Advertisement

ನಂಬರ್‌ ಪ್ಲೇಟ್‌ ನಿಯಮಕ್ಕೆ ಕಿಮ್ಮತ್ತಿಲ್ಲ

09:50 AM Jun 24, 2022 | Team Udayavani |

ಹುಬ್ಬಳ್ಳಿ: ನಿಯಮಗಳ ಪ್ರಕಾರ ವಾಹನಗಳ ನೋಂದಣಿ ಸಂಖ್ಯೆ ಫಲಕ ಅಳವಡಿಕೆ ಮಾಡಬೇಕು ಎನ್ನುವ ಹೈಕೋರ್ಟ್‌ ಆದೇಶ ಕೇವಲ ದಾಖಲೆಯಲ್ಲಿ ಉಳಿದಿದೆ. ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಸರ್ಕಾರಿ ಲಾಂಛನ, ಚಿಹ್ನೆ ಬಳಕೆಯ ನಿಯಮಬಾಹಿರ ನೋಂದಣಿ ಫಲಕ ತೆರವಿಗೆ ಸಾರಿಗೆ ಹಾಗೂ ಪೊಲೀಸ್‌ ಇಲಾಖೆ ನಿರಾಸಕ್ತಿ ತೋರುತ್ತಿವೆ.

Advertisement

ಕೇಂದ್ರ ಮೋಟಾರು ವಾಹನಗಳ 1989 ನಿಯಮದ 50ರ ಅಡಿಯಲ್ಲಿ ನೋಂದಣಿ ಫಲಕ ಅಳವಡಿಕೆ ನಿಗದಿತ ಮಾನದಂಡಗಳಿವೆ. ಅನುಮತಿ ಇಲ್ಲದೆ ಸರ್ಕಾರಿ ಲಾಂಛನ, ಚಿಹ್ನೆಗಳನ್ನು ಬಳಸುವಂತಿಲ್ಲ. ನಿಯಮ ಮೀರಿ ಫ್ಯಾನ್ಸಿ ನೋಂದಣಿ ಫಲಕಗಳನ್ನು ಅಳವಡಿಸುವಂತಿಲ್ಲ. ಆದರೆ ಪ್ರತಿಷ್ಠಿತ ವ್ಯಕ್ತಿಗಳು, ಸರ್ಕಾರಿ ನೌಕರರು, ಸಂಘ-ಸಂಸ್ಥೆಗಳ ಪ್ರಮುಖರೇ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಹೆಸರುಗಳನ್ನು ಹೋಲುವಂತಹ ಲಾಂಛನಗಳ ಬಳಕೆ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಹೈಕೋರ್ಟ್‌ ಇದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಫಲಕಗಳ ತೆರವಿಗೆ ಗಡುವು ನೀಡಿದೆ. ಇತ್ತೀಚೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕಟ್ಟುನಿಟ್ಟಾಗಿ ಇಂತಹ ಫಲಕಗಳನ್ನು ತೆರವುಗೊಳಿಸಿ ದಂಡ ವಿಧಿಸಲು ಸಾರಿಗೆ ಹಾಗೂ ಪೊಲೀಸ್‌ ಇಲಾಖೆಗೆ ಸೂಚಿಸಿದ್ದಾರೆ. ಆದರೆ ಇದು ಕಾರ್ಯಗತಗೊಳ್ಳದೆ ಬೇಕಾಬಿಟ್ಟಿಯಾಗಿ ಸರ್ಕಾರಿ ಲಾಂಛನ, ಚಿಹ್ನೆಗಳ ಬಳಕೆ ಹೆಚ್ಚಾಗುತ್ತಿದೆ.

