Advertisement

ಆಲಮಟ್ಟಿಗೆ ಎಂಡಿ ಕಚೇರಿ ಸ್ಥಳಾಂತರ ಖಚಿತ

05:29 PM Jun 15, 2022 | Team Udayavani |

ಆಲಮಟ್ಟಿ: ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದ ಕೆಬಿಜೆನ್ನೆಲ್‌ ಎಂ.ಡಿ.ಕಚೇರಿಯನ್ನು ಕೇಂದ್ರ ಸ್ಥಾನ ಆಲಮಟ್ಟಿಗೆ ಸ್ಥಳಾಂತರಿಸಬೇಕೆಂದು ಸರ್ಕಾರ ಮತ್ತೆ ಆದೇಶ ನೀಡಿದೆ.

Advertisement

ಸರ್ಕಾರ ಜೂನ್‌ 8ರಂದು ಆದೇಶ ನೀಡಿ ಅದರಲ್ಲಿ ಬೆಂಗಳೂರಿನಲ್ಲಿರುವ ಕೆಬಿಜೆನ್ನೆಲ್‌ನ ಎಲ್ಲ ಸಿಬ್ಬಂದಿ ಮತ್ತು ಕಚೇರಿಗಳನ್ನು ಆಲಮಟ್ಟಿಗೆ ಕಡ್ಡಾಯವಾಗಿ ಸ್ಥಳಾಂತರಗೊಳಿಸಿ ಅನುಪಾಲನಾ ವರದಿ ಸಲ್ಲಿಸಬೇಕು. ಸರ್ಕಾರಕ್ಕೆ ಈ ವಿಷಯವಾಗಿ ಪತ್ರ ವ್ಯವಹಾರ ಮಾಡಬಾರದೆಂದು ತಿಳಿಸಲಾಗಿದೆ. ಇದರಿಂದ ಯುಕೆಪಿಯ ಎಲ್ಲ ಯೋಜನೆಗಳು ಪೂರ್ಣಗೊಳ್ಳುವ ಆಶಾಭಾವ ಮೂಡುವಂತಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು 1994 ಆಗಸ್ಟ್‌ 19ರಂದು ನಿಗಮಗಳ ಕಾಯ್ದೆ 1956ರನ್ವಯ ರಚಿಸಲಾಗಿದ್ದ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತವನ್ನು ಕೇಂದ್ರಸ್ಥಾನ ಆಲಮಟ್ಟಿಯಲ್ಲಿಯೇ ಮಾಡಲಾಗಿತ್ತು. ನಂತರ 1997ರಲ್ಲಿ ಆಗಿನ ಎಂ.ಡಿ ಡಾ|ಎಂ.ಬಿ.ಪ್ರಕಾಶ ಅವರು ಆಲಮಟ್ಟಿಯಲ್ಲಿದ್ದ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದರು. ಬೆಂಗಳೂರಿನಲ್ಲಿಯೇ ಕೇಂದ್ರೀಕೃತವಾಗಿದ್ದ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ಕೆಬಿಜೆನ್ನೆಲ್‌ ಸಂಪರ್ಕ ಕಚೇರಿಯನ್ನು ನೋಂದಾಯಿತ ಆಡಳಿತ ಕಚೇರಿ ಆಲಮಟ್ಟಿಗೆ ಸ್ಥಳಾಂತರಿಸಿ 2019ರಲ್ಲಿ ಮುಖ್ಯಮಂತ್ರಿ ಎಚ್‌ .ಡಿ.ಕುಮಾರಸ್ವಾಮಿ ಅವರು ಅಧಿವೇಶನದಲ್ಲಿ ಘೋಷಿಸಿ 2019ರ ಏ.1ರಿಂದ ಕಾರ್ಯಾರಂಭ ಮಾಡಲು 10.1. 2019ರಂದು ಆದೇಶಿಸಿದ್ದರು.

