Advertisement

ಗುರುವಿಗೊಂದು ಸಾರ್ಥಕ ನಮನ ಮಾಂಬಾಡಿ ಶಿಷ್ಯ ಸಮಾವೇಶ

06:00 AM Nov 02, 2018 | Team Udayavani |

ಅನೇಕ ಹಿಮ್ಮೇಳ ಕಲಾವಿದರನ್ನು ಯಕ್ಷಗಾನಕ್ಕೆ ಒದಗಿಸಿದ ಕೀರ್ತಿ ಮಾಂಬಾಡಿ ನಾರಾಯಣ ಭಾಗವತರ ಪುತ್ರ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಸಲ್ಲುತ್ತದೆ. ದಕ್ಷಿಣ ಕನ್ನಡ ಹಾಗೂ ಕುಂಬಳೆ ಸೀಮೆಯ ನೂರಕ್ಕೂ ಮಿಕ್ಕಿದ ಕೇಂದ್ರಗಳಲ್ಲಿ ಹಿಮ್ಮೇಳ ತರಗತಿ ನಡೆಸಿಕೊಟ್ಟ ಶಿಕ್ಷಕರಿವರು. 1968ರಲ್ಲಿ ಕೀರಿಕ್ಕಾಡು ಮಾಸ್ಟರ್‌ ವಿಷ್ಣು ಭಟ್ಟರ ಪ್ರೇರಣೆಯಿಂದ ದೇಲಂಪಾಡಿ ಗ್ರಾಮದ ಬನಾರಿಯಲ್ಲಿ ತೊಡಗಿದ ಇವರ ಶಿಕ್ಷಣ ಕಾಯಕಕ್ಕೀಗ ಸುವರ್ಣ ಸಂಭ್ರಮ.

Advertisement

 ಭಾಗವತಿಕೆ, ಮದ್ದಳೆ, ಚೆಂಡೆಯನ್ನು ಏಕಪ್ರಕಾರ ಸಾಮರ್ಥ್ಯದಿಂದ ಇದಮಿಥ§ಂ ಎಂದು ಕಲಿಸಬಲ್ಲ ಗುರು ಮಾಂಬಾಡಿಯವರು. ಎಳವೆಯಲ್ಲಿಯೇ ವೃತ್ತಿಪರ ಮೇಳಗಳನ್ನು ಸೇರಿ ಎರಡು ದಶಕಕ್ಕೂ ಮಿಕ್ಕಿ ವಿವಿಧ ಮೇಳಗಳಲ್ಲಿ ತಿರುಗಾಟ ನಡೆಸಿದ ಅನುಭವಿ. ನಿಡೆ ನರಸಿಂಹ ಭಟ್‌, ಕುದ್ರೆಕೋಡು ರಾಮ ಭಟ್‌, ಚಿಪ್ಪಾರು, ಕಡತೋಕ ಭಾಗವತರಂತಹ ದಿಗ್ಗಜರ ಒಡನಾಟದಿಂದ ಪಕ್ವಗೊಂಡ ನಾದ, ಲಯದೊಂದಿಗಿನ ರಂಗಾನುಭವವನ್ನು ಅವರು ಸಮರ್ಪಣಾ ಭಾವದಿಂದ ಧಾರೆಯೆರೆದುದು ತನ್ನ ಶಿಷ್ಯರಿಗೆ. ಮಾಂಬಾಡಿಯವರ ಚೆಂಡೆ ನುಡಿತದ ಸೊಗಸು ಒಂದು ಅವ್ಯಕ್ತ ಅನುಭವ.ಚೆಂಡೆಯೆಂಬುದು ಕೇವಲ ಏರು ಪದ್ಯಗಳಿಗೆ, ಧೂಳೆಬ್ಬಿಸಿ ಕುಣಿಯಲು ಬಾರಿಸಲಿರುವ ಪರಿಕರವಷ್ಟೇ ಎಂಬುದಾಗಿ ಭಾವಿಸುವುದನ್ನು ಹೋಗಲಾಡಿಸುವ ಅನುಭಾವದ ನುಡಿತ ಇವರದು. 