ರಾಜಕಾರಣಿಗಳು ಕಬ್ಬಿಣದ ಕಡಲೆ: ನಿಯಮ ಉಲ್ಲಂಘಿಸಿರುವವರ ಪೈಕಿ ರಾಜಕಾರಣಿಗಳು ಮೊದಲ ಸ್ಥಾನದಲ್ಲಿದ್ದಾರೆ. ಬೂತ್‌ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ಸ್ಥಾನ ಹೊಂದಿರುವ ಬಹುತೇಕರು ತಮ್ಮ ವಾಹನಗಳ ನಾಮಫಲಕದ ಮೇಲೆ ಪಕ್ಷದ ಚಿಹ್ನೆ, ಹುದ್ದೆ ಹಾಕಿಸಿದ್ದಾರೆ. ಇಂತಹವರನ್ನು ತಡೆದು ಫಲಕ ತೆಗಿಸಿ ದಂಡ ಹಾಕುವ ಗೋಜಿಗೆ ಸಾರಿಗೆ ಅಧಿಕಾರಿಗಳು ಅಥವಾ ಪೊಲೀಸರು ಮುಂದಾಗುತ್ತಿಲ್ಲ. ನಿಯಮಗಳು ಎಲ್ಲರಿಗೂ ಒಂದೆಯಾಗಿದ್ದರೂ ರಾಜಕಾರಣಿಗಳ ವಾಹನ ಕಬ್ಬಿಣದ ಕಡಲೆಯಂತೆ ಕಾಣಿಸುತ್ತಿವೆ.

Advertisement

ಬೈಕ್‌, ಹೊರ ರಾಜ್ಯದ ವಾಹನಗಳನ್ನು ಗುರಿಯಾಗಿಸಿಕೊಂಡು ದಾಖಲೆ ಪರಿಶೀಲಿಸುವ ಪೊಲೀಸರಿಗೆ ನಾಮಫಲಕ ನಿಯಮ ಉಲ್ಲಂಘನೆ ಕಾಣುತ್ತಿಲ್ಲ. ಇನ್ನು ಸಾರಿಗೆ ಅಧಿಕಾರಿಗಳು ಹೆದ್ದಾರಿ, ಪ್ರಮುಖ ರಸ್ತೆಗಳಲ್ಲಿ ಸರಕು ವಾಹನಗಳ ದಾಖಲೆಗಳ ಪರಿಶೀಲನೆಗೆ ಮಾತ್ರ ಸೀಮಿತವಾಗಿದ್ದಾರೆ. ನಿಯಮ ಪಾಲನೆಗೆ ಸೂಚಿಸಿದರೆ ಮಂತ್ರಿಗಳು, ಶಾಸಕರ ಮೂಲಕ ಒತ್ತಡ ಹೇರುವ ಕೆಲಸ ಮಾಡುತ್ತಾರೆ ಎನ್ನುತ್ತಾರೆ ಕೆಲ ಅಧಿಕಾರಿಗಳು.

ಸರ್ಕಾರದ ಸಂಸ್ಥೆ, ನಿಗಮ ಕ್ಯಾರೆ ಎನ್ನುತ್ತಿಲ್ಲ: ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಆದೇಶದ ಪ್ರಕಾರ ಸರ್ಕಾರದ ವಾಹನಗಳನ್ನು ಹೊರತುಪಡಿಸಿ ಸರ್ಕಾರದ ಅಧೀನದಲ್ಲಿ ಬರುವ ಮಂಡಳಿ, ಪ್ರಾಧಿಕಾರ, ಸಂಸ್ಥೆಗಳು ಸರ್ಕಾರದ ಲಾಂಛನ, ಚಿಹ್ನೆ ಬಳಸುವಂತಿಲ್ಲ. ಆದರೆ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಇಂದಿಗೂ ಸರ್ಕಾರೇತರ ವಾಹನಗಳು ಸರ್ಕಾರಿ ಲಾಂಛನ, ಹೊಂದಿರುವ ಹುದ್ದೆ ಸಮೇತ ಫಲಕ ರಾರಾಜಿಸುತ್ತಿವೆ.

ಅಧಿಕಾರಿಗಳ ವಾಹನಗಳ ಮೇಲಿನ ಫಲಕ ತೆರವುಗೊಳಿಸಬಹುದಾದರೂ ನಿಗಮದ ಅಧ್ಯಕ್ಷ-ಉಪಾಧ್ಯಕ್ಷರ ವಾಹನಗಳ ಮೇಲಿನ ಫಲಕ ತೆರವುಗೊಳಿಸುವ ಸಾಮರ್ಥ್ಯ ಅಲ್ಲಿನ ಇಲಾಖೆ ಮುಖ್ಯಸ್ಥರಿಗೆ ಇಲ್ಲದಂತಾಗಿದೆ. ಗುತ್ತಿಗೆ ಆಧಾರದ ಮೇಲೆ ಪಡೆದಿರುವ ಹಳದಿ ನೋಂದಣಿ ಫಲಕ ವಾಹನಗಳು ಕೂಡ ಸರ್ಕಾರಿ ಲಾಂಛನ ಬಳಸುತ್ತಿರುವುದು ಆದೇಶವನ್ನೇ ಅಣಕಿಸುವಂತಿದೆ.