ಬೆಂಗಳೂರಿನಲ್ಲಿದ್ದ ಕಚೇರಿ ಆಲಮಟ್ಟಿಗೆ ಬಾರದೇ ಇರುವುದರಿಂದ 23.9.2019ರಂದು ಸರ್ಕಾರದ ವತಿಯಿಂದ ಮತ್ತೂಮ್ಮೆ ಆದೇಶ ಹೊರಡಿಸಿ ಅಕ್ಟೋಬರ್‌ ಅಂತ್ಯದೊಳಗೆ ಸ್ಥಳಾಂತರಗೊಳ್ಳಬೇಕೆಂದು ಆದೇಶ ನೀಡಿತ್ತು. ಆಗ ಸ್ಥಳಾಂತರಗೊಳ್ಳದೇ ಕೇವಲ ಆಲಮಟ್ಟಿಯಲ್ಲಿನ ಕಚೇರಿಯ ನಾಮಫಲಕದಲ್ಲಿ ಬದಲಾವಣೆ ಮಾಡಿ ಬೆಂಗಳೂರಿನಲ್ಲಿಯೇ ಕಚೇರಿ ಮುಂದುವರಿಸಲಾಗಿತ್ತು. ನಂತರ 30.10. 2021ಆದೇಶಿಸಿ ಆಲಮಟ್ಟಿಗೆ ಹೋಗಲು ಮತ್ತೂಮ್ಮೆ ಆದೇಶ ನೀಡಲಾಯಿತು. ಸರ್ಕಾರದ ಆದೇಶ ಬಂದರೂ ಕಚೇರಿ ಮಾತ್ರ ಸ್ಥಳಾಂತರಗೊಳ್ಳಲಿಲ್ಲ. ಇದರಿಂದ ರಾಜ್ಯದ ಉತ್ಛ ನ್ಯಾಯಾಲಯದಲ್ಲಿ 2019 ಮತ್ತು 2021ರಲ್ಲಿ ಪ್ರತ್ಯೇಕವಾಗಿ ಇಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಬೆಂಗಳೂರಿನಲ್ಲಿರುವ ಕೆಬಿಜೆನ್ನೆಲ್‌ ಎಂ.ಡಿ.ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರಿಸಬೇಕೆಂದು ಅರ್ಜಿ ಸಲ್ಲಿಸಿದ್ದರು.

ಇದೆಲ್ಲದರ ಪರಿಣಾಮ 2019 ಮತ್ತು 2021ರಲ್ಲಿ ಆದೇಶಿಸಿ ಆಲಮಟ್ಟಿಗೆ ಹೋಗಲು ತಿಳಿಸಲಾಗಿತ್ತು. 2022ನೇ ಸಾಲಿನಲ್ಲಿ 12.5. 2022ರಂದು ಸರ್ಕಾರ ಆದೇಶ ಹೊರಡಿಸಿ ಒಂದು ವಾರದೊಳಗೆ ಆಲಮಟ್ಟಿಗೆ ಎಲ್ಲಾ ಕಚೇರಿಗಳನ್ನು ಸಿಬ್ಬಂದಿ ಸಮೇತ ಸ್ಥಳಾಂತರಗೊಳ್ಳುವಂತೆ ತಿಳಿಸಲಾಗಿದೆ. ಮತ್ತೆ ಬೆಂಗಳೂರಿನಲ್ಲಿ ಬಿಡಾರ ಹೂಡಿರುವ ಕೆಬಿಜೆನ್ನೆಲ್‌ ಎಂ.ಡಿ.ಕಚೇರಿಯನ್ನು ಆಲಮಟ್ಟಿಗೆ ನ್ಯಾಯಾಲಯ ಆದೇಶದಂತೆ ಸ್ಥಳಾಂತರಗೊಳ್ಳುವಂತೆ ಮೇ.12ರಂದು ಜಲ ಸಂಪನ್ಮೂಲ ಕಾರ್ಯದರ್ಶಿಗಳು ಆದೇಶಿಸಿದ್ದರು.

