Advertisement

ಈ ನಿಗೂಢ ಗುಹೆಯಲ್ಲಿದೆ ಚಿನ್ನದ ಖಜಾನೆ: ಇದರ ರಹಸ್ಯ ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲವಂತೆ

04:46 PM Mar 25, 2023 | ಸುಧೀರ್ |

ದಿನ ಬೆಳಗಾದರೆ ಹೊಸ ಹೊಸ ವಿಷಯಗಳು ಸಾಮಾಜಿಕ ಜಾಲತಾಣ, ಮತ್ತಿತರ ಮೂಲಗಳಿಂದ ಕಾಣಸಿಗುತ್ತವೆ, ಹಾಗೆ ಜಗತ್ತಿನಲ್ಲಿ ಅನೇಕ ನಿಗೂಢ ಸ್ಥಳಗಳಿವೆ. ಆ ಸ್ಥಳಗಳ ಬಗ್ಗೆ ಯಾರಾದರೂ ಹೇಳಿದಾಗ ಅಥವಾ ಅವುಗಳನ್ನು ನಾವೇ ಕಣ್ಣಾರೆ ಕಂಡಾಗ ಹೀಗೂ ಇರಬಹುದೇ ಎಂದು ನಾವೇ ಒಮ್ಮೆ ಬೆರಗಾಗುತ್ತೇವೆ. ಬಹುತೇಕರಿಗೆ ಅದರಲ್ಲೂ ಪ್ರವಾಸ ಪ್ರಿಯರಿಗೆ ಇಂತಹ ನಿಗೂಢ ಸ್ಥಳಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿ ಇರುತ್ತದೆ. ಹಾಗಾದರೆ ಬನ್ನಿ ಬಿಹಾರದಲ್ಲಿ ಚಿನ್ನದ ಖಜಾನೆ ಇರುವ ಒಂದು ನಿಗೂಢ ಗುಹೆಯ ಬಗ್ಗೆ ತಿಳಿದುಕೊಂಡು ಬರೋಣ…

Advertisement

ಬಿಹಾರದ ನಳಂದ ಜಿಲ್ಲೆಯಲ್ಲಿರುವ ಒಂದು ಸಣ್ಣ ಊರಾದ ರಾಜ್‌ಗೀರ್‌ನಲ್ಲಿ ಸೋನ್ ಭಂಡಾರ್ ಎಂಬ ಗುಹೆಯಿದ್ದು ಇದುವೇ ನಾವು ಹೇಳ ಹೊರಟಿರುವ ನಿಗೂಢ ಗುಹೆ. ಹೆಸರೇ ಸೂಚಿಸುವಂತೆ ‘ಸೋನ್ ಭಂಡಾರ್’ ಅಂದರೆ ಚಿನ್ನದ ಖಜಾನೆ, ಈ ಗುಹೆಯಲ್ಲಿ ಲೆಕ್ಕ ಹಾಕಲು ಸಾಧ್ಯವೇ ಇಲ್ಲದಷ್ಟು ಚಿನ್ನದ ಖಜಾನೆ ಇದೆಯಂತೆ.

ರಾಜ್ ಗಿರ್ ಬಿಹಾರ ರಾಜ್ಯದ ಒಂದು ಸಣ್ಣ ಪಟ್ಟಣವಾಗಿದ್ದು, ಇದು ಅನೇಕ ವಿಷಯಗಳಿಗೆ ಹೆಸರುವಾಸಿಯಾಗಿದೆ. ಈ ನಗರವು ಪ್ರಾಚೀನ ಕಾಲದಲ್ಲಿ ಮಗಧದ ರಾಜಧಾನಿಯಾಗಿತ್ತು. ಅಲ್ಲದೆ, ಭಗವಾನ್ ಬುದ್ಧನು ಮಗಧದ ಚಕ್ರವರ್ತಿ ಬಿಂಬಿಸಾರಗೆ ಉಪದೇಶವನ್ನು ನೀಡಿದ್ದು ಕೂಡಾ ಇಲ್ಲಿಯೇ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ರಾಜ್ ಗಿರ್ ಭಗವಾನ್ ಬುದ್ಧನಿಗೆ ಸಂಬಂಧಿಸಿದ ಸ್ಮಾರಕಗಳು ಮತ್ತು ಸೋನ್ ಭಂಡಾರ್ ಗುಹೆಗಳಿಂದಾಗಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಸೋನ್ ಭಂಡಾರ್’ ನಲ್ಲಿ ಗುಪ್ತ ನಿಧಿ ಇದೆ ಎಂದು ಹೇಳಲಾಗುತ್ತದೆ. ಆದರೆ ಇಲ್ಲಿಯವರೆಗೆ ಯಾರಿಗೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ನಿಧಿಯು ಮೌರ್ಯ ದೊರೆ ಬಿಂಬಿಸಾರನದ್ದು ಎಂದು ಹೇಳಲಾಗುತ್ತದೆ, ಆದರೂ ಕೆಲವರು ಇದನ್ನು ಹಿಂದಿನ ಮಗಧ ಚಕ್ರವರ್ತಿ ಜರಾಸಂಧನದ್ದು ಎಂದೂ ಕೂಡಾ ಹೇಳುತ್ತಾರೆ.

