Advertisement

ಎಲ್ಲ ಜಿಲ್ಲೆಗಳಲ್ಲಿ ಚುರುಕಾಗಲಿ ಆಡಳಿತ ಯಂತ್ರ; ಜಿಲ್ಲಾ ಉಸ್ತುವಾರಿ ಸಚಿವರ ಗೈರಿನದ್ದೇ ಚಿಂತೆ

01:33 AM May 11, 2022 | Team Udayavani |

ಬೆಂಗಳೂರು: ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳ ತ್ವರಿತ ಅನುಷ್ಠಾನದ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ಯಂತ್ರವನ್ನು ಚುರುಕುಗೊಳಿಸುತ್ತಿದ್ದು, ಇದೇ ಮಾದರಿಯ ಕಾರ್ಯನಿರ್ವಹಣೆ ಜಿಲ್ಲಾಮಟ್ಟದಲ್ಲೂ ನಡೆಯಬೇಕಿದೆ.

Advertisement

ಪ್ರಮುಖ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಮುಖ್ಯಮಂತ್ರಿ ಸರಣಿ ಸಭೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ, “ಉದಯವಾಣಿ’ ರಿಯಾಲಿಟಿ ಚೆಕ್‌ ನಡೆಸಿದ್ದು, ತಳಮಟ್ಟದಲ್ಲಿನ ಗೋಜಲು-ಗೊಂದಲಗಳನ್ನು ಪಟ್ಟಿ ಮಾಡುವುದರ ಜತೆಗೆ, ಜಿಲ್ಲಾ ಉಸ್ತುವಾರಿ ಸಚಿವರು ಎಷ್ಟರ ಮಟ್ಟಿಗೆ ಕಾರ್ಯತತ್ಪರರಾಗಿದ್ದಾರೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿತು.

ಬಜೆಟ್‌ ಅನಂತರ ಬಹುತೇಕ ಜಿಲ್ಲೆಗಳಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯದಿರುವುದು ಹಾಗೂ ಕೆಲವು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ಭೇಟಿಯೇ ಅಪರೂಪವಾಗಿರುವುದು ಕಂಡುಬಂದಿದೆ. ಇದಕ್ಕೆ ಜಿಲ್ಲೆಗಳಲ್ಲಿ ಕೇಳಿ ಬರುವ ಆರೋಪ ಮಾತ್ರ ಗಮನಾರ್ಹವಾಗಿದೆ. ಆಯಾ ಜಿಲ್ಲೆಗಳ ಸಚಿವರನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದರೆ ಸರಿ ಹೋಗಬಹುದು ಎಂದೂ ಸ್ಥಳೀಯರು ಹೇಳುತ್ತಾರೆ.

ಪೂರಕವಲ್ಲ; ಮಾರಕ
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ಹಗ್ಗಜಗ್ಗಾಟವಾಗಿದ್ದರಿಂದ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿರುವ ಸಚಿವರಿಗೆ ತವರಿನ ಜಿಲ್ಲೆಗಳನ್ನು ಬಿಟ್ಟು, ಬೇರೆ ಬೇರೆ ಜಿಲ್ಲೆಗಳನ್ನು ನೀಡಲಾಗಿದೆ. ಇದು ಪ್ರಗತಿಗೆ ಪೂರಕವಾಗುವುದರ ಬದಲಿಗೆ ಮಾರಕವಾದಂತಾಗಿದೆ.

