Advertisement

ಅತಂತ್ರವಾಗಿರುವ ದುರ್ಗಮುರ್ಗವ್ವ ಅಲೆಮಾರಿಗರ ಬದುಕು…

05:45 PM May 27, 2023 | Team Udayavani |
ರಬಕವಿ-ಬನಹಟ್ಟಿ : ಕಲೆ ಎಲ್ಲರನ್ನು ಕೈ ಬೀಸಿ ಕರೆಯುವುದಿಲ್ಲ. ಅದು ತನ್ನ ಆರಾಧಕರಿಗೆ ಮಾತ್ರ ಕೈಗೆಟಕುತ್ತದೆ. ಅಂತಹ ದೇವಿ ಆರಾಧಕರಾದ ಅಲೆಮಾರಿ ದುರ್ಗಮುರ್ಗವ್ವರ ಬದುಕು ಕೂಡಾ ಅತ್ಯಂತ ಕಷ್ಟದಾಯಕವಾದದ್ದು. ಈ ಜನಾಂಗಕ್ಕೆ ವಿದ್ಯೆ ನೇವೇದ್ಯ, ಸ್ಥಿರವಾದ ನೆಲೆಯಿಲ್ಲ. ಸರ್ಕಾರದ ಯಾವ ಸೌಲಭ್ಯಗಳೂ ಇವರಿಗೆ ಸಿಗುತ್ತಿಲ್ಲ ಏಕೆಂದರೆ ಇವರಿಗೆ ನಿರ್ದಿಷ್ಟ ಸ್ಥಳ ಇರದಿರುವುದರಿಂದ ಮತ್ತು ಮತದಾರರ ಪಟ್ಟಿ ಸೇರಿದಂತೆ ಆಧಾರ್, ಮತದಾರರ ಗುರುತಿನ ಚೀಟಿ ಇವ್ಯಾವವೂ ಇಲ್ಲದ್ದರಿಂದ ಇವರು ಬದುಕಿರುವ ಸುಳಿವೂ ಆಡಳಿತ ಯಂತ್ರಕ್ಕೆ ಸಿಗುವುದಿಲ್ಲ. ಇವರ ಬದುಕು ಮಾತ್ರ ಅತಂತ್ರವಾಗಿದೆ.
ಮೂರು-ನಾಲ್ಕು ಕೂಡು ರಸ್ತೆಯ ಜಾಗೆಯಲ್ಲಿ ದುರ್ಗಾದೇವಿ ವಿಗ್ರಹವಿರುವ ಪೆಟ್ಟಿಗೆ ಇರಿಸಿಕೊಂಡು, ಕೈಯಲ್ಲಿನ ಚರ್ಮದ ರೊಡ್ಡುನಿಂದ ರಕ್ತ ಜಿನುಗುವಂತೆ ಹೊಡೆದುಕೊಳ್ಳುವ ಪೋತರಾಜ. ಆಹಾರೇ ದುರ್ಗಿ ಎನ್ನುತ್ತ ಡೋಲು ಬಡೆಯುತ್ತ ಈತನ ಸಹಚಾರಿಣಿ ಜೋಳಿಗೆ ಬಿಚ್ಚಿ ಗಲ್ಲಿಯ ಮನೆಮನೆಗಳಿಗೆ ತೆರಳಿ ದೇವಿಯ ಅಂಗಾರ(ಭಸ್ಮ)ನೀಡುತ್ತ, ಆಯಾ ಮನೆಗಳಿಂದ ಮೊರದಿಂದ ದವಸ-ಧಾನ್ಯಗಳನ್ನು ಪಡೆದು ಜೀವನ ನಿರ್ವಹಿಸುವ ಜನಾಂಗವೊಂದರ ಸಂಕ್ಷಿಪ್ತವಾದ ಮತ್ತು ನಿತ್ಯ ಬದುಕಿನ ಚಿತ್ರಣವಿದು.
ಪ್ರಾಚೀನ  ವೇದ ಕಾಲದಿಂದಲೂ ಶಕ್ತಿ ದೇವತೆಯಾಗಿರುವ ದುರ್ಗ-ಮುರ್ಗವ್ವನ ಕಾಯಕದಲ್ಲಿ ತೊಡಗಿದ ಜನಾಂಗಕ್ಕೆ ಇಂದಿಗೂ ಒಂದೆಡೆ ವಾಸಿಸುವ ಭಾಗ್ಯವಿಲ್ಲದೇ ಅತಂತ್ರ ಸ್ಥಿತಿಯಲ್ಲಿ ಅಲೆಮಾರಿ ಬದುಕನ್ನೆ ನಡೆಸುತ್ತ ಬಂದಿರುವ ಕುಟುಂಬಗಳು ಈ ವೃತ್ತಿಯ ಮೇಲೆ ಜೀವನ ನಡೆಸಲಾರದೇ ಇರುವ ಕಾರಣ ಇದೀಗ ಸಂಪೂರ್ಣ ನಶಿಸಿ ಹೋಗುತ್ತಿರುವ ಕಾಲ ಬಂದಿದೆ. ದುರ್ಗಮುರುಗ ಜನಾಂಗದ ಜನರು ನಗರ ಪ್ರದೇಶದಲ್ಲಂತು ಕಾಣಸಿಗುವದೇ ಇಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲೂ ಸಹಿತ ಬಲು ಅಪರೂಪ.
ದುರ್ಗ-ಮುರ್ಗವ್ವ ಎಂದರೆ, ಒಂದು ಪೆಟ್ಟಿಗೆಯಲ್ಲಿ ದೇವಿಯ ಮೂರ್ತಿ ಅದುವೇ ದುರ್ಗ-ಮುರ್ಗವ್ವ. ಏಳು ದೇವತೆಯರಾದ ಕುಡಚಿ ದುರ್ಗವ್ವ, ಬಿರಡಿ ಲಕ್ಕವ್ವ, ಸೀಮಿ ಲಕ್ಕವ್ವ, ಕುಡಚಿ ಮೈಲವ್ವ, ಅಡವಿ ಪ್ರೇಸ್ತಿ, ಚಿಂಚಲಿ ಮಾಯವ್ವ, ಘಟಪ್ರಭಾ ಹುಲಿಗೆವ್ವ ಹೀಗೆ ಏಳು ಪ್ರದೇಶದ ದೇವಿಗಳೊಂದಿಗೆ ಕೂಡಿದ ಏಕೈಕ ತಾಯಿ ದುರ್ಗ-ಮುರ್ಗವ್ವವೆಂಬ ಪ್ರತೀತಿ ಇದೆ ಎಂಬುದು ಈ ಅಲೆಮಾರಿ ಜನಾಂಗದ ಅಭಿಪ್ರಾಯವಾಗಿದೆ.
ಪೆಟ್ಟಿಗೆಯಲ್ಲಿ ಆದಿಶಕ್ತಿಯನ್ನು ಹೊತ್ತು ಆಯಾ ಗ್ರಾಮ ಅಥವಾ ನಗರಗಳಿಗೆ ಪ್ರತಿ ವರ್ಷ ತೆರಳುತ್ತಾರೆ. ಆಯಾ ಪ್ರದೇಶದಲ್ಲಿ ಮೊದಲು ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೈಲಿ, ಗನಜಲಿ, ತದ್ದ, ಜ್ವರ ಸೇರಿದಂತೆ ಇತರೆ ರೋಗಗಳು ಮಕ್ಕಳಿಗೆ ಬರಬಾರದೆಂಬ ಕಾರಣಕ್ಕೆ ಈ ದೇವಿಯನ್ನು ಗ್ರಾಮ ಪ್ರವೇಶ ಮಾಡಿಕೊಂಡು ಜನರು ಇಷ್ಟಾರ್ಥಗಳನ್ನು ಬೇಡಿಕೊಂಡು, ರೋಗಗಳನ್ನು ತಾಯಿ ಮಡಿಲಿಗೆ ಹಾಕುತ್ತಿದ್ದರು ಎಂಬ ವಾಡಿಕೆ.
ಇದಕ್ಕೆ ಸಂಬಂಧ ಇಬ್ಬರು-ಮೂರು ಜನ ಸೇವಕರು ಓರ್ವ ಹಲಗೆ ಅಥವಾ ಡೊಳ್ಳು ಬಾರಿಸುತ್ತಿದ್ದರೆ ಮತ್ತೊಬ್ಬ ಬಾರಕೋಲದಿಂದ ಬಡಿದುಕೊಳ್ಳುವದು. ಗಲ್ಲಿಗಳಲ್ಲಿ ದೇವಿಯನ್ನು ಪೆಟ್ಟಿಗೆಯಿಂದ ಜನತೆಗೆ ದರ್ಶನ ನೀಡಿ, ನಂತರ ರೊಡ್ಡಿನಿಂದ ಬಡಿದುಕೊಂಡರೆ ಇಡೀ ಪ್ರದೇಶ ರೋಗಮುಕ್ತ ಹೊಂದಿ ಆರೋಗ್ಯವಂತ ಕುಟುಂಬವಾಗುತ್ತವೆ ಎಂಬುದು ಜನ ನಂಬಿಕೆಯ ಪ್ರತೀತಿ.
ದುರ್ಗ-ಮುರ್ಗವ್ವ ಕಾಯಕದ ಜನಾಂಗದವರು ಆದಿವಾಸಿಗಳಾಗಿದ್ದಾರೆ. ಇವರಿಗೆ ಯಾವದೇ ನಿಗದಿತ ಪ್ರದೇಶ ಅಥವಾ ವಿಳಾಸವೆಂಬುದೇ ಇಲ್ಲ. ವರ್ಷವಿಡೀ ಗ್ರಾಮ ಹಾಗೂ ನಗರ ಸಂಚಾರ ಮಾಡುವ ಇವರು ದುರ್ಗಾ ಶಕ್ತಿಯ ಸೇವಕರೂ ಹೌದು ಎನ್ನಲಾಗಿದೆ. ಒಂದು ವೇಳೆ ಈ ದುರ್ಗ-ಮುರ್ಗವ್ವರ ತಂಡ ಗ್ರಾಮಗಳಿಗೆ ಆಗಮಿಸದೇ ಹೋದಲ್ಲಿ, ದೂರವಾಣಿ ಮೂಲಕ ಅಥವಾ ಸಂಬಂಸಿದವರಿಂದ ಇವರನ್ನು ಹುಡುಕಿ ಗ್ರಾಮಕ್ಕೆ ಆಗಮಿಸುವಂತೆ ಜನತೆ ವಿನಂತಿಸುತ್ತಾರೆಂದು ಹೇಳುತ್ತಾನೆ ದುರ್ಗಾಶಕ್ತಿ ಸೇವಕ ಲಕ್ಷ್ಮಣ.
ಹೆಚ್ಚಾಗಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿನ ಘಟಪ್ರಭಾ, ಸಂಕೇಶ್ವರ, ಜಮಖಂಡಿ ಹಾಗೂ ಮುಧೋಳ ಭಾಗಗಳಲ್ಲಿ ಈ ಕುಟುಂಬಗಳ ಜನಸಂಖ್ಯೆ ಹೆಚ್ಚಿವೆ ಎನ್ನಬಹುದು. ಇವರು ನಿತ್ಯ ಬದುಕಿಗೆ ಮಳೆ, ಗಾಳಿ, ಬಿಸಿಲು ಎನ್ನದೇ ತಮ್ಮ ಹೊಟ್ಟೆ ಪಾಡಿಗಾಗಿ ಜೀವನವನ್ನೇ ಸವೆಸುವ ಇಂತಹ ಜೀವಿಗಳ ಕಷ್ಟಕ್ಕೆ ಸರಕಾರ ಸ್ಪಂದಿಸಿ, ಇವರನ್ನು ಗುರುತಿಸುವಂತಾಗಬೇಕು.
`ಸುಮಾರು ೪-೫ ತಲೆಮಾರಿನಿಂದ ದುರ್ಗಾಶಕ್ತಿ ಸೇವೆಯಲ್ಲಿ ನಮ್ಮ ಕುಟುಂಬವಿದೆ. ಇದರಲ್ಲಿಯೇ ನಮ್ಮ ಕುಟುಂಬ ಮುನ್ನಡೆಯುತ್ತಿದ್ದು, ಮಕ್ಕಳೂ ಸಹಿತ ಇದೇ ಕಾಯಕದಲ್ಲಿ ಮುನ್ನಡೆಯುತ್ತಿದ್ದಾರೆ. ಆದ್ರೆ ಸರ್ಕಾರ ನಮ್ಮಂತ ಅಲೆಮಾರಿ ಕುಟುಂಬಗಳ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ ಸಹಾಯ-ಸೌಕರ್ಯ ಮಾಡಿದರೆ ಒಳಿತಾಗುವದು.
– ಲಕ್ಷ್ಮಣ ಚನ್ನದಾಸರ, ದುರ್ಗ-ಮುರ್ಗವ್ವ ಸೇವಕ.
`ಬದುಕು ಅತಂತ್ರವಾಗಿದೆ. ಸರ್ಕಾರ ಚೂರು-ಪಾರು ಮನೆ-ಮಾರು ನೀಡಿ, ಕುಟುಂಬ ನಿರ್ವಹಣೆಗೆ ಮಾಶಾಸನ ವ್ಯವಸ್ಥೆ ಕಲ್ಪಿಸಿದರೆ ಬದುಕನ್ನು ಸ್ವಲ್ಪಮಟ್ಟಿಗಾದರೂ ಕಟ್ಟಿಕೊಳ್ಳಬಹುದು. ಇಲ್ಲವಾದಲ್ಲಿ ಅಲೆಮಾರಿ ಜೀವನ ಕಟ್ಟಿಟ್ಟ ಬುತ್ತಿಯಾಗಿದೇರಿ.
 – ಸುಸಲವ್ವ ಚನ್ನದಾಸರ.
– ಕಿರಣ ಶ್ರೀಶೈಲ ಆಳಗಿ
Advertisement

Udayavani is now on Telegram. Click here to join our channel and stay updated with the latest news.

Next