Advertisement

ಯೋಜನೆ ಜಾರಿಗೆ ದುಂಬಾಲು ಬೀಳ್ರೀ… ಸಚಿವ ಕೆ.ಎಸ್‌.ಈಶ್ವರಪ್ಪ

05:48 PM Feb 20, 2021 | Team Udayavani |

ರಾಯಚೂರು: ಯಾವುದೇ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕಾದರೆ ಜಿಲ್ಲೆಯ ಜನಪ್ರತಿನಿಧಿಗಳು ಪಟ್ಟು ಬಿಡದೆ ಬಿಗಿ ಹಿಡಿಯಬೇಕು. ಅಧಿಕಾರಿಗಳ ಬೆನ್ನು ಹತ್ತಿ ಕೆಲಸ ಮಾಡಿಕೊಂಡಲ್ಲಿ ನಿಮಗೆ ಅನುದಾನ ನೀಡಲು ಸರ್ಕಾರ ಹಿಂಜಯರಿವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಮಂತ್ರಾಲಯದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿದ ಛತ್ರ ಸಂಪೂರ್ಣ ಹಾಳಾಗಿದೆ. ನಮ್ಮಲ್ಲಿ ಇದೇ ರೀತಿ ಆಗಿದ್ದರೆ ನಾನು ಅಧಿಕಾರಿಗಳನ್ನು ಬಿಡುತ್ತಿರಲಿಲ್ಲ. ಆದರೆ, ನೀವು ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಿದ್ದರೆ ಯಾವ ಕಾಮಗಾರಿಗಳು ನಿಗದಿತ ಕಾಲಮಿತಿಯಲ್ಲಿ ಮುಗಿಯುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕುಡಿವ ನೀರಿನ ಪೂರೈಕೆ ಪುಣ್ಯದ ಕೆಲಸ. ಬೇಸಿಗೆಯಲ್ಲಿ ಸಮಸ್ಯೆ ಆಗದಂತೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು. ಜಿಲ್ಲೆಯ ಪ್ರತಿ ಮನೆಗೂ ನಳ ಸಂಪರ್ಕ ಕಲ್ಪಿಸಿ ನೀರು ಪೂರೈಸಲು 1,700 ಕೋಟಿ ಮೊತ್ತದ ಜಲಧಾರೆ ಯೋಜನೆ ಅನುಷ್ಠಾನಕ್ಕಾಗಿ ನಬಾರ್ಡ್‌ ಈಗಾಗಲೇ ಅರ್ಧದಷ್ಟ ಸಾಲ ನೀಡಲು ಒಪ್ಪಿದೆ. ಇನ್ನುಳಿದ ಅರ್ಧ ಪಾಲನ್ನು ಕೇಂದ್ರದ ಜಲಜೀವನ್‌ ಯೋಜನೆಯಡಿ ಮತ್ತು ರಾಜ್ಯ ಸರ್ಕಾರದಿಂದ ಪಡೆಯಲಾಗುವುದು. ಜಲಜೀವನ್‌ ಯೋಜನೆಗೆ ಸಂಬಂಧಿಸಿದ ಎಲ್ಲ ಡಿಪಿಆರ್‌ ಮುಗಿಸಿ ಜಲಧಾರೆಯಲ್ಲಿ ಮನೆ-ಮನೆಗೂ ನೀರು ಪೂರೈಸುವ ಯೋಜನೆ ಸಮಗ್ರ ವಿಶ್ಲೇಷಣೆ ಆಗುತ್ತಿದೆ ಎಂದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಕುಡಿಯುವ ನೀರಿನ ಯೋಜನೆ ಕಾಮಗಾರಿ ಕಳಪೆಯಾಗುತ್ತಿದ್ದು, ಉಪಗುತ್ತಿಗೆ ನೀಡಿ ಕಾಮಗಾರಿ
ಮಾಡಲಾಗುತ್ತಿದೆ ಎಂದು ದೂರಿದರು. ಶಾಸಕ ವೆಂಕಟರಾವ್‌ ನಾಡಗೌಡ ಮಾತನಾಡಿ, ಜಲಜೀವನ್‌  ವಿಷನ್‌ ಯೋಜನೆಯಡಿ ಕೆರೆಗಳ ಭರ್ತಿಗಾಗಿ ವೆಚ್ಚದ ಬಗ್ಗೆಯೂ ಯೋಜನೆಯಲ್ಲಿ ಅಂದಾಜು ಅನುದಾನದೊಂದಿಗೆ ಕ್ರಿಯಾ ಯೋಜನೆ ರೂಪಿಸಬೇಕು. ಇಲ್ಲದಿದ್ದರೆ, ಯೋಜನೆ ಸಂಪೂರ್ಣ ವಿಫಲವಾಗುತ್ತದೆ ಎಂದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಅತನೂರು ದೊಡ್ಡ ಗ್ರಾಮವಾಗಿದ್ದು, ಈಗಿರುವ ಕೆರೆ ನೀರು ಸಾಕಾಗುತ್ತಿಲ್ಲ. ಗಣೇಕಲ್‌ ಜಲಾಶಯದಿಂದ ಪೈಪ್‌ ಲೈನ್‌ ಮಾಡಿದರೆ ಅನುಕೂಲವಾಗುತ್ತದೆ ಎಂದರು. ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಮಾ.15ರ ನಂತರ ಅನುದಾನ ನೀಡಲಾಗುವುದು. ಟಾಸ್ಕ್ ಫೋರ್ಸ್‌ ಸಮಿತಿಯಲ್ಲಿ ಒಪ್ಪಿಗೆ ಪಡೆದಂಥ ಕಡೆಗಳಲ್ಲಿ ಕೆಲಸ ಮಾಡಬೇಕು, ಅಗತ್ಯಬಿದ್ದರೆ ಖಾಸಗಿ ಕೊಳವೆಬಾವಿ ಬಾಡಿಗೆ ಪಡೆದು, ನೀರೊದಗಿಸಬೇಕು. ಜಿಲ್ಲೆಯಲ್ಲಿ ಒತ್ತವರಿಯಾದ ಕೆರೆಗಳನ್ನು ತೆರವುಗೊಳಿಸಲಾಗುವುದು. ಎಷ್ಟೇ ಪ್ರಭಾವಿಗಳಾಗಿದ್ದರೂ ತೆರವುಗೊಳಿಸಲಾಗುವುದು.

