Advertisement

ಉಕ್ರೇನ್‌ನಲ್ಲಿ ಇನ್ನೂ ನಿಲ್ಲದ ಯುದ್ಧ: ಸ್ವದೇಶಕ್ಕೆ ಬಂದ ವಿದ್ಯಾರ್ಥಿಗಳ ಸಂಕಷ್ಟ

09:33 AM Jun 15, 2022 | Team Udayavani |

ಮಂಗಳೂರು: ಉಕ್ರೇನ್‌-ರಷ್ಯಾ ಯುದ್ಧ ಬಿಕ್ಕಟ್ಟಿನಿಂ ದಾಗಿ ಸ್ವದೇಶಕ್ಕೆ ವಾಪಸಾಗಿರುವ ಭಾರತೀಯ ವಿದ್ಯಾರ್ಥಿಗಳು ಅತ್ತ ಉಕ್ರೇನ್‌ಗೆ ಮರಳಲು ಆಗದೆ ಇತ್ತ ಸ್ವದೇಶದಲ್ಲೇ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದೆ ಪೇಚಿಗೆ ಸಿಲುಕಿದ್ದಾರೆ. ಇದರ ಜತೆಗೆ ಈಗ ಉಕ್ರೇನ್‌ನ ಕೆಲವು ವಿ.ವಿ.ಗಳ ಶುಲ್ಕದ ಹೊರೆ ವಿದ್ಯಾರ್ಥಿಗಳನ್ನು ಕಂಗಾಲಾಗಿಸಿದೆ.

Advertisement

ಬಹುತೇಕ ಎಲ್ಲ ವಿದ್ಯಾ ರ್ಥಿಗಳಿಗೂ ಆನ್‌ಲೈನ್‌ನಲ್ಲೇ ತರಗತಿಗಳು ನಡೆಯುತ್ತಿವೆ. ಪ್ರಾಕ್ಟಿಕಲ್‌ ತರಗತಿ ಇಲ್ಲದಿರುವ ಕಾರಣ ಕೆಲವು ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ.

ಇನ್ನು ಕೆಲವು ವಿದ್ಯಾರ್ಥಿಗಳಿಗೆ ಥಿಯರಿ ತರಗತಿ ಕೂಡ ಆನ್‌ಲೈನ್‌ನಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ. ಉಕ್ರೇನ್‌ನ ಕೆಲವು ಯುನಿವರ್ಸಿಟಿಗಳು ಶುಲ್ಕವನ್ನು ಪೂರ್ಣ ಪ್ರಮಾಣದಲ್ಲಿ ವಸೂಲಿ ಮಾಡಿಕೊಳ್ಳುತ್ತಿವೆ. ಪೂರ್ಣ ಮೊತ್ತ ಪಾವತಿಸದಿದ್ದರೆ ಯಾವುದೇ ಪ್ರಮಾಣಪತ್ರ ಅಥವಾ ಇತರ ದಾಖಲೆಗಳನ್ನು ನೀಡುವುದಿಲ್ಲ ಎಂದು ಬೆದರಿಸುತ್ತಿವೆ.

2 ಲ.ರೂ. ಪಾವತಿಸಿದ್ದೇನೆ
ವರ್ಷಕ್ಕೆ 4 ಲ.ರೂ. ಶುಲ್ಕವಿದೆ. ಉಕ್ರೇನ್‌ನಿಂದ ವಾಪಸಾದ ಅನಂತರ 2 ಲ.ರೂ. ಪಾವತಿಸಿದ್ದೇನೆ. ಶುಲ್ಕ ಪಾವತಿಸದಿದ್ದರೆ ಅವರು ಪ್ರಮಾಣಪತ್ರ ನೀಡುವುದಿಲ್ಲ. ಹಾಗಾಗಿ ಪಾವತಿಸಿದ್ದೇನೆ ಎಂದು ಓರ್ವ ವಿದ್ಯಾರ್ಥಿ ತಿಳಿಸಿದ್ದಾರೆ.

ಹೊರಬೀಳದ ತೀರ್ಮಾನ
ಸಾಮಾನ್ಯವಾಗಿ ವೈದ್ಯಕೀಯ ಕೋರ್ಸ್‌ಗಳು ಜೂನ್‌ ಜುಲೈಯಲ್ಲಿ ಆರಂಭಗೊಳ್ಳುತ್ತವೆ. ಆದರೆ ಕೊರೊನಾ ಅನಂತರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆರಂಭವಾಗಿವೆ. ಈ ವರ್ಷ ಕೂಡ ಸೆಪ್ಟಂಬರ್‌ನಲ್ಲಿಯೇ ಆರಂಭಗೊಳ್ಳಲಿದೆ. ಹಾಗಾಗಿ ಸರಕಾರ ಮತ್ತು ನ್ಯಾಶನಲ್‌ ಮೆಡಿಕಲ್‌ ಕೌನ್ಸಿಲ್‌ (ಎಂಎನ್‌ಸಿ) ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

