ಯದ ಕುರಿತು ಚಿಂತಿಸಬೇಕಾಗುತ್ತಿತ್ತು. ಈಗ ಪಕ್ಷದಲ್ಲಿ ಸಿದ್ದರಾಮಯ್ಯನವರ ಹಿಡಿತ ಇನ್ನಷ್ಟು ಹೆಚ್ಚಾಗಿದೆ. 

ಮುಂದಿನ ಅಧ್ಯಕ್ಷರ ನೇಮಕಾತಿಯಲ್ಲಿ ಇದರ ಪರಿಣಾಮವಾಗಬಹುದು. ತಾನು ಅಪೇಕ್ಷಿಸಿದವರನ್ನು ಅಧ್ಯಕ್ಷ ಗಾದಿಗೇರಿಸುವ ಅವಕಾಶ ಈಗವರಿಗೆ ಸಿಕ್ಕಿದೆ. ಇನ್ನು ಅವರನ್ನು ಟೀಕಿಸುತ್ತಿದ್ದ ಪಕ್ಷದ ಹಿರಿಯರ ಬಾಯಿಗೂ ಬೀಗ ಬೀಳಬಹುದು. ಬೇರೆ ಪಕ್ಷಗಳಿಗೆ ಜಿಗಿಯಲು ಸಿದ್ಧತೆ ಮಾಡಿಕೊಂಡವರು ಯೋಚಿಸುವಂತೆ ಮಾಡಿದ ಫ‌ಲಿತಾಂಶವಿದು. ಹಾಗೆಂದು ಈ ಗೆಲುವಿನಿಂದ ಕಾಂಗ್ರೆಸ್‌ ಮೈಮರೆಯುವಂತಿಲ್ಲ. ಜೆಡಿಎಸ್‌ ಅಭ್ಯರ್ಥಿಗಳನ್ನು ಇಳಿಸದ ಕಾರಣ ಅದರ ಒಂದಷ್ಟು ಮತಗಳು ಕಾಂಗ್ರೆಸ್‌ನತ್ತ ವಾಲಿದ್ದು  ಸುಳ್ಳಲ್ಲ.
  
ಸೋಲಿನಿಂದ ಬಿಜೆಪಿ ಕಲಿಯಬೇಕಾದ ಪಾಠ ಬಹಳವಿದೆ. ಮುಂದಿನ ಚುನಾವಣೆಯಲ್ಲಿ ಜನರು ಅಧಿಕಾರವನ್ನು ಚಿನ್ನದ ತಟ್ಟೆಯಲ್ಲಿಟ್ಟು ನೀಡುತ್ತಾರೆ ಎಂಬ ಭ್ರಮೆಯಿಂದ ಬಿಜೆಪಿ ಹೊರ ಬರಬೇಕು. ಸೋಲು ಯಡಿಯೂರಪ್ಪನವರಿಗಾದ ಹಿನ್ನಡೆ ಎನ್ನುವುದರಲ್ಲಿ ಅನುಮಾನವಿಲ್ಲ. ಅವರ ಕಾರ್ಯಶೈಲಿಯ ಬಗ್ಗೆ ಪಕ್ಷದೊಳಗಿನ ಅತೃಪ್ತಿ ಉಲ್ಬಣಿಸುವ ಸಾಧ್ಯತೆಯಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಅತೃಪ್ತರನ್ನು ಕರೆತರುವ ಬದಲಾಗಿ ಪಕ್ಷದ ನಿಷ್ಠಾವಂತರಿಗೆ ಸೂಕ್ತಸ್ಥಾನಮಾನ ನೀಡಿ ಮುಂದೆ ತರುವ ಕೆಲಸ ಮಾಡುವುದು ಬುದ್ಧಿವಂತಿಕೆಯ ಲಕ್ಷಣ. 

Advertisement

ಹಾಗೆಂದು ಈ ಸೋಲಿನಿಂದ ಬಿಜೆಪಿ ತೀರಾ ನಿರಾಶೆ ಹೊಂದುವ ಅಗತ್ಯವಿಲ್ಲ. ಏಕೆಂದರೆ ಎರಡೂ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹಿಂದೆ ಅಸ್ತಿತ್ವವೇ ಇರಲಿಲ್ಲ. 2013ರ ಚುನಾವಣೆಯಲ್ಲಿ ಪಕ್ಷ ನಂಜನಗೂಡಿನಲ್ಲಿ ತೃತೀಯ ಸ್ಥಾನದಲ್ಲೂ ಗುಂಡ್ಲುಪೇಟೆಯಲ್ಲಿ ನಾಲ್ಕನೇ ಸ್ಥಾನದಲ್ಲೂ ಇತ್ತು. ಈ ಫ‌ಲಿತಾಂಶ ಹಾಗೂ ಹಿಂದಿನ ಚುನಾವಣೆಗಳ ಫ‌ಲಿತಾಂಶವನ್ನು ಅವಲೋಕಿಸಿದರೆ ಎರಡೂ ಕಡೆಗಳಲ್ಲೂ ಬಿಜೆಪಿಯ ಮತಗಳಿಕೆ ಪ್ರಮಾಣ ಹೆಚ್ಚಳವಾಗಿದೆ. ಇದಕ್ಕೆ ಕಾರಣಗಳು ಹಲವಿರಬಹುದು, ಆದರೆ ಮತ್ತೂಮ್ಮೆ ಚುನಾವಣೆ ಎದುರಿಸಲು ಒಂದು ವರ್ಷವಷ್ಟೇ ಉಳಿದಿರುವಾಗ ಈಗ ಗಳಿಸಿದ ಮತಗಳ ಪ್ರಮಾಣವೂ ಮುಖ್ಯವಾಗುತ್ತದೆ. ಇದು ಅನಿವಾರ್ಯವಾಗಿ ಬಂದೊದಗಿದ ಉಪಚುನಾವಣೆ. ಗೆದ್ದವರಿಗೆ ಅಧಿಕಾರ ಅನುಭವಿಸಲು ಇರುವುದು ಒಂದೇ ವರ್ಷ. ಸಾಮಾನ್ಯವಾಗಿ ಹಾರ ತುರಾಯಿ ಸಮ್ಮಾನದಲ್ಲೇ ವರ್ಷ ಕಳೆದು ಹೋಗುತ್ತದೆ. ಇಷ್ಟು ಚಿಕ್ಕ ಚುನಾವಣೆ ಎದುರಿಸಲು ಬಿಜೆಪಿ ಮತ್ತು ಕಾಂಗ್ರೆಸ್‌ ಇಷ್ಟು ರಂಪಾಟ ಮಾಡುವ ಅಗತ್ಯವಿತ್ತೇ ಎನ್ನುವುದು ಜನಸಾಮಾನ್ಯರನ್ನು ಕಾಡುತ್ತಿರುವ ಪ್ರಶ್ನೆ.

Advertisement

Udayavani is now on Telegram. Click here to join our channel and stay updated with the latest news.

Next