Advertisement

ಪರಿಪೂರ್ಣ ಯಕ್ಷಗಾನ ಪ್ರದರ್ಶನ ದಕ್ಷಯಜ್ಞ

07:15 PM Jan 24, 2020 | mahesh |

ಸೂಕ್ತವಾದ ಆಖ್ಯಾನ ದಕ್ಷಯಜ್ಞ. ಕುತ್ಯಾರಿನಲ್ಲಿ ತೆಂಕು- ಬಡಗಿನ ಆಯ್ದ ಕಲಾವಿದರು ಈ ಕಥಾನಕವನ್ನು ಸುಂದರವಾಗಿ ಕಟ್ಟಿಕೊಟ್ಟರು.

Advertisement

ಕುತ್ಯಾರಿನಲ್ಲಿ ಇತ್ತೀಚೆಗೆ ಜರಗಿದ ಸಹಸ್ರಮಾನ ನವಕುಂಡ ಮಹಾಗಣಪತ್ಯಢರ್ವಶೀರ್ಷ ಮಹಾಯಾಗದ ಸಾಂಸ್ಕೃತಿಕ ವೈಭವದ ಅಂಗವಾಗಿ ಪ್ರದರ್ಶನಗೊಂಡ ದಕ್ಷಯಜ್ಞ ಯಕ್ಷಗಾನ ಕಥಾಭಾಗವು ಯಕ್ಷ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ದಕ್ಷಯಜ್ಞವು ಕಾಲಮಿತಿ ಚೌಕಟ್ಟಿನಲ್ಲಿ ಅಬಾಲವೃದ್ಧರಾದಿಯಾಗಿ ಎಲ್ಲ ವರ್ಗದ ಕಲಾರಸಿಕರನ್ನು ತಲುಪಬಲ್ಲ ನವರಸಭರಿತ ಸುಂದರ ಆಖ್ಯಾನವಾಗಿದೆ. ಮಹಾಸತ್ರವೊಂದನ್ನು ನಡೆಸಬೇಕೆಂದು ತೀರ್ಮಾನಿಸಿದ ದೇವೇಂದ್ರನು ಸುಧರ್ಮಸಭೆಗೆ ಈಶ್ವರನನ್ನು ಅಧ್ಯಕ್ಷನಾಗಿ ಮಾಡುತ್ತಾನೆ. ದಕ್ಷ ಪ್ರಜಾಪತಿಯು ಆ ಸಭೆಗೆ ಬಂದಾಗ ಈಶ್ವರ ಹೊರತು ಉಳಿದೆಲ್ಲರೂ ಎದ್ದುನಿಂತು ಗೌರವ ನೀಡುತ್ತಾರೆ. ಅಳಿಯನಾಗಿದ್ದರೂ ಈಶ್ವರ ತನಗೆ ಗೌರವ ನೀಡದೆ ಅವಮಾನ ಮಾಡಿದ ಎಂದು ಕೋಪಗೊಂಡ ದಕ್ಷನು ಈಶ್ವರನನ್ನು ಹೀಯಾಳಿಸಿ ಸಭೆಯಿಂದ ಹೊರನಡೆಯುತ್ತಾನೆ. ಬಳಿಕ ತನ್ನನ್ನು ಅವಮಾನಿಸಿದ ಈಶ್ವರನನ್ನು ಅವಮಾನಿಸುವ ಉದ್ದೇಶದಿಂದಲೇ ಲೋಕಸಮಸ್ತರನ್ನು ಆಹ್ವಾನಿಸಿ ನಿರೀಶ್ವರ ಯಾಗವನ್ನು ಮಾಡಲು ನಿರ್ಧರಿಸುತ್ತಾನೆ. ಬ್ರಾಹ್ಮಣರ ಮೂಲಕ ಈ ವಿಷಯ ದಕ್ಷನ ಪುತ್ರಿ ಹಾಗೂ ಈಶ್ವರನ ಪತ್ನಿ ದಾಕ್ಷಾಯಿಣಿಗೆ ತಿಳಿಯುತ್ತದೆ. ಅಲ್ಲಿಗೆ ಹೋಗಬೇಡ ಎಂಬ ಈಶ್ವರನ ಸಲಹೆಯನ್ನು ಮೀರಿ ದಾಕ್ಷಾಯಿಣಿ ತಾಯಿ ಮನೆಗೆ ಯಾಗಕ್ಕೆ ಹೋಗುತ್ತಾಳೆ.

ಅಲ್ಲಿ ಆಕೆಯನ್ನು ಎಲ್ಲರೂ ಅವಮಾನಿಸುತ್ತಾರೆ. ಸಾಲದ್ದಕ್ಕೆ ಯಾಗದ ಕೊನೆಯಲ್ಲಿ ಅಷ್ಟದಿಕಾ³ಲಕರಿಗೆ ಹವಿಸ್ಸನ್ನು ಅರ್ಪಿಸುವ ಸಂದರ್ಭ ಈಶ್ವರನಿಗೆ ಹವಿರ್ಭಾಗವನ್ನು ನೀಡದೆ ಇದ್ದಾಗ ಅವಮಾನ ಮತ್ತು ಕ್ರೋಧದಿಂದ ತನ್ನ ಯೋಗಾಗ್ನಿಯಿಂದ ದೇಹವನ್ನು ದಹಿಸಿಕೊಳ್ಳುತ್ತಾಳೆ. ಇದನ್ನು ತಿಳಿದು ಈಶ್ವರನು ವೀರಭದ್ರನ ಮೂಲಕ ದಕ್ಷನನ್ನು ಸಂಹರಿಸುತ್ತಾನೆ.