ಮಾಂಬಾಡಿಯವರ ಕೈಂಕರ್ಯದಿಂದಾಗಿ, ಇಂದು ಹಲವಾರು ವೃತ್ತಿಪರ ಹಿಮ್ಮೇಳವಾದಕರು, ಹವ್ಯಾಸಿ ಕಲಾವಿದರು ರೂಪುಗೊಂಡಿ¨ªಾರೆ. ಶಿಷ್ಯರಿಗೆ ತನ್ನಲ್ಲಿರುವ ಅಭಿಮಾನ, ಅವರ ಯಶಸ್ಸೇ ತನಗೆ ಸಿಕ್ಕಿದ ಪ್ರಶಸ್ತಿಯೆಂದು ವಿನಯದಿಂದ ಹೇಳುವ ಸುಬ್ರಹ್ಮಣ್ಯ ಭಟ್ಟರು, ಸ್ವಾಭಿಮಾನಿ ಕಲಾವಿದರಿಗೊಬ್ಬ ಮಾದರಿಯಾಗಬಲ್ಲ ವ್ಯಕ್ತಿತ್ವ ರೂಢಿಸಿಕೊಂಡವರು.  

ಮಾಂಬಾಡಿಯವರ ಹಿಮ್ಮೇಳ ಶಿಕ್ಷಣ ಕಾಯಕ ಐವತ್ತು ವಸಂತಗಳನ್ನು ಕಂಡ ಸವಿನೆನಪಿಗಾಗಿ, ಇವರ ಶಿಷ್ಯರೆಲ್ಲ ಸೇರಿ ನ.4ರಂದು ಮಂಗಳೂರು ಪುರಭವನದಲ್ಲಿ ಸಮಾವೇಶವೊಂದನ್ನು ಆಯೋಜಿಸಿದ್ದು, ವಿವಿಧ ಯಕ್ಷಗಾನ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ. ಎಲ್ಲಾ ಕಾರ್ಯಕ್ರಮಗಳನ್ನೂ ಮಾಂಬಾಡಿಯವರ ಶಿಷ್ಯರೇ ನಡೆಸಿಕೊಡುವುದು ಈ ಕಾರ್ಯಕ್ರಮದ ವಿಶೇಷತೆ. ಬೆಳಗ್ಗೆ 9ರಿಂದ ತೊಡಗುವ ಕಾರ್ಯಕ್ರಮದಲ್ಲಿ ಪೂರ್ವರಂಗ, ತಾಳಮದ್ದಳೆ, ಹವ್ಯಾಸಿ ಹಾಗೂ ವೃತ್ತಿಪರ ಭಾಗವತರಿಂದ ಗಾನವೈವಿಧ್ಯ, ಗಣ್ಯರ ಉಪಸ್ಥಿತಿಯಲ್ಲಿ ಗುರುವಂದನೆ ನಡೆಯಲಿದೆ. ದಾಖಲಾತಿಯ ದೃಷ್ಟಿಯಿಂದ ಮಾಂಬಾಡಿಯವರು ಹಾಡಿರುವ ಪೂರ್ವರಂಗದ ಹಾಡುಗಳು,ಅವರೇ ಚೆಂಡೆ ನುಡಿಸಿರುವ ಪ್ರಸಂಗ ಪೀಠಿಕೆಯ ಧ್ವನಿ ಸುರುಳಿಯ ಬಿಡುಗಡೆಯೂ ನಡೆಯಲಿದೆ. ಈ ಧ್ವನಿಸುರುಳಿಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್‌, ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಹಾಗೂ ನೆಕ್ಕರೆಮೂಲೆ ಗಣೇಶ ಭಟ್ಟರು ಸಾಥ್‌ ನೀಡಿದ್ದಾರೆ. ಕೊನೆಯಲ್ಲಿ, ಮಾಂಬಾಡಿಯವರಲ್ಲಿ ಹಿಮ್ಮೇಳ ಕಲಿತು ಮುಮ್ಮೇಳ ಕಲಾವಿದರಾಗಿ ಖ್ಯಾತನಾಮರಾದ ಕಲಾವಿದರಿಂದ ಯಕ್ಷಗಾನ ಬಯಲಾಟ ಪ್ರದರ್ಶನವಿದೆ. 

ಶಂ.ನಾ.ಬಾಯಾರು

Advertisement
Advertisement

Udayavani is now on Telegram. Click here to join our channel and stay updated with the latest news.

Next