Advertisement

ಮಳೆಗಾಲ ಆರಂಭವಾದರೂ ತುಂಬಿಲ್ಲ ಕೆರೆಕಟ್ಟೆಗಳು

05:39 PM Sep 22, 2021 | Team Udayavani |

ಮಳೆಗಾಲದಲ್ಲೇ ಸುಡುಬಿಸಿಲ ಧಗೆ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಸಕಾಲದಲ್ಲಿ ಮಳೆಯಾದರೂ ಕೆಲ ಕೆರೆಕಟ್ಟೆಗಳು ತುಂಬಿರುವುದು ಬಿಟ್ಟರೆ, ನಿರೀಕ್ಷೆಯಂತೆ ಕೆರೆಕಟ್ಟೆಗಳು ತುಂಬಿಲ್ಲ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ಒತ್ತುವರಿ ಸಮೀಕ್ಷೆ ನಡೆದಿದೆ. ಕೆಲವು ಕೆರೆ ಕಟ್ಟೆಗಳ ತೆರವು ಕಾರ್ಯ ನಡೆದಿಲ್ಲ. ಆದರೆ, ಉಳಿದ ಕೆರೆಗಳ ಒತ್ತುವರಿ ತೆರವು ಯಾವಾಗ?

Advertisement

ತುಮಕೂರು: ಅರಣ್ಯ ಒತ್ತುವರಿ, ಗೋಮಾಳ ಒತ್ತುವರಿ, ಸರ್ಕಾರಿ ಭೂಮಿ ಒತ್ತುವರಿ, ರಸ್ತೆ ಒತ್ತುವರಿ, ಕೆರೆ ಒತ್ತುವರಿ …..ಹೀಗೆ ಒತ್ತುವರಿ ಪಿಡುಗು ಇಂದು ನಿನ್ನೆಯದಲ್ಲ. ಜನಸಂಖ್ಯೆ, ನಗರ-ಪಟ್ಟಣ ಪ್ರದೇಶಗಳು ಬೆಳೆದಂತೆ ಒತ್ತುವರಿ ಪ್ರಕರಣಗಳು ವರ್ಷಂದಿಂದ ವರ್ಷಕ್ಕೆ ಹೆಚ್ಚುತ್ತಿವೆ.

ಒತ್ತುವರಿ ತೆರವಿಗೆ ಸರ್ಕಾರ ಸಮೀಕ್ಷೆ, ತೆರವು ಕಾರ್ಯಚರಣೆ, ದಂಡ, ಅಕ್ರಮ ಸಕ್ರಮ ಹೀಗೆ ಹಲವು ಕ್ರಮ ಕೈಗೊಂಡರೂ ಪ್ರಭಾವಿ ರಾಜಕಾರಣಿಗಳ ಹಿತಾಸಕ್ತಿ, ಅಧಿಕಾರಿಗಳ ಶಾಮೀಲಿನಿಂದ ಸಂಪೂರ್ಣ ನಿಯಂತ್ರಣ ಅಸಾಧ್ಯವಾಗಿದೆ. ತುಮಕೂರು ಜಿಲ್ಲೆಯ ಕೆರೆಗಳನ್ನೇ ನಿದರ್ಶನವಾಗಿ ತೆಗೆದುಕೊಳ್ಳುವುದಾದರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಜಿಲ್ಲೆಯ ನೀರಾವರಿ ಕೆರೆಗಳು 371, ಇಂಗು ಕೆರೆಗಳು 45 ಸೇರು ಒಟ್ಟು 416 ಕೆರೆಗಳ ಪೈಕಿ ಹೇಮಾವತಿ ಯೋಜನೆಗೆ ಹಸ್ತಾಂತರಿಸಿದ 138 ಕೆರೆ ಹೊರತುಪಡಿಸಿ, 372 ಕೆರೆಗಳಲ್ಲಿ 225 ಕೆರೆಗಳ ಸರ್ವೆ ಕಾರ್ಯ ನಡೆದಿದೆ. 147 ಕೆರೆಗಳ ಸರ್ವೆ ಕಾರ್ಯ ಬಾಕಿ ಇದೆ. ಸರ್ವೆಯಾದ ಕೆರೆಗಳಲ್ಲಿ 208 ಕೆರೆಗಳು ಜಿಲ್ಲೆಯಲ್ಲಿ ಒತ್ತುವರಿಯಾಗಿರುವುದು ದೃಢಪಟ್ಟಿದೆ.