ಇದರಿಂದಾಗಿ ಯಾಗವು ಅಪೂರ್ಣಗೊಂಡು ಅನಾಹುತಗಳು ಸಂಭವಿಸಬಹುದು ಎಂದು ಹೆದರಿದ ದೇವತೆಗಳು ಈಶ್ವರನನ್ನು ಪ್ರಾರ್ಥಿಸಿದಾಗ ದಕ್ಷನ ರುಂಡಕ್ಕೆ ಆಡಿನ ರುಂಡವನ್ನು ಸೇರಿಸಿ ಯಾಗ ಪೂರ್ಣವಾಗುವಂತೆ ಮಾಡುವುದೇ ದಕ್ಷಯಜ್ಞ ಕಥಾಭಾಗದ ಪ್ರಮುಖ ಅಂಶ.

Advertisement

ಲ| ರವೀಂದ್ರ ಆಚಾರ್ಯ ಸಂಯೋಜನೆಯಲ್ಲಿ ಮೂಡಿಬಂದ ಈ ಕಥಾಭಾಗದಲ್ಲಿ ಈಶ್ವರನಾಗಿ ಸುಬ್ರಹ್ಮಣ್ಯ ಚಿಟ್ಟಾಣಿ ಅವರು ತಮ್ಮ ಸ್ಪಷ್ಟಮಾತು ಮತ್ತು ಗಂಭೀರ ನಡೆಯಿಂದ ಮನ ಗೆದ್ದರು. ದಾಕ್ಷಾಯಿಣಿಯಾಗಿ ಮಾಧವ ನಾಗೂರು ಮೋಹಕ ರೂಪ, ಲಾವಣ್ಯ, ಸ್ತ್ರೀಸಹಜ ಅಭಿನಯಗಳಿಂದ ಪ್ರೇಕ್ಷಕರನ್ನು ದಾಕ್ಷಾಯಿಣಿಯ ಅಂತರಂಗಕ್ಕೆ ಕರೆದೊಯ್ಯುವಲ್ಲಿ ಸಫ‌ಲರಾದರು.

ದಕ್ಷ ಪ್ರಜಾಪತಿಯಾಗಿ ಪ್ರಬುದ್ಧ ಅಭಿನಯ ನೀಡಿದ ಮಧೂರು ರಾಧಾಕೃಷ್ಣ ನಾವಡ ಅವರ ಆಕರ್ಷಕ ವೇಷಗಾರಿಕೆ, ಪರಿಶುದ್ಧವಾದ ಭಾಷೆ ಮೆಚ್ಚುಗೆಗೆ ಪಾತ್ರವಾಯಿತು. ವೀರಭದ್ರನಾಗಿ ಡಾ| ಸುನಿಲ್‌ ಮುಂಡ್ಕೂರು ಅವರು ಅಬ್ಬರಿಸಿ ಮೆರೆದರು.

ವೃದ್ಧ ಬ್ರಾಹ್ಮಣನಾಗಿ ಶ್ರೀಧರ ಭಟ್‌ ಕಾಸರಕೋಡು ಪಾತ್ರೋಚಿತ ಅಭಿನಯ ತೋರಿದರು. ಇವರ ಪ್ರಬುದ್ಧ ಹಾಸ್ಯ ಗಮನ ಸೆಳೆಯಿತು. ಬ್ರಾಹ್ಮಣನ ಹೆಂಡತಿಯಾಗಿ ಸಿದ್ಧಾಪುರ ಅಶೋಕ್‌ ಭಟ್‌ ದೊರಕಿದ ಸೀಮಿತ ಅವಕಾಶದಲ್ಲಿ ಮಿಂಚುವಲ್ಲಿ ಸಫ‌ಲರಾದರು. ದೇವೇಂದ್ರನಾಗಿ ಕುಳಿಮನೆ ನಾಗೇಶ್‌, ಅಗ್ನಿಯಾಗಿ ನವೀನ್‌ ಭಟ್‌, ವರುಣನಾಗಿ ಆದರ್ಶ್‌, ದಕ್ಷನ ಬಲಗಳಾಗಿ ಸುಧನ್ವ, ಸುಮನ್ಯು ಮುಂಡ್ಕೂರು ಸಹೋದರರು, ಮಾಣಿಗಳಾಗಿ ಶ್ರೀಧರ ಭಟ್‌ ಹಾಗೂ ರವೀಂದ್ರ ಆಚಾರ್ಯ ಅವರು ತಮ್ಮ ಪಾತ್ರಗಳಿಗೆ ಜೀವ ತುಂಬಿದರು.

ಕಂಚಿನ ಕಂಠದ ಹಾಡುಗಾರಿಕೆಯಿಂದ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರು ಪ್ರೇಕ್ಷಕರು ತಲೆದೂಗುವಂತೆ ಮಾಡಿದರು.ಮದ್ದಳೆಯಲ್ಲಿ ಸುನಿಲ್‌ ಭಂಡಾರಿ ಕಡತೋಕ, ಚೆಂಡೆಯಲ್ಲಿ ಹಾಲಾಡಿ ಸುಜನ್‌ ಕುಮಾರ್‌ ಹಾಗೂ ಗಣೇಶ್‌ ಭಟ್‌ ಮತ್ತು ಚಕ್ರತಾಳದಲ್ಲಿ ಸಚಿನ್‌ ಉದ್ಯಾವರ ಅವರು ಸಹಕರಿಸಿದರು.

ಅನಂತ ಮೂಡಿತ್ತಾಯ , ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next