Advertisement

ಇದಕ್ಕೆ ಕೆಬಿಜೆನ್ನೆಲ್‌ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಕೆಲವು ಕಾರಣ ನೀಡಿ ಕೆಲ ಸಿಬ್ಬಂದಿ, ಕಚೇರಿ ಬೆಂಗಳೂರಿನಲ್ಲಿಯೇ ಇರಲು ಕೋರಿದ್ದರು. ರಾಜ್ಯ ಉತ್ಛ ನ್ಯಾಯಾಲಯದಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿರುವುದರಿಂದ ಸರ್ಕಾರ ಮುಜುಗರ ತಪ್ಪಿಸಿಕೊಳ್ಳಲು ಮತ್ತೂಮ್ಮೆ 2022ಜೂನ್‌ 8ರಂದು ಜಲಸಂಪನ್ಮೂಲ ಇಲಾಖೆಯ ಅಪರ್‌ ಮುಖ್ಯ ಕಾರ್ಯದರ್ಶಿ ಅವರು ಆದೇಶ ಹೊರಡಿಸಿ ಕೃಷ್ಣಾ ಭಾಗ್ಯ ಜಲ ನಿಗಮದ ಎಲ್ಲ ಕಚೇರಿ ಮತ್ತು ಸಿಬ್ಬಂದಿಗಳನ್ನು ಆಲಮಟ್ಟಿಗೆ ಸ್ಥಳಾಂತರಿಸಿ ಆದೇಶ ಹೊರಡಿಸಿದ್ದು, ಒಂದು ವಾರದೊಳಗೆ ಅನುಪಾಲನಾ ವರದಿ ಸಲ್ಲಿಸಬೇಕೆಂದು ಆದೇಶಿಸಿದ್ದಾರೆ.

ಆದೇಶಕ್ಕೆ ಬೆಲೆ ಇಲ್ಲವೇ?: ಆಲಮಟ್ಟಿಯಲ್ಲಿ ಕೇಂದ್ರಸ್ಥಾನ ಹೊಂದಿದ್ದ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಗೊಳಿಸುವ ಉತ್ಸಾಹ ಮರಳಿ ಕೇಂದ್ರ ಸ್ಥಾನಕ್ಕೆ ಬರಲು ಮೀನಮೇಷ ಎಣಿಸುತ್ತಿರುವುದೇಕೆ? ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಸರ್ಕಾರ 4-5 ಬಾರಿ ಆದೇಶ ನೀಡಿದರೂ ಸ್ಥಳಾಂತರಗೊಳ್ಳದ ಅಧಿ ಕಾರಿಗಳು, ಸಿಬ್ಬಂದಿ ಸರ್ಕಾರಕ್ಕಿಂತಲೂ ಆತೀತರೇ ಎನ್ನುವ ಪ್ರಶ್ನೆ ಮೂಡಿದೆ. ರಾಜ್ಯದ ಒಟ್ಟು ನೀರಾವರಿ ಪ್ರದೇಶದಲ್ಲಿ ಶೇ.60 ಭೂಮಿಗೆ ಕೃಷ್ಣಾ ಕಣಿವೆಯಿಂದ ನೀರುಣಿಸಲಾಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಬರುವ ಆಲಮಟ್ಟಿ ಜಲಾಶಯಕ್ಕೆ 1964 ಮೇ 22 ರಂದು ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಆಗಿನ ಪ್ರಧಾನಿ ಲಾಲ ಬಹಾದ್ದೂರ ಶಾಸ್ತ್ರಿಯವರು ಭೂಮಿಪೂಜೆ ನೆರವೇರಿಸಿದ್ದರು.

ಆಲಮಟ್ಟಿಯಲ್ಲಿ ಪ್ರಧಾನಮಂತ್ರಿಗಳು ಭೂಮಿಪೂಜೆ ನೆರವೇರಿಸಿದ ಕೆಲ ದಿನಗಳ ನಂತರ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸರ್ಕಾರಗಳು ನೀರಿನ ಬಳಕೆಯಲ್ಲಿ ತಮಗೆ ಅನ್ಯಾಯವಾಗಲಿದೆ ಎಂದು ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದವು. ಇದೆಲ್ಲದರ ಪರಿಣಾಮ ಅಂತಾರಾಜ್ಯ ಕೃಷ್ಣಾ ನ್ಯಾಯಾಧಿಕರಣವನ್ನು ನ್ಯಾ|ಆರ್‌.ಎಸ್‌.ಬಚಾವತ್‌ ಅವರ ನೇತೃತ್ವದಲ್ಲಿ ರಚಿಸಲಾಯಿತು.

