Advertisement

ಸಮಸ್ಯೆ ಪರಿಹಾರದವರೆಗೆ ಹೋರಾಡುವ ಛಲಗಾರ

02:33 PM Aug 07, 2022 | Team Udayavani |

ಹುಬ್ಬಳ್ಳಿ: ವಿಶ್ವದಾಖಲೆ ರೂಪದಲ್ಲಿ ನಿರಂತರ ಗೆಲುವು ಬಸವರಾಜ ಹೊರಟ್ಟಿ ಅವರಿಗೆ ಮಾತ್ರ ಸಾಧ್ಯವಾಗಲಿದೆ. ಶಿಕ್ಷಕರ ಸಮಸ್ಯೆಗಳಿಗೆ ಗಟ್ಟಿ ಧ್ವನಿ ಆಗಿರುವ ಅವರು, ಪರಿಹಾರ ಸಿಗುವವರೆಗೆ ಹೋರಾಡುವ ಛಲಗಾರ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ವಿವಿಧ ಸಂಘಟನೆಗಳು ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ಶನಿವಾರ ಆರ್‌.ಎನ್‌.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹೊರಟ್ಟಿಯವರ ಸತತ ಗೆಲುವಿಗೆ ಶಿಕ್ಷಕರ ಶಕ್ತಿಯೇ ಕಾರಣ. ಅವರ ನಿರಂತರ ಗೆಲುವು ಎಲ್ಲ ಜನಪ್ರತಿನಿಧಿಗಳಿಗೆ ಮಾದರಿ-ಮಾರ್ಗದರ್ಶಿ. ಹಾಸನಕ್ಕೆ ಹೊರಟಿದ್ದ ಕಾನೂನು ವಿವಿ ಹುಬ್ಬಳ್ಳಿಗೆ ತರುವ ನಿಟ್ಟಿನಲ್ಲಿ ಅಂದಿನ ಕಾನೂನು ಸಚಿವರಾಗಿ ಹೊರಟ್ಟಿಯವರು ತೋರಿದ ಕಾರ್ಯ ಶ್ಲಾಘನೀಯ. ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರ, ಸಮಸ್ಯೆಗಳು ಬಂದಾಗ ಪಕ್ಷಭೇದ ಮರೆತು ಹೋರಾಟಕ್ಕೆ ಮುಂದಾಗುವ ವ್ಯಕ್ತಿತ್ವ ಅವರದ್ದು ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಜೆಪಿ ಎಂಬ ಹಾಲಿಗೆ ಹೊರಟ್ಟಿ ಎಂಬ ಸಕ್ಕರೆ ಸೇರಿದಂತಾಗಿದೆ. ಪಶ್ಚಿಮ ಶಿಕ್ಷಕರ ಚುನಾವಣೆ ಯಲ್ಲಿ 1,200ಕ್ಕೂ ಅಧಿಕ ಮತಗಳು ಅಸಿಂಧು ಆಗಿದ್ದು ನೋವು ತರಿಸುತ್ತದೆ. ಅದರಲ್ಲಿ ಹೆಚ್ಚಿನ ಮತಗಳು ಹೊರಟ್ಟಿ ಅವರ ಹೆಸರಿನ ಮುಂದೆ ಇದ್ದವು. ಉಣಕಲ್ಲ ಕ್ರಾಸ್‌ನಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ಬೆಂಬಲವೂ ಇದೆ. ಎಲ್ಲರೂ ಸೇರಿ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳೋಣ ಎಂದರು.

ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಂದೀಪ ಬೂದಿಹಾಳ ಮಾತನಾಡಿ, ಹೊರಟ್ಟಿಯವರದ್ದು ಬಹುಮುಖ ವ್ಯಕ್ತಿತ್ವವಾಗಿದೆ. ಅವರ ಮೌಲ್ಯಾಧಾರಿತ ಕಾರ್ಯಗಳು ಯುವ ಶಿಕ್ಷಕರಿಗೆ ಪ್ರೇರಣೆಯಾಗಿವೆ ಎಂದರು.

Advertisement

ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಶ್ಯಾಮ ಮಲ್ಲನಗೌಡರ ಶಿಕ್ಷಕರ ಭವನ ನಿರ್ಮಾಣಕ್ಕೆ 50 ಸಾವಿರ ರೂ. ಚೆಕ್‌ ಅನ್ನು ಹೊರಟ್ಟಿ ಅವರಿಗೆ ನೀಡಿದರು. ಮಹಾಪೌರ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ರಾಜಣ್ಣಾ ಕೊರವಿ ಮಾತನಾಡಿದರು. ಪಿ.ಎಸ್‌. ಹುದ್ದಾರ ಪ್ರಾಸ್ತಾವಿಕ ಮಾತನಾಡಿದರು.

ಡಾ| ಸುರೇಶ ತುವಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಾಗಿ ಮಾತನಾಡಿದರು. ದಯಾನಂದ ಮಾಸೂರು, ಜಗದೀಶ ಕಲ್ಯಾಣ ಶೆಟ್ಟರ, ಗೋವಿಂದ ರಡ್ಡಿ, ಸಿ.ಎಚ್‌.ಡೊಂಬರ, ಶಶಿಧರ ಇನ್ನಿತರರಿದ್ದರು. ಎನ್‌.ಎನ್‌. ಸವಣೂರು ಸ್ವಾಗತಿಸಿದರು.