Advertisement

ಅದಕ್ಕೆ ಶಾಸಕರು ಸಂಪೂರ್ಣ ಸಹಕರಿಸಬೇಕು ಎಂದು ಸಚಿವರು ತಿಳಿಸಿದರು. ಶಾಸ ವೆಂಕಟರಾವ್‌ ನಾಡಗೌಡ ಮಾತನಾಡಿ, ಉದ್ಯೋಗ ಖಾತರಿಯಲ್ಲಿ ಹೊಲಕ್ಕೆ ದಾರಿಗಳನ್ನು ನಿರ್ಮಿಸಬೇಕು. ಅಗತ್ಯ ಇರುವೆಡೆ ಟ್ರಾಕ್ಟರ್‌ ಬಳಕೆಗೆ ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು.

ಶಾಸಕ ಡಾ| ಶಿವರಾಜ ಪಾಟೀಲ್‌ ಮಾತನಾಡಿ, ಗ್ರಾಮೀಣ ಭಾಗದ ರಸ್ತೆಗಳನ್ನು ಮಾಡಲು ಉದ್ಯೋಗ ಖಾತರಿಯಲ್ಲಿ ಹೆಚ್ಚು ಅವಕಾಶ ಮಾಡಿಕೊಡಿ. ಪ್ರತಿ ವರ್ಷ ಬೇಸಿಗೆಯಲ್ಲಿ ತಾಲೂಕುವಾರು ಅನುದಾನ ಕೊಟ್ಟರೆ, ಇಬ್ಬರು ಶಾಸಕರು ಹಂಚಿಕೊಳ್ಳಬೇಕು. ವಿಧಾನಸಭೆ ಕ್ಷೇತ್ರವಾರು ಅನುದಾನ ನೀಡಬೇಕು ಎಂದರು.