908.28 ಹೆಕ್ಟೇರ್‌ ಒತ್ತುವರಿ: ಸುಪ್ರೀಂಕೋರ್ಟ್‌ ಆದೇಶ, ಲೋಕ ಅದಾಲತ್‌ ಸೂಚನೆ ಮೇರೆಗೆ ಸಣ್ಣ ನೀರಾವರಿ ಇಲಾಖೆ ಕೆರೆಗಳ ಒತ್ತುವರಿ ತೆರವಿಗೆ ಮುಂದಾಗಿ, ತನ್ನ ವ್ಯಾಪ್ತಿಯ 372 ಕೆರೆಗಳ ಪೈಕಿ 225 ಕೆರೆಗಳಲ್ಲಿ ಹಂತ- ಹಂತವಾಗಿ ಸರ್ವೆ ಕಾರ್ಯ ನಡೆಸಿದೆ. ಒಟ್ಟು 908.28 ಹೆಕ್ಟೇರ್‌ ಒತ್ತುವರಿಯಾಗಿರುವುದು ಪತ್ತೆಯಾಗಿದೆ.

ಒತ್ತುವರಿಯಲ್ಲಿ ತುಮಕೂರು ಮೊದಲ ಸ್ಥಾನ: ಕೆರೆಗಳ ಒತ್ತುವರಿ ಅವಲೋಕಿಸಿದರೆ ಜಿಲ್ಲಾ ಕೇಂದ್ರವಾದ ತುಮಕೂರು ತಾಲೂಕಿನಲ್ಲೇ ಹೆಚ್ಚು. ಅಂದರೆ 45 ಕೆರೆಗಳಲ್ಲಿ 172.48 ಹೆಕ್ಟೇರ್‌ನಷ್ಟು ಒತ್ತುವರಿಯಾಗಿದೆ. ಕುಣಿಗಲ್‌ನ 24 ಕೆರೆಗಳಿಂದ 56.47 ಹೆಕ್ಟೇರ್‌, ಕೊರಟಗೆರೆಯ 17 ಕೆರೆ ಗಳಲ್ಲಿ 45.36 ಹೆಕ್ಟೇರ್‌, ಮಧುಗಿರಿಯ 18 ಕೆರೆಗಳಿಂದ 114.38 ಹೆಕ್ಟೇರ್‌, ಪಾವಗಡದ 7 ಕೆರೆಗಳಲ್ಲಿ 20.94 ಹೆಕ್ಟೇರ್‌, ತಿಪಟೂರಿನ 24 ಕೆರೆ ಗಳಿಂದ 73.30 ಹೆಕ್ಟೇರ್‌, ಚಿಕ್ಕನಾಯಕನಹಳ್ಳಿಯ 16 ಕೆರೆಗಳಿಂದ 95.52 ಹೆಕ್ಟೇರ್‌. ಶಿರಾದ 27 ಕೆರೆಗಳಿಂದ 124.02 ಹೆಕ್ಟೇರ್‌, ಗುಬ್ಬಿಯ 29 ಕೆರೆಗಳಿಂದ 152.28 ಹೆಕ್ಟೇರ್‌ ಹಾಗೂ ತುರುವೇಕೆರೆಯ 2 ಕೆರೆಗಳಲ್ಲಿ 28.42 ಹೆಕ್ಟೇರ್‌ನಷ್ಟು ಜಲಾನಯನ ಪ್ರದೇಶ ಒತ್ತುವರಿಯಾ ಗಿರು ವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

