Advertisement

ವೃತ್ತಿ-ಪ್ರವೃತ್ತಿ ನಡುವೆ ಸಮತೋಲನ ಅವಶ್ಯ: ಕುಲಕರ್ಣಿ

05:00 PM Apr 16, 2022 | Team Udayavani |

ಹುಬ್ಬಳ್ಳಿ: ವೃತ್ತಿ ಮತ್ತು ಪ್ರವೃತ್ತಿ ನಡುವೆ ಸಮತೋಲನ ಅವಶ್ಯವಾಗಿದ್ದು, ಸುದ್ದಿ-ವಿದ್ಯಮಾನಗಳ ಧಾವಂತದಲ್ಲಿರುವ ಮಾಧ್ಯಮದವರಿಗೆ ಇದು ಹೆಚ್ಚು ಅನ್ವಯವಾಗುತ್ತದೆ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

Advertisement

ಹಿರಿಯ ಪತ್ರಕರ್ತ ಡಾ| ಶಿವರಾಮ ಅಸುಂಡಿ ಅವರ “ಕೋಣನ ಮುಂದೆ ಕಿನ್ನರಿ ಮತ್ತೆರಡು ನಾಟಕ ಹಾಗೂ ಚಿತ್ರಂ ಭಾಳಾರೆ ವಿಚಿತ್ರಂ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮಾಧ್ಯದವರಿಗೆ ಅವರ ವೃತ್ತಿಯ ಜತೆಗೆ ಸಾಹಿತ್ಯ ರಚನೆ ಇನ್ನಿತರ ಪ್ರವೃತ್ತಿಗಳು ಇದ್ದರೆ ಅವುಗಳನ್ನು ಸರಿದೂಗಿಸಿಕೊಂಡು ಹೋಗಬೇಕಾಗಿದೆ ಎಂದರು.

ಪ್ರತಿಯೊಬ್ಬರಲ್ಲೂ ಸಂತ-ಸೈತಾನ ಇರುತ್ತಾನೆ. ಇದನ್ನು ಗುರುತಿಸುವ ಕೆಲಸ ಆಗಬೇಕು. ಇದಕ್ಕೆ ಸೃಜನಶೀಲ ಮನಸ್ಸು ಮುಖ್ಯ. ಇಂದಿನ ಸ್ಥಿತಿಯಲ್ಲಿ ಮಾತುಗಳೇ ಎಲ್ಲವನ್ನು ಆಳುತ್ತಿವೆ. ಅಂಕಣ ಬರಹ ಅವಸರದ ಬರಹ ಆಗುತ್ತಿವೆ. ಬರಹಗಾರರಿಗೆ ಭಾಷೆಯ ಸೊಗಡು ಅತ್ಯವಶ್ಯ. ಬರವಣಿಗೆಗೆ ಮುಂದಾಗುವವರು ಇದರ ಮೇಲೆ ಪ್ರಭುತ್ವ ಸಾಧಿಸಬೇಕಾಗುತ್ತದೆ. ಗಟ್ಟಿ ರೂಪದ ಅಂಕಣಗಳಿಗೆ ಇದು ಅವಶ್ಯ ಎಂದು ಹೇಳಿದರು.

ರಂಗಭೂಮಿ ಅದರಲ್ಲೂ ಬೀದಿನಾಟಕಗಳು ಕ್ಷೀಣಿಸುತ್ತಿವೆ. ಬೀದಿನಾಟಕಗಳು ಸರಕಾರದ, ಜನರ ಧ್ವನಿಯಾಗಿವೆ. ಅವುಗಳ ಮಹತ್ವ ಕುಗ್ಗುವಂತಾಗಬಾರದು. ರಂಗಭೂಮಿ ಕುರಿತಾಗಿ ಒಲವು ಹೆಚ್ಚಬೇಕು. ಶಿವರಾಮ ಅಸುಂಡಿ ಅವರನ್ನು ಹಲವು ವರ್ಷಗಳಿಂದಲೇ ಬಲ್ಲೆ. ಮಾಧ್ಯಮದಲ್ಲಿದ್ದುಕೊಂಡೇ ಸೃಜನಶೀಲ ಮನಸ್ಸಿನೊಂದಿಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ರಂಗಕರ್ಮಿಯಾದ ನನಗೆ ಅವರು ಬರೆದ ನಾಟಕಗಳು ಖುಷಿ ತರಿಸಿದೆ.ಕಲ್ಯಾಣ ಕರ್ನಾಟಕದ ಹಲವು ವಿಷಯಗಳನ್ನು ನಾಟಕದಲ್ಲಿ ತಂದಿದ್ದಾರೆ. ಅಲ್ಲಿನ ಭಾಷೆಯ ಸೊಗಡು ಮೂಡಿಸಿದ್ದಾರೆ ಎಂದರು.

ಕೋಣನ ಮುಂದೆ ಕಿನ್ನರಿ ಮತ್ತೆರಡು ನಾಟಕ ಕೃತಿ ಪರಿಚಯಿಸಿದ ಸಾಹಿತಿ ಮಹಾಂತಪ್ಪ ನಂದೂರ, ಮಾಧ್ಯಮದಲ್ಲಿದ್ದವರಿಗೆ ಸಾಹಿತ್ಯ ಬರಹದ ಬಿಕ್ಕಟ್ಟು ಇರುತ್ತದೆ. ಅದನ್ನು ಮೀರಿ ಶಿವರಾಮ ಅಸುಂಡಿ ಅವರು ನಾಟಕ ಕೃತಿ ರಚಿಸಿದ್ದಾರೆ. ನಾಟಕದಲ್ಲಿ ಹಲವು ಸೂಕ್ಷ್ಮ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಸಾಮಾಜಿಕ ಹಾಗೂ ಮಾನವೀಯ ಕಳಕಳಿ ತೋರಿದ್ದಾರೆ ಎಂದು ಹೇಳಿದರು.

Advertisement

ಪ್ರಜಾವಾಣಿ ಸ್ಥಾನಿಕ ಸಂಪಾದಕಿ ಎಸ್‌.ರಶ್ಮಿ ಚಿತ್ರಂ ಭಳಾರೆ ವಿಚಿತ್ರಂ ಕೃತಿ ಪರಿಚಯಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಎಂ ಟ್ರಸ್ಟ್‌ ಕಾರ್ಯದರ್ಶಿ ಡಾ| ಎಂ. ಬೈರೇಗೌಡ, ಕೃತಿಕಾರ ಡಾ| ಶಿವರಾಮ ಅಸುಂಡಿ ವೇದಿಕೆಯಲ್ಲಿದ್ದರು. ಮಹೇಂದ್ರ ಚವ್ಹಾಣ ಸ್ವಾಗತಿಸಿದರು. ಸುಶೀಲೇಂದ್ರ ಕುಂದರಗಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next