ಪ್ರತಿ ತಿಂಗಳು ಇಂತಹ ನಾಮಫಲಕ ತೆರವುಗೊಳಿಸಿದ ಬಗ್ಗೆ ಸಾರಿಗೆ ಇಲಾಖೆ ಹೈಕೋರ್ಟ್‌ಗೆ ಮಾಹಿತಿ ನೀಡಬೇಕು. ಆದರೆ ವಾಸ್ತವ ನೋಡಿದರೆ ಸಾರಿಗೆ ಇಲಾಖೆ ಹಾಗೂ ಪೊಲೀಸರ ಈ ನಡೆ ಕೇವಲ ಆದೇಶ-ಕಡತಕ್ಕೆ ಸೀಮಿತ ಎನ್ನುವಂತಾಗಿದೆ.

ಸಿಎಸ್‌ ಆದೇಶದಲ್ಲಿ ಏನಿದೆ?

ಸರ್ಕಾರಿ ಸ್ವಾಮ್ಯದ ನಿಗಮ, ಮಂಡಳಿ, ಸಂಸ್ಥೆಗಳ ವಾಹನಗಳಲ್ಲಿ ಸರ್ಕಾರಿ ಲಾಂಛನ, ಚಿಹ್ನೆ ಬಳಸುವಂತಿಲ್ಲ. ಬಳಸುತ್ತಿದ್ದರೆ ಅವುಗಳನ್ನು ತೆರವುಗೊಳಿಸಿ ಮಾಹಿತಿ ನೀಡಬೇಕು. ಒಂದು ವೇಳೆ ನಿಯಮ ಪಾಲನೆ ಮಾಡದಿದ್ದರೆ ಅದರ ಮುಖ್ಯಸ್ಥರು ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ. ಅನಧಿಕೃತ ನಾಮಫಲಕ ತಯಾರಿಸುವವರ ಮೇಲೆ, ಸರ್ಕಾರದ ಚಿಹ್ನೆ, ಲಾಂಛನ, ಫ್ಯಾನ್ಸಿ ನೋಂದಣಿ ಫಲಕ ತಯಾರಕರ ವಿರುದ್ಧ ಪೊಲೀಸ್‌ ಇಲಾಖೆ ಕಾರ್ಯಾಚರಣೆ ಕೈಗೊಳ್ಳಬೇಕು. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈಗಾಗಲೇ ಪೊಲೀಸ್‌ ಇಲಾಖೆ ಸಿಆರ್‌ಪಿಸಿ ಕಾಯ್ದೆಯ ಕಲಂ 144 (2) ಪ್ರಕಾರ ಫ್ಯಾನ್ಸಿ ನಂಬರ್‌ ತಯಾರಿಕೆ ಹಾಗೂ ಅಳವಡಿಕೆ ಎರಡನ್ನೂ ನಿಷೇಧಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ನಿಗಮ, ಮಂಡಳಿ, ಪ್ರಾಧಿಕಾರ ಹಾಗೂ ಖಾಸಗಿ ವಾಹನಗಳು ಯಾವುದೇ ಕಾರಣಕ್ಕೂ ಸರ್ಕಾರಿ ಲಾಂಛನ, ಚಿಹ್ನೆ ಬಳಸುವಂತಿಲ್ಲ. ನಿಯಮ ಬಾಹಿರ ನೋಂದಣಿ ಫಲಕ ತೆರವುಗೊಸುವಂತೆ ಈಗಾಗಲೇ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ. ಇಂತಹ ಫಲಕ ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ನಿಯಮ ಬಾಹಿರ ಹಾಗೂ ಸರ್ಕಾರಿ ಲಾಂಛನ, ಚಿಹ್ನೆ ಬಳಸಿದ ನಾಮಫಲಕ ಹೊಂದಿರುವ ವಾಹನಗಳ ಚಿತ್ರ ತೆಗೆದು ಆಯಾ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಕಳುಹಿಸಬಹುದು.  –ಎಂ.ಶೋಭಾ,  ಜಂಟಿ ಆಯುಕ್ತರು, ಸಾರಿಗೆ ಇಲಾಖೆ           

ಹೇಮರಡ್ಡಿ ಸೈದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next