ಕ್ರಿ.ಪೂ 3 ಅಥವಾ 4 ನೇ ಶತಮಾನದಲ್ಲಿ ವೈಬರ್ ಬೆಟ್ಟದ ತಪ್ಪಲಿನಲ್ಲಿ ಬೃಹತ್ ಕಲ್ಲಿನಿಂದ ಈ ಗುಹೆ ನಿರ್ಮಿಸಲಾಗಿದ್ದು, ಇದರ ಪ್ರವೇಶದ್ವಾರದ ಬಂಡೆಯ ಮೇಲೆ ಗುಪ್ತ ಭಾಷೆಯಲ್ಲಿ ಬರೆದ ಶಾಸನದ ಪ್ರಕಾರ, ಈ ಗುಹೆಗಳನ್ನು ಜೈನ ಮುನಿಯವರು ನಿರ್ಮಿಸಿದ್ದಾರೆ ಎಂದು ಹೇಳಲಾಗಿದೆ. ಇಲ್ಲಿ ಕಂಡುಬರುವ ವಿಷ್ಣುವಿನ ವಿಗ್ರಹದ ಕುರುಹುಗಳಿಂದ ಈ ಗುಹೆ ಜೈನ ಧರ್ಮಕ್ಕೆ ಸೇರಿದ್ದು ಎಂಬುದಕ್ಕೆ ಪುಷ್ಟಿ ನೀಡುತ್ತದೆ.

Advertisement

ಬಿಂಬಿಸಾರನನ್ನು ಅವನ ಸ್ವಂತ ಮಗ ಅಜಾತಶತ್ರು ರಾಜ್ಯದ ಆಸೆಯಿಂದ ಬಂಧಿಸಿಟ್ಟಿದ್ದ. ಕೊನೆಗೆ ಇಲ್ಲೇ ಈತ ಮರಣವನ್ನು ಹೊಂದಿದ್ದ. ಆದರೆ, ತನ್ನ ಆಡಳಿತಾವಧಿಯಲ್ಲಿ ಬಿಂಬಿಸಾರನು ತನ್ನ ಚಿನ್ನದ ಖಜಾನೆ ರಕ್ಷಿಸಲು ಈ ಗುಹೆ ನಿರ್ಮಿಸಿದ್ದ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಇಲ್ಲಿ ಎರಡು ಗುಹೆಗಳನ್ನು ನಿರ್ಮಿಸಲಾಗಿತ್ತು. ಇದರಲ್ಲಿ ಮೊದಲ ಗುಹೆಯಲ್ಲಿ ಸೈನಿಕರು ಪಹರೆ ಕಾಯುತ್ತಿದ್ದರೆ, ಎರಡನೇ ಗುಹೆಯಲ್ಲಿ ಅಗಾಧ ಚಿನ್ನವನ್ನು ಇದರಲ್ಲಿ ಬಚ್ಚಿಡಲಾಗಿತ್ತು ಎನ್ನಲಾಗಿದೆ.