Advertisement

ಇದನ್ನೂ ಓದಿ:ಕಾರವಾರ:  ಪ್ರವಾಸೋದ್ಯಮ, ಜಲಸಾಹಸ ಕ್ರೀಡೆಗೆ ಸರ್ಕಾರದ ಅನುಮತಿ

ಒತ್ತುವರಿ ತೆರವಿಗೆ ಕೋಟಿ ಖರ್ಚು:225 ಕೆರೆಗಳ ಪೈಕಿ 224 ಕೆರೆಯ ಸರ್ವೆ ಕಾರ್ಯ ಪೂರ್ಣ ಗೊಂಡಿದ್ದು, ಕೊರಟಗೆರೆಯ ಒಂದು ಕೆರೆ ಬಾಕಿಯಿದೆ. ಇಲಾಖೆ ಎಂಜಿನಿಯರ್‌ ಗಳು ಕೆರೆಗಳ ವ್ಯಾಪ್ತಿಯನ್ನು ಮೂಲ ನಕಾಶೆಯೆಂತೆ ಅಳತೆ ಮಾಡಿ, ಒತ್ತುವರಿ ಗುರುತಿಸಿದ್ದು, ಒತ್ತುವರಿ ಯಾದ 883.17 ಹೆಕ್ಟೇರ್‌ಗಳ ಪೈಕಿ ಒಟ್ಟು 193 ಕೆರೆಗಳಿಂದ 838.38 ಹೆಕ್ಟೇರ್‌ನಷ್ಟು ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ತೆರವಿಗೆ 1 ಕೋಟಿ ರೂ. ವೆಚ್ಚ: ಪ್ರತಿ ಕೆರೆಗೆ ಸುಮಾರು 45 ಸಾವಿರದಂತೆ ಸಣ್ಣ ನೀರಾವರಿ ಇಲಾಖೆ ಪೂರ್ಣಗೊಳಿಸಿದ 193 ಕೆರೆಗಳ ಒತ್ತುವರಿ ತೆರವಿಗೆ ಈವರೆಗೆ 86,85,000 ರೂ.ಖರ್ಚಾಗಿದೆ. ಇನ್ನೂ ತೆರವು ಪೂರ್ಣ ಮುಗಿಯದ ಕಾರಣ ತೆರವಿಗಾಗಿ ಸರ್ಕಾರದ ವೆಚ್ಚವೇ ಒಂದು ಕೋಟಿ ತಗುಲಿದರೂ ಅಚ್ಚರಿಪಡಬೇಕಿಲ್ಲ.

ತುಮಕೂರು ತಾಲೂಕಿನ 41 ಕೆರೆಗಳ 162.21 ಹೆಕ್ಟೇರ್‌, ಕುಣಿಗಲ್‌ನ 24 ಕೆರೆಗಳ 56.47 ಹೆಕ್ಟೇರ್‌, ಕೊರಟಗೆರೆಯ 12 ಕೆರೆಗಳ 38.09 ಹೆಕ್ಟೇರ್‌, ಮಧುಗಿರಿಯ 18 ಕೆರೆಗಳ 114.38 ಹೆಕ್ಟೇರ್‌, ಪಾವಗಡದ 6 ಕೆರೆಗಳ 20.43 ಹೆಕ್ಟೇರ್‌, ತಿಪಟೂರಿನ 22ಕೆರೆಗಳ 72.64 ಹೆಕ್ಟೇರ್‌, ಚಿಕ್ಕನಾಯಕನಹಳ್ಳಿಯ 15ಕೆರೆಗಳ 91 ಹೆಕ್ಟೇರ್‌, ಶಿರಾದ 27ಕೆರೆಗಳ 124.02 ಹೆಕ್ಟೇರ್‌, ಗುಬ್ಬಿಯ 25ಕೆರೆಗಳ 130.72 ಹೆಕ್ಟೇರ್‌ ಹಾಗೂ ತುರುವೇಕೆರೆಯ 2 ಕೆರೆಗಳ 28.42 ಹೆಕ್ಟೇರ್‌ ಒತ್ತುವರಿ ತೆರವುಗೊಳಿಸಿ, ಶೇ.95ರಷ್ಟು ಪ್ರಗತಿ ಸಾಧಿಸಲಾಗಿದೆ. ಒತ್ತುವರಿ ಗುರುತಿಸಿರುವ 225 ಕೆರೆಗಳ ಪೈಕಿ ಇನ್ನೂ 44.79 ಹೆಕ್ಟೇರ್‌ ನಷ್ಟು ಅತಿಕ್ರಮಣ ತೆರವುಗೊಳಿಸಬೇಕಿದೆ.