ಶಾಸಕ ಬಸನಗೌಡ ದದ್ದಲ ಮಾತನಾಡಿ, ಬೇಸಿಗೆಯಲ್ಲಿ ಕುಡಿಯುವ ಸಮಸ್ಯೆ ಆಗುವ ಗ್ರಾಮಗಳನ್ನು ಸರಿಯಾಗಿ ಗುರುತಿಸಬೇಕು. ಸಚಿವರ ಎದುರು ಸಮಸ್ಯೆ ಪ್ರಸ್ತಾಪಿಸಿ ಅನುದಾನ ಪಡೆಯಬೇಕು. ಒಂದು ವೇಳೆ ನಿರ್ಲಕ್ಷ ವಹಿಸಿದರೆ, ಬೇಸಿಗೆಯಲ್ಲಿ ಜನರನ್ನು ಕರೆತಂದು ಸರ್ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ. ಕೇವಲ ಮನೆಗೆ ನಳಗಳನ್ನು ಕೂಡಿಸಿದರೆ ಸಾಲದು ನೀರು ಪೂರೈಸಬೇಕು. ಸರ್ಕಾರಿ ಸ್ಥಳಗಳನ್ನು ಗುರುತಿಸಿ ನೀರು ಸಂಗ್ರಹಿಸುವುದು ಸೂಕ್ತ ಎಂದರು. ಶೇಖ್‌ ತನ್ವೀರ್‌ ಆಸೀಫ್‌, ಆದಿಮನಿ ವೀರಲಕ್ಷ್ಮೀ ಸೇರಿ ಇತರರಿದ್ದರು.

ಶೌಚಗೃಹಕ್ಕೆ ಹಣ ಹೆಚ್ಚಳ ವೈಯಕ್ತಿಕ ಶೌಚಗೃಹಕ್ಕೆ ಈಗ ನೀಡುತ್ತಿರುವ ಅನುದಾನ ಸಾಲುತ್ತಿಲ್ಲ. ಹೀಗಾಗಿ ಇನ್ನೂ ಐದು ಸಾವಿರ ರೂ. ಅನುದಾನ ಹೆಚ್ಚಿಸಲು ನಿರ್ಧಾರ ಮಾಡಲಾಗಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು. ಇದಕ್ಕೆ ದನಿಗೂಡಿಸಿದ ಶಾಸಕ ದದ್ದಲ್‌ ಬಸನಗೌಡ ಶೌಚಗೃಹ ನಿರ್ಮಿಸಲು ಸ್ಥಳಾಭಾವವಿದೆ. ಹೀಗಾಗಿ ಸರ್ಕಾರಿ ಸ್ಥಳದಲ್ಲಿ ಶೌಚಗೃಹ ನಿರ್ಮಿಸಿ ಫಲಾನುಭವಿಗಳಿಗೆ ಕೀಲಿ ನೀಡುವುದು ಸೂಕ್ತ. ಇದರಿಂದ ನಿರ್ವಹಣೆ ಕೂಡ ಆಗುತ್ತದೆ ಎಂದರು. ಇದಕ್ಕೆ ಸಹಮತ ಸೂಚಿಸಿದ ಇಲಾಖೆ ಕಾರ್ಯದರ್ಶಿ ಎಲ್‌.ಕೆ.ಆತೀಕ ಈ ರೀತಿ ಪ್ರಯೋಗ ಮಾಡಿ ನೋಡಲಾಗುವುದು ಎಂದರು. ಶಾಸಕ ನೌಡಗೌಡ ಮಾತನಾಡಿ,
ಸಾರ್ವಜನಿಕ ಶೌಚಗೃಹಗಳು ನಿರ್ವಹಣೆ ಕಾಣುತ್ತಿಲ್ಲ. ಸಾಮೂಹಿಕ ಶೌಚಗೃಹಕ್ಕಿಂತ ವೈಯಕ್ತಿಕ ಶೌಚಗೃಹಗಳಿಗೆ ಒತ್ತು ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next