ಹೀಗಿದೆ ಗುಹೆ :
ಸೋನ್‌ ಭಂಡಾರ್ ಗುಹೆಯೊಳಗೆ ಪ್ರವೇಶಿಸಿದಾಗ 10.4 ಮೀಟರ್ ಉದ್ದ, 5.2 ಮೀಟರ್ ಅಗಲ ಮತ್ತು 1.5 ಮೀಟರ್ ಎತ್ತರದ ಕೋಣೆಯನ್ನು ನೋಡಬಹುದು. ಈ ಕೋಣೆ ನಿಧಿಯನ್ನು ಕಾಪಾಡುವ ಸೈನಿಕರದ್ದಾಗಿತ್ತು. ಈ ಕೋಣೆ ಹಿಂದಿನ ಬಾಗಿಲು ನಿಧಿ ಇರುವ ಕೋಣೆಯನ್ನು ತೆರೆದುಕೊಳ್ಳುತ್ತದೆ. ಆದರೆ ಈ ಮಾರ್ಗದ ಬಾಗಿಲನ್ನು ದೊಡ್ಡ ಕಲ್ಲಿನಿಂದ ಮುಚ್ಚಲಾಗಿದ್ದು ಇದನ್ನು ಇದುವರೆಗೂ ಯಾರಿಂದಲೂ ತೆರೆಯಲಾಗಲಿಲ್ಲ ಸಾಕಷ್ಟು ಮಂದಿ ಪ್ರಯತ್ನ ಪಟ್ಟರೂ ಈ ಕಲ್ಲನ್ನು ತೆರೆಯಲು ವಿಫಲರಾಗಿದ್ದಾರೆ ಎನ್ನಲಾಗಿದೆ.

ಈ ಚಿನ್ನದ ನಿಧಿಗೆ ಪುಷ್ಠಿ ನೀಡುವಂತೆ, ಗುಹೆಯ ಒಂದು ಗೋಡೆಯ ಮೇಲೆ, ದ್ವಾರದಂತಹ ರಚನೆ ಇದೆ. ಅದರ ಪಕ್ಕದಲ್ಲಿಯೇ ಓದಲಾಗದ ಶಾಸನವಿದೆಯಂತೆ. ಇದು ಒಂದು ರೀತಿಯ ರಹಸ್ಯವಾದ ಪದ ಬಳಕೆ ಮಾಡಿರುವ ಶಾಸನ ಎಂದು ಸ್ಥಳೀಯರು ಹೇಳುತ್ತಾರೆ. ಇಂದಿನವರೆಗೂ ಆ ಶಾಸನದಲ್ಲಿರುವ ಪದವನ್ನು ಅರ್ಥ ಮಾಡಿಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ.

ಈ ಸೋನ್ ಭಂಡಾರ ನಿಧಿಯನ್ನು ಹುಡುಕಲು ನಿರಂತರವಾಗಿ ಪ್ರಯತ್ನಗಳು ಕೂಡಾ ನಡೆಯುತ್ತಿವೆಯಂತೆ. ಅನಾದಿ ಕಾಲದಿಂದಲೂ ಇಲ್ಲಿನ ಗುಹೆಯನ್ನು ಬಗೆದು ಚಿನ್ನದ ಮೂಲವನ್ನು ಹುಡುಕಲು ಹಲವು ತಂಡಗಳು ಯತ್ನಿಸಿ ವಿಫಲವಾಗಿವೆ. ಒಮ್ಮೆ ಬ್ರಿಟಿಷ್ ಸರ್ಕಾರದ ಅಧಿಕಾರಿಗಳು ಗುಹೆಯ ಗೋಡೆಗಳನ್ನು ಬಲವಾದ ಸ್ಫೋಟಕಗಳಿಂದ ಸ್ಫೋಟಿಸಲು ಪ್ರಯತ್ನಿಸಿ ನಿಧಿಯನ್ನು ಹೊರತೆಗೆಯಲು ಯತ್ನಿಸಿದ್ದರು. ಆದರೆ ಅದೂ ಕೂಡಾ ವಿಫಲವಾಗಿತ್ತಂತೆ ಅಂದಿನಿಂದ ಜನರಿಗೆ ಈ ಗುಹೆಯ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗತೊಡಗಿದೆ.

ತಲುಪುವುದು ಹೇಗೆ :
ಸೋನ್‌ ಭಂಡಾರ್ ನೋಡಲು ಪ್ರತಿ ವರ್ಷ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ರಾಜ್‌ಗಿರ್‌’ ನಿಂದ ಸೋನ್‌ ಭಂಡಾರ್ ಗುಹೆಗಳಿಗೆ ಬಸ್ಸು ಸೇರಿದಂತೆ ಇತರ ಬಾಡಿಗೆ ವಾಹನಗಳೂ ಇಲ್ಲಿ ಲಭ್ಯವಿದೆ ಅಥವಾ ನಿಮ್ಮದೇ ವಾಹನವಿದ್ದರೆ ಗುಹೆಯ ಬಳಿಗೆ ತೆರಳಬಹುದು.

– ಸುಧೀರ್. ಎ

Advertisement

Udayavani is now on Telegram. Click here to join our channel and stay updated with the latest news.

Next