ಪೂರ್ಣ ತೆರವು ಸಾಧ್ಯವೇ?:
ಇಲಾಖೆ ಅಂಕಿ-ಅಂಶಗಳು ಶೇ.95ರಷ್ಟು ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಹೇಳಿದ್ದರೂ, ಪೂರ್ಣ ಪ್ರಮಾಣದಲ್ಲಿ ಒತ್ತುವರಿ ತೆರವು ಸಾಧ್ಯವೇ ಎಂಬುದು ಪ್ರಶ್ನಾರ್ಹ. ಇದಕ್ಕೆ ನಿದರ್ಶನೆಂಬಂತೆ ತುಮಕೂರು ಅಮಾನಿಕೆರೆಯನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಣ್ಣ ನೀರಾವರಿ ಇಲಾಖೆ ಹಸ್ತಾಂತರಿಸಿದಾಗ 512 ಎಕರೆ ವಿಸ್ತ್ರೀರ್ಣವೆಂದು ತಿಳಿಸಲಾಗಿತ್ತು. ಅದನ್ನು ಈ ಹಿಂದಿನ ಟೂಡಾ ಆಯು ಕ್ತರು ಮತ್ತೆ ಮರು ಸಮೀಕ್ಷೆ ಗೊಳಪಡಿಸಿ, 5-6 ಎಕರೆ ಹೆಚ್ಚುವರಿ ಒತ್ತುವರಿ ಗುರುತಿಸಿ, ತೆರವುಗೊಳಿಸಿದ್ದಾರೆ. ಅಂತೆಯೇ ತುಮಕೂರು ನಗರದ ಆಳಶೆಟ್ಟಿಕೆರೆ ದಶಕಗಳ ಹಿಂದೆಯಷ್ಟು ಪೂರ್ಣ ಮುಚ್ಚಿ ಹೋಗಿ ಬಡಾವಣೆ, ಕಟ್ಟಡಗಳು ತಲೆಎತ್ತಿದೆ. ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ಅಕ್ಕ ತಂಗಿ ಕೆರೆ, ಉಪ್ಪಾರಹಳ್ಳಿ ಕೆರೆ, ಬಡ್ಡಿಹಳ್ಳಿ ಕೆರೆ, ಮರಳೂರು ಕೆರೆಗಳು ಒತ್ತುವರಿಯಾ ಗಿರುವುದು ಕಣ್ಣಿಗೆ ರಾಚುವಂತಿದ್ದು, ತುಮಕೂರು ನಗರ ಮಾತ್ರವಲ್ಲದೇ ಜಿಲ್ಲೆಯ ಎಲ್ಲಾ ತಾಲೂಕುಗಳ ಕೆರೆಗಳ ಒತ್ತುವರಿ ತೆರವು ಪೂರ್ಣ ಸಾಧ್ಯವಾಗಿಲ್ಲ ಎಂಬುದಕ್ಕೆ ಹಲವು ನಿದರ್ಶನಗಳು ಕಾಣಸಿಗುತ್ತವೆ.

ಕೆರೆ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಂಡಿಲ್ಲ
ಸಣ್ಣ ನೀರಾವರಿ ಇಲಾಖೆ ಒತ್ತುವರಿ ಗುರುತಿಸಿದ 225 ಕೆರೆಗಳು ಮಾತ್ರವಲ್ಲದೇ ಹೇಮಾವತಿ ನಾಲಾ ವಲಯದಲ್ಲೇ ಗುರುತಿಸಿರುವ 138 ಕೆರೆಗಳು, ಪಂಚಾಯತ್‌ ರಾಜ್‌ ಎಂಜಿನಿಯರ್‌ ವ್ಯಾಪ್ತಿಯ ಕೆರೆಗಳು, ಜಲಸಂಪನ್ಮೂಲ ಇಲಾಖೆಗೆ ಸೇರಿದ ಬೃಹತ್‌ ಕೆರೆಗಳು ಒತ್ತುವರಿ ಯಾಗಿರುವುದು ಹತ್ತು ತಾಲೂಕಿನಲ್ಲೂ ಕಂಡುಬರುತ್ತದೆ. ಕೆರೆ ಅಂಚಿಗೆ ಹೊಂದಿಕೊಂಡಿರುವ ಜಮೀನಿನ ಮಾಲೀಕರು ಕೃಷಿ ವಿಸ್ತರಣೆಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಒತ್ತುವರಿ ಮಾಡಿದ್ದರೆ, ನಗರ-ಪಟ್ಟಣ ಪ್ರದೇಶದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳು, ಪಟ್ಟಭದ್ರರು, ಲೇಔಟ್‌, ಮನೆನಿರ್ಮಾಣ, ನಿವೇಶನಕ್ಕಾಗಿ ಕೆರೆಗಳ ಜಾಗ ಅತಿಕ್ರಮಿಸಿದ್ದಾರೆ. ಕೆರೆ ಒತ್ತುವರಿದಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಜಿಲ್ಲೆಯಲ್ಲಿ ಸಾವಿರಾರು ಎಕರೆ ಕೆರೆ ಪ್ರದೇಶ ಒತ್ತುವರಿಯಾಗಲು ಕಾರಣವಾಗಿದೆ.

ಕೆರೆಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿ. ಕೆರೆಕಟ್ಟೆಗಳು ಅಂತರ್ಜಲದ ಜೀವಾಳ. ಕೆರೆಕಟ್ಟೆಗಳ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಒತ್ತುವರಿಯಾದ ಕೆರೆ ಕಟ್ಟೆಗಳ ತೆರವಿಗೆ ಕ್ರಮ ಕೈಗೊಂಡಿದ್ದೇವೆ. ಬಹುತೇಕ ಒತ್ತುವರಿ ತೆರವಾಗಿದೆ. ಬಾಕಿ ಇರುವ ಒತ್ತುವರಿ ತೆರವು ಕಾರ್ಯ ಶೀಘ್ರದಲ್ಲೇ ಮಾಡುತ್ತೇವೆ.
– ವೈ.ಎಸ್‌.ಪಾಟೀಲ್‌, ಜಿಲ್ಲಾಧಿಕಾರಿ

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಪ್ರದೇಶ ವಿಸ್ತರಣೆಗಾಗಿ ಕೆರೆಗಳು ಒತ್ತುವರಿಯಾ ಗಿದ್ದು, ಅವರಿಗೆಲ್ಲ ತಿಳುವಳಿಕೆ ನೋಟಿಸ್‌ ನೀಡಿ ಒತ್ತುವರಿ ತೆರವು ಗೊಳಿಸ ಲಾಗಿದೆ. ಬಹುತೇಕ ರೈತರು ತೆರವಿಗೆ ಸಹಕರಿಸಿದ್ದಾರೆ. ಇಲಾಖೆಯಿಂದ ಟ್ರಂಚ್‌ ಹೊಡಿಸಿ, ಕೆರೆ ಒತ್ತುವರಿ ತೆರವುಗೊಳಿಸ ಲಾಗುತ್ತಿದೆ. ಉಳಿದ ಕೆರೆಗಳ ಒತ್ತುವರಿಗೆ ಕ್ರಮವಹಿಸಲಾಗಿದೆ
– ರವಿ.ಎಸ್‌.ಸೂರನ್‌, ಕಾರ್ಯಪಾಲಕ
ಅಭಿಯಂತರರು, ಸಣ್ಣ ನೀರಾವರಿ ಇಲಾಖೆ,

ಸಕಾಲದಲ್ಲಿ ಮಳೆ ಪ್ರಾರಂಭವಾಗಿದ್ದು, ಕೆರೆಕಟ್ಟೆಗಳು ತುಂಬುವಷ್ಟು ಮಳೆ ಬಂದಿಲ್ಲ. ತುಂತುರು ಮಳೆ ಬೆಳೆಗೆ ಅನುಕೂಲವಾಗಿದೆ. ದನಕರು ಕುಡಿಯು ವಷ್ಟು ಕೆರೆಕಟ್ಟೆಗೆ ನೀರು ಬಂದಿವೆ. ಹೇಮಾವತಿ ನೀರಿನಿಂದ ಕೆಲ ಕೆರೆಗಳು ತುಂಬಿವೆ.
– ಕೆಂಪಹನುಮಯ್ಯ, ರೈತ, ತುಮಕೂರು

ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next