ನ್ಯಾಯಾಧಿಕರಣ ನೀಡಿದ ತೀರ್ಪಿನನ್ವಯ ಕರ್ನಾಟಕ ರಾಜ್ಯ 173ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಕಾಮಗಾರಿ ಆರಂಭಿಸಿದ್ದರೂ ಆರ್ಥಿಕ-ತಾಂತ್ರಿಕ ಸಮಸ್ಯೆಗಳಿಂದ ಕಾಮಗಾರಿ ಆಮೆ ವೇಗದಲ್ಲಿ ಸಾಗಿ 2000ನೇ ಸಾಲಿನಲ್ಲಿ ಜಲಾಶಯದಲ್ಲಿ ನೀರು ಸಂಗ್ರಹ ಆರಂಭಿಸಲಾಯಿತು.

ನಂತರ 2013ರಲ್ಲಿ ನ್ಯಾ|ಬೃಜೇಶಕುಮಾರ ಅವರ ನೇತೃತ್ವದ 2ನೇ ಅಂತಾರಾಜ್ಯ ಕೃಷ್ಣಾ ನ್ಯಾಯಾ ಧಿಕರಣ ನೀಡಿದ ಅಂತಿಮ ತೀರ್ಪಿನನ್ವಯ ನೀರು ಬಳಸಿಕೊಳ್ಳಬೇಕಾಗಿದ್ದು, ಕೇಂದ್ರ ಸರ್ಕಾರದ ಗೆಜೆಟ್‌ ನೋಟಿμಕೇಷನ್‌ಗಾಗಿ ರಾಜ್ಯ ಸರ್ಕಾರ ಜಾತಕ ಪಕ್ಷಿಯಂತೆ ಕಾಯುತ್ತಿದೆ.

ಈಗಾಗಲೇ ಅಂತಾರಾಜ್ಯ ಕೃಷ್ಣಾ ವಿವಾದ ನ್ಯಾಯಾಧಿ ಕರಣಗಳು ನೀಡಿರುವ ಅವ ಧಿಯು 2050 ಮೇ 31ಕ್ಕೆ ಮುಕ್ತಾಯವಾಗುತ್ತದೆ ಅಷ್ಟರೊಳಗೆ ನೀರು ಬಳಸಿಕೊಳ್ಳುವಂತಾಗಬೇಕು.

ಎಂ.ಡಿ. ಕಚೇರಿ ನವೀಕರಣಕ್ಕೆ ಸೂಚನೆ

ಕೆಬಿಜೆನ್ನೆಲ್‌ ಎಂ.ಡಿ.ಯವರು ಆಲಮಟ್ಟಿಗೆ ಭೇಟಿ ನೀಡಿ ಸುಸಜ್ಜಿತವಿರುವ ಎಂ.ಡಿ.ಕಚೇರಿ ನವೀಕರಣಗೊಳಿಸಲು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನವೀಕರಣಕ್ಕೆ ಅಗತ್ಯವಿರುವ ಕಾಮಗಾರಿಗೆ ಎಂ.ಡಿ.ಕಚೇರಿ ಅನುಮೋದನೆ ದೊರೆತಿದ್ದು, ಅತೀ ಶೀಘ್ರದಲ್ಲಿ ನವೀಕರಣಗೊಳಿಸಲು ವಿಶೇಷ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೆಬಿಜೆನ್ನೆಲ್‌ ಮೂಲಗಳು ತಿಳಿಸಿವೆ.

ಸರ್ಕಾರದ ಆದೇಶಕ್ಕೆ ಮನ್ನಣೆ ನೀಡದ ಅಧಿಕಾರಿಗಳ ಮೇಲೆ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದೇಕೆ? ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಅರವಿಂದ ಕುಲಕರ್ಣಿ, ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ.

-ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next