Advertisement

ಜಮ್ಮು ಕಾಶ್ಮೀರದಲ್ಲಿ ಹಿಂಸೆಗೆ ಪಾಕಿಸ್ಥಾನದ ಪ್ರಚೋದನೆ, ಬೆಂಬಲ: ರಾಹುಲ್ ಗಾಂಧಿ

11:21 AM Aug 29, 2019 | Team Udayavani |

ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ರದ್ಧತಿ ಬಳಿಕ ಕಣಿವೆ ರಾಜ್ಯದ ಜನಸಾಮಾನ್ಯರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಮತ್ತು ಅಲ್ಲಿ ಕಾನೂನಿನ ಬಲಪ್ರಯೋಗ ನಡೆಯುತ್ತಿದೆ ಎಂದು ಕೆಲವು ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಅವರು ಇಂದು ಕಾಶ್ಮೀರ ಹಿಂಸೆಯ ವಿಚಾರದಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Advertisement

ಬುಧವಾರ ಈ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ‘ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸೆ ತಲೆದೋರಿದೆ. ಈ ಹಿಂಸೆಗೆ ಪಾಕಿಸ್ಥಾನದ ಪ್ರಚೋದನೆ ಮತ್ತು ನೇರ ಬೆಂಬಲವೇ ಕಾರಣ. ಪಾಕಿಸ್ಥಾನ ಭಯೋತ್ಪಾದನೆಯ ಮೂಲ ಪೋಷಕ ರಾಷ್ಟ್ರ ಎಂದು ಜಗತ್ತಿಗೇ ತಿಳಿದಿದೆ’ ಎಂದು ರಾಗಾ ತಮ್ಮ ಟ್ವೀಟ್ ನಲ್ಲಿ ಹೆಳಿಕೊಂಡಿದ್ದಾರೆ.


‘ನಾನು, ಕೇಂದ್ರ ಸರಕಾರದ ಹಲವು ನಿಲುವುಗಳನ್ನು ಒಪ್ಪುವುದಿಲ್ಲ ಆದರೆ ಕಾಶ್ಮೀರ ವಿಚಾರಕ್ಕೆ ಬಂದಾಗ, ಇದು ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ ಮತ್ತು ಇದರಲ್ಲಿ ತಲೆ ಹಾಕಲು ಪಾಕಿಸ್ಥಾನಕ್ಕಾಗಲೀ ಅಥವಾ ವಿಶ್ವದ ಇನ್ಯಾವುದೇ ರಾಷ್ಟ್ರಕ್ಕಾಗಲಿ ಅವಕಾಶವೇ ಇಲ್ಲ ಎಂಬುದನ್ನು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ’ ಎಂದು ರಾಹುಲ್ ಗಾಂಧಿ ಅವರು ಇನ್ನೊಂದು ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾರೆ.


ಜಮ್ಮು ಕಾಶ್ಮೀರದಲ್ಲಿ ಭಾರೀ ಸೇನಾ ಪಡೆಗಳ ಜಮಾವಣೆ ಅಲ್ಲಿನ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಮತ್ತು 370ನೇ ವಿಧಿ ರದ್ಧತಿಯ ಬಳಿಕ ಕಣಿವೆ ರಾಜ್ಯದಲ್ಲಿ ಕಾನೂನ್ ರಾಜ್ ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಅವರು ಕೇಂದ್ರ ಸರಕಾರದ ಮೇಲೆ ಹರಿಹಾಯ್ದಿದ್ದರು. ಮತ್ತು ಅವರ ನೇತೃತ್ವದಲ್ಲಿ ಕಾಶ್ಮೀರ ಪರಿಸ್ಥಿತಿಯನ್ನು ಅವಲೋಕಿಸಲು ತೆರಳಿದ್ದ ವಿಪಕ್ಷ ನಾಯಕರ ನಿಯೋಗವನ್ನು ಇತ್ತೀಚೆಗಷ್ಟೇ ಶ್ರೀನಗರ ವಿಮಾನ ನಿಲ್ದಾಣದಲ್ಲೇ ತಡೆಹಿಡಿಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next