Advertisement

ಬೇರೆ ದೇಶದ ವಿ.ವಿ.ಗಳಿಗೆ ಅರ್ಜಿ
ಎನ್‌ಎಂಸಿ ಇನ್ನು ಕೂಡ ತೀರ್ಮಾನ ತೆಗೆದುಕೊಳ್ಳದೇ ಇರುವುದರಿಂದ ಸಮಸ್ಯೆಯಾಗಿದೆ. ಹಾಗಾಗಿ ನಾನು ರೊಮೆನಿಯಾ ಮತ್ತು ಜರ್ಮನಿಯ ವಿ.ವಿ.ಗಳಲ್ಲಿ ವಿದ್ಯಾಭ್ಯಾಸ ಮಾಡಲು ಅರ್ಜಿ ಸಲ್ಲಿಸಿರುವುದಾಗಿ ಮಂಗಳೂರಿನಲ್ಲಿರುವ ಇನ್ನೋರ್ವ ವಿದ್ಯಾರ್ಥಿ ತಿಳಿಸಿದ್ದಾರೆ.

ಪ.ಬಂಗಾಲದಲ್ಲಿ ಅವಕಾಶ
ಪಶ್ಚಿಮ ಬಂಗಾಲ ಸರಕಾರ ಉಕ್ರೇನ್‌ನಿಂದ ವಾಪಸಾಗಿರುವ ಆ ರಾಜ್ಯದ ವಿದ್ಯಾರ್ಥಿಗಳು ಸರಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಅಧ್ಯಯನ ಮುಂದುವರಿಸಲು ಅವಕಾಶ ನೀಡಿದೆ. ಅಲ್ಲದೆ ಪ್ರಾಕ್ಟಿಕಲ್‌ ತರಬೇತಿಗೆ ಜಿಲ್ಲಾಸ್ಪತ್ರೆಗಳಲ್ಲಿ ಅವಕಾಶ ನೀಡಿದೆ. ಆದರೆ ಎಂಎನ್‌ಸಿ ಒಪ್ಪಿಗೆ ಇಲ್ಲದೆ ಇದು ಪ್ರಯೋಜನವಾಗದು ಎನ್ನುತ್ತಾರೆ ವಿದ್ಯಾರ್ಥಿಗಳು.

700ಕ್ಕೂ ಅಧಿಕ ವಿದ್ಯಾರ್ಥಿಗಳು
ಉಕ್ರೇನ್‌ಗೆ ಎಂಬಿಬಿಎಸ್‌ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ರಾಜ್ಯದ 700ಕ್ಕೂ ಅಧಿಕ ವಿದ್ಯಾರ್ಥಿಗಳು ಕಳೆದ ಮಾರ್ಚ್‌ನಲ್ಲಿ ವಾಪಸಾಗಿದ್ದರು. ಇದರಲ್ಲಿ ದ.ಕ. ಜಿಲ್ಲೆಯ 18 ಮತ್ತು ಉಡುಪಿ ಜಿಲ್ಲೆಯ 7 ವಿದ್ಯಾರ್ಥಿಗಳಿದ್ದಾರೆ.

ದೇಶದಲ್ಲೇ ಅವಕಾಶ ನೀಡಿ
ನನ್ನ ಮಗಳು ಉಕ್ರೇನ್‌ನಲ್ಲಿ ನಾಲ್ಕನೇ ವರ್ಷದ ಎಂಬಿಬಿಎಸ್‌ ಓದುತ್ತಿದ್ದಳು. ಪ್ರಥಮ, ದ್ವಿತೀಯ ವರ್ಷದಲ್ಲಿ ಕಲಿಯುತ್ತಿದ್ದರೆ ಬೇರೆ ಏನಾದರೂ ಮಾಡಬಹುದಿತ್ತು. ಈಗ ಏನು ಮಾಡುವುದೆಂದು ಗೊತ್ತಾಗುತ್ತಿಲ್ಲ. ಇದೀಗ ಆನ್‌ಲೈನ್‌ ತರಗತಿ ನಡೆಯುತ್ತಿದೆಯಾದರೂ ಅನಿಶ್ಚಿತತೆ, ಗೊಂದಲ ಮುಂದು ವರಿದಿದೆ. ಸರಕಾರ ನಮ್ಮ ದೇಶದಲ್ಲಿ ಶಿಕ್ಷಣ ಮುಂದುವರಿಸಲು ಅವಕಾಶ ನೀಡಬೇಕು ಎನ್ನುತ್ತಾರೆ ವಿದ್ಯಾರ್ಥಿನಿ ಯೋರ್ವರ ತಂದೆ.

ಉಕ್ರೇನ್‌ ನಿಂದ ವಾಪಸಾದ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ಕುರಿತು ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಈಗಾಗಲೇ ಕೇಂದ್ರ ಸರಕಾರಕ್ಕೆ ರಾಜ್ಯದ ವತಿಯಿಂದಲೂ ಮನವಿ ಸಲ್ಲಿಸಲಾಗಿದೆ.
– ಡಾ| ಕೆ. ಸುಧಾಕರ್‌ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ

ಉಕ್ರೇನ್‌ನಿಂದ ವಾಪಸಾಗಿರುವ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸರಕಾರ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು ವಿದ್ಯಾರ್ಥಿಗಳಿಗೆ ಪೂರಕವಾದ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.
– ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ. ಜಿಲ್ಲೆ

– ಸಂತೋಷ್‌ ಬೊಳ್ಳೆಟ್ಟು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next