Advertisement

ಯೋಜನೆಗೇ ಹದಿಮೂರು ವರ್ಷ! :ತೂಗು ಸೇತುವೆ ನಿರ್ಮಾಣಕ್ಕೆ ಮೂರು ಬಾರಿ ಶಿಲಾನ್ಯಾಸ

09:31 PM Mar 10, 2023 | Team Udayavani |

ಮಂಗಳೂರು: ಫಲ್ಗುಣಿ ನದಿಯ ಎರಡು ತೀರಗಳಾದ ಸುಲ್ತಾನ್‌ ಬತ್ತೇರಿ ಮತ್ತು ತಣ್ಣೀರುಬಾವಿ ನಡುವಿನ ತೂಗು ಸೇತುವೆ 13 ವರ್ಷಗಳಿಂದ ಶಿಲಾನ್ಯಾಸಗಳಿಗಷ್ಟೇ ಸೀಮಿತ. ಇದೀಗ ಮೂರನೇ ಬಾರಿಗೆ ಮತ್ತೆ ಶಿಲಾನ್ಯಾಸ ನೆರವೇರಿದೆ.

Advertisement

ಇದು ಶಾಸಕ ಯೋಗೀಶ್‌ ಭಟ್‌ ಅವರ ಕನಸಿನ ಯೋಜನೆ. ಪ್ರವಾಸೋದ್ಯ ಮಕ್ಕೆ ಒತ್ತು ನೀಡಲು 2010ರ ಆ.23 ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಯೋಜನೆಗೆ ಮೊದಲ ಬಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಮೂರು ವರ್ಷದ ಬಳಿಕ 2013ರಲ್ಲಿ ಆಗಿನ ಜಿಲ್ಲಾ ಉಸ್ತುವಾಗಿ ಸಚಿವ ಸಿ.ಟಿ. ರವಿ ಮತ್ತೆ ಶಿಲಾನ್ಯಾಸ ನೆರವೇರಿಸಿದ್ದರು. ಆರಂಭದಲ್ಲಿ 3 ಮೀಟರ್‌ ಆಗಲ ಹಾಗೂ 410 ಮೀ. ಉದ್ದದ ತೂಗು ಸೇತುವೆ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಬೇಕಿತ್ತು. ಬಳಿಕ ಇದು 10 ಅಡಿಗೆ ವಿಸ್ತರಣೆಯಾಗಿ ಯೋಜನಾ ವೆಚ್ಚ 12 ಕೋಟಿ. ರೂ.ಗೆ ತಲುಪಿತು. 2012ರಲ್ಲಿ ಟೆಂಡರ್‌ ಪ್ರಕ್ರಿಯೆ ನಡೆದು,
ದ.ಕ. ನಿರ್ಮಿತಿ ಕೇಂದ್ರದ ಮೂಲಕ ಸಂಸ್ಥೆಯೊಂದಕ್ಕೆ ಯೋಜನೆ ನೀಡಲಾಯಿತು. ಆದರೆ ಯೋಜನೆಗೆ ಸರಕಾರದಿಂದ ಅನುದಾನ ಬಿಡುಗಡೆಯಾಗುವಲ್ಲಿ ವಿಳಂಬವಾದ ಕಾರಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವರ್ಗಾಯಿಸಿದರೂ ಬಳಿಕ ಕಡತವೇ ಮುಂದೆ ಸಾಗಲಿಲ್ಲ.

ಶಾಸಕರಾದ ಜೆ.ಆರ್‌. ಲೋಬೋ ಅವರು ಸಾಗರಮಾಲಾ ಯೋಜನೆಯಡಿ ಲಿಂಕ್‌ ರಸ್ತೆ ನಿರ್ಮಾಣದ ಭಾಗವಾಗಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಯೋಚಿಸಿದರು. ನೇತ್ರಾವತಿ ಸೇತುವೆ ಬಳಿಯಿಂದ ನಾಲ್ಕು ಪಥದ ಲಿಂಕ್‌ ರಸ್ತೆ ಹಳೇ ಬಂದರು, ಪಣಂಬೂರು ಮೂಲಕ ನವ ಮಂಗಳೂರು ಬಂದರು ಸಂಪರ್ಕಕಿಸುವ ಉದ್ದೇಶವಿತ್ತು. ಇದರಲ್ಲಿ ಸುಲ್ತಾನ್‌ ಬತ್ತೇರಿ- ತಣ್ಣೀರುಬಾವಿ ನಡುವೆ ಸೇರುವೆ ಸೇರಿತ್ತು. ಸುಮಾರು 3 ಸಾವಿರ ಕೋ.ರೂ. ಮೊತ್ತದ ಯೋಜನೆ ನನೆಗುದಿಗೆ ಬಿದ್ದಿದೆ.

ಇದೀಗ ಸ್ಮಾರ್ಟ್‌ ಸಿಟಿ ವತಿಯಿಂದ ಸುಮಾರು 40.31 ಕೋ.ರೂ. ವೆಚ್ಚದಲ್ಲಿ ಪಾದಚಾರಿ ಸೀ-ರಿವರ್‌ ಲಿಂಕ್‌ ಬ್ರಿಡ್ಜ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. 260 ಮೀ. ಉದ್ದ 3 ಮೀ. ಅಗಲದ ಸೇತುವೆ. ಈಗಲಾದರೂ ಆಗುತ್ತದೆಯೇ ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next