ಕುಂದಾಪುರ: ಕಂದಾವರ ಗ್ರಾಮದ ಉಳ್ಳೂರು ಕಾಡಿನಕೊಂಡ ಎಂಬಲ್ಲಿ ಕಂದಾವರ ಡಂಪಿಂಗ್ ಯಾರ್ಡ್ ಹತ್ತಿರದ ಬೊಬ್ಬರ್ಯನಕೊಡ್ಲು ಮದಗದ ಬಳಿ ಸೋಮವಾರ ಸಂಜೆ ಮದಗದಲ್ಲಿ ಮುಳುಗಿ ಇಬ್ಬರು ಮೃತಪಟ್ಟ ಘಟನೆಯಲ್ಲಿ ಮೃತರಾದ ಉಪನ್ಯಾಸಕರೊಬ್ಬರು ಸಾಯುವ ಮುನ್ನ ಮೂವರನ್ನು ರಕ್ಷಿಸಿದ್ದರು.
ಉಳ್ಳೂರು ಕಂದಾವರ ಬೊಬ್ಬರ್ಯನಕೊಡ್ಲು ಮದಗಕ್ಕೆ 6 ಜನ ಈಜಲು ತೆರಳಿದ್ದರು. ಸುಮಾರು 10 ಅಡಿ ಆಳದ ನೀರಿನಲ್ಲಿ ಕಾರ್ತಿಕ, ಕೌಶಿಕ, ಗಗನ್ ಮತ್ತು ಭರತ್ ಎನ್ನುವ ನಾಲ್ಕು ಮಕ್ಕಳು ಮದಗದ ನೀರಿನಲ್ಲಿ ಸ್ನಾನ ಮಾಡುತ್ತಾ ಆಟವಾಡುತ್ತಿದ್ದರು. ಅವರು ನೀರಿನ ಆಳದ ಸ್ಥಳಕ್ಕೆ ಹೋದಾಗ ಮುಳುಗಿ ಹೋಗಿದ್ದು ದಡದಲ್ಲಿದ್ದ ರಾಜೇಂದ್ರ ಶೆಟ್ಟಿಗಾರ್ (27) ಅವರು ಮದಗದ ನೀರಿಗೆ ಹಾರಿ ಕಾರ್ತಿಕ, ಕೌಶಿಕ, ಗಗನ್ ಅವರನ್ನು ದಡಕ್ಕೆ ಎಳೆದುಕೊಂಡು ಬಂದಿದ್ದರು.
ಭರತ್ನನ್ನು ನೀರಿನಿಂದ ಮೇಲಕ್ಕೆತ್ತಲು ಹೋದಾಗ ಇಬ್ಬರೂ ಮುಳುಗಿ ಹೋಗಿದ್ದರು.ಬಳಿಕ ಮನೆಯವರು ಹಾಗೂ ಅಕ್ಕಪಕ್ಕದ ಮನೆಯವರು, ಅಗ್ನಿಶಾಮಕ ದಳದ ಸಿಬಂದಿ ಸೇರಿಕೊಂಡು ನೀರಿನಲ್ಲಿ ಹುಡುಕಾಡಿದಾಗ ರಾಜೇಂದ್ರ ಮತ್ತು ಶಂಕರನಾರಾಯಣ ಹೈಸ್ಕೂಲ್ ವಿದ್ಯಾರ್ಥಿ ಭರತ್ (16) ಮೃತದೇಹ ಪತ್ತೆಯಾಗಿತ್ತು. ಅಸಲಿಗೆ ರಾಜೇಂದ್ರ ಅವರು ನೀರಿಗಿಳಿದಿರಲಿಲ್ಲ. ಮುಳುಗುತ್ತಿದ್ದವರನ್ನು ರಕ್ಷಿಸಲು ಹೋಗಿ ಜೀವಕ್ಕೆ ಎರವಾಗಿಸಿಕೊಂಡರು.
ರಾಜೇಂದ್ರ ಅವರು ಶಂಕರನಾರಾಯಣ ಮದರ್ ಥೆರೆಸಾ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಅದಕ್ಕೂ ಮುನ್ನ ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಭರತ್ ರಜೆಗಾಗಿ ತಾಯಿ ಮನೆಗೆ ಆಗಮಿಸಿದ್ದರು. ಇಲ್ಲಿ ನಾಲ್ಕು ಎಕರೆ ವಿಸ್ತಾರದ ಮದಗಕ್ಕೆ ವಾರಾಹಿ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸಲಾಗುತ್ತಿದೆ.