ಶಿಕ್ಷಕರ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜ ಹೊರಟ್ಟಿಯವರು, ಶಿಕ್ಷಕರ ಹಿತ, ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿ ಎಂದಾಗ ಯಾವುದೇ ತ್ಯಾಗಕ್ಕೂ ಸಿದ್ಧ, ಎಂತಹದ್ದೇ ಸ್ಥಿತಿ ಎದುರಾದರೂ ಹಿಂದೇಟು ಹಾಕುವ ಪ್ರಮೇಯವೇ ಇಲ್ಲ. ನಾನೆಂದು ಶಿಕ್ಷಕರ ವಿಚಾರದಲ್ಲಿ ಜಾತಿ, ಮತ ಇಲ್ಲವೆ ನನಗೆ ಮತ ಹಾಕಿದ್ದಾರೋ ಇಲ್ಲವೋ ಎಂದು ಯೋಚನೆಯನ್ನೇ ಮಾಡಿಲ್ಲ. ಕಷ್ಟವೆಂದು ಬಂದವರಿಗೆ ಪರಿಹಾರದ ಪ್ರಾಮಾಣಿಕ ಯತ್ನ ಮಾಡಿದ್ದೇನೆ. ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಅಧಿಕಾರಿಗಳ ನಿರ್ಲಕ್ಷé, ಸರಕಾರಗಳ ನಿಷ್ಕಾಳಜಿಯಿಂದಾಗಿ ಹಲವು ಸಮಸ್ಯೆಗಳು ಎದುರಾಗಿವೆ. ಶಿಕ್ಷಕರು ಮಾತ್ರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿಕೆಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಉಣಕಲ್ಲ ಕ್ರಾಸ್‌ ಬಳಿ 20 ಗುಂಟೆ ಜಾಗವನ್ನು ಶಿಕ್ಷಕರ ಭವನಕ್ಕೆಂದು ಖರೀದಿ ಮಾಡಲಾಗಿದೆ. ಭವನ ನಿರ್ಮಾಣಕ್ಕೆ ಶಿಕ್ಷಕರು ನೆರವು ನೀಡಲು ಮುಂದಾದರೆ ಸರಕಾರ ಹಾಗೂ ದಾನಿಗಳ ನೆರವಿನೊಂದಿಗೆ ಉತ್ತಮ ಭವನ ನಿರ್ಮಾಣ ಮಾಡಲು ಯತ್ನಿಸುವುದಾಗಿ ಹೇಳಿದರು.

ಹೊರಟ್ಟಿ ಅವರು ಕೇವಲ ಶಿಕ್ಷಕರಿಗಷ್ಟೇ ಅಲ್ಲದೆ, ಯಾರೇ ಕಷ್ಟ-ಸಮಸ್ಯೆ ಎಂದು ಹೋದರೂ ಅವರಿಗೆ ಸ್ಪಂದಿಸುವ, ಸದಾ ಸಿಗುವ ನಾಯಕ. ಶಿಕ್ಷಕರಿಗಾಗಿಯೇ ಇರುವ ಹೊರಟ್ಟಿ ಅವರ ಹೆಸರು ಶಾಶ್ವತವಾಗಿಸಲು ಉಣಕಲ್ಲ ಕ್ರಾಸ್‌ನಲ್ಲಿ‌ ಜಾಗದಲ್ಲಿ ಶಿಕ್ಷಕರ ಭವನ ನಿರ್ಮಾಣ ಮಾಡಿ ಅದಕ್ಕೆ ಹೊರಟ್ಟಿ ಅವರ ಹೆಸರಿಡಬೇಕು. ಶಿಕ್ಷಕರು ಒಂದು ತಿಂಗಳ ವೇತನ ನೀಡಿದರೆ, ನಾನು ನನ್ನ ವ್ಯಾಪಾರದ ಒಂದು ವರ್ಷದ ಲಾಭ ನೀಡುತ್ತೇನೆ. –ಸುಗ್ಗಿ ಸುಧಾಕರ ಶೆಟ್ಟಿ, ಹು-ಧಾ ಬಂಟರ ಸಂಘದ ಅಧ್ಯಕ್ಷ

ತಂದೆಯವರು ಕುಟುಂಬಕ್ಕಿಂತ ಶಿಕ್ಷಕರ ಕೆಲಸಗಳಿಗೇ ಹೆಚ್ಚಿನ ಸಮಯ ನೀಡಿದ್ದಾರೆ. ಮಗನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿಗೆ ಬಂದಿದ್ದಾರೆ ಎಂಬುದು ಮಿಥ್ಯಾರೋಪ. ನನ್ನ ರಾಜಕೀಯ ಭವಿಷ್ಯದ ಉದ್ದೇಶವಾಗಿದ್ದರೆ ಅವರೆಂದೋ ರಾಜಿ ಮಾಡಿಕೊಳ್ಳಬಹುದಾಗಿತ್ತು. ನನಗೆ ರಾಜಕೀಯ ಒಗ್ಗುವುದಿಲ್ಲ. ಇಡೀ ನಮ್ಮ ಕುಟುಂಬ ಒಂದೇ ಒಂದು ಹಗರಣ, ಅವ್ಯವಹಾರ ಆರೋಪ ಹೊತ್ತಿಲ್ಲ. ತಂದೆಗೆ ಸಣ್ಣ ಕಪ್ಪುಚುಕ್ಕೆಯೂ ಬಾರದಂತೆ ನಡೆದುಕೊಂಡು ಬಂದಿದ್ದೇವೆ. –ವಸಂತ ಹೊರಟ್ಟಿ, ಬಸವರಾಜ ಹೊರಟ್ಟಿ ಪುತ್ರ

Advertisement

Udayavani is now on Telegram. Click here to join our channel and stay updated with the latest news.

Next