ಕೆಡಿಪಿ ಸಭೆಗಳೇ ಆಗಿಲ್ಲ
ಜಿಲ್ಲಾಮಟ್ಟದಲ್ಲಿ ಯೋಜನೆಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದರೆ, ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ಸಭೆಯಾಗಬೇಕು. ಈ ಪ್ರಗತಿ ಪರಿಶೀಲನೆಗಳ ಹೊಣೆ ಹೊರುವವರೇ ಜಿಲ್ಲಾ ಉಸ್ತುವಾರಿ ಸಚಿವರು. ಆದರೆ, ಎಷ್ಟೋ ಜಿಲ್ಲೆಗಳಿಗೆ ಸರಿಯಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೋಗದೇ ಇರುವುದರಿಂದ ಕೆಡಿಪಿ ಸಭೆಗಳು ಕಾಲ ಕಾಲಕ್ಕೆ ಆಗುತ್ತಿಲ್ಲ ಎಂಬ ಆರೋಪಗಳಿವೆ. ಅಂದರೆ, ಕಲಬುರಗಿ, ಬೀದರ್‌, ಶಿವಮೊಗ್ಗ, ವಿಜಯಪುರ, ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿ ಫೆಬ್ರವರಿಯಲ್ಲಿ ಕೆಡಿಪಿ ಸಭೆ ನಡೆದಿವೆಯಾದರೂ, ಬಜೆಟ್‌ ಅನಂತರದಲ್ಲಿ ಸಭೆಗಳು ನಡೆದಿಲ್ಲ.

Advertisement

ಶಾಸಕರೇ ಹೊಣೆ ಹೊರಲಿ
ಬಜೆಟ್‌ ಅನುಷ್ಠಾನ ಸಂಬಂಧ ಈಗ ಇನ್ನೊಂದು ಸಮಸ್ಯೆಯೂ ಇದೆ. ಈಗಾಗಲೇ ಜಿ.ಪಂ.ಗಳ ಅಧಿಕಾರಾವಧಿ ಮುಕ್ತಾಯಗೊಂಡಿದ್ದು, ಚುನಾವಣೆ ನಡೆಯಬೇಕಾಗಿದೆ. ಆದರೆ, ಇನ್ನೂ ಮೀಸಲಾತಿ ಸೇರಿದಂತೆ ಇತರ ಗೊಂದಲಗಳಿಂದ ಚುನಾವಣೆ ನಡೆದಿಲ್ಲ. ಹೀಗಾಗಿ, ಬಜೆಟ್‌ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ ಎಂಬ ದೂರುಗಳಿವೆ. ಆದರೆ, ಜಿಲ್ಲಾ ಪಂಚಾಯತ್‌ ಇಲ್ಲದೇ ಇರುವುದರಿಂದ ಜಿಲ್ಲೆಗಳಲ್ಲಿರುವ ತಾಲೂಕುಗಳ ಶಾಸಕರೇ ಪ್ರಗತಿ ಕಾರ್ಯದ ಹೊಣೆ ಹೊರಬಹುದಾಗಿದೆ. ನಿಜವಾಗಿಯೂ ಬಜೆಟ್‌ನಲ್ಲಿನ ಕಾರ್ಯಕ್ರಮಗಳ ಅನುಷ್ಠಾನವಾಗಬೇಕಾದರೆ ಅವರು ಕೈಜೋಡಿಸಲೇಬೇಕು. ತಮ್ಮ ಕ್ಷೇತ್ರಗಳ ವ್ಯಾಪ್ತಿಗೆ ಸರಕಾರದಿಂದ ಘೋಷಣೆಯಾಗಿರುವ ಯೋಜನೆಗಳ ಮಾಹಿತಿ ಪಡೆದು, ಅವುಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಬೇಕಾಗಿದೆ.

ಹೆಚ್ಚುವರಿ ಏಕೆ?
ಸದ್ಯ ಮೂರ್ನಾಲ್ಕು ಸಚಿವರು ತಲಾ ಎರಡು ಜಿಲ್ಲೆಗಳ ಉಸ್ತುವಾರಿ ಹೊತ್ತಿದ್ದಾರೆ. ಸದ್ಯ ಅವರ ಇಲಾಖೆ ಕಾರ್ಯಗಳ ಜತೆಗೆ, ಎರಡೆರಡು ಜಿಲ್ಲೆಗಳ ಪ್ರಗತಿಯನ್ನೂ ನೋಡಿಕೊಳ್ಳಬೇಕಾಗಿದೆ. ಇದಕ್ಕಿಂತ ಈಗ ಇರುವ ಸಚಿವರನ್ನೇ ಬಳಸಿಕೊಂಡು ಎಲ್ಲರಿಗೂ ತಲಾ ಒಂದೊಂದು ಜಿಲ್ಲೆಗಳ ಉಸ್ತುವಾರಿ ನೀಡುವುದು ಸೂಕ್ತ.

ದಕ್ಷಿಣ ಕನ್ನಡ ಉತ್ತಮ
ಜಿಲ್ಲಾಮಟ್ಟದಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಬಂದರೆ, ಮೈಸೂರು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಉತ್ತಮ ಸ್ಥಿತಿಯಲ್ಲಿವೆ. ಮೈಸೂರಿನಲ್ಲಿ ಕೆಡಿಪಿ ಸಭೆಗಳಿಗಿಂತ, ಸ್ವತಃ ಸಚಿವರೇ ಎಲ್ಲ ಯೋಜನೆಗಳ ಉಸ್ತುವಾರಿ ವಹಿಸಿಕೊಂಡು ಆಗಾಗ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯುತ್ತಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ, ಅಲ್ಲಿನ ಸಚಿವರು ಕೆಡಿಪಿ ಸಭೆ ಜತೆಗೆ, ಗ್ರಾ.ಪಂ. ಮಟ್ಟದಿಂದ ಹಿಡಿದು, ತಾಲೂಕು ಮಟ್ಟದವರೆಗೂ ಅಧಿಕಾರಿಗಳ ಸಭೆ ನಡೆಸಿ ಕಡತ ವಿಲೇವಾರಿ ಮಾಡುತ್ತಿದ್ದಾರೆ. ಹಾಗೆಯೇ, ಕಾಲ ಕಾಲಕ್ಕೆ ಯೋಜನೆಗಳ ಮಾಹಿತಿ ಪಡೆಯುತ್ತಿದ್ದಾರೆ. ಈಶ್ವರಪ್ಪ ಅವರ ರಾಜೀನಾಮೆ ಬಳಿಕ ಚಿಕ್ಕಮಗಳೂರಿಗೆ ಉಸ್ತುವಾರಿಗಳೇ ಇಲ್ಲವಾಗಿದೆ.

ಸ್ಥಳೀಯರೇ ಉಸ್ತುವಾರಿಗಳಾಗಲಿ
ಮೊದಲೇ ಹೇಳಿದಂತೆ ಜಿಲ್ಲೆಗಳಿಗೆ ಅಲ್ಲಿಯ ಸಚಿವರನ್ನೇ ಉಸ್ತುವಾರಿ ಮಾಡಿದರೆ ಉತ್ತಮ ಎಂಬ ಮಾತುಗಳಿವೆ. ಅಲ್ಲದೆ, ಕೆಲವು ಸಚಿವರಿಗೆ ಎರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಆಯಾ ಜಿಲ್ಲೆಗಳ ಸಚಿವರಿಗೇ ಉಸ್ತುವಾರಿ ನೀಡಿದರೆ, ಅವರಿಗೆ ಸರಿಯಾದ ರೀತಿಯಲ್ಲಿ ಸಮಸ್ಯೆಗಳ ಅರಿವಿರುತ್ತದೆ. ಹಾಗೆಯೇ, ತಮ್ಮ ಜಿಲ್ಲೆಗೆ ಬೇಕಾದ ಯೋಜನೆಗಳೇನು? ಅವುಗಳು ಯಾವ ಹಂತದಲ್ಲಿವೆ ಎಂಬ ಮಾಹಿತಿಯೂ ಇರುತ್ತದೆ. ಅಲ್ಲದೆ, ತಮ್ಮ ಜಿಲ್ಲೆಗಾಗಿ ಅವರು ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

 

Advertisement

Udayavani is now on Telegram. Click here to join our channel and stay updated with the latest news.

Next