Advertisement

ಬಾಲಕನ ಅಪಹರಿಸಿದ್ದ ಕದೀಮರು ವಶಕ್ಕೆ

03:34 PM Aug 19, 2022 | Team Udayavani |

ಸಂಕೇಶ್ವರ: ಸಂಕೇಶ್ವರ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಬಾಲಕನ ಅಪಹರಣ ಪ್ರಕರಣವನ್ನು ಭೇದಿಸಿರುವ ಸಂಕೇಶ್ವರದ ಪೊಲೀಸರು ಬಾಲಕನ ಅಪಹರಣ ಮಾಡಿ ಹಣದ ಬೇಡಿಕೆ ಇಟ್ಟಿದ್ದ ಒಟ್ಟು 6 ಕದೀಮರ ತಂಡವನ್ನು ಬಂಧಿ ಸುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಂಜೀವ್‌ ಪಾಟೀಲ ಹೇಳಿದರು.

Advertisement

ನಗರದಲ್ಲಿ ಗುರುವಾರ ಸಂಜೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿತರ ಶೋಧ ಕಾರ್ಯ ನಡೆಸಿ ಆ.18ರಂದು ಹಣದ ಬೇಡಿಕೆಗಾಗಿ ಕೃತ್ಯದಲ್ಲಿ ಭಾಗಿಯಾದ 6 ಜನ ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತರು ಕೃತ್ಯಕ್ಕೆ ಬಳಸಿದ ಮೂರು ಬೈಕ್‌ ಗಳನ್ನು ಹಾಗೂ 6 ಮೊಬೈಲ್‌ಗ‌ಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಪ್ರಸಾದ ಉರ್ಫ್‌ ಬಬ್ಲೂ ಸಂಜಯ ರಾವುತ, (20), ನಿಪ್ಪಾಣಿ ತಾಲೂಕಿನ ಸಾ. ಅಕ್ಟೋಳ, ದೀಪಕ ಶಾಮಸಿಂಗ್‌ ಚಿಲವಾರ, (21) ನದಿಗಲ್ಲಿ ಸಂಕೇಶ್ವರ ತಾ. ಹುಕ್ಕೇರಿ ಹಾಗೂ ಬೆಳಗಾವಿಯ ವಂಟಮೂರಿ ಕಾಲೋನಿಯ ರಾಮತೀರ್ಥ ನಗರದ ಸುಲ್ತಾನರಾಜು ಹುಸೇನ ಮುಜಾವರ (19) ಮತ್ತು ರಮೇಶ ಯಲಪ್ಪ ಅಚಗತ್ತಿ. (19) ಮತ್ತು ಡಾಲರ ಕಾಲೋನಿ ನಿಪ್ಪಾಣಿಯ ಸೌರಭ ದಗಡು ತಳವಾರ, (22) ವಿನಾಯಕ ಪಂಡರಿನಾಥ ಪಾಂಡವ (23) ಎಂಬುವವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಆ.2ರಂದು ಸಂಕೇಶ್ವರದ ಭಾಸ್ಕರ ಪ್ರಕಾಶ ಕಾಕಡೆ ಅವರು ಸಂಕೇಶ್ವರ ಪೊಲೀಸ್‌ ಠಾಣೆಗೆ ತನ್ನ 14 ವರ್ಷದ ಮಗ ಶಾಲೆ ಮುಗಿಸಿ ಟೋಶನ್‌ ತೆರಳಿ ಮರಳಿ ಮನೆಗೆ ಬರುತ್ತಿದ್ದಾಗ ಯಾರೋ ಅಪರಿಚಿತರು ನನ್ನ ಮಗನ ಹತ್ತಿರ ಬಂದು “ನಿಮ್ಮ ತಂದೆಗೆ ನಿಪ್ಪಾಣಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮನೆ ಜನರೆಲ್ಲರೂ ಅಲ್ಲಿಗೆ ಹೋಗಿದ್ದಾರೆ’ ಎಂದು ಪುಸಲಾಯಿಸಿ “ನಾವು ಸಹ ಅಲ್ಲಿಗೆ ಹೋಗೋಣ ಬಾ’ ಅಂತಾ ಹೇಳಿ ನಂಬಿಸಿ ಅಪಹರಣ ಮಾಡಿದ್ದಾರೆ ಎಂದು ದೂರು ನೀಡಿದ್ದರು.

ಸಂಕೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಒಂದು ಗಂಟೆಯಲ್ಲಿ ಅಪಹರಣವಾದ ಮಗುವನ್ನು ಸಂಕೇಶ್ವರ ಪೊಲೀಸರು ಪತ್ತೆ ಮಾಡಿದ್ದಾರೆ. ಪ್ರಕರಣದ ಬೆನ್ನು ಹತ್ತಿದ ಸಂಕೇಶ್ವರ ಪೊಲೀಸರು ಅಪಹರಣಾಕಾರರನ್ನು 15 ದಿನದಲ್ಲಿ ಪತ್ತೆ ಹಚ್ಚಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ ಎಂದು ಸಂಜೀವ್‌ ಪಾಟೀಲ ತಿಳಿಸಿದರು.

ಹೆಚ್ಚುವರಿ ಎಸ್‌.ಪಿ ಮಹಾನಿಂಗ ನಂದಗಾವಿ, ಗೋಕಾಕ ಡಿಎಸ್‌ಪಿ ಮನೋಜಕುಮಾರ್‌ ನಾಯಿಕ ಹಾಗೂ ಯಮಕನಮರಡಿ ಪಿಐ ರಮೇಶ ಛಾಯಾಗೋಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಗಣಪತಿ ಕೊಂಗನೋಳಿ ಹಾಗೂ ಸಿಬ್ಬಂದಿಗಳಾದ ಬಿ.ಕೆ.ನಾಗನೂರಿ, ಎಂ.ಜಿ. ದಾದಾಮಾಕ, ಎಂ.ಎಂ. ಕರಗುಪ್ಪಿ, ಬಿ.ವಿ.ಹುಲಕುಂದ, ವೈ.ಎಚ್‌.ನದಾಫ, ಜಿ.ಟಿ. ಪಾಟೀಲ, ಬಿ.ಎಸ್‌. ಕಪರಟ್ಟಿ, ಬಿ.ಎನ್‌. ಮೇಲ್ಮಟ್ಟಿ, ಸಚಿನ್‌ ಪಾಟೀಲ ಮತ್ತು ವಿನೋದ ಠಕ್ಕನ್ನವರ ಮುಂತಾದವರನ್ನು ಒಳಗೊಂಡ ತಂಡವನ್ನು ರಚಿಸಿ ಕೂಡಲೇ ಅಪಹರಣಕ್ಕೊಳಗಾದ ಬಾಲಕನನ್ನು ಅದೇ ದಿನ ಪತ್ತೆ ಮಾಡಿದ್ದಾರೆ ಎಂದು ತಿಳಿಸಿದರು.

Advertisement

ಪ್ರಕರಣ ಪತ್ತೆ ಹಚ್ಚಿದ ಸಂಕೇಶ್ವರ ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂಜೀವ್‌ ಪಾಟೀಲ ಅವರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಸಿಪಿಐ ರಮೇಶ ಛಾಯಾಗೋಳ, ಪ್ರಹ್ಲಾದ್‌ ಚೆನ್ನಗಿರಿ, ಪಿಎಸ್‌ಐ ಗಣಪತಿ ಕೊಂಗನೊಳಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next