Advertisement

ಕೆರೆಗೆ ನೀರು ಹರಿಸದ್ದಕ್ಕೆ ಸಚಿವರ ಕಾರಿಗೆ ಮುತ್ತಿಗೆ

07:25 AM Mar 06, 2019 | Team Udayavani |

ಚಾಮರಾಜನಗರ/ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಕೆರೆಗೆ ನೀರು ತುಂಬಿಸುವ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ನಿರಾಸಕ್ತಿ ವಹಿಸಿದ್ದಾರೆಂದು ಆರೋಪಿಸಿ ಆ ಭಾಗದ ರೈತರು, ಶಾಸಕ ನಿರಂಜನಕುಮಾರ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಬಳಿಕ ಸಚಿವರ ಕಾರಿಗೆ ಮುತ್ತಿಗೆ ಹಾಕಿದರು.

Advertisement

ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ಜಾಕ್ವೆಲ್‌ನಿಂದ ನೀರೆತ್ತಿ ವಡ್ಡಗೆರೆ ಕೆರೆಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲು ಕಾರ್ಯಕ್ರಮ ನಿಗದಿಯಾಗಿತ್ತು. ಕೊನೆ ಕ್ಷಣದಲ್ಲಿ ಕಾರ್ಯಕ್ರಮ ರದ್ದುಗೊಳಿಸಿದ್ದಕ್ಕೆ ಆಕ್ರೋಶಗೊಂಡ ಗುಂಡ್ಲುಪೇಟೆ ಶಾಸಕ ಸಿ.ಎಸ್‌. ನಿರಂಜನ್‌ಕುಮಾರ್‌ ಹಾಗೂ ರೈತರು ನಗರದ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಸಚಿವ ಪುಟ್ಟರಂಗಶೆಟ್ಟಿ ವಿರುದ್ಧ ಪ್ರತಿಭಟನೆ ನಡೆಸಿದರು.

ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ಬಿಡುವ ಕಾಮಗಾರಿ ಸಂಪೂರ್ಣ ಮುಗಿದು ರಾಜಕೀಯ ಮೇಲಾಟದಿಂದ ನೀರು ಬಿಡುಗಡೆಗೆ ಚಾಲನೆ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟರ ಬೇಜವಾಬ್ದಾರಿತನದಿಂದ ಜನರು ಬಿರು ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿಗೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹುತ್ತೂರು ಕೆರೆಯಿಂದ ಅರಕಲವಾಡಿ ಕೆರೆಗೂ ನೀರು ಬಿಡುವ ಕಾಮಗಾರಿ ಪ್ರಗತಿಯಲ್ಲಿದೆ. ಅದು ಮುಗಿಯಲು ಇನ್ನೂ ಕೆಲವಾರು ತಿಂಗಳು ಬೇಕು. ಆದರೆ, ವಡ್ಡಗೆರೆ ಕೆರೆಗೆ ನೀರು ತುಂಬಿಸುವ ಕಾಮಗಾರಿ ಮುಗಿದು ಎರಡು ತಿಂಗಳಾಗಿದೆ. ಅರಕಲವಾಡಿ ಕೆರೆಗೆ ನೀರು ತುಂಬಿಸುವ ಕಾಮಗಾರಿ ಮುಗಿಯುವವರೆಗೂ ವಡ್ಡಗೆರೆ ಕೆರೆಗೆ ನೀರು ತುಂಬಿಸುವುದು ಬೇಡ ಎಂಬ ಕೆಲವರ ಮಾತಿಗೆ ಬೆಲೆ ನೀಡಿ ಸಚಿವರು ನೀರು ಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಚಿವ ಸಿ. ಪುಟ್ಟರಂಗಶೆಟ್ಟಿ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸದೆ ಹೋಗಲು ಯತ್ನಿಸಿದಾಗ ಬಿಜೆಪಿ ಶಾಸಕ ನಿರಂಜನ್‌ ಕುಮಾರ್‌  ಹಾಗೂ ರೈತರು ಸಚಿವರ ಕಾರಿಗೆ ಮುತ್ತಿಗೆ ಹಾಕಿದರು. ದಿಢೀರನೇ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ, ಯಾವ ಕಾರಣಕ್ಕೆ ಹೀಗೆ ಮಾಡಿದರು ಎಂದು ಹೇಳಬೇಕು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಮಜಾಯಿಷಿ ನೀಡಬೇಕು ಎಂದು ಪ್ರಶ್ನಿಸಿದರು.

Advertisement

ರೈತರ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಡ. ಮಾಹಿತಿ ಕೊರತೆಯಿಂದ ಸಚಿವರು ಕಾರ್ಯಕ್ರಮ ರದ್ದುಗೊಳಿಸಿದ್ದಾರೆ ಎಂದು ಭಾವಿಸುತ್ತೇನೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕು ಎಂದು ಶಾಸಕ ನಿರಂಜನಕುಮಾರ್‌ ಒತ್ತಾಯಿಸಿದರು. ಕಾರಿನಿಂದ ಇಳಿದು ರೈತರ ಸಮಸ್ಯೆಯನ್ನು ಆಲಿಸದೇ ಕಾರಿನಲ್ಲೇ ಕುಳಿತಿದ್ದ  ಸಿ. ಪುಟ್ಟರಂಗಶೆಟ್ಟಿ ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಶಾಸಕ ನಿರಂಜನ್‌ಕುಮಾರ್‌ ಸಚಿವರ ಮಧ್ಯಪ್ರವೇಶಿಸಿದರು. ರೈತರು ಪ್ರವಾಸಿ ಮಂದಿರಕ್ಕೆ ಬನ್ನಿ ಅಲ್ಲೇ ಮಾತನಾಡೋಣ ಎಂದು ಹೇಳಿ ಸಚಿವರು, ಶಾಸಕ ನಿರಂಜನ್‌ ಅವರನ್ನು  ಕಾರಿನಲ್ಲಿ ಕರೆದುಕೊಂಡು ಹೋದರು.

ಆದರೆ, ಪ್ರವಾಸಿ ಮಂದಿರಕ್ಕೆ ರೈತರು ಎಲ್ಲರು ಆಗಮಿಸಿದಾಗ ಸಚಿವ ಸಿ. ಪುಟ್ಟರಂಗಶೆಟ್ಟಿ ಮತ್ತು ಶಾಸಕ ನಿರಂಜನ್‌ ಕುಮಾರ್‌  ಪ್ರವಾಸಿಮಂದಿರದಲ್ಲಿ ಇಲ್ಲದಿರುವುದನ್ನು ಕಂಡು ಸಚಿವರು ಹಾಗೂ ಶಾಸಕ ನಿರಂಜನ್‌ ಕುಮಾರ್‌ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಮಲ್ಲೇಶ್‌, ತಾಪಂ ಸದಸ್ಯ ಮಹದೇವಸ್ವಾಮಿ, ತಾಲೂಕು ರೈತ ಸಂಘದ ಅಧ್ಯಕ್ಷ ಸಂಪತ್ತು, ಮುಖಂಡರಾದ ಅಭಿಷೇಕ್‌, ನಾಗೇಂದ್ರ ಸೇರಿದಂತೆ 50ಕ್ಕೂ ಹೆಚ್ಚು ರೈತರು, ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next