Advertisement

ಜವಳಿ ವೈಭವದ ಕೊನೆ ಕುರುಹು ನೆಲಸಮ; 100 ಅಡಿಗೂ ಎತ್ತರದ ಮಿನಾರ್‌ ನೆಲಸಮ

06:02 PM Jan 26, 2023 | Team Udayavani |

ಹುಬ್ಬಳ್ಳಿ: ಇಲ್ಲಿನ ಕಾರವಾರ ರಸ್ತೆಯಲ್ಲಿ ಅಚ್ಚರಿಯಾಗಿ ಉಳಿದುಕೊಂಡಿದ್ದ ಮಹಾದೇವ ಜವಳಿ ಮಿಲ್‌ನ ಕೊನೆಯ ಅವಶೇಷ ಚಿಮಣಿ(ಬೋಂಗಾ)ಯನ್ನು ಬುಧವಾರ ಬೆಳಗಿನ ಜಾವ ನೆಲಸಮ ಮಾಡಲಾಗಿದೆ. 1865ರಲ್ಲಿ ಬಾಸೆಲ್‌ ಮಿಶನ್‌ ಟೈಲ್‌ವರ್ಕ್‌ನಿಂದ ನಿರ್ಮಿಸಲಾಗಿದ್ದು, ಸುಮಾರು 100 ಅಡಿಗೂ ಎತ್ತರದ ಚಿಮಣಿ ಇಂದು ಮಣ್ಣಲ್ಲಿ ಮಣ್ಣಾಗಿ ಹೋಯಿತು.

Advertisement

ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಜಿನ್ನಿಂಗ್‌ ಫ್ಯಾಕ್ಟರಿಯ ಚಿಮಣಿ (ಬೋಂಗಾ) ಇದಾಗಿದ್ದು, ಇದರ ಹಿಂದೆ ದೊಡ್ಡ ಇತಿಹಾಸವೇ ಅಡಗಿದೆ. 1865ರಲ್ಲಿ ಬ್ರಿಟಿಷರು ಈಸ್ಟ್‌ ಇಂಡಿಯಾ ಕಂಪನಿಯಿಂದ ಸದರನ್‌ ಮರಾಠ ಸ್ಪಿನ್ನಿಂಗ್‌ ಆ್ಯಂಡ್‌ ವೇವಿಂಗ್‌ ಕಂಪನಿ ಹೆಸರಲ್ಲಿ ಸ್ಥಾಪಿಸಿದ್ದ ಮಿಲ್‌ ಇದಾಗಿದ್ದು, ಇಲ್ಲಿಂದ ಶೇಖರಣೆಗೊಳ್ಳುವ ಕಾಟನ್‌ಅನ್ನು ಬ್ರಿಟಿಷರು ಹಡಗಿನ ಮೂಲಕ ಮುಂಬಯಿ, ಗುಜರಾತ್‌ ಹಾಗೂ ಹೊರದೇಶಗಳಿಗೂ ಕಳುಹಿಸಿಕೊಡುತ್ತಿದ್ದರು. ಕಾಲಘಟ್ಟದಲ್ಲಿ ಬದಲಾಗುತ್ತ ಅದೇ ಮುಂದೆ ಮಹಾದೇವ ಟೆಕ್ಸ್‌ಟೈಲ್‌ ಮಿಲ್‌, ಭಾರತ್‌ ಮಿಲ್‌ ಎಂದು ಹೆಸರಾಗಿತ್ತು. ಇದೀಗ ಸುಮಾರು 16 ಎಕರೆ ಜಾಗವನ್ನು ಖಾಸಗಿಯವರು ಖರೀದಿಸಿದ್ದು, ಸ್ವಚ್ಚತಾ ಕಾರ್ಯ ನಡೆಸುತ್ತಿದ್ದಾರೆ.

ಛೋಟಾ ಮುಂಬೈ ಹೆಸರಿಗೆ ಕಾರಣ: ಹುಬ್ಬಳ್ಳಿಗೆ ಛೋಟಾ ಮುಂಬೈ ಎಂದು ಹೆಸರು ಬರಲು ಟೆಕ್ಸ್‌ಟೈಲ್‌ ಉದ್ಯಮವೇ ಮೂಲ ಕಾರಣವಾಗಿದ್ದು, ಆದರೆ ಈಗಿನವರು ಅದನ್ನು ಅನ್ಯರೀತಿಯಲ್ಲಿ ಭಾವಿಸುತ್ತಾರೆ. ಮುಂಬಯಿ ಬಿಟ್ಟರೆ ಟೆಕ್ಸ್‌ಟೈಲ್‌ ಉದ್ಯಮ ನೆಲೆ ನಿಂತಿದ್ದು ಹುಬ್ಬಳ್ಳಿಯಲ್ಲಾಗಿತ್ತು. ಒಂದು ಕಾಲದಲ್ಲಿ ನೂರಾರು ಕುಟುಂಬಗಳಿಗೆ ಅನ್ನ ನೀಡುತ್ತಿದ್ದ ಟೆಕ್ಸ್‌ಟೈಲ್‌ ಉದ್ಯಮ ನಂತರದ ದಿನಗಳಲ್ಲಿ ಹಲವಾರು ಸಮಸ್ಯೆಗಳಿಗೆ ಸಿಲುಕಿ ಇಂದು ನೆಲಕಂಡಿದೆ.

ಉದ್ಯೋಗದ ದಾರಿದೀಪ: ಅಂದಿನ ಕಾಲದಲ್ಲಿ ಉದ್ಯೋಗ ಅರಸಿ ಬಂದವರಿಗೆ ಟೆಕ್ಸ್‌ಟೈಲ್‌ ಉದ್ಯಮ ವರದಾನವಾಗಿ ಮಾರ್ಪಟ್ಟಿತ್ತು. ಮುಂಬಯಿ ಹಾಗೂ ಹುಬ್ಬಳ್ಳಿಗೆ ಉದ್ಯೋಗ ಅರಸಿ ಬಂದವರಿಗೆ ಲೆಕ್ಕವೇ ಇಲ್ಲ. ಉದ್ಯೋಗ ಅರಸಿ ಬಂದ ಸಾವಿರಾರು ಕುಟುಂಬಗಳು ಇಲ್ಲಿಯೇ ನೆಲೆಸಿರುವುದು ಇತಿಹಾಸ. ದೂರದ ಆಂಧ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಉದ್ಯೋಗಕ್ಕಾಗಿ ರೈಲು ಹತ್ತಿ ಬಂದವರಿಗೆ ಉದ್ಯೋಗ ನೀಡುತ್ತಿದ್ದುದು ಹುಬ್ಬಳ್ಳಿಯಲ್ಲಿ ನೆಲೆ ನಿಂತಿದ್ದ ಹಲವು ಟೆಕ್ಸ್‌ಟೈಲ್‌ ಮಿಲ್‌ಗ‌ಳು.

ಸಿಡಿಲಿಗೂ ಬಗ್ಗಿರಲಿಲ್ಲ: ಮಹಾದೇವ ಜವಳಿ ಮಿಲ್‌ನಲ್ಲಿ ನೂರಾರು ಜನರು ಹಗಲು-ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ನಾಲ್ಕು ಶಿಫ್ಟ್‌ನಲ್ಲಿ ಕೆಲಸ ನಡೆಯುತ್ತಿತ್ತು. ಯಂತ್ರಗಳು ಬಂದ್‌ ಆಗುತ್ತಲೇ ಇರಲಿಲ್ಲ. ಸಿಬ್ಬಂದಿಯಷ್ಟೇ ಪಾಳಿಯಲ್ಲಿ ಬದಲಾಗುತ್ತಿದ್ದರು. ಹಿಂದೊಮ್ಮೆ ಸಿಡಿಲು ಬಡಿದರೂ ಚಿಮಣಿ ಬಾಹುಬಲಿಯಂತೆ ಗಟ್ಟಿಯಾಗಿ ನಿಂತಿತ್ತು. ಕೇವಲ ಒಂದು ಭಾಗಕ್ಕೆ ಮಾತ್ರ ಧಕ್ಕೆ ಆಗಿರುವುದು ಬಿಟ್ಟರೆ ಮತ್ತೇನು ಆಗಿರಲಿಲ್ಲ.

Advertisement

ಅನುಮತಿ ಪಡೆಯದೆ ನೆಲಸಮ: ನೋಟಿಸ್‌
ಚಿಮಣಿ ನೆಲಸಮಗೊಳಿಸುವುದಕ್ಕೆ ಮುಂಚೆ ಅನುಮತಿ ಪಡೆಯದ ಕಾರಣಕ್ಕೆ ಜಾಗದ ಮಾಲೀಕರಾದ ಏಕನಾಥಸಾ ಅರ್ಜುನಸಾ ಇರಕಲ್‌ ಅವರಿಗೆ ಮಹಾನಗರ ಪಾಲಿಕೆಯ ವಲಯ 10ರ ಸಹಾಯಕ ಆಯುಕ್ತರು ನೋಟಿಸ್‌ ನೀಡಿದ್ದಾರೆ. ಕರ್ನಾಟಕ ಪೌರ ನಿಗಮಗಳ ಅಧಿನಿಯಮ1976ರ ಪ್ರಕಾರ, ಯಾವುದೇ ಕಟ್ಟಡಗಳನ್ನು ನೆಲಸಮಗೊಳಿಸುವುದಕ್ಕೆ ಮುಂಚೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು.

ಅತ್ಯಂತ ದೊಡ್ಡದಾದ ಚಿಮಣಿ ಕೆಡವಲು ಅನುಮತಿ ಪಡೆಯದಿರುವುದು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಗೊತ್ತಾಗಿದೆ. ಹಾಗಾಗಿ, ಏಳು ದಿನಗಳೊಳಗೆ ಚಿಮಣಿ ಇದ್ದ ಸ್ಥಳದ ದಾಖಲೆಗಳನ್ನು ಪರಿಶೀಲನೆಗಾಗಿ ಕಚೇರಿಗೆ ಸಲ್ಲಿಸಬೇಕು. ಅಲ್ಲಿಯವರೆಗೆ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅಪಾಯಕಾರಿ ಕಟ್ಟಡ ತೆರವು ಮಾಡಬೇಕಿದ್ದಲ್ಲಿ ಪಾಲಿಕೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ಶಿಥಿಲ ಕಟ್ಟಡ ಇದ್ದಲ್ಲಿ ಪಾಲಿಕೆಯಿಂದ ನೋಟಿಸ್‌ ಜಾರಿ ಮಾಡಿ ತೆರವು ಕಾರ್ಯಾಚರಣೆ ಮಾಡಲಾಗುತ್ತದೆ. ಆದರೆ ಚಿಮಣಿ ತೆರವು ಕಾರ್ಯಾಚರಣೆಯಲ್ಲಿ ಯಾವುದೇ ಪರವಾನಗಿ ಪಡೆದುಕೊಂಡಿಲ್ಲ. ಈ ಕುರಿತು ಯಾರಾದರೂ ದೂರು ನೀಡಿದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಸಂಬಂಧಿಸಿದ ವಲಯ ಕಚೇರಿಯಿಂದ ನೋಟಿಸ್‌ ನೀಡಲಾಗುವುದು.
ಈರೇಶ ಅಂಚಟಗೇರಿ, ಮಹಾಪೌರ

ಶತಮಾನದ ಇತಿಹಾಸದ ಕುರುಹಾಗಿದ್ದ ಚಿಮಣಿ(ಬೋಂಗಾ) ನೆಲಸಮವಾಗುವ ಮೂಲಕ ಟೆಕ್ಸ್‌ಟೈಲ್‌ ಉದ್ಯಮದ ಯುಗಾಂತ್ಯವಾದಂತಾಗಿದೆ. ಒಂದು ಕಾಲದಲ್ಲಿ ನೂರಾರು ಕುಟುಂಬಗಳಿಗೆ ಅನ್ನ ನೀಡಿದ್ದ ಸಂಸ್ಥೆ ಹಲವು ಕೈಗಳಿಗೆ ಬದಲಾದ ನಂತರ, ಸರಕಾರವೇ ನಿರ್ವಹಣೆಗೆ ತೆಗೆದುಕೊಂಡರೂ ನಡೆಸಲು ಸಾಧ್ಯವಾಗದೇ ಕಾರ್ಮಿಕರಿಗೆ ಸಂಬಳ ನೀಡಲು ಸಾಧ್ಯವಾಗದೇ ಲಾಕೌಟ್‌ ಘೋಷಣೆ ಮಾಡಿ ಬಂದ್‌ ಮಾಡಲಾಗಿತ್ತು. ಅದರ ಅವಶೇಷವಾಗಿ ಇದ್ದ ಚಿಮಣಿ(ಬೋಂಗಾ)ಯೂ ಧರೆಗೆ ಉರುಳಿದ್ದು, ಇನ್ನು ಹುಬ್ಬಳ್ಳಿಯಲ್ಲಿ ಟೆಕ್ಸ್‌ಟೈಲ್‌ ಉದ್ಯಮ ಎನ್ನುವುದು ನೆನಪು ಮಾತ್ರ.
ಡಾ| ಪಾಂಡುರಂಗ ಪಾಟೀಲ, ಮಾಜಿ ಮಹಾಪೌರ

Advertisement

Udayavani is now on Telegram. Click here to join our channel and stay updated